ಆಪರೇಷನ್ ಕಮಲ: ಯಡಿಯೂರಪ್ಪ ಏಕಾಂಗಿ ಹೋರಾಟಕ್ಕೆ ಫಲ ಸಿಗುವುದೇ?
Recommended Video

ಬೆಂಗಳೂರು, ಸೆಪ್ಟೆಂಬರ್ 12: ಜಾರಕಿಹೊಳಿ ಸಹೋದರರ ಜೊತೆಗೆ ಈಗಾಗಲೇ 14ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರಿದ್ದು ಎಲ್ಲರನ್ನೂ ಕರೆದುಕೊಂಡು ಬಿಜೆಪಿಗೆ ಹಾರಲು ಎಂಬ ಸುದ್ದಿ ಕೇಳಿ ಬಿಜೆಪಿ ಹೈಕಮಾಂಡ್ ಕೂಡಾ ಒಂದು ಕ್ಷಣ ಥ್ರಿಲ್ ಆಗಿರಲಿಕ್ಕೂ ಸಾಕು. ಯಡಿಯೂರಪ್ಪ ಜೀ, ಆಗೆ ಬಡಾವ್ ಎಂದು ಅಮಿತ್ ಶಾ ಅವ್ರು ಹುಕುಂ ನೀಡಿರಲಿಕ್ಕೂ ಸಾಕು.
ದೊಡ್ಡವರ ಆಜ್ಞೆ ಸಿಕ್ಕ ಬಳಿಕ ಫುಲ್ ಜೋಶ್ ನಲ್ಲಿ ಅನುಭವಿ ರಾಜಕಾರಣಿ ಅವರು ಆಪರೇಷನ್ ಕಮಲ ಮಾಡಿ ಮತ್ತೊಮ್ಮೆ ಅಧಿಕಾರ ಹಿಡಿಯುವ ಕನಸು ಕಾಣತೊಡಗಿದ್ದಾರೆ.
ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ ಮಾತುಕತೆ ಸಂದರ್ಭದಲ್ಲಿ ಬಿಜೆಪಿಗೆ ಬಂದರೆ ಸಹೋದರ ಸತೀಶ್ ಜಾರಕಿ ಹೊಳಿಗೆ ಉಪಮುಖ್ಯಮಂತ್ರಿ ಸ್ಥಾನ, ರಮೇಶ್ ಜಾರಕಿ ಹೊಳಿಗೆ ಜಲಸಂಪನ್ಮೂಲ ಖಾತೆ ಹಾಗೂ ಕೆಲವು ಶಾಸಕರಿಗೆ ಸಂಪುಟದಲ್ಲೂ ಸೂಕ್ತವಾದ ಖಾತೆಗಳನ್ನೇ ನೀಡುವ ಭರವಸೆಯನ್ನು ನೀಡಲಾಗಿದೆ ಎಂಬ ಸುದ್ದಿಯಿದೆ.
ಆದರೆ, ಶ್ರೀರಾಮುಲು ಎಲ್ಲಿದ್ದಾರೆ ಪತ್ತೆಯಿಲ್ಲ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಬೇರೆ ಪಕ್ಷದವರನ್ನು ಸೆಳೆಯಲು ಯತ್ನಿಸಿ ವಿಫಲರಾದ ರಾಮುಲು ಹಾಗೂ ಗ್ಯಾಂಗ್ ಮತ್ತೆ ಆ ಸಾಹಸಕ್ಕೆ ಕೈ ಹಾಕುವುದು ಅನುಮಾನ.
ಇತ್ತ ಯಡಿಯೂರಪ್ಪ ಅವರ ದೌರ್ಭಾಗ್ಯಕ್ಕೆ ಅವರ ಹಿಂದೆ ಮುಂದೆ ಯಾವೊಬ್ಬ ರಾಜ್ಯಮಟ್ಟದ ನಾಯಕರು ನಿಂತಿಲ್ಲ. ಹೊನ್ನಾಳಿಯ ರೇಣುಕಾಚಾರ್ಯ, ಹರತಾಳು ಹಾಲಪ್ಪ ಬಿಟ್ಟರೆ, ಯಡಿಯೂರಪ್ಪ ಅವರು ಸಿಎಂ ಆಗಲಿ ಎಂದು ಬಯಸುವವರ ಪೈಕಿ ಶೋಭಾ ಕರಂದ್ಲಾಜೆ ಇದ್ದಾರೆ ಅಷ್ಟೇ.

ಯಾರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ
1. ವಿ.ನಾಗೇಂದ್ರ (ಬಳ್ಳಾರಿ ಗ್ರಾಮಾಂತರ),
2. ಆನಂದ್ಸಿಂಗ್(ವಿಜಯನಗರ),
3. ತುಕಾರಾಮ್ (ಸಂಡೂರು),
4. ಅಮರೇಗೌಡ ಬೈಯ್ಯಾಪುರ (ಕುಷ್ಟಗಿ),
5. ಪ್ರತಾಪ್ಗೌಡ ಪಾಟೀಲ್ (ಮಸ್ಕಿ),
6. ನಾರಾಯಣರಾವ್ (ಬಸವಕಲ್ಯಾಣ),
7. ಶ್ರೀಮಂತ ಪಾಟೀಲ (ಕಾಗವಾಡ),
8. ನಾಗೇಶ್ (ಮುಳಬಾಗಿಲು),
9. ಮಹಾಂತೇಶ್ ಕುಮಟಹಳ್ಳಿ (ಅಥಣಿ),
10. ಸತೀಶ್ ಜಾರಕಿಹೊಳಿ (ಯಮಕನಮರಡಿ),
11. ಡಿ.ಎಸ್.ಹುಲಿಗೇರಿ (ಲಿಂಗಸಗೂರು),
12. ರಮೇಶ್ ಜಾರಕಿ ಹೊಳಿ (ಗೋಕಾಕ್),
13. ಸವನಗೌಡ ದದ್ದಲ್( ರಾಯಚೂರು ಗ್ರಾಮಾಂತರ)
ಈ ಪೈಕಿ ವಿ ನಾಗೇಂದ್ರ ಹಾಗೂ ಆನಂದ್ ಸಿಂಗ್ ಅವರನ್ನು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ಸಿಗೆ ಸೆಳೆಯುವಲ್ಲಿ ಸಂತೋಷ್ ಲಾಡ್ ಯಶಸ್ವಿಯಾಗಿದ್ದರು. ಈಗ ಮತ್ತೊಮ್ಮೆ ಬಿಜೆಪಿ ಪರ ನಿಲ್ಲಲು ಇಬ್ಬರೂ ಮನಸ್ಸು ಮಾಡಿದರೂ ಭಾರಿ ಬೇಡಿಕೆ ಒಡ್ಡದೆ ಒಂದು ಹೆಜ್ಜೆ ಮುಂದಿಡುವುದಿಲ್ಲ ಎಂಬ ಮಾತು ಕೇಳಿ ಬಂದಿದೆ.

ಜಾರಕಿಹೊಳಿ ಸೋದರರಿಗೆ ನೀಡಿರುವ ಆಫರ್ಸ್
ಬಿಜೆಪಿಗೆ ಬಂದರೆ ಸಹೋದರ ಸತೀಶ್ ಜಾರಕಿ ಹೊಳಿಗೆ ಉಪಮುಖ್ಯಮಂತ್ರಿ ಸ್ಥಾನ, ರಮೇಶ್ ಜಾರಕಿ ಹೊಳಿಗೆ ಜಲಸಂಪನ್ಮೂಲ ಖಾತೆ ಹಾಗೂ ಕೆಲವು ಶಾಸಕರಿಗೆ ಸಂಪುಟದಲ್ಲೂ ಸೂಕ್ತವಾದ ಖಾತೆಗಳನ್ನೇ ನೀಡುವ ಭರವಸೆಯನ್ನು ನೀಡಿ, ಬಿ ಶ್ರೀರಾಮುಲು ಅವರು ಆಮಿಷ ಒಡ್ಡಿದ್ದಾರೆ ಎನ್ನಲಾಗಿದೆ. ಆದರೆ, ಈ ರೀತಿ ಯಾವುದೇ ಮಾತುಕತೆ ನಡೆದೇ ಇಲ್ಲ ಎಂದು ಸತೀಶ್ ಸ್ಪಷ್ಟಪಡಿಸಿದ್ದಾರೆ.

ವಾಲ್ಮೀಕಿ ಜನಾಂಗ ಉದ್ಧಾರವೇ ಟ್ರಂಪ್ ಕಾರ್ಡ್
ವಾಲ್ಮೀಕಿ ಜನಾಂಗಕ್ಕೆ ರಾಜಕೀಯವಾಗಿ ಹೆಚ್ಚಿನ ಮಹತ್ವ ಸಿಕ್ಕಿಲ್ಲ. ಮೂರು ಪ್ರಮುಖ ಪಕ್ಷಗಳು ಕಡೆಗಣಿಸಿವೆ. ಲಿಂಗಾಯತ ಹಾಗೂ ವೀರಶೈವ ಹೋರಾಟವನ್ನು ರಾಜಕೀಯಕ್ಕೆ ಬಳಸಿಕೊಂಡಿವೆ. ಎಂಬಿ ಪಾಟೀಲರಿಗೆ ಅನ್ಯಾಯವಾಗಿದೆ. ಹೀಗಾಗಿ, ನಾವು ನಮ್ಮ ಜನಾಂಗದ ಜನರ ಆಶೋತ್ತರವನ್ನು ಈಡೇರಿಸಬೇಕು, ಇದಕ್ಕೆ ಅಧಿಕಾರ ಬೇಕು ಎಂದೆಲ್ಲ ಬಿ ಶ್ರೀರಾಮುಲು ಅವರು ತಮ್ಮ ಮಾತು ಖರ್ಚು ಮಾಡಿದ್ದಾರಂತೆ.

ಯಡಿಯೂರಪ್ಪ ಸಿಎಂ ಆಗೋದು ಬೇಡ
ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅವಕಾಶ ಸಿಕ್ಕರೆ ಮತ್ತೊಮ್ಮೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಇದರಲ್ಲಿ ತಪ್ಪೇನಿಲ್ಲ. ಒಂದು ವೇಳೆ ಅವರು ಇನ್ನೊಮ್ಮೆ ಸಿಎಂ ಆದರೂ ಹೆಚ್ಚು ಕಾಲ ಸ್ಥಾನದಲ್ಲಿ ಉಳಿಯುವುದು ಅನುಮಾನ. ಬಿಜೆಪಿಯ ಅಲಿಖಿತ ನಿಯಮವಾದ 75 ಪ್ಲಸ್ ವಯಸ್ಸಿನ ನಾಯಕರಿಗೆ ಉನ್ನತ ಹುದ್ದೆಯಿಲ್ಲ ಹಾಗೂ ಯುವ ಮುಖಂಡರ ವಿರೋಧ ಕಾರಣವಾಗಬಹುದು. ಆದರೆ, ಯಾರೊಬ್ಬರೂ ಯಡಿಯೂರಪ್ಪ ಬೇಡ ಎಂದು ಹೇಳಲು ಧೈರ್ಯ ಮಾಡುತ್ತಿಲ್ಲ, ಈ ಮಾತು ಹೈಕಮಾಂಡ್ ನಿಂದಲೇ ಬರಲಿ ಎಂದು ಕಾದಿದ್ದಾರೆ. ಹಾಗಾಗಿ, ಒಲ್ಲದ ಮನಸ್ಸಿನಿಂದ ಆಪರೇಷನ್ ಕಮಲ, ಜಾರಕಿಹೊಳಿ ಬ್ರದರ್ಸ್ ಸೆಳೆಯುವ ನಾಟಕದಲ್ಲಿ ಭಾಗಿಗಳಾಗಿದ್ದಾರೆ. ಸರ್ಕಾರ ತಾನಾಗೇ ಬೀಳಲಿದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಕಾಂಗ್ರೆಸ್ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಯತ್ನ ಮುಂದುವರೆಸಿದೆ.












Click it and Unblock the Notifications