'ಮಿಸೆಸ್ ಇಂಡಿಯಾ ಯೂನಿವರ್ಸ್' ಮಲೆನಾಡಿನ ಮನೀಶಾ ಜತೆಗೆ ಮಾತುಕತೆ
ಇದು ಮಲೆನಾಡಿನ ಮತ್ತೊಬ್ಬ ಹೆಣ್ಣುಮಗಳ ಯಶೋಗಾಥೆ. ಶಿವಮೊಗ್ಗ ಜಿಲ್ಲೆಯ ಹೆಸರನ್ನು ವಿಶ್ವ ಭೂಪಟದಲ್ಲಿ ಮತ್ತೊಮ್ಮೆ ಹುಡುಕುವಂತೆ ಮಾಡಿದ ಮನೀಶಾ ವರುಣ್ ರ ಬಗೆಗಿನ ವಿಶೇಷ ಲೇಖನ ಇದು. ಕಳೆದ ವರ್ಷ ಭದ್ರಾವತಿಯ ಶಾಶಾಭಟ್ ಸೂಪ್ರಾ ವಿಶ್ವ ಸುಂದರಿಯ ಕಿರೀಟವನ್ನು ಮುಡಿಗೇರಿಸಿದ್ದನ್ನು ಯಾರೂ ಮರೆಯುವಂತಿಲ್ಲ.
ಇದೀಗ ಇದೇ ಹಾದಿ ತುಳಿದಿದ್ದಾರೆ ಮಲೆನಾಡಿನ ಚೆಲುವೆ- ಶಿವಮೊಗ್ಗದ ಮನಿಷಾ ವರುಣ್. ಈ ಬಾರಿಯ ಮಿಸೆಸ್ ಇಂಡಿಯಾ ಯುನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡು ಶಿವಮೊಗ್ಗದ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಡಾಜಲ್ ಇಂಡಿಯಾ ಸಂಸ್ಥೆ ಆಯೋಜಿಸಿದ್ದ ಈ ಸೌಂದರ್ಯ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ 26 ಮಂದಿ ಭಾಗವಹಿಸಿದ್ದರು.
ಬೆಂಗಳೂರಿನ ಸುಂದರಿ ಮೋಹಿನಿಗೆ ಮಿಸಸ್ ಇಂಡಿಯಾ ಕಿರೀಟ?
ಕೊನೆಯ ಸುತ್ತಿನಲ್ಲಿ ಐವರು ಸ್ಪರ್ಧಾಳುಗಳ ಪೈಕಿ ವಿಜೇತರಾಗಿ ಹೊರಹೊಮ್ಮಿದ ಮನೀಶಾ ಅವರು ಎಂಟು ಸುತ್ತುಗಳಲ್ಲಿ ಪ್ರಥಮ ಸ್ಥಾನವನ್ನು ಉಳಿಸಿಕೊಂಡೇ ಕೊನೆಯದಾಗಿ ಮಿಸೆಸ್ ಇಂಡಿಯಾ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಅರಿವು ಮೂಡಿಸುವ ಘೋಷವಾಕ್ಯವನ್ನು ಹೊತ್ತ ಈ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಕೇಳಲಾದ, ನಿಮಗೆ ಮಾದರಿ ಯಾರು ಎಂಬ ಪ್ರಶ್ನೆಗೆ 'ಜನ್ಮ ನೀಡಿದ ತಾಯಿ ಹಾಗೂ ಮಾತೃ ಸ್ವರೂಪಿ ಅತ್ತೆ' ಎಂದು ನೀಡಿದ ಉತ್ತರ ಕೊಲಂಬೊದಲ್ಲಿ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕ ಸಮೂಹದ ಚಪ್ಪಾಳೆಗೆ ಸಾಕ್ಷಿಯಾಗಿತ್ತು.
ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವೀಧರೆ
ಎರಡು ಮಕ್ಕಳ ತಾಯಿಯಾಗಿರುವ ಮನೀಶಾ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವೀಧರೆ. ಅತ್ಯಂತ ಕಠಿಣವಾದ ಈ ಸ್ಪರ್ಧೆಗೆ ಮನೀಶಾ ಅವರನ್ನು ತಯಾರು ಮಾಡಿದ್ದು ಈ ಹಿಂದೆ ಶಿವಮೊಗ್ಗದ ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದ ಪಂಕಜ್ ಕುಮಾರ್ ಪಾಂಡೆ ಅವರ ಪತ್ನಿ ಅನುಜಾ ಪಾಂಡೆ. ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗೆ ತರಬೇತುದಾರರು ಹಾಗೂ ರಾಷ್ಟ್ರೀಯ ವಸ್ತ್ರ ವಿನ್ಯಾಸ ಸೌಂದರ್ಯ ಪರಿಕರಗಳ ನಿರ್ದೇಶಕರಾಗಿರುವ ಅನುಜಾ ಪಾಂಡೆ ನಾಲ್ಕು ತಿಂಗಳು ಕಾಲ ಕಠಿಣ ತರಬೇತಿಯನ್ನು ನೀಡಿದ್ದನ್ನು ಮನೀಶಾ ಮರೆಯುವುದಿಲ್ಲ.
ಸಿನಿಮಾ - ಸೀರಿಯಲ್ ಬಗ್ಗೆ ಆಸಕ್ತಿ ಇಲ್ಲ
ನನಗೆ ಮಹಿಳಾ ದೌರ್ಜನ್ಯ ತಡೆ ಹಾಗೂ ಮಹಿಳಾ ರಕ್ಷಣೆ ಕುರಿತು ಆಸಕ್ತಿ ಇದ್ದು, ಈ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಲಾಗುವುದು. ಕುಟುಂಬ ಹಾಗೂ ಸಮಾಜದ ಹಿತ ಕಾಯುವಲ್ಲಿ ಆಸಕ್ತಿಯಿದೆಯೇ ಹೊರತು, ಸಿನಿಮಾ - ಸೀರಿಯಲ್ ಬಗ್ಗೆ ಆಸಕ್ತಿ ಇಲ್ಲ ಎನ್ನುವ ಮನಿಶಾ, ಸೌಂದರ್ಯ ಸ್ಪರ್ಧೆಯೆಂದರೆ ಪೂರ್ವಗ್ರಹ ಬೇಡ. ಹಾಗೆಯೇ ಅಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ಹೀಗಾಗಿ ಹೆಣ್ಣುಮಕ್ಕಳು ಧೈರ್ಯದಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎನ್ನುತ್ತಾರೆ.
ಆತ್ಮವಿಶ್ವಾಸ ಹೆಚ್ಚಾಗುತ್ತದೆ
ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ, ಜಾಣ್ಮೆ, ಬುದ್ಧಿಮತ್ತೆ ಹಾಗೂ ಆ ಕ್ಷಣದಲ್ಲಿ ನಾವು ನೀಡುವ ಪ್ರತಿಕ್ರಿಯೆಗಳ ಮುಖ್ಯ ಮಾನದಂಡಗಳು ಎಂದು ತಮ್ಮ ಅನುಭವ ಹಂಚಿಕೊಂಡ ಅವರು, ಆತ್ಮವಿಶ್ವಾಸ ವೃದ್ಧಿ, ಸಮಾಜವನ್ನು ಧನಾತ್ಮಕ ಅಂಶಗಳಿಂದ ಎದುರಿಸುವ ಶಿಕ್ಷಣ ಈ ಸ್ಪರ್ಧೆಗಳಲ್ಲಿ ಸಿಗುತ್ತದೆ ಎನ್ನುತ್ತಾರೆ.
ಕುಟುಂಬದವರೇ ನನ್ನ ಸಾಧನೆಗೆ ಪ್ರೇರಣೆ
ಮನೆಯಲ್ಲಿ ತಂದೆ- ತಾಯಿ, ಅತ್ತೆ- ಮಾವ, ಪತಿ ಎಲ್ಲರೂ ನೀಡಿದ- ನೀಡುತ್ತಿರುವ ಪ್ರೋತ್ಸಾಹದಿಂದ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಈ ಬೆಳವಣಿಗೆ ಹಾಗೂ ಪ್ರಶಸ್ತಿಯನ್ನು ಅವರಿಗೆ ಅರ್ಪಿಸುತ್ತೇನೆ. ಹಾಗೇ ಸಮಾಜಮುಖಿ ಕಾರ್ಯ ಮಾಡಲು ಇದನ್ನೇ ಪ್ರೇರಣೆಯಾಗಿಸಿಕೊಂಡು ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ನಗುತ್ತಲೇ ಉತ್ತರಿಸಿದರು ಮನಿಶಾ. "ನನಗೆ ಮದುವೆಯಾಗಿದೆ. ಜೀವನವೇ ಮುಗಿಯಿತು. ಓದಿದರೆ ಎಷ್ಟು- ಬಿಟ್ಟರೆಷ್ಟು, ಹೊರಗೇಕೇ ಹೋಗಬೇಕು" ಎಂಬ ಹಿಂಜರಿಕೆ ಇರುವಂಥ ಹೆಣ್ಣುಮಕ್ಕಳಿಗೆ ಮನಿಶಾ ಅವರು ಮಾದರಿ ಅನ್ನಿಸುವುದಿಲ್ಲವೇ?