ಕಾಂಗ್ರೆಸ್ ಈ 3 ಕ್ಷೇತ್ರ ಬಿಟ್ಟು ಕೊಡಲೇಬೇಕೆಂದು ಜೆಡಿಎಸ್ ಹಠವೇಕೆ?
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗೂಡಿ ಬಿಜೆಪಿಯನ್ನು ಎದುರಿಸಲು ಸಜ್ಜಾಗಿರುವ ದೇವೇಗೌಡ-ಕುಮಾರಸ್ವಾಮಿ ನೇತೃತ್ವದ ಜೆಡಿಎಸ್, ಒಂದು ವಿಷಯದಲ್ಲಿ ಹಠಕ್ಕೆ ಬಿದ್ದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಅದೆಂದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಕ್ಷೇತ್ರಗಳ ಪೈಕಿ ಮೂರನ್ನು ತನಗೆ ಬಿಟ್ಟುಕೊಡಬೇಕು ಎಂಬುದು. ಹೀಗೆ ಅದು ಕೇಳುತ್ತಿರುವ ಮೂರು ಸೀಟುಗಳೆಂದರೆ ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಕೋಲಾರ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಾಂಗ್ರೆಸ್ ನ ವೀರಪ್ಪ ಮೊಯ್ಲಿ ಗೆದ್ದಿದ್ದರು. ಅದೇ ರೀತಿ ತುಮಕೂರಿನಿಂದ ಮುದ್ದಹನುಮೇಗೌಡ ಹಾಗೂ ಕೋಲಾರದಿಂದ ಕೆಎಚ್ ಮುನಿಯಪ್ಪ ಗೆದ್ದಿದ್ದರು.
ಸಹಜವಾಗಿ ಮಿತ್ರಪಕ್ಷಗಳು ಸೀಟು ಹಂಚಿಕೆ ಮಾಡಿಕೊಳ್ಳುವಾಗ ಕಳೆದ ಚುನಾವಣೆಯಲ್ಲಿ ಯಾವ ಕ್ಷೇತ್ರಗಳಿಂದ ತಮ್ಮ ಕ್ಯಾಂಡಿಡೇಟುಗಳು ಗೆದ್ದಿದ್ದಾರೋ? ಆ ಕ್ಷೇತ್ರಗಳನ್ನು ಬಿಟ್ಟುಕೊಡುವುದಿಲ್ಲ.
ಹೀಗಾಗಿಯೇ ಜೆಡಿಎಸ್ ಈ ಸೀಟುಗಳನ್ನು ಕೇಳಬಹುದು ಎಂಬ ಕಾರಣಕ್ಕಾಗಿ ಮೊನ್ನೆ ಕಾಂಗ್ರೆಸ್ ನಾಯಕರು ಸಭೆ ಸೇರಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಎಲ್ಲ ಕ್ಯಾಂಡಿಡೇಟುಗಳಿಗೆ ಟಿಕೆಟ್ ನೀಡಬೇಕು ಎಂದು ತೀರ್ಮಾನಿಸಿದವು.

ಹತ್ತೂ ಬೇಕೆಂದು ಪಟ್ಟು ಹಿಡಿದಿರುವ ಕಾಂಗ್ರೆಸ್
ಕಳೆದ ಚುನಾವಣೆಯಲ್ಲಿ ಅದು ಗೆದ್ದಿದ್ದು ಒಂಭತ್ತು ಸೀಟು. ಆದರೆ ಶ್ರೀರಾಮುಲು ಅವರ ರಾಜೀನಾಮೆಯಿಂದ ತೆರವಾದ ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದುಕೊಂಡಿತಲ್ಲ? ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಉಗ್ರಪ್ಪ (ಬಿಜೆಪಿಯ ಜೆ ಶಾಂತಾ ವಿರುದ್ಧ) ಗೆದ್ದಿದ್ದರಿಂದ ಅದರ ಶಕ್ತಿ ಹತ್ತಕ್ಕೇರಿತು.
ಈಗ ಆ ಹತ್ತೂ ಲೋಕಸಭಾ ಕ್ಷೇತ್ರಗಳು ಸೇರಿದಂತೆ ಇಪ್ಪತ್ತು ಲೋಕಸಭಾ ಕ್ಷೇತ್ರಗಳು ತಮಗೆ ಬೇಕು ಎಂಬುದು ರಾಜ್ಯ ಕಾಂಗ್ರೆಸ್ ವಾದ. ಆದರೆ ಜೆಡಿಎಸ್ ಇದನ್ನು ಒಪ್ಪುತ್ತಿಲ್ಲ. ಬದಲಿಗೆ ಕಾಂಗ್ರೆಸ್ ಗೆದ್ದ ಸೀಟುಗಳ ಪೈಕಿ ಮೂರು ಸೀಟುಗಳನ್ನು ತನಗೆ ಬಿಟ್ಟುಕೊಡುವುದೂ ಸೇರಿದಂತೆ ಕನಿಷ್ಠ ಎಂಟು ಸೀಟುಗಳನ್ನು ತನಗೆ ಬಿಟ್ಟುಕೊಡಬೇಕು ಎಂದು ಅದು ವಾದಿಸುತ್ತಿದೆ. ಜೆಡಿಎಸ್ ಹೀಗೆ ಹಠ ಹಿಡಿಯಲು ಕಾರಣಗಳೂ ಇಲ್ಲದಿಲ್ಲ.

ಗೆಲುವಿಗೆ ಜೆಡಿಎಸ್ ಜೊತೆ ರಹಸ್ಯ ಒಪ್ಪಂದ
ಅದಕ್ಕೆ ಕೆಲ ಕುತೂಹಲಕಾರಿ ಕಾರಣಗಳೂ ಇವೆ. ಉದಾಹರಣೆಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ತೆಗೆದುಕೊಳ್ಳೋಣ. ಈ ಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್ ಪಕ್ಷದ ವೀರಪ್ಪ ಮೊಯ್ಲಿ ಗೆದ್ದಿದ್ದರು. [ಪಡೆದ ಮತಗಳು : ವೀರಪ್ಪ ಮೊಯ್ಲಿ - 4,24,800, ಬಿಎನ್ ಬಚ್ಚೇಗೌಡ - 4,15,280, ಎಚ್ ಡಿ ಕುಮಾರಸ್ವಾಮಿ - 3,46,339]
ಆದರೆ ವಾಸ್ತವವಾಗಿ ಅವರ ಗೆಲುವಿಗೆ ಆ ಸಂದರ್ಭದಲ್ಲಿ ದೊಡ್ಡ ಮಟ್ಟದ ನೆರವು ನೀಡಿದ್ದು ಜೆಡಿಎಸ್. ಯಾಕೆಂದರೆ ಅಷ್ಟೊತ್ತಿಗಾಗಲೇ ಚಿಕ್ಕಬಳ್ಳಾಪುರ ಕ್ಷೇತ್ರದ ಗಣನೀಯ ಪ್ರಮಾಣದ ಮತದಾರರು ವೀರಪ್ಪ ಮೊಯ್ಲಿ ವಿರುದ್ಧ ತಿರುಗಿ ಬಿದ್ದಿದ್ದರು.
ಕಾರಣ? ಅಧಿಕಾರದಲ್ಲಿದ್ದಾಗ ಅವರು ಜನತೆಗೆ ಸ್ಪಂದಿಸುತ್ತಿರಲಿಲ್ಲ ಎಂಬುದು. ಗಮನಿಸಬೇಕಾದ ಸಂಗತಿ ಎಂದರೆ ವೀರಪ್ಪ ಮೊಯ್ಲಿ ಅವರಿಗೂ ಇದು ಗೊತ್ತಿತ್ತು. ಹೀಗಾಗಿ ಅವರು ರಹಸ್ಯವಾಗಿ ಜೆಡಿಎಸ್ ಸಹಾಯ ಕೋರಿದರು.

ಗೌಡರಿಗೆ ಬಚ್ಚೇಗೌಡ ಗೆಲ್ಲುವುದು ಬೇಕಿರಲಿಲ್ಲ
ಆ ಸಂದರ್ಭದಲ್ಲಿ ವೀರಪ್ಪ ಮೊಯ್ಲಿ ವಿರುದ್ಧ ಬಿಜೆಪಿ ಕ್ಯಾಂಡಿಡೇಟ್ ಆಗಿ ಕಣಕ್ಕಿಳಿದವರು ಬಿ.ಎನ್. ಬಚ್ಚೇಗೌಡ. ಒಂದು ವೇಳೆ ಜೆಡಿಎಸ್ ಸ್ವಲ್ಪ ನಿರ್ಲಕ್ಷ್ಯ ಮಾಡಿದ್ದರೂ ವೀರಪ್ಪ ಮೊಯ್ಲಿ ಸೋಲು ಕಾಣುತ್ತಿದ್ದರು. ಬಚ್ಚೇಗೌಡ ದೊಡ್ಡ ಅಂತರದಲ್ಲಿ ಗೆಲುವು ಕಾಣುತ್ತಿದ್ದರು.
ಆದರೆ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಬಚ್ಚೇಗೌಡ ಗೆಲ್ಲುವುದು ಬೇಕಿರಲಿಲ್ಲ. ಯಾಕೆಂದರೆ, ಅದಾಗಲೇ ಯಡಿಯೂರಪ್ಪ ಅವರ ಗ್ಯಾಂಗಿನ ಮುಂಚೂಣಿಯಲ್ಲಿದ್ದ ಬಚ್ಚೇಗೌಡ ರಾಜಕೀಯವಾಗಿ ಜೆಡಿಎಸ್ ನಾಯಕರನ್ನು ಕಂಡ, ಕಂಡಲ್ಲಿ ಟೀಕಿಸಿದ್ದರು.
"ದೇವೇಗೌಡರು ರಾಜಕೀಯವಾಗಿ ಬೆಳೆಯಲು ನಾನೇ ಕಾರಣ. ಇವರ ಕುಟುಂಬದವರ ಬಳಿ ಹಾಕಲು ಎರಡನೇ ಜತೆ ಬಟ್ಟೆ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಅವರಿಗೆ ನೆರವು ನೀಡಿದವನು ನಾನು. ದೇವೇಗೌಡರ ಮಗ ರೇವಣ್ಣ ಅವರ ಕಷ್ಟ ನೋಡಲಾಗದೆ ನಾನೇ ಹಲವು ಉಪಕಾರ ಮಾಡಿದ್ದೇನೆ" ಎಂಬುದು ಬಚ್ಚೇಗೌಡರ ಟೀಕೆಯ ಸ್ಯಾಂಪಲ್ಲು.

ದೇವೇಗೌಡ ಬ್ಲಾಕ್ ಕೋಬ್ರಾ ಇದ್ದಂತೆ
ದೇವೇಗೌಡ ಬ್ಲಾಕ್ ಕೋಬ್ರಾ ಇದ್ದಂತೆ. ರಾಜ್ಯದ ಒಕ್ಕಲಿಗ ನಾಯಕರನ್ನೆಲ್ಲ ವ್ಯವಸ್ಥಿತವಾಗಿ ಮುಗಿಸಿದವರು ಅವರು. ವೈ.ಕೆ. ರಾಮಯ್ಯ, ಭೈರೇಗೌಡ, ನಾಗೇಗೌಡ ಸೇರಿದಂತೆ ಹಲ ಒಕ್ಕಲಿಗ ನಾಯಕರನ್ನು ದೇವೇಗೌಡರ ಕುಟುಂಬ ವ್ಯವಸ್ಥಿತವಾಗಿ ಮುಗಿಸಿತು ಅನ್ನುವುದು ಇಂತಹ ಸ್ಯಾಂಪಲ್ಲುಗಳಲ್ಲಿದೆ.
ಹೀಗೆ ಬಚ್ಚೇಗೌಡರಾಡಿದ ಮಾತು ದೇವೇಗೌಡರ ಕುಟುಂಬಕ್ಕೆ ದೊಡ್ಡ ಮಟ್ಟದ ಆಕ್ರೋಶವನ್ನುಂಟು ಮಾಡಿತ್ತು. ಅಂದ ಹಾಗೆ, ಬಚ್ಚೇಗೌಡ ಹಾಗೂ ದೇವೇಗೌಡರ ನಡುವಣ ಈ ಸಂಘರ್ಷದ ವಿವರ ವೀರಪ್ಪ ಮೊಯ್ಲಿ ಅವರಿಗೂ ಗೊತ್ತಿತ್ತು. ಹೀಗಾಗಿ ಅವರು ಚುನಾವಣೆಯಲ್ಲಿ ತಮಗೆ ಸಹಕಾರ ನೀಡುವಂತೆ ಜೆಡಿಎಸ್ ವರಿಷ್ಠರನ್ನು ಕೋರಿದರು.
ಬೇರೆ ಯಾರೇ ಜೆಡಿಎಸ್ ವತಿಯಿಂದ ನಿಂತರೂ ಬಚ್ಚೇಗೌಡ ಗೆಲ್ಲುತ್ತಾರೆ. ಹೀಗಾಗಿ ಕುಮಾರಸ್ವಾಮಿ ಅವರೇ ನನ್ನ ವಿರುದ್ಧ ಕ್ಯಾಂಡಿಡೇಟ್ ಆಗಲಿ. ಅವರು ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆದರೆ ಬಚ್ಚೇಗೌಡ ಸೋಲುತ್ತಾರೆ ಅನ್ನುವುದು ವೀರಪ್ಪ ಮೊಯ್ಲಿ ಅವರ ಲೆಕ್ಕಾಚಾರವಾಗಿತ್ತು. ಮತ್ತದು ನಿಜವೂ ಆಗಿತ್ತು.

ಸ್ವಾಮಿ ನಿಂತರು ಮೊಯ್ಲಿಯನ್ನು ಗೆಲ್ಲಿಸಿದರು
ಫೈನಲಿ, ಚುನಾವಣೆಗೆ ಮೊಯ್ಲಿ ವಿರುದ್ಧ ಬಚ್ಚೇಗೌಡ ನಿಂತರೆ, ಬಚ್ಚೇಗೌಡರಿಗೆ ಗುಳಿಗೆ ನೀಡುವ ಸಲುವಾಗಿಯೇ ಕುಮಾರಸ್ವಾಮಿ ಜೆಡಿಎಸ್ ವತಿಯಿಂದ ಸ್ಪರ್ಧಿಸಿದ್ದರು. ಹೀಗೆ ಸ್ಪರ್ಧಿಸಿದವರು ಒಕ್ಕಲಿಗ ಸಮುದಾಯದ ಗಣನೀಯ ಮತಗಳನ್ನು ಸೆಳೆದರು. ಪರಿಣಾಮ? ಬಚ್ಚೇಗೌಡ ಸೋತರು, ವೀರಪ್ಪ ಮೊಯ್ಲಿ ಅಲ್ಪ ಅಂತರದಲ್ಲಿ ಗೆದ್ದರು.
ಈ ಮಧ್ಯೆ ಚುನಾವಣೆಯಲ್ಲಿ ಸೋತರೂ ಜೆಡಿಎಸ್ ನಾಯಕರ ಮನಸ್ಸಿಗೆ ಸಮಾಧಾನವಾಯಿತು. ಯಾಕೆಂದರೆ, ಗೆದ್ದವರು ಯಾರೇ ಇರಲಿ, ಸೋತವರು ತಮ್ಮ ಕಡುವೈರಿ ಬಿ.ಎನ್. ಬಚ್ಚೇಗೌಡ ಎಂಬುದು. ಈ ಬೆಳವಣಿಗೆಯನ್ನು ಇವತ್ತಿಗೂ ಬಚ್ಚೇಗೌಡರು ಮರೆಯಲು ತಯಾರಿಲ್ಲ. ಬದಲಿಗೆ, ಕಳೆದ ಐದು ವರ್ಷಗಳಲ್ಲಿ ಮೇಲಿಂದ ಮೇಲೆ ಅವರು ಜೆಡಿಎಸ್ ವಿರುದ್ಧ ಕಿಡಿ ಕಾರುತ್ತಲೇ ಬಂದಿದ್ದಾರೆ.

ಗೌಡ ಮತ್ತು ಕುಮಾರಸ್ವಾಮಿ ಅವರ ಆತಂಕ
ಹೀಗಾಗಿ ಈ ಸಲವೂ ಜೆಡಿಎಸ್ ಗೆ ಬಿಜೆಪಿ ಕ್ಯಾಂಡಿಡೇಟ್ ಆಗಲಿರುವ ಬಚ್ಚೇಗೌಡರು ಸೋಲಬೇಕು. ಆದರೆ ಸಮಸ್ಯೆ ಎಂದರೆ ಕಳೆದ ಬಾರಿಯಂತೆ ಈ ಬಾರಿ ತ್ರಿಕೋನ ಸ್ಪರ್ಧೆ ನಡೆಯುವಂತಿಲ್ಲ. ಕಾಂಗ್ರೆಸ್ ಜತೆ ಮೈತ್ರಿ ಇರುವಾಗ ಅದು ಸ್ಪರ್ಧಿಸಿದ ಕಡೆ ತಾನು ಬೆಂಬಲ ನೀಡಬೇಕು. ತಾನು ಸ್ಪರ್ಧಿಸಿದ ಕಡೆ ಕಾಂಗ್ರೆಸ್ ಪಕ್ಷದ ಬೆಂಬಲ ಪಡೆಯಬೇಕು.
ಸಮಸ್ಯೆ ಎಂದರೆ, ಈ ಸೀಟನ್ನು ಕಾಂಗ್ರೆಸ್ ಗೆ ಬಿಟ್ಟು ಕೊಟ್ಟರೆ ಸಿದ್ದರಾಮಯ್ಯ ಅವರ ವಿರುದ್ಧ ಮತ ಚಲಾಯಿಸಲು ಸಜ್ಜಾಗಿರುವ ಬಹುಸಂಖ್ಯಾತ ಮತದಾರರು ವೀರಪ್ಪ ಮೊಯ್ಲಿ ಅವರಿಗೆ ಮತ ಹಾಕುವುದಿಲ್ಲ. ಬದಲಿಗೆ ತಮ್ಮದೇ ಸಮುದಾಯದ ಬಿ.ಎನ್. ಬಚ್ಚೇಗೌಡರ ಕಡೆ ವಾಲುತ್ತಾರೆ.
ಸಿದ್ದರಾಮಯ್ಯ ಹಾಗೂ ಜೆಡಿಎಸ್ ನಡುವಣ ಕಚ್ಚಾಟದ ವಿವರ ಅವರಿಗೂ ಗೊತ್ತು. ಸಮಸ್ಯೆ ಎಂದರೆ ವೀರಪ್ಪ ಮೊಯ್ಲಿ ಕೂಡಾ ಗೆಲ್ಲುವುದಿಲ್ಲ. ಅದೇ ಕಾಲಕ್ಕೆ ಬಚ್ಚೇಗೌಡ ಗೆಲ್ಲುವುದನ್ನು ತಡೆಯಲೂ ಸಾಧ್ಯವಿಲ್ಲ. ಇದು ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಆತಂಕ.

ಕೋಲಾರದಲ್ಲಿ ಮುನಿಯಪ್ಪ ಬಿಟ್ಟುಕೊಡ್ತಾರಾ?
ಇನ್ನು ಕೋಲಾರ ಲೋಕಸಭಾ ಕ್ಷೇತ್ರದ ವಿಷಯಕ್ಕೇ ಬರೋಣ. ಅಲ್ಲಿಂದ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೆಎಚ್ ಮುನಿಯಪ್ಪ ಗೆದ್ದಿದ್ದರಾದರೂ, ಅದೇ ಕ್ಷೇತ್ರದಲ್ಲಿರುವ ಒಕ್ಕಲಿಗ ಮತದಾರರು ಈ ಬಾರಿ ಅವರ ಜತೆ ನಿಲ್ಲುವುದಿಲ್ಲ. ಹಾಗಂತ ಜೆಡಿಎಸ್ ಪಕ್ಷದ ವತಿಯಿಂದಲೇ ಯಾರನ್ನಾದರೂ ಕಣಕ್ಕಿಳಿಸಿದರೆ ಅದೂ ಕಷ್ಟ.
