ಮೈಸೂರು ದಸರಾ : ಅಕ್ರಂ ಅಂಬಾರಿ ಕಟ್ಟಲು ಅಡ್ಡಿಯಿಲ್ಲ
ಮೈಸೂರು, ಸೆ.6 : ವಿಶ್ವಪ್ರಸಿದ್ಧ ಮೈಸೂರು ದಸರಾದಲ್ಲಿ ಹುಟ್ಟಿಕೊಂಡಿದ್ದ ಜಾತಿ ಸಂಘರ್ಷ ವಿವಾದ ಬಗೆಹರಿದಿದೆ. ಅರಣ್ಯ ಇಲಾಖೆ ಅಧಿಕಾರಿ ಅಕ್ರಂ ಜಂಬೂ ಸವಾರಿಯಂದು ಆನೆಗೆ ಅಂಬಾರಿ ಕಟ್ಟಲು ಯಾವುದೇ ವಿರೋಧವಿಲ್ಲ ಎಂದು ಮೈಸೂರು ಕನ್ನಡ ವೇದಿಕೆ ಸ್ಪಷ್ಟಪಡಿಸಿದೆ.
ಮೈಸೂರು ಕನ್ನಡ ವೇದಿಕೆ ಮತ್ತು ಇತರ ಸಂಘಟನೆಗಳು ಅಕ್ರಂ ಅವರನ್ನು ಅಂಬಾರಿ ಕಟ್ಟುವ ಕೆಲಸದಿಂದ ದೂರವಿಡಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅರಣ್ಯ ಇಲಾಖೆಗೆ ಸಲ್ಲಿಸಿದ್ದ ದೂರನ್ನು ಹಿಂಪಡೆದಿವೆ. ಇದರಿಂದಾಗಿ ವಿವಾದ ಬಗೆಹರಿದಿದೆ.

ಕನ್ನಡ ಪರ ಸಂಘಟನೆಗಳು ಅಕ್ರಂ ಶೂ ಹಾಕಿಕೊಂಡು ಅಂಬಾರಿ ಕಟ್ಟುತ್ತಾರೆ. ಅಂಬಾರಿಯಲ್ಲಿರುವ ಚಾಮುಂಡೇಶ್ವರಿ ವಿಗ್ರಹ ಹಿಂದೂಗಳಿಗೆ ಪವಿತ್ರವಾದದ್ದು, ಅಕ್ರಂ ಶೂ ಹಾಕಿಕೊಂಡು ಅದನ್ನು ಕಟ್ಟುವುದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುತ್ತದೆ ಎಂದು ಆರೋಪಿಸಿದ್ದವು.
ಅಕ್ರಂ ಅವರನ್ನು ಅಂಬಾರಿ ಕಟ್ಟುವ ಕೆಲಸದಿಂದ ಹೊರಗಿಡಬೇಕು ಎಂದು ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಮುಖ್ಯಮಂತ್ರಿಗಳು ದೂರನ್ನು ಡಿಎಫ್ಒ ದೇವರಾಜ್ ಅವರಿಗೆ ವರ್ಗಾವಣೆ ಮಾಡಿದ್ದರು. ಅಕ್ರಂ ಅವರು ಈ ಬಾರಿ ಅಂಬಾರಿ ಕಟ್ಟುವ ಕೆಲಸದಿಂದ ಹೊರಗುಳಿಯುತ್ತಾರೆ ಡಿಎಫ್ಒ ಬುಧವಾರ ಆದೇಶ ನೀಡಿದ್ದರು.
ಗುರುವಾರ ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಡಿಎಫ್ಒ ದೇವರಾಜ್ ಅವರನ್ನು ಭೇಟಿ ಮಾಡಿ, ತಮ್ಮ ದೂರನ್ನು ಹಿಂಪಡೆದಿದ್ದಾರೆ. ಇದರಿಂದಾಗಿ ಅಕ್ರಂ ಅಂಬಾರಿ ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳಲು ಇದ್ದ ಅಡಚಣೆಗಳು ದೂರವಾಗಿವೆ.
ನಾನು ಮುಸ್ಲಿಂ ಧರ್ಮದ ವಿರೋಧಿಯಲ್ಲ. ಎಲ್ಲಾ ಮಾವುತರಿಗೂ ಅಂಬಾರಿ ಕಟ್ಟುವ ಅವಕಾಶ ದೊರೆಯಲಿ ಎಂಬ ಕಾರಣಕ್ಕಾಗಿ, ಅಕ್ರಂ ಅವರ ವಿರುದ್ಧ ದೂರು ನೀಡಿದ್ದೆ ಎಂದು ಬಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ. ( ಅಕ್ರಂ ಏಕೆ ಅಂಬಾರಿ ಕಟ್ಟಬಾರದು?)
ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅಕ್ರಂ ಪ್ರಕರಣದ ಬಗ್ಗೆ ವಿವರವಾದ ವರದಿ ನೀಡುವಂತೆ ಡಿಎಫ್ಒ ದೇವರಾಜ್ ಅವರಿಗೆ ಸೂಚನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಜಿಲ್ಲಾಧಿಕಾರಿಯವರಿಗೆ ಅಕ್ರಂ ವಿವಾದದ ಕುರಿತು ವಿವರವಾದ ವರದಿಯನ್ನು ನೀಡಿದ್ದಾರೆ.
ಅಕ್ರಂ ಅವರನ್ನು ಅಂಬಾರಿ ಕಟ್ಟುವ ಕೆಲಸದಿಂದ ಹೊರಗಿಡುವುದಿಲ್ಲ. ಎಂದಿನಂತೆ ಅವರು ದಸರಾ ಸಿದ್ಧತೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಶಿಖಾ ಹೇಳಿದ್ದಾರೆ. ದಸರಾ ಉತ್ಸವದಲ್ಲಿ ಹುಟ್ಟಿಕೊಂಡಿದ್ದ ಜಾತಿ ಸಂಘರ್ಷದ ವಿವಾದ ಇದರಿಂದಾಗಿ ಬಗೆಹರಿದಿದೆ.












Click it and Unblock the Notifications