'ಭತ್ತದ ಕಣಜ' ಕೊಪ್ಪಳ ಲೋಕಸಭಾ ಕ್ಷೇತ್ರದ ಪರಿಚಯ
Recommended Video

'ಭತ್ತದ ಕಣಜ' ಎಂದೇ ಖ್ಯಾತಿ ಪಡೆದಿರುವ ಕೊಪ್ಪಳ ಜಿಲ್ಲೆಯನ್ನು 1997ರಲ್ಲಿ ರಚಿಸಲಾಯಿತು. 7,190 ಚದರ ಕಿಲೋ ಮೀಟರ್ ವಿಸ್ತೀರ್ಣ ಹೊಂದಿರುವ ಕೊಪ್ಪಳದಲ್ಲಿ ಹಲವು ಪ್ರವಾಸಿ, ಐತಿಹಾಸಿಕ ಸ್ಥಳಗಳಿವೆ.
ಫ್ರೆಂಚರ ಸಹಾಯ ಪಡೆದು ಟಿಪ್ಪು ಸುಲ್ತಾನ್ ನಿರ್ಮಿಸಿದ ಕೊಪ್ಪಳ ಕೋಟೆ ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಜೈನರ ಗುಹಾ ದೇವಾಲಯ ಬಹದ್ದೂರ್ ಬಂಡಿ, 12ನೇ ಶತಮಾನದ ಐತಿಹಾಸಿಕ ಗ್ರಾಮ ಗುಂಡ್ಲವಡ್ಡಿಗೆರಿ, ಮದನೂರು ದೇವಸ್ಥಾನ, ಗವಿಮಠ ಇಲ್ಲಿದೆ. ಇಲ್ಲಿನ ಕಿನ್ನಾಳ ಗ್ರಾಮದಲ್ಲಿ ತಯಾರಾಗುವ ಕಿನ್ನಾಳ ಆಟಿಕೆಗೂ ಕೊಪ್ಪಳ ಪ್ರಸಿದ್ಧವಾಗಿದೆ.
ಪಂಪಾವನ, ಹಂಪಿಯ ಮಾತೃಸ್ಥಾನ ಆನೆಗೊಂದಿ, ಕೋಟಿಲಿ೦ಗಗಳ ಕ್ಷೇತ್ರ, ಅಶೋಕನ ಮೂರು ಶಾಸನಗಳು ಈ ಕ್ಷೇತ್ರದಲ್ಲಿವೆ. ಗಂಗಾವತಿ, ಸಿಂಧನೂರು ಮತ್ತು ಸಿರಗುಪ್ಪದಲ್ಲಿ ಅತಿ ದೊಡ್ಡ ಅಕ್ಕಿ ಗಿರಣಿಗಳಿವೆ. ದೇಶದ ದಾಳಿಂಬೆ ಮಾರುಕಟ್ಟೆಯಲ್ಲಿ ಕೊಪ್ಪಳ ನಂಬರ್ ಒನ್. ಸುಮಾರು 10 ರಿಂದ 15 ಬೃಹತ್ ಉಕ್ಕು ಹಾಗೂ ಕಬ್ಬಿಣ ಉತ್ಪಾದನಾ ಕಾರ್ಖಾನೆಗಳಿವೆ.

ಕ್ಷೇತ್ರದ ಇತಿಹಾಸ: ಕೊಪ್ಪಳ ಲೋಕಸಭೆ ಕ್ಷೇತ್ರ ಕ್ಷೇತ್ರ ಪುನರ್ ವಿಂಗಡಣೆ ನಂತರ ಭಾರಿ ಬದಲಾವಣೆ ಕಂಡಿದೆ. ಬಳ್ಳಾರಿ ಕ್ಷೇತ್ರಕ್ಕೆ ಹೊಸಪೇಟೆ ವಿಧಾನಸಭಾ ಕ್ಷೇತ್ರವನ್ನು ಕೊಟ್ಟು ಅಲ್ಲಿಂದ ಸಿರಗುಪ್ಪ ಕ್ಷೇತ್ರವನ್ನು ಮತ್ತು ಗದಗ ಜಿಲ್ಲೆಯ ಬದಲಾದ ಮುಂಡರಗಿ ವಿಧಾನಸಭಾ ಕ್ಷೇತ್ರ ಮಸ್ಕಿಯನ್ನು ಕೊಪ್ಪಳ ಕ್ಷೇತ್ರ ಪಡೆದುಕೊಂಡಿತು.
ಮಸ್ಕಿ, ಕುಷ್ಟಗಿ, ಯಲಬುರ್ಗಾ, ಕನಕಗಿರಿ, ಸಿಂಧನೂರು, ಗಂಗಾವತಿ, ಕೊಪ್ಪಳ, ಸಿರಗುಪ್ಪ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಈ ಪೈಕಿ ಕೊಪ್ಪಳ, ಮಸ್ಕಿ, ಕುಷ್ಟಗಿ ಕಾಂಗ್ರೆಸ್ ವಶದಲ್ಲಿದ್ದರೆ, ಸಿರಗುಪ್ಪ, ಗಂಗಾವತಿ, ಕನಕಗಿರಿ,ಯಲಬುರ್ಗಾ ಬಿಜೆಪಿ ಪಾಲಾಗಿದೆ. ಸಿಂಧನೂರು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ.
ಮೈಸೂರು ರಾಜ್ಯ ಅಧೀನದಲ್ಲಿದ್ದಾಗ 1962ರಲ್ಲಿ ಲೋಕ ಸೇವಕ ಸಂಘದಿಂದ ಸ್ಪರ್ಧಿಸಿದ್ದ ಶಿವಮೂರ್ತಿ ಸ್ವಾಮಿ ಸಿದ್ದಪ್ಪಯ್ಯ ಸ್ವಾಮಿ ಮೊದಲ ಬಾರಿಗೆ ಜಯ ದಾಖಲಿಸಿದರು. ಕರ್ನಾಟಕ ರಾಜ್ಯ ಉದಯವಾದ ಬಳಿಕ 1977ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮೇಶ್ವರ ಸ್ವಾಮಿ ಬಸಯ್ಯ ಅವ್ರು ಗೆಲುವು ಸಾಧಿಸಿದರು.
1980ರಿಂದ ಇಲ್ಲಿ ತನಕದ ಸ್ಟ್ರೈಕ್ ರೇಟ್ ನೋಡಿದರೆ ಶೇ 75ರಷ್ಟು ಸರಾಸರಿಯೊಂದಿಗೆ ಕಾಂಗ್ರೆಸ್ 6 ಬಾರಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಎರಡು ಬಾರಿ ಗೆಲುವು ಸಾಧಿಸಿದ್ದು ಶೇ 25ರಷ್ಟು ಜಯ ಗಳಿಸಿದೆ.

2014ರಲ್ಲಿ ಶೇ 66ರಷ್ಟು ಮತದಾನವಾಗಿತ್ತು. 10,06,508 ಮತಗಳ ಪೈಕಿ, 5,26,001 ಪುರುಷ ಮತಗಳು ಹಾಗೂ 4,80,507 ಮಹಿಳೆಯರ ಮತಗಳು ದಾಖಲಾಗಿತ್ತು.
ಹಾಲಿ ಸಂಸದ 63 ವರ್ಷ ವಯಸ್ಸಿನ ಕರಡಿ ಸಂಗಣ್ಣ ಅವರು ಸಂಸತ್ತಿನಲ್ಲಿ 148 ಪ್ರಶ್ನೆಗಳನ್ನು ಕೇಳಿದ್ದಾರೆ. ಶೇ 81ರಷ್ಟು ಹಾಜರಾತಿ ಹೊಂದಿದ್ದು, 35 ಚರ್ಚೆಗಳಲ್ಲಿ ಪಾಲ್ಗೊಂಡಿದ್ದಾರೆ.
ಕೊಪ್ಪಳ ಕ್ಷೇತ್ರಕ್ಕೆ ಸಂಸದರ ನಿಧಿಯಿಂದ ಲಭ್ಯವಿದ್ದ 25 ಕೋಟಿ ರು ಮೊತ್ತದಲ್ಲಿ ಕರಡಿ ಸಂಗಣ್ಣ ಅವರ ಅವಧಿಯಲ್ಲಿ 19.59 ಕೋಟಿ ರು ಸಿಕ್ಕಿತ್ತು. ಈ ಪೈಕಿ 14.09 ಕೋಟಿ ರುಗಳನ್ನು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸಿದ್ದಾರೆ.

ಕಳೆದ ಜನ ಗಣತಿಯಂತೆ 21,87,977 ಮಂದಿ ಜನಸಂಖ್ಯೆ ಹೊಂದಿದೆ. ಶೇ 82.25ರಷ್ಟು ಮಂದಿ ಗ್ರಾಮೀಣ ಭಾಗದಲ್ಲಿದ್ದಾರೆ. ಶೇ 17.75ರಷ್ಟು ಮಂದಿ ನಗರದಲ್ಲಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ಶೇ 19.18ರಷ್ಟು ಪರಿಶಿಷ್ಟ ಜಾತಿ ಹಾಗೂ ಶೇ 13.42ರಷ್ಟು ಪರಿಶಿಷ್ಟ ಪಂಗಡದವರಿದ್ದಾರೆ.
ಜಾತಿವಾರು ಲೆಕ್ಕಾಚಾರದಂತೆ ಇಲ್ಲಿ ಲಿಂಗಾಯತ (ಸುಮಾರು 5 ಲಕ್ಷ) ಹಾಗೂ ಕುರುಬ(2.50 ಲಕ್ಷ) ಮತಗಳೇ ನಿರ್ಣಾಯಕ, ಉಳಿದಂತೆ ಅಲ್ಪಸಂಖ್ಯಾತ, ನಾಯಕರು, ಎಸ್ ಸಿ, ಯಾದವರು ಇನ್ನಿತರ ಹಿಂದುಳಿದ ವರ್ಗಗಳ ಮತಗಳು ಎಣಿಕೆಗೆ ಬರಲಿವೆ.
ಸಮಸ್ಯೆಗಳು: ನೀರಾವರಿ ಮತ್ತು ಶೈಕ್ಷಣಿಕೆ ಸಮಸ್ಯೆ ಇಲ್ಲಿನ ಪ್ರಮುಖ ತೊಂದರೆಗಳಾಗಿವೆ, ನೂರಾರು ಹಳ್ಳಿಗಳು ಕನಿಷ್ಟ ಮೂಲ ಸೌಕರ್ಯಗಳಿಲ್ಲದೆ ಸಂಕಷ್ಟದಲ್ಲಿವೆ. ರಾಯಚೂರು, ಬಳ್ಳಾರಿಗೆ ಸಂಪರ್ಕ ಸಾಧಿಸುವ ಸೇತುವೆ ದುರಸ್ತಿ ಕಾರ್ಯ, ತುಂಗಭದ್ರಾ ಅಣೆಕಟ್ಟೆಯ ಹೂಳು ತೆಗೆಯುವ ಸಮಸ್ಯೆ, ಮುನಿರಾಬಾದ್-ಮೆಹಬೂಬ್ ನಗರ ರೈಲು ಮಾರ್ಗ, ಬಹು ದಿನಗಳ ಬೇಡಿಕೆಯಾದ ಬೈಪಾಸ್ ರಸ್ತೆ ನಿರ್ಮಾಣ ಹೀಗೆ ಅನೇಕ ಸಮಸ್ಯೆಗಳು ಕ್ಷೇತ್ರಗಳಲ್ಲಿವೆ. ಹಲವಾರು ಕಾಮಗಾರಿಗಳು ಪ್ರಗತಿಯಲ್ಲಿದ್ದರೂ ತ್ವರಿತವಾಗಿ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ.

ಕ್ಷೇತ್ರದಲ್ಲಿ ಒಟ್ಟು 15,35,105 ಮತದಾರರಿದ್ದು, ಈ ಪೈಕಿ 7,70,316 ಪುರುಷರು ಹಾಗೂ 7,64,789 ಮಹಿಳೆಯರಿದ್ದಾರೆ.












Click it and Unblock the Notifications