Viral Video: ಕಳ್ಳತನಕ್ಕೆ ಬಂದು ಸಿಕ್ಕಿಬಿದ್ದ ವ್ಯಕ್ತಿಗೆ ಕೈ ತುತ್ತು ಕೊಟ್ಟ ಯುವಕರು
ಹಳ್ಳಕ್ಕೆ ಬಿದ್ದ ತೋಳಕ್ಕೆ ತಲೆಗೊಂದು ಏಟು ಎನ್ನುವಂತೆ..ಕಳ್ಳತನಕ್ಕೆ ಬಂದ ವ್ಯಕ್ತಿ ಆತನ ಗೃಹಚಾರ ತಪ್ಪಿ ಸಿಕ್ಕಿಬಿದ್ದರೆ ಆಳಿಗೊಂದು ಕಲ್ಲೇಟು ನೀಡುವುದು ಸಾಮಾನ್ಯ. ಕಳ್ಳನನ್ನು ಹಿಡಿದವರಿಂದ ಹಿಡಿದು ದಾರಿಯಲ್ಲಿ ಹೋಗುವ ದಾರಿ ಹೋಕ ಕೂಡ ಕಳ್ಳನಿಗೆ ಬೈದು ಧರ್ಮದೇಟು ಕೊಟ್ಟು ಮುಂದೆ ಸಾಗುತ್ತಾನೆ. ಇಂತಹ ಕಾಲದಲ್ಲಿ ಕಳ್ಳತನ ಮಾಡಿ ಸಿಕ್ಕಿ ಬಿದ್ದ ವ್ಯಕ್ತಿಗೆ ಕೈ ತುತ್ತು ನೀಡಿರುವ ವಿಶೇಷ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ನಲ್ಗೊಂಡದ ನಾರ್ಕೆಟ್ಪಲ್ಲಿ ಮಂಡಲದ ಎಲ್ಲರೆಡ್ಡಿಗುಡೆಂ ಗ್ರಾಮಕ್ಕೆ ಕಳ್ಳ ಪೋಗಲ್ ಗಣೇಶ್ ಎನ್ನುವಾತ ಕಳ್ಳತನಕ್ಕೆ ಬಂದಿದ್ದಾನೆ. ಆತನ ದುರಾದೃಷ್ಟಕ್ಕೆ ಸಮಯ ಕೆಟ್ಟು ಕಳ್ಳತನ ಮಾಡುವಾಗ ಗ್ರಾಮದ ಯುವಕರ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ.

ರೆಡ್ ಹ್ಯಾಂಡ್ ಸಿಕ್ಕಿ ಬಿದ್ದ ಕಳ್ಳನನ್ನು ಕೂಡಲೇ ಯುವಕ ಗುಂಪು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹತ್ತಾರು ಸಂಖ್ಯೆಯಲ್ಲಿ ಗ್ರಾಮಸ್ಥರು ನೆರೆದಿದ್ದು, ಕಳ್ಳನಿಗೆ ಸರಿಯಾಗಿ ಹೊಡೆದಿದ್ದಾರೆ. ಜನರ ಏಟುಗಳಿಂದ ನೊಂದ ಕಳ್ಳ ಬಿಟ್ಟು ಬಿಡುವಂತೆ ಕೇಳಿಕೊಂಡಿದ್ದಾನೆ. ಕೊನೆಯಲ್ಲಿ ನನಗೆ ಹಸಿವಾಗುತ್ತಿದೆ ದಯವಿಟ್ಟು ಊಟವಾದರೂ ಕೊಡಿ ಎಂದು ಬೇಡಿಕೊಂಡಿದ್ದಾನೆ.
ಆವರೆಗೂ ಕಳ್ಳನಿಗೆ ಥಳಿಸುತ್ತಿದ್ದ ಯುವಕರು ಕಳ್ಳತನ ಹಸಿವಿನ ಬೇಡಿಕೆ ಕಂಡು ಕರಗಿದ್ದು, ಆತ ಮಾಡಿದ ತಪ್ಪನ್ನು ಬದಿಗಿಟ್ಟು ಮಾನವೀಯತೆಯ ದೃಷ್ಟಿಯಿಂದ ಕಳ್ಳನಿಗೆ ಊಟ ಮಾಡಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಕಂಬಕ್ಕೆ ಕಟ್ಟಿನ ಕಳ್ಳನ ಕೈಯನ್ನು ಬಿಚ್ಚಿರಲಿಲ್ಲ. ಬದಲಿಗೆ ತಾವೇ ಸಮೀಪದ ಮನೆಯಿಂದ ಅನ್ನ ಸಾಂಬರ್ ತಂದು ಕಲಿಸಿ ತಿನ್ನಿಸಿದ್ದಾರೆ. ಕಳ್ಳನ ಊಟ ಮುಗಿದ ಮೇಲೆ ಆತನನ್ನು ಪೊಲೀಸರಿಗೊಪ್ಪಿಸಿದ್ದಾರೆ.
ಈ ವಿಡಿಯೋವನ್ನು ಸಾಯಿ ಶೇಖರ್ ಅಂಗಾರ ಎನ್ನುವವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆ ವೈರಲ್ ಆಗುತ್ತಿದ್ದು, ಹಸಿವು ಎಂದಾಗ ಕಳ್ಳನಿಗೆ ಊಟ ತಿನ್ನಿಸಿ ಮಾನವೀಯತೆ ಮೆರೆದ ನಾರ್ಕೆಟ್ಪಲ್ಲಿ ಮಂಡಲದ ಎಲ್ಲರೆಡ್ಡಿಗುಡೆಂ ಗ್ರಾಮದ ಯುವಕರ ಕಾರ್ಯಕ್ಕೆ ನೋಡುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications