ಬಜೆಟ್ 2022: ತೆರಿಗೆದಾರರು ಹೊಂದಿರುವ ಐದು ನಿರೀಕ್ಷೆಗಳು ಇಲ್ಲಿದೆ
ನವದೆಹಲಿ, ಜನವರಿ 13: ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಅಧಿಕವಾಗುತ್ತಿದೆ. ಈ ನಡುವೆ 400 ಕ್ಕೂ ಹೆಚ್ಚು ಸಂಸತ್ ಸಿಬ್ಬಂದಿಗಳಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡಿದೆ. ಈ ನಡುವೆ ಎಲ್ಲಾ ಕೋವಿಡ್ ಮಾರ್ಗಸೂಚಿಯನ್ನು ಪಾಲನೆ ಮಾಡಿ ಬಜೆಟ್ ಅಧಿವೇಶನ ನಡೆಸಲು ಎಲ್ಲಾ ಸಿದ್ದತೆ ನಡೆಯುತ್ತಿದೆ. ಫೆಬ್ರವರಿ 1ರಂದು ಆರಂಭವಾಗುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಉಭಯ ಸದನಗಳು (ರಾಜ್ಯಸಭೆ ಹಾಗೂ ಲೋಕಸಭೆ) ಎರಡು ಶಿಫ್ಟ್ನಲ್ಲಿ ಕಾರ್ಯ ನಿರ್ವಹಣೆ ಮಾಡುವ ಸಾಧ್ಯತೆ ಇದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ತಮ್ಮ ನಾಲ್ಕನೇ ಬಜೆಟ್ ಅನ್ನು ಮಂಡಿಸಲಿದ್ದು ಈ ಬಜೆಟ್ನಲ್ಲಿ ಯಾವೆಲ್ಲಾ ಯೋಜನೆಗಳು ಜಾರಿ ಆಗಲಿದೆ ಹಾಗೂ ಯಾವೆಲ್ಲಾ ಪ್ರಯೋಜನಗಳು ಲಭಿಸಲಿದೆ ಎಂಬ ಬಗ್ಗೆ ಜನರು ಪೂರ್ವ ಬಜೆಟ್ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇನ್ನು ಈಗಾಗಲೇ ಹಲವಾರು ಮಂದಿ ಬಜೆಟ್ನಲ್ಲಿ ಸರ್ಕಾರ ಪರಿಗಣಿಸ ಬೇಕಾದ ಅಂಶಗಳ ಬಗ್ಗೆ ಉಲ್ಲೇಖ ಮಾಡಿದ್ದಾರೆ.
ಈ ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಹಲವಾರು ಆರ್ಥಿಕ ಬಿಕ್ಕಟ್ಟುಗಳು, ಆರ್ಥಿಕ ತೊಂದರೆಗಳು ಉಂಟಾಗಿದೆ. ಈ ಹಿನ್ನೆಲೆಯಿಂದಾಗಿ ತೆರಿಗೆದಾರರು ಈ ಬಾರಿಯ ಬಜೆಟ್ನಲ್ಲಿ ಸರ್ಕಾರದಿಂದ ಅಧಿಕ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಮುಖ್ಯವಾಗಿ ವೇತನ ಪಡೆದು ದುಡಿಯುವ ವರ್ಗವು ತೆರಿಗೆ ವಿನಾಯಿತಿಯ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ತೆರಿಗೆದಾರರಿಗೆ ಹೆಚ್ಚಿನ ವಿನಾಯಿತಿ ಸರ್ಕಾರ ನೀಡಲಿದೆಯೇ ಎಂಬ ಬಗ್ಗೆ ತೆರಿಗೆದಾರರು ನಿರೀಕ್ಷೆ ಇರಿಸಿದ್ದಾರೆ. ಹಾಗಾದರೆ ತೆರಿಗೆದಾರರು ಈ ವರ್ಷದ ಬಜೆಟ್ನಲ್ಲಿ ಸರ್ಕಾರದಿಂದ ಯಾವೆಲ್ಲಾ ನಿರೀಕ್ಷೆಯನ್ನು ಹೊಂದಿದ್ದಾರೆ ಎಂದು ತಿಳಿಯಲು ಮುಂದೆ ಓದಿ.

ತೆರಿಗೆದಾರರು ಈ ಬಜೆಟ್ನಲ್ಲಿ ನಿರೀಕ್ಷಿಸುವ ಐದು ಅಂಶಗಳು
* ಪ್ರಸ್ತುತ ಕೋವಿಡ್ ಸಾಂಕ್ರಾಮಿಕ ಕಾರಣದಿಂದಾಗಿ ಜನರು ವರ್ಕ್ ಫ್ರಮ್ ಹೋಮ್ಗೆ ಜೋತು ಬೀಳಬೇಕಾಗಿದೆ. ಆದರೆ ಈ ಹಿನ್ನೆಲೆಯಿಂದಾಗಿ ಜನರಿಗೆ ಸಾಕಷ್ಟು ಖರ್ಚು ಆಗುತ್ತಿದೆ. ವರ್ಕ್ ಫ್ರಮ್ ಹೋಮ್ ಮಾಡುವ ಸಂದರ್ಭದಲ್ಲಿ ತೆರಿಗೆದಾರರೇ ವಿದ್ಯುತ್, ಇಂಟರ್ನೆಟ್ ಶುಲ್ಕಗಳು, ಬಾಡಿಗೆ, ಪೀಠೋಪಕರಣಗಳು ಮೊದಲಾದವುಗಳಿಗಾಗಿ ಖರ್ಚು ಮಾಡಬೇಕಾಗಿ ಬಂದಿದೆ. ಹಾಗಾಗಿ ಈ ಭಾರಿ ಬಜೆಟ್ನಲ್ಲಿ ತೆರಿಗೆದಾರರು ಮುಖ್ಯವಾಗಿ ಸರ್ಕಾರದಿಂದ ಪರಿಹಾರವನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಕೆಲವು ಸಂಸ್ಥೆಗಳು ಈ ಭತ್ಯೆಯನ್ನು ನೀಡುತ್ತದೆಯಾದರೂ, ಕೆಲವು ಸಂಸ್ಥೆಗಳಲ್ಲಿ ನೀಡಲಾಗುತ್ತಿಲ್ಲ. ಆದ್ದರಿಂದ ಸರ್ಕಾರ ಆದಾಯ ತೆರಿಗೆಯಿಂದ ವಿನಾಯಿತಿ ನೀಡಬೇಕು ಎಂಬುವುದು ತೆರಿಗೆದಾರರ ಒತ್ತಾಯವಾಗಿದೆ.
* ಇನ್ನು ತೆರಿಗೆದಾರರು 1 ಲಕ್ಷ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಕೂಡಾ ಬಯಸುತ್ತಿದ್ದಾರೆ. ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಸಂಬಳದ ವರ್ಗಗಳಿಗೆ 50,000 ರೂ.ಗೆ ನಿಗದಿಪಡಿಸಲಾಗಿದೆ. ಆದರೆ ಅದನ್ನು ಒಂದು ಲಕ್ಷ ರೂಪಾಯಿಗೆ ಏರಿಕೆ ಮಾಡಬೇಕು ಎಂಬುವುದು ತೆರಿಗೆದಾರರ ಬೇಡಿಕೆ ಆಗಿದೆ.
* ಇನ್ನು ಈ ಬಾರಿ ವೈಯಕ್ತಿಕ ತೆರಿಗೆದಾರರ ವಿಭಾಗದಲ್ಲಿ ಸೆಕ್ಷನ್ 87A ಅಡಿಯಲ್ಲಿ ಪ್ರಸ್ತುತ ಲಭ್ಯವಿರುವ ರಿಯಾಯಿತಿಯನ್ನು ಹಿಂದೂ ಅವಿಭಜಿತ ಕುಟುಂಬಕ್ಕೂ (ಹೆಚ್ಯುಎಫ್) ಲಭ್ಯವಾಗುವಂತೆ ವಿಸ್ತರಣೆ ಮಾಡಬೇಕು ಎಂಬುವುದು ಕೂಡಾ ತೆರಿಗೆದಾರರ ಒತ್ತಾಯವಾಗಿದೆ.
* ಇನ್ನು ಈ ಬಜೆಟ್ನಲ್ಲಿ ವಿಮೆ ಮೇಲಿನ ಜಿಎಸ್ಟಿ ಕಡಿತ ಅಥವಾ ಮೆಡಿಕ್ಲೈಮ್ ಪ್ರೀಮಿಯಂನಲ್ಲಿ ಜಿಎಸ್ಪಿ ವಿನಾಯಿತಿಯನ್ನು ಕೂಡಾ ತೆರಿಗೆದಾರರು ನಿರೀಕ್ಷೆ ಮಾಡಿದ್ದಾರೆ.
* ಈ ಕೊರೊನಾ ವೈರಸ್ ಸಾಂಕ್ರಾಮಿಕ ಸಂದರ್ಭದಲ್ಲಿ ಜನರು ಜೀವ ವಿಮೆ ಮಾಡುತ್ತಿರುವ ಸಂಖ್ಯೆಯು ಅಧಿಕವಾಗಿದೆ. ಈ ನಿಟ್ಟಿನಲ್ಲಿ ತೆರಿಗೆದಾರರು ಈ ಜೀವ ವಿಮೆಯಲ್ಲಿ ವಿನಾಯಿತಿಯನ್ನು ನಿರೀಕ್ಷೆ ಮಾಡಿದ್ದಾರೆ. ಹಾಗೆಯೇ ಕೊರೊನಾ ಕಾರಣದಿಂದಾಗಿ ಪಡೆದ ವಿಮೆಯನ್ನು 5-10 ವರ್ಷಗಳವರೆಗೆ ತೆರಿಗೆ ಮುಕ್ತಗೊಳಿಸಲು ಬೇಡಿಕೆಯಿದೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications