ದಸರಾ ಚಲನಚಿತ್ರೋತ್ಸವಕ್ಕೆ ವರ್ಣರಂಜಿತ ಚಾಲನೆ

ಅಭಿಮಾನಿಗಳ ಸಿಳ್ಳೆ, ಚಪ್ಪಾಳೆ, ಹರ್ಷೋದ್ಘಾರದ ನಡುವೆ ಮಾಜಿ ಸಚಿವ, ನಟ ಅಂಬರೀಶ್ ಅವರು ಜ್ಯೋತಿ ಬೆಳಗುವ ಮೂಲಕ ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಚಿಕ್ಕವರಿದ್ದಾಗ ದಸರಾ ನೋಡಿ ಆನಂದಿಸುತ್ತಿದ್ದೆವು. ಈಗ ನನ್ನಿಂದಲೇ ಇಂತಹವೊಂದು ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವುದು ನನಗೆ ಸಂತಸ ತಂದಿದೆ ಎಂದರು.
ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಉದ್ದೇಶಿಸಿ, ಕನ್ನಡದ ಜನ ನಮ್ಮ ಜನ ಎಂಬಂತೆ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಸದಾ ಇರಲಿ ಎಂದರಲ್ಲದೆ, ಮೈಸೂರು ನಾನು ಹುಟ್ಟಿ ಬೆಳೆದ ಊರಾಗಿದ್ದುದರಿಂದ ತನ್ನೆಲ್ಲಾ ಕೆಲಸಗಳನ್ನು ಬದಿಗೊತ್ತಿ ಕಾರ್ಯಕ್ರಮಕ್ಕೆ ಬಂದಿರುವುದಾಗಿ ಅಂಬರೀಷ್ ಹೇಳಿದರು.
ಮೈಸೂರಿನಲ್ಲಿ ಚಿತ್ರನಗರಿ : ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಮಾತನಾಡಿ, ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪಿಸುವ ಕುರಿತು ನೀಲಿ ನಕಾಶೆಯನ್ನು ಸಿದ್ದಪಡಿಸಲಾಗುತ್ತಿದ್ದು, ಎಲ್ಲಿ ಸ್ಥಾಪಿಸಬೇಕೆಂಬುವುದರ ಕುರಿತು ಮುಂದಿನ ನವೆಂಬರ್ ಒಳಗೆ ಜಾಗ ನಿಗದಿಪಡಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ನಟಿಯರಾದ ಲೀಲಾವತಿ, ಜಯಂತಿ, ನಟ ವಿನೋದ್ರಾಜ್, ಆದಿತ್ಯ, ನಟಿಯರಾದ ತಾರಾ, ಶಿರಿನ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಕೆ.ವಿ.ಚಂದ್ರಶೇಖರ್, ನಿರ್ಮಾಪಕ ಸಾ.ರಾ.ಗೋವಿಂದ್, ದಸರಾ ಚಲನಚಿತ್ರ ಉಪ ಸಮಿತಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು, ಜಿಲ್ಲಾಧಿಕಾರಿ ಪಿ.ಆರ್.ವಸ್ತ್ರದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭ ಸಾಧನೆ ಮಾಡಿದ ನಟ, ನಟಿಯರು ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.












Click it and Unblock the Notifications