ಕಾಶ್ಮೀರದಿಂದ ವಾಪಸ್ ಬಂದ ಪತ್ರಕರ್ತ ರವಿ ಬೆಳಗೆರೆ ಹಂಚಿಕೊಂಡ ಎದೆ ನಡುಗಿಸುವ ಮಾಹಿತಿಗಳು

Recommended Video

      Pulwama : ಪುಲ್ವಾಮಾ ಎಂದರೇನು? ಹಿರಿಯ ಪತ್ರಕರ್ತ ರವಿ ಬೆಳಗೆರೆ ನೀಡಿದ ಎದೆ ನಡುಗಿಸುವ ಮಾಹಿತಿಗಳು

      ಹಾಯ್ ಬೆಂಗಳೂರ್ ವಾರಪತ್ರಿಕೆ ಕಚೇರಿ ಎದುರು ತಮ್ಮ ಇನ್ನೋವಾ ಕಾರಿನಿಂದ ಇಳಿದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರು, ಈ ವರದಿಗಾರನನ್ನು ನಗುತ್ತಾ ಸ್ವಾಗತಿಸಿದರು. "ಅಯ್ಯೋ ಇನ್ನೂ ಕಾಶ್ಮೀರದಿಂದ ಬೆಂಗಳೂರಿಗೆ ಬಂದಿದ್ದೇನೆ ಅಂತಲೇ ಅನ್ನಿಸುತ್ತಿಲ್ಲ. ಅಲ್ಲಿ ಧರಿಸುತ್ತಿದ್ದ ಬಟ್ಟೆಯನ್ನೇ ಈಗಲೂ ಧರಿಸಿದ್ದೀನಿ ನೋಡಿ" ಎನ್ನುತ್ತಾ ಮುಂದಕ್ಕೆ ನಡೆದರು.

      ಪುಲ್ವಾಮಾದಲ್ಲಿ ಉಗ್ರ ದಾಳಿಯಲ್ಲಿ ನಲವತ್ತು ಸಿಆರ್ ಪಿಎಫ್ ಸಿಬ್ಬಂದಿ ಹುತಾತ್ಮರಾದ ನಂತರ ಪ್ರತ್ಯಕ್ಷ ವರದಿ ಮಾಡಲು ಸ್ವತಃ ಅಲ್ಲಿಗೆ ತೆರಳಿದ್ದರು ರವಿ ಬೆಳಗೆರೆ. ಭಾರತೀಯ ಸೇನೆಯು ಉಗ್ರ ದಾಳಿಯ ರೂವಾರಿ ಎನಿಸಿದ ಗುಂಪನ್ನು ಎನ್ ಕೌಂಟರ್ ನಲ್ಲಿ ಹೊಸಕಿ ಹಾಕಿದಾಗ ಕೆಲವೇ ಮೀಟರ್ ದೂರದಲ್ಲಿ ನಿಂತು, ವರದಿಗಾರಿಕೆ ಮಾಡಿದ್ದರು ರವಿ ಬೆಳೆಗೆರೆ. ಅದು ದಿಗ್ವಿಜಯ ಚಾನಲ್ ನಲ್ಲಿ ಪ್ರಸಾರ ಕೂಡ ಆಗಿತ್ತು.

      ಜಮ್ಮು-ಕಾಶ್ಮೀರದಲ್ಲಿನ ತಮ್ಮ ಓಡಾಟ, ವರದಿಗಾರಿಕೆ, ಉಗ್ರವಾದ, ಪಾಕಿಸ್ತಾನ, ಕಾಶ್ಮೀರಿಗಳ ಮನಸ್ಥಿತಿ, ಭಾರತೀಯ ಸೈನ್ಯ ಹಾಗೂ ತಮ್ಮ ಮುಂದಿನ ಯೋಜನೆಗಳು ಹೀಗೆ ನಾನಾ ವಿಷಯಗಳ ಬಗ್ಗೆ ವಿಸ್ತೃತವಾಗಿ ಒನ್ಇಂಡಿಯಾ ಕನ್ನಡದ ಜತೆಗೆ ಮಾತನಾಡಿದ್ದಾರೆ. ಪುಲ್ವಾಮಾದಿಂದ ಹಿಂತಿರುಗಿದ ನಂತರದ ಮೊದಲ ಸಂದರ್ಶನ ಒನ್ ಇಂಡಿಯಾ ಕನ್ನಡದಲ್ಲಿ ಪ್ರಕಟವಾಗುತ್ತಿದೆ.

      ಇದು ಕೆಲವು ಕಂತುಗಳಲ್ಲಿ ಪ್ರಕಟವಾಗಲಿದೆ. ಎರಡು, ಮೂರು ಅಥವಾ ನಾಲ್ಕು ಹೀಗೆ ಎಷ್ಟಾದರೂ ಆಗಬಹುದು. ಆದರೆ ಇವು ಎದೆಯಲ್ಲಿ ದೇಶ ಭಕ್ತಿಯ ಕಿಚ್ಚನ್ನು ಮತ್ತಷ್ಟು ಮಗದಷ್ಟು ಹೊತ್ತಿ ಉರಿಯುವಂತೆ ಮಾಡುವ ಮಾಹಿತಿಗಳು.

      ಹೆಚ್ಚೆಂದರೆ ನೂರು ಕೇಜಿ ಸ್ಪೋಟಕ ಬಳಕೆ

      ಹೆಚ್ಚೆಂದರೆ ನೂರು ಕೇಜಿ ಸ್ಪೋಟಕ ಬಳಕೆ

      ಉಗ್ರಗಾಮಿಗಳ ದಾಳಿ ಆಗಿರುವುದು ಪುಲ್ವಾಮಾ ಜಿಲ್ಲೆಯಲ್ಲಿ. ಅದು ಜಿಲ್ಲೆ. ಹಾಗಂತ ಅವಂತಿಪುರ ಕೂಡ ನಿರ್ದಿಷ್ಟ ಸ್ಥಳವಲ್ಲ. ಆ ಜಾಗದ ಹೆಸರು ಲೇಥ್ ಪುರ್. ಅಲ್ಲಿ ನಡೆದಿರುವುದು ದಾಳಿ. ಮಾಧ್ಯಮಗಳಲ್ಲಿ ಪ್ರಸಾರ ಆದ ರೀತಿಯಲ್ಲಿ ಸ್ಕಾರ್ಪಿಯೋದಲ್ಲಿ ಆತ್ಮಾಹುತಿ ಬಾಂಬರ್ ಬಂದಿದ್ದಲ್ಲ. ಅವನು ಬಳಸಿರುವುದು ಮಾರುತಿ ವ್ಯಾನ್. ತೀರಾ ಹೆಚ್ಚೆಂದರೆ ಎಂಬತ್ತರಿಂದ ನೂರು ಕೇಜಿ ಸ್ಫೋಟಕ ಬಳಸಿರಬಹುದು. ಖಂಡಿತಾ ಮುನ್ನೂರು- ಮುನ್ನೂರಾ ಐವತ್ತು ಕೇಜಿ ಅಲ್ಲ. ಜೈಶ್ ಇ ಮೊಹ್ಮದ್ ಈ ಉಗ್ರ ದಾಳಿಯ ಹೊಣೆ ಹೊತ್ತಿದೆ. ಕೆಲವರಂತೂ ಇದನ್ನು ಸ್ವಾತಂತ್ರ್ಯ ಹೋರಾಟ ಅಂತ ಮಾತನಾಡುವವರಿದ್ದಾರೆ. ಅಂಥ ಯಾವ ಹೋರಾಟವೂ ಇಲ್ಲ. ಆತ್ಮಾಹುತಿ ಬಾಂಬರ್ ಗೆ ಆರಂಭದಲ್ಲೇ ಇಂತಿಷ್ಟು ಹಣ ನೀಡಲಾಗಿರುತ್ತದೆ. ಅದನ್ನು ತಮ್ಮ ಕುಟುಂಬದವರಿಗೆ ಈ ಉಗ್ರರು ಸಹ ನೀಡಿರುತ್ತಾರೆ. ಆದರೆ ಅಂಥ ವ್ಯವಹಾರಗಳೆಲ್ಲ ಗುಪ್ತವಾಗಿಯೇ ನಡೆದಿರುತ್ತವೆ.

      ಪಾಕ್ ಆಕ್ರಮಿತ ಕಾಶ್ಮೀರ ಹೇಗಿದೆ ಎಂಬ ಅಂದಾಜಿಲ್ಲ

      ಪಾಕ್ ಆಕ್ರಮಿತ ಕಾಶ್ಮೀರ ಹೇಗಿದೆ ಎಂಬ ಅಂದಾಜಿಲ್ಲ

      ಜಮ್ಮು-ಕಾಶ್ಮೀರದ ಜನರನ್ನು ಸ್ವತಃ ಮಾತನಾಡಿಸಿದೆ. ಇವರ ಪೈಕಿ ಕೆಲವರಿಗೆ ಭಾರತದ ಬಗ್ಗೆ ಸಿಟ್ಟಿದೆ. ಆದರೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಏನು ಪರಿಸ್ಥಿತಿ ಇದೆ ಎಂಬ ಅಂದಾಜು ಸಹ ಇವರಿಗಿಲ್ಲ. ಜಮ್ಮು-ಕಾಶ್ಮೀರದಲ್ಲಿ ದುಡಿಮೆಗೆ ದಾರಿಯೇ ಇಲ್ಲ. ಪಾಶ್ಮೀನಾ ಅಂತಾರೆ. ಅದರಲ್ಲೂ ಮೋಸ. ಇನ್ನು ದೇಶದ ಬೇರೆ ಭಾಗಗಳಿಂದ ಇಲ್ಲಿಗೆ ಪ್ರವಾಸಕ್ಕೆ ಹೋದರೆ ಇವರಿಗೆ ಅನ್ನ. ಇಲ್ಲದಿದ್ದರೆ ಉಪವಾಸ ಮಲಗಬೇಕು. ಹೀಗೆ ಪದೇಪದೇ ಉಗ್ರಗಾಮಿಗಳ ದಾಳಿ ನಡೆಯುತ್ತಲೇ ಇದ್ದರೆ ಯಾರು ಪ್ರವಾಸ ಬರುತ್ತಾರೆ? ಪಾಕಿಸ್ತಾನದಿಂದ ಭಾರತದೊಳಕ್ಕೆ ಬರುವುದು ಎಷ್ಟರ ಮಾತು? ಅದು ವಿಪರೀತ ದೊಡ್ಡ ಗಡಿ. ಎಷ್ಟೇ ಸರ್ವೇಲನ್ಸ್ ಮಾಡಿದರೂ ಬಂದು ಬಿಡುತ್ತಾರೆ. ನಡೆದುಕೊಂಡೇ ಭಾರತದೊಳಕ್ಕೆ ಬರಬಹುದು. ಕೆಲವು ಕಡೆಗಳಲ್ಲಂತೂ ಒಂದು-ಒಂದೂವರೆ ಕಿಲೋಮೀಟರ್ ಅಷ್ಟೇ. ಹಾಗೆ ಬಂದವರು ಏನು ಮರದ ಕೆಳಗೆ ಇರುವುದಕ್ಕೆ ಆಗುತ್ತಾ? ಸ್ಥಳೀಯರ ಮನೆಗಳಲ್ಲೇ ಇರುತ್ತಾರೆ. ಅದಕ್ಕೆ ಕುಖ್ಯಾತವಾದ ಸ್ಥಳಗಳೂ ಇವೆ.

      ಪೂರ್ವ ಪಾಕಿಸ್ತಾನವನ್ನು ತುಂಡು ಮಾಡಿದ ಸಿಟ್ಟಿನಲ್ಲಿದೆ

      ಪೂರ್ವ ಪಾಕಿಸ್ತಾನವನ್ನು ತುಂಡು ಮಾಡಿದ ಸಿಟ್ಟಿನಲ್ಲಿದೆ

      ಪೂರ್ವ ಪಾಕಿಸ್ತಾನವನ್ನು ಬಾಂಗ್ಲಾದೇಶ್ ಎಂದು ಕತ್ತರಿಸಿ ಹಾಕಿದವರು ಇಂದಿರಾಗಾಂಧಿ. ಆ ಸಿಟ್ಟು ಈಗಲೂ ಪಾಕಿಸ್ತಾನಕ್ಕೆ ಭಾರತದ ಮೇಲಿದೆ. ಅದಕ್ಕೆ ಪ್ರತೀಕಾರದ ರೂಪದಲ್ಲಿ ಜಮ್ಮು-ಕಾಶ್ಮೀರವನ್ನು ಬೇರ್ಪಡಿಸಬೇಕು ಅಥವಾ ತನ್ನೊಳಗೆ ಸೇರಿಸಿಕೊಳ್ಳಬೇಕು ಅಂತ ಪಾಕಿಸ್ತಾನ ಪ್ರಯತ್ನಿಸುತ್ತಲೇ ಇದೆ. ಸರಿ, ಜಮ್ಮು-ಕಾಶ್ಮೀರ ಬಿಟ್ಟುಕೊಟ್ಟು ಭಾರತ ನೆಮ್ಮದಿ ಆಗಿರಬಹುದಲ್ಲಾ? ಸಾಧ್ಯವೇ ಇಲ್ಲ. ಅದು ಎಂದೆಂದಿಗೂ ಸಾಧ್ಯವಿಲ್ಲ. ಭಾರತೀಯ ಸೇನೆಯು ಅಲ್ಲಿ ಕ್ರೌರ್ಯ ನಡೆಸುತ್ತಿದೆ ಎಂದು ಹಲವರು ಬೊಬ್ಬೆ ಹೊಡೆಯುತ್ತಾರೆ. ಏಸಿ ರೂಮಿನಲ್ಲಿ ಕೂತು ಬರೆಯುವುದು ಬೇರೆ. ಯುದ್ಧ ಭೂಮಿಯಲ್ಲಿ ನಿಂತು ಪರಿಸ್ಥಿತಿ ಎದುರಿಸುವುದು ಬೇರೆ. ಉಗ್ರಗಾಮಿಯ ಎದುರಿಗೆ, ಕಲ್ಲು ಎಸೆಯುವವರಿಗೆ ಬೆಣ್ಣೆ ಬಿಸ್ಕತ್ ಕೊಟ್ಟು, ಹಾಗಲ್ಲಪ್ಪ ಹೀಗೆ ಎಂದು ಬುದ್ಧಿ ಮಾತು ಹೇಳಿದರೆ ಕೇಳುತ್ತಾನಾ? ಅವರಿಗೆ ಅದೇ ಭಾಷೆಯಲ್ಲಿ ಉತ್ತರ ಹೇಳಬೇಕಾಗುತ್ತದೆ.

      ಬಸ್ ಗಳು ಬರುವ ಸಮಯದ ಮಾಹಿತಿ ನೀಡಿದವರು ಯಾರು?

      ಬಸ್ ಗಳು ಬರುವ ಸಮಯದ ಮಾಹಿತಿ ನೀಡಿದವರು ಯಾರು?

      ಸಿಆರ್ ಪಿಎಫ್ ಸಿಬ್ಬಂದಿ ಬಸ್ ಗಳು ಇಷ್ಟು ಹೊತ್ತಿಗೇ ಹೊರಡುತ್ತವೆ ಅನ್ನೋ ಮಾಹಿತಿ ನೀಡಿದವರು ಯಾರು? ಆ ಉಗ್ರನಿಗೆ ಈ ಮಾಹಿತಿ ಸಿಕ್ಕಿದ್ದು ಹೇಗೆ? ಮುಖ್ಯವಾಗಿ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಯುತ್ತಿದೆ. ಖಂಡಿತಾ ಈ ಉಗ್ರ ದಾಳಿಗೆ ಸಹಕರಿಸಿದ ಒಳಗಿನವರಿಗೆ ಒಂದು ಗತಿ ಕಾಣಿಸದೆ ಬಿಡಲ್ಲ. ಎಲ್ಲೋ ದೂರದಲ್ಲಿ ಕೂತು, ಅದು ಹಾಗೆ- ಹೀಗೆ, ಪಾಕಿಸ್ತಾನದ ಮೇಲೆ ಯುದ್ಧ ಮಾಡಿ ಎಂದು ಹೇಳುವುದು ಸುಲಭ. ಆದರೆ ಇಂಥ ಘಟನೆ ನಡೆದಾಗ ಅದಕ್ಕೆ ನೀವು ಹೇಗೆ ಪ್ರತಿಕ್ರಿಯಿಸಿದಿರಿ? ಪತ್ರಕರ್ತನಾಗಿ ನೀವು ಹೇಗೆ ನಡೆದುಕೊಂಡಿರಿ ಎಂಬುದು ಕೂಡ ಮುಖ್ಯವಾಗುತ್ತದೆ. ಇಪ್ಪತ್ತು ವರ್ಷಗಳ ಹಿಂದೆ ಕಾರ್ಗಿಲ್ ಯುದ್ಧದ ವೇಳೆ ಅಲ್ಲಿಗೆ ತೆರಳಿ ವರದಿ ಮಾಡಿದ್ದೆ. ಈಗ ಇನ್ನೊಮ್ಮೆ ಹೋಗಿ ಬಂದಿದ್ದೇನೆ. ಹ್ಞಾಂ, ಕೆಲವೇ ಮೀಟರ್ ಗಳ ದೂರದಿಂದ ನೋಡಿದ ಸೈನಿಕರ ಕಾರ್ಯಾಚರಣೆ ಮತ್ತೊಂದು ಮೈ ನವಿರೇಳಿಸುವ, ಎದೆ ನಡುಗಿಸುವ ಅನುಭವ.

      (ಮುಂದುವರಿಯುವುದು)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+