ಡಿಕೆಶಿ ಕಾಯುವರೇ ಆಪಲ್, ಫೇಸ್ಬುಕ್ ಸ್ಥಾಪಕರ ಸ್ಪೂರ್ತಿಯಾಗಿದ್ದ ಬಾಬಾ
Recommended Video
ದೇವತೆಗಳ ಆವಾಸ ಸ್ಥಾನ ಎನಿಸಿರುವ ಉತ್ತರಾಖಂಡ್ ರಾಜ್ಯದಲ್ಲಿ ಅನೇಕ ಸಾಧು ಸಂತರು ಬಾಬಾಗಳನ್ನು ಕಾಣಬಹುದು. ಉತ್ತರಾಖಂಡ್ ರಾಜ್ಯದ ಕೈಂಚಿ ಗ್ರಾಮದ ನೀಮ್ ಕರೋಲಿ ಬಾಬಾ ಈಗ ಕರ್ನಾಟಕದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಪಾಲಿಗೆ ಪರಮ ಗುರುವಾಗಿ ಕಾಣುತ್ತಿದ್ದಾರೆ.
ಮನಿಲಾಂಡ್ರಿಂಗ್ ಪ್ರಕರಣದಲ್ಲಿ ಜಾಮೀನು ಸಿಗದ ಕಾರಣ ತಿಹಾರ್ ಜೈಲು ಸೇರಿರುವ ಡಿಕೆ ಶಿವಕುಮಾರ್ ಅವರು ಸದ್ಯ ಬರಾಕ್ 7 ಸೆಲ್ 02ನಲ್ಲಿದ್ದಾರೆ. ವಿಚಾರಣಾಧೀನ ಕೈದಿಯಾಗಿರುವ ಡಿಕೆ ಶಿವಕುಮಾರ್ ಅವರ ಬಳಿ ನೀಮ್ ಕರೋಲಿ ಬಾಬಾ ಅವರ ಚಿತ್ರವನ್ನಿರಿಸಿಕೊಂಡಿದ್ದಾರೆ.
ಡಿಕೆ ಶಿವಕುಮಾರ್ ಅವರಿಗೆ ನವೆಂಬರ್ ತನಕ ಕಷ್ಟಕಾಲ ಮುಂದುವರೆಯಲಿದ್ದು ನಂತರ ರಾಜಯೋಗ ಬರಲಿದೆ ಎಂಬ ಸುದ್ದಿಯಿದೆ. ಇದಕ್ಕೆ ತಕ್ಕಂತೆ ಈಗ ಬಾಬಾರ ಫೋಟೊ ಡಿಕೆಶಿ ಜೇಬಿನಲ್ಲಿ ಕಾಣಿಸಿಕೊಂಡಿದೆ.
ಡಿಕೆ ಶಿವಕುಮಾರ್ ದುಃಸ್ಥಿತಿಗೆ ಮೈಲಾರಲಿಂಗದ ಶಾಪವೆ ಕಾರಣವೇ?
ಡಿಕೆ ಶಿವಕುಮಾರ್ ಅವರ ಆಪ್ತರು ನೀಮ್ ಕರೋಲಿ ಬಾಬಾ ಅವರ ಆಶ್ರಮಕ್ಕೆ ತೆರಳಿ, ಪೂಜೆ ಸಲ್ಲಿಸಿ, ಡಿಕೆಶಿ ಬಿಡುಗಡೆಯಾಗಿ ಪ್ರಾರ್ಥಿಸಿ ಬಂದಿದ್ದಾರೆ. ಉತ್ತರಾಖಂಡ್ ಜಿಲ್ಲೆಯ ಕೋಸಿ ನದಿ ತಟದ ಕೈಂಚಿ ಧಾಮದಲ್ಲಿದ್ದ ನೀಮ್ ಕರೋಲಿ ಬಾಬಾ ಅವರು ಫೇಸ್ ಬುಕ್ ಸ್ಥಾಪಕ ಮಾರ್ಕ್ ಝುಕರ್ ಬರ್ಗ್, ಆಪಲ್ ಸಂಸ್ಥೆಯ ಸ್ಟೀವ್ ಜಾಬ್ಸ್ ಗೆ ಸ್ಪೂರ್ತಿಯಾಗಿದ್ದವರು. ಹಿಂದೂ ಧರ್ಮದ ಬಗ್ಗೆ ಆಸಕ್ತಿ, ಗೌರವ ಹುಟ್ಟಲು ಬಾಬಾ ಕಾರಣ ಎಂದು ಹಾಲಿವುಡ್ ನಟಿ ಜೂಲಿಯಾ ರಾಬರ್ಟ್ಸ್ ಹೇಳಿಕೊಂಡಿದ್ದಾರೆ.
ಲಕ್ಷ್ಮಿ ನಾರಾಯಣ ಶರ್ಮ ಆಗಿದ್ದ ಕರೋಲಿ ಬಾಬಾ
1990ನೇ ಇಸವಿಯಲ್ಲಿ ಉತ್ತರಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಅಕ್ಬರಪುರದಲ್ಲಿ ಲಕ್ಷ್ಮಿ ನಾರಾಯಣ ಶರ್ಮ ಆಗಿ ದುರ್ಗಾ ಪ್ರಸಾದ್ ಶರ್ಮ ಎಂಬ ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದರು. 11ನೇ ವಯಸ್ಸಿಗೆ ಮದುವೆಯಾದರೂ ಸಂಸಾರ ತೊರೆದು ಸಾಧು ಸಂತರ ಜೊತೆ ತಿರುಗಾಟ ಆರಂಭಿಸಿದರು. 17ನೇ ವಯಸ್ಸಿನಲ್ಲಿ ಆಧಾತ್ಮ ಗುರುವಾಗಿ ಬೆಳೆದರು. ಫರೂಕಾಬಾದ್ ಜಿಲ್ಲೆಯ ನೀಬ್ ಕರೋರಿ ಎಂಬಲ್ಲಿ ರೈಲಿನಿಂದ ಹೊರ ದಬ್ಬಲ್ಪಟ್ಟರು. ಆದರೆ, ಟ್ರೈನ್ ಮುಂದೆ ಚಲಿಸಲು ಸಾಧ್ಯವಾಗಲಿಲ್ಲ. ನಂತರ ಬಾಬಾರ ಬಳಿ ಟಿಕೆಟ್ ಕಲೆಕ್ಟರ್ ಕ್ಷಮೆಯಾಚಿಸಿದ ಬಳಿಕ ಟ್ರೈನ್ ಹಳಿಯಲ್ಲಿ ಚಲಿಸಲು ಆರಂಭಿಸಿತ್ತಂತೆ. ನಂತರ ಅದೇ ಗ್ರಾಮದಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣವಾಗಿ, ಬಾಬಾರನ್ನು ಅಲ್ಲೇ ಕೆಲ ಕಾಲ ಉಳಿಸಿಕೊಳ್ಳಲಾಯಿತು.
1964ರಲ್ಲಿ ಕೈಂಚಿ ಧಾಮ ಸ್ಥಾಪನೆ
1964ರಲ್ಲಿ ಕೈಂಚಿ ಧಾಮ ಗ್ರಾಮದಲ್ಲಿ ಹನುಮಾನ್ ದೇಗುಲ ಸ್ಥಾಪಿಸಿ ಅಲ್ಲೇ ನೆಲೆಸಿದರು. ಪ್ರೇಮಿ ಬಾಬಾ ಹಾಗೂ ಸೋಂಬಾರಿ ಮಹಾರಾಜ್ ಇಲ್ಲಿ ಯಾಗ ನಡೆಸುತ್ತಿದ್ದರು. ನೈನಿತಾಲ್ ಅಲ್ಮೋರಾ ರಸ್ತೆಯಲ್ಲಿರುವ ಈ ಆಶ್ರಮ ನಂತರ ಲಕ್ಷಾಂತರ ಭಕ್ತರ ನೆಚ್ಚಿನ ತಾಣವಾಯಿತು. ಲಕ್ನೋದಲ್ಲಿ ಹನುಮಾನ್ ದೇಗುಲ ಸ್ಥಾಪಿಸಿದ ಬಾಬಾ ನಂತರ 60-70ರ ದಶಕದಲ್ಲಿ ಟೆಕ್ಸಾಸ್ ಸೇರಿದಂತೆ 108 ದೇಗುಲಗಳನ್ನು ಹಲವೆಡೆ ಸ್ಥಾಪಿಸಿದರು.
ಬಾಬಾ ರಾಮ್ ದಾಸ್ ಕೃತಿಯಿಂದ ಪ್ರಚಾರ
ಅಮೆರಿಕದಲ್ಲಿ 60ರ ದಶಕದಲ್ಲಿ ಜನಪ್ರಿಯರಾಗಿದ್ದ ಬಾಬಾ ರಾಮ್ ದಾಸ್ ಅವರು ತಮ್ಮ ಕೃತಿಗಳಲ್ಲಿ ನೀಮ್ ಕರೋಲಿ ಬಾಬಾ ಹಾಗೂ ಅವರ ಪವಾಡಗಳ ಬರೆದರು. ಇದಾದ ಬಳಿಕ ಕೈಂಚಿ ಧಾಮಕ್ಕೆ ಪಾಶ್ಚಿಮಾತ್ಯ ದೇಶಗಳಿಂದ ಬರುವ ಭಕ್ತರ ಸಂಖ್ಯೆ ಅಧಿಕವಾಯಿತು. 1973ರ ಸೆಪ್ಟೆಂಬರ್ 10ರಂದು ಬಾಬಾ ಸಮಾಧಿಸ್ಥರಾದರು. ಆಶ್ರಮಕ್ಕೆ ಭೇಟಿ ನೀಡುವ ಮೊದಲು ಮುಂಚಿತವಾಗಿ ಅನುಮತಿ ಪಡೆದುಕೊಳ್ಳಬೇಕು. ಭಕ್ತರ ಶಿಫಾರಸ್ಸು ಇದ್ದರೆ ಸುಲಭವಾಗಿ ಪ್ರವೇಶ ಸಿಗಲಿದೆ. ಮೂರು ದಿನಗಳ ಕಾಲ ಆಶ್ರಮದಲ್ಲಿ ತಂಗಿ, ಸೇವೆ ಸಲ್ಲಿಸಿದರೆ ಇಷ್ಟಾರ್ಥಗಳು ನೆರವೇರುತ್ತದೆ ಎಂಬ ಪ್ರತೀತಿಯಿದೆ.
ಬಾಬಾಗಿದ್ದಾರೆ ಸೆಲೆಬ್ರಿಟಿ ಭಕ್ತರು
Be here Now ಕೃತಿ ರಚಿಸಿದ ರಾಮ್ ದಾಸ್ ಕೂಡಾ ನೀಮ್ ಕರೋಲಿ ಬಾಬಾ ಅವರ ಭಕ್ತರು, ಶಿಷ್ಯರೆಂದು ಗುರುತಿಸಿಕೊಂಡಿದ್ದಾರೆ. ಸಂಗೀತಗಾರರಾದ ಜೈ ಉತ್ತಾಲ್, ಕೃಷ್ಣದಾಸ್, ಟ್ರೆವರ್ ಹಾಲ್, ಮಾನವತವಾದಿಗಳಾದ ಲ್ಯಾರಿ ಬ್ರಿಲಿಯಂಟ್, ದಾದಾ ಮುಖರ್ಜಿ, ಸಾಹಿತಿ ವೈ ರಾಸರ್, ಜಾನ್ ಬುಷ್, ಡೇನಿಯಲ್ ಗೋಲೆಮನ್. 1974ರಲ್ಲಿ ಇಲ್ಲಿಗೆ ಬಂದಿದ್ದ ಸ್ಟೀವ್ ಜಾಬ್ಸ್, ಜೂಲಿಯಾ ರಾಬರ್ಟ್ಸ್, ಮಾರ್ಕ್ ಝಕರ್ ಬರ್ಗ್.. ಡಾ. ಆರ್ ಕೆ ಕರೋಲಿ ಹೀಗೆ ಪಟ್ಟಿ ಬೆಳೆಯುತ್ತದೆ. ಈಗ ಡಿಕೆ ಶಿವಕುಮಾರ್ ಕೂಡಾ ಈ ಪಟ್ಟಿಗೆ ಸೇರಿದ್ದಾರೆ.