ಒಂದೇ ದಿನ 26 ಜನರನ್ನು ರಕ್ಷಿಸಿದ ನೌಕಾದಳದ ಕ್ಯಾಪ್ಟನ್
ತಿರುವನಂತಪುರಂ, ಆಗಸ್ಟ್ 21: ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ, ಭಾರತೀಯ ನೌಕಾದಳದ ಕ್ಯಾಪ್ಟನ್ ಪಿ. ರಾಜ್ಕುಮಾರ್ ಮತ್ತೆ ತಮ್ಮ ಶೌರ್ಯ ಪ್ರದರ್ಶಿಸಿದ್ದಾರೆ.
ಕೇರಳದ ಪ್ರವಾಹಪೀಡಿತ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನದ ನಡುವೆಯೂ ಸೀ ಕಿಂಗ್ 42ಬಿ ಹೆಲಿಕಾಪ್ಟರ್ ಅನ್ನು ಕುಶಲತೆಯಿಂದ ಚಲಾಯಿಸಿ ಕಳೆದ ಶುಕ್ರವಾರ ಒಂದೇ ಹೆಲಿಕಾಪ್ಟರ್ನಲ್ಲಿ 26 ಮಂದಿಯನ್ನು ರಕ್ಷಿಸಿದ್ದ ರಾಜ್ಕುಮಾರ್ ಅವರ ಬಗ್ಗೆ ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ.
'ಇದುವರೆಗಿನ ವೃತ್ತಿ ಜೀವನದಲ್ಲಿಯೇ ನಾನು ನಿರ್ವಹಿಸಿದ ಅತ್ಯಂತ ಸವಾಲಿನ ಹಾಗೂ ಅಪಾಯಕಾರಿ ಕಾರ್ಯಾಚರಣೆ ಇದು' ಎಂಬುದಾಗಿ ರಾಜ್ಕುಮಾರ್ ಹೇಳಿಕೊಂಡಿದ್ದಾರೆ.
| Array |
ಅತ್ಯಂತ ಕಷ್ಟಕರ ಕಾರ್ಯಾಚರಣೆ
ಕಳೆದ ವರ್ಷ ಒಖಿ ಚಂಡಮಾರುತ ಕೇರಳಕ್ಕೆ ಅಪ್ಪಳಿಸಿದ್ದಾಗ ರಾಜ್ಕುಮಾರ್ ಮತ್ತು ಅವರ ತಂಡ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿತ್ತು. ಈ ಕಾರ್ಯಾಚರಣೆಯಲ್ಲಿ ಅವರು ತೋರಿದ ಅಪ್ರತಿಮ ಸಾಹಸಕ್ಕೆ ಶೌರ್ಯ ಪ್ರಶಸ್ತಿ ದೊರೆತಿತ್ತು.
ಅಳಪ್ಪುಳ ಜಿಲ್ಲೆಯಲ್ಲಿ ಶುಕ್ರವಾರ ನಡೆಸಿದ ಕಾರ್ಯಾಚರಣೆ ಅತ್ಯಂತ ಕ್ಲಿಷ್ಟಕರವಾಗಿತ್ತು ಎಂದು ರಾಜ್ಕುಮಾರ್ ವಿವರಿಸಿದ್ದಾರೆ.
ಸೀ ಕಿಂಗ್ 42ಬಿ ವಿನ್ಯಾಸವು ಹೆಚ್ಚು ಜನರನ್ನು ಕೊಂಡೊಯ್ಯುವ ರೀತಿಯ ವಿನ್ಯಾಸ ಹೊಂದಿಲ್ಲ. ಕೊನೆಗೂ ನೌಕಾ ಪಡೆ ಸಿಬ್ಬಂದಿ ಸೇರಿದಂತೆ ಹೆಲಿಕಾಪ್ಟರ್ ಒಳಗೆ 32 ಮಂದಿಯನ್ನು ಕರೆದೊಯ್ಯುವಲ್ಲಿ ಯಶಸ್ವಿಯಾದೆ ಎಂದು ತಿಳಿಸಿದ್ದಾರೆ.

ಸವಾಲೊಡ್ಡಿದ್ದ ಮೋಡಗಳು
ಈ ಕಾರ್ಯಾಚರಣೆ ವೇಳೆ ಅವರಿಗೆ ಎದುರಾದ ಅತ್ಯಂತ ಪ್ರಮುಖ ಸವಾಲೆಂದರೆ ಕೆಳಮಟ್ಟದಲ್ಲಿ ಹಾರಾಡುತ್ತಿದ್ದ ಮೋಡಗಳಿಂದಾಗಿ ಉಂಟಾಗಿದ್ದ ಅಸ್ಪಷ್ಟತೆ ಗೋಚರತೆಯ ಸನ್ನಿವೇಶ. ಇಂತಹ ಸಂದರ್ಭಗಳಲ್ಲಿ ಪೈಲಟ್ಗಳು ನಿವಾಸಿಗಳ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳುವುದರ ಜತೆಗೆ ಹೆಲಿಕಾಪ್ಟರ್ ಸರಿಯಾದ ಪ್ರದೇಶದಲ್ಲಿ ಸಾಗುತ್ತಿದ್ದೆಯೇ ಎಂಬುದನ್ನೂ ನೋಡಿಕೊಳ್ಳಬೇಕು.
ಇದು ಅತ್ಯಂತ ಅಪಾಯಕಾರಿ ಹೊಣೆಗಾರಿಕೆ. ಹೆಲಿಕಾಪ್ಟರ್ಅನ್ನು ಹೇಗೆ ನಿಭಾಯಿಸುವುದು ಎಂಬ ಬಗ್ಗೆ ಪೈಲಟ್ಗೆ ಸೂಕ್ತ ತಿಳಿವಳಿಕೆ ಇರುವುದು ಅಗತ್ಯ ಎಂದು ರಾಜ್ಕುಮಾರ್ ವಿವರಿಸಿದ್ದಾರೆ.

ಕೆಳಕ್ಕಿಳಿಸಲು ಜಾಗವೇ ಇಲ್ಲ
ಆ ಸನ್ನಿವೇಶವನ್ನು ನೆನಪಿಸಿಕೊಂಡಿರುವ ಅವರು, ಆಗ ಅತಿ ಕೆಟ್ಟ ವಾತಾವರಣವಿತ್ತು. ಎಲ್ಲಿಯೂ ಹೆಲಿಕಾಪ್ಟರ್ ಇಳಿಸುವ ಸ್ಥಳವೇ ಇರಲಿಲ್ಲ. ಮನೆಯ ಸುತ್ತ ಇರುವ ಮರಗಳ ಮೇಲೆಯೇ ಹಾರಾಟ ನಡೆಸುತ್ತಲೇ 26 ಮಂದಿಯನ್ನು ಹೆಲಿಕಾಪ್ಟರ್ಗೆ ಹತ್ತಿಸಿಕೊಳ್ಳಬೇಕಾಗಿತ್ತು ಎಂದು ಆ ಕ್ಷಣದ ಸವಾಲಿನ ಭೀಕರತೆಯನ್ನು ವಿವರಿಸಿದರು.
ಜನರನ್ನು ತಲುಪಲು ಹೆಲಿಕಾಪ್ಟರ್ಅನ್ನು ಕೆಳಮಟ್ಟದಲ್ಲಿ ಹಾರಿಸಬೇಕಾಗುತ್ತಿತ್ತು. ಜತೆಗೆ ಜನರ ಸರಂಜಾಮುಗಳನ್ನು ತುಂಬಿಸಿಕೊಳ್ಳಬೇಕಿತ್ತು. ಜನರು ತಮ್ಮ ಸರಂಜಾಮುಗಳನ್ನು ಕೈಗಳಲ್ಲಿ ತುಂಬಿಕೊಂಡು ಹತ್ತಲು ಮುಂದಾಗುತ್ತಿದ್ದರು. ಇದರಿಂದ ಅಧಿಕ ಸಮಯ ತೆಗೆದುಕೊಳ್ಳುತ್ತಿತ್ತು. ನಮಗೆ ಇಳಿಸಲು ಜಾಗ ಇಲ್ಲದಿದ್ದರಿಂದ ನೆಲದಿಂದ ಎತ್ತರದಲ್ಲಿಯೇ ನಿಲ್ಲಿಸಿಕೊಳ್ಳಬೇಕಿತ್ತು ಎಂದು ತಿಳಿಸಿದ್ದಾರೆ.

ಜೀವ ಉಳಿಸಿದ ಸಂತೃಪ್ತಿ
'ಈ ಕಾರ್ಯಾಚರಣೆಯು ಮನುಷ್ಯ ಮತ್ತು ಯಂತ್ರದ ಮಿತಿಗಳನ್ನು ಪರೀಕ್ಷೆಗೆ ಒಡ್ಡಿತು' ಎಂದು ಭಾರತೀಯ ನೌಕಾಪಡೆ ಟ್ವೀಟ್ ಮಾಡಿತ್ತು.
ಜನರ ಜೀವವನ್ನು ರಕ್ಷಿಸಲು ಸಾಧ್ಯವಾದ ದೊಡ್ಡ ಸಂತೃಪ್ತಿ ಅವರಲ್ಲಿತ್ತು. 'ಜನರನ್ನು ರಕ್ಷಿಸುವ ಕಾರ್ಯದಲ್ಲಿ ಪಾತ್ರ ವಹಿಸಿದ್ದಕ್ಕೆ ಖುಷಿಯಾಗುತ್ತಿದೆ' ಎಂದು ರಾಜ್ಕುಮಾರ್ ಹೇಳಿದ್ದಾರೆ.
|
ಒಖಿ ಕಾರ್ಯಾಚರಣೆ ನೆನಪು
ಒಖಿ ಚಂಡಮಾರುತದ ಸಂದರ್ಭದಲ್ಲಿ ನಡೆಸಿದ ಕಾರ್ಯಾಚರಣೆಗೆ ಹೋಲಿಸಿದ ಅವರು, ಆಗ ಸಮುದ್ರದ ಮೇಲೆ ಹಾರಾಟ ನಡೆಸಿದ್ದೆ. ಅಲ್ಲಿ ಯಾವುದೇ ಅಡೆತಡೆಗಳು ಇರಲಿಲ್ಲ. ಆದರೆ, ಇಲ್ಲಿನ ಪರಿಸ್ಥಿತಿ ವಿಭಿನ್ನ. ಮರಗಳು, ಅಸ್ಪಷ್ಟ ಗೋಚರತೆ, ಮುಳುಗಿದ ಮನೆಗಳ ಮಹಡಿಗಳು ಪ್ರತಿ ಕೆಲಸವನ್ನೂ ಕ್ಲಿಷ್ಟಕರಗೊಳಿಸಿದ್ದವು ಎಂದರು.
ಒಖಿ ಚಂಡಮಾರುತವು ಕೇರಳಕ್ಕೆ ಕಳೆದ ವರ್ಷದ ಡಿಸೆಂಬರ್ 1ರಂದು ಅಪ್ಪಳಿಸಿದ್ದಾಗ ರಾಜ್ಕುಮಾರ್ ಅವರು ಸೀ ಕಿಂಗ್ 528 ಹೆಲಿಕಾಪ್ಟರ್ನ ಕ್ಯಾಪ್ಟನ್ ಆಗಿದ್ದರು. ಆಗ ಅವರ ತಂಡವು ವಿವಿಧ ಹೆಲಿಕಾಪ್ಟರ್ಗಳಲ್ಲಿ ಪತ್ತೆ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದ್ದವು.
ಕೇರಳದಲ್ಲಿ ಪ್ರವಾಹ ಸಂತ್ರಸ್ತ ಜನರನ್ನು ರಕ್ಷಿಸಿದ ಸೇನೆ, ನೌಕಾಪಡೆ ಹಾಗೂ ವಾಯುಪಡೆಯ ಕಠಿಣ ಪರಿಶ್ರಮವನ್ನು ಇಡೀ ದೇಶ ಕೊಂಡಾಡುತ್ತಿದ್ದರೆ, 'ದೇಶಕ್ಕೆ ಅಗತ್ಯಬಿದ್ದಾಗ ಸಶಸ್ತ್ರ ಪಡೆಗಳು ಯಾವಾಗಲೂ ನೆರವಿಗೆ ಸನ್ನದ್ಧವಾಗಿರುತ್ತವೆ' ಎಂದು ರಾಜ್ಕುಮಾರ್ ತಣ್ಣನೆ ನುಡಿಯುತ್ತಾರೆ.












Click it and Unblock the Notifications