ಹೀಗಾಗಿ ಕಾಂಗ್ರೆಸ್ ನಲ್ಲಿರುವ ಮಾಜಿ ಸಚಿವ, ದಲಿತ ನಾಯಕ ಎಚ್.ಸಿ. ಮಹದೇವಪ್ಪ ಅವರನ್ನು ಜೆಡಿಎಸ್ ಗೆ ಕರೆತಂದು ಅವರನ್ನು ಕಣಕ್ಕಿಳಿಸಬೇಕು ಎಂಬುದು ದೇವೇಗೌಡ ಹಾಗೂ ಕುಮಾರಸ್ವಾಮಿ ಲೆಕ್ಕಾಚಾರ. [ಪಡೆದ ಮತಗಳು : ಕೆಎಚ್ ಮುನಿಯಪ್ಪ - 4,18,926, ಕೋಲಾರ ಕೇಶವ (ಜೆಡಿಎಸ್) - 3,71,076, ಎಂ ನಾರಾಯಣಸ್ವಾಮಿ (ಬಿಜೆಪಿ) - 2,67,322.]
ಹೀಗೆ ಮಹದೇವಪ್ಪ ಅವರನ್ನು ಕಣಕ್ಕಿಳಿಸಿದರೆ ಸಿದ್ದರಾಮಯ್ಯ ಕೂಡಾ ಮೌನವಾಗುತ್ತಾರೆ ಎಂಬುದು ಈ ಲೆಕ್ಕಾಚಾರದ ಮುಂದಿನ ಭಾಗ. ಹಾಗೆಯೇ ಒಕ್ಕಲಿಗ ಹಾಗೂ ದಲಿತ ಮತಗಳು ನಿರ್ಣಾಯಕವಾಗಿರುವ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಿರಾಯಾಸವಾಗಿ ಗೆಲ್ಲಬಹುದು ಎಂಬುದು ಅವರ ಯೋಚನೆ.

ತುಮಕೂರು ಕ್ಷೇತ್ರ ಯಾಕೆ ಬೇಕಂತಿದೆ?
ತುಮಕೂರು ಲೋಕಸಭಾ ಕ್ಷೇತ್ರದ ವಿಷಯ ಬಂದಾಗಲೂ ಅಷ್ಟೇ. ಈ ಬಾರಿ ಲಿಂಗಾಯತ ಸಮುದಾಯ ದೊಡ್ಡ ಮಟ್ಟದಲ್ಲಿ ಒಂದಾಗಿ ಯಡಿಯೂರಪ್ಪ ಬೆನ್ನಿಗೆ ನಿಲ್ಲಬಹುದು. ಇಂತಹ ಟೈಮಿನಲ್ಲಿ ಸಿದ್ದರಾಮಯ್ಯ ಅವರ ಕಾರಣಕ್ಕಾಗಿ ಒಕ್ಕಲಿಗ ಸಮುದಾಯ ಕಾಂಗ್ರೆಸ್ ವಿರೋಧಿ ನಿಲುವು ತಳೆಯುತ್ತದೆ.
ಹೀಗಾಗಿ ಪರಿಸ್ಥಿತಿ ಮೈತ್ರಿಕೂಟಕ್ಕೆ ಅನುಕೂಲವಾಗಬೇಕು ಎಂದರೆ ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಬೇಕು ಎಂಬುದು ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ವಾದ. ರಾಜಕಾರಣದಲ್ಲಿ ಯಾವ್ಯಾವ ಅಂಶಗಳು ಹೇಗೆ ಹೇಗೆ ಕೆಲಸ ಮಾಡುತ್ತವೆ? ಅನ್ನುವುದಕ್ಕೆ ಇದೂ ಒಂದು ನಿದರ್ಶನ. ಆದರೆ, ಈ ಮೂರು ಬೇಡಿಕೆಗಳಿಗೆ ಕಾಂಗ್ರೆಸ್ ಒಪ್ಪುತ್ತದಾ? ಅಥವಾ ಜೆಡಿಎಸ್ ತನ್ನ ದಾರಿ ತಾನು ಹಿಡಿಯುತ್ತದಾ?
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications