ಬಿಜೆಪಿಗೆ ಅಧಿಕಾರ ಹಿಡಿಯುವುದು ತ್ರಾಸು, ಆದರೆ ಮೈತ್ರಿ ಸರಕಾರ ಬೀಳಿಸುವುದು ಸಲೀಸು
Recommended Video
ಬೆಂಗಳೂರು, ಜನವರಿ 15: ಕರ್ನಾಟಕ ರಾಜಕೀಯದ ಡ್ರಾಮಾ ಇನ್ನೂ ಕೆಲ ದಿನಗಳ ಕಾಲ ಮುಂದುವರಿಯಲಿದೆ. ಇಬ್ಬರು ಪಕ್ಷೇತರ ಶಾಸಕರು ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದಿರುವುದರಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರಕ್ಕೆ ಸಣ್ಣದೊಂದು ಶಾಕ್ ನೀಡಿದೆ. ಆದರೆ ಬಿಜೆಪಿಯಿಂದ ಸರಕಾರ ರಚನೆ ಆಗಬೇಕು ಅಂದರೆ ತುಂಬ ದೂರದ ಹಾದಿ ಸಾಗಬೇಕಿದೆ.
224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ಪೆಸ್ ನ 80, ಜೆಡಿಎಸ್ ನ 37 ಹಾಗೂ ಬಿಜೆಪಿಯ 104 ಶಾಸಕರು ಇದ್ದಾರೆ. ಒಂದು ವೇಳೆ ಈಗಿನ ಸರಕಾರವನ್ನು ಉರುಳಿಸಬೇಕು ಅಂದರೆ ಕನಿಷ್ಠ 14 ಶಾಸಕರು ರಾಜೀನಾಮೆ ನೀಡಬೇಕು. ಆಗ ವಿಧಾನಸಭೆಯಲ್ಲಿ ಒಟ್ಟಾರೆ ಸಂಖ್ಯಾ ಬಲ ಕುಸಿದು, ಬಿಜೆಪಿಗೆ ಸರಕಾರ ರಚನೆಗೆ ಅವಕಾಶ ಆಗುತ್ತದೆ.
ಲೋಕಸಭೆ ಚುನಾವಣೆ ಮುಗಿಯುವ ತನಕ ವಿಧಾನಸಭೆ ಅಮಾನತಿನಲ್ಲಿ
ಆದರೆ, ಮೂಲಗಳು ಹೇಳುವ ಪ್ರಕಾರ, ಕರ್ನಾಟಕದಲ್ಲಿ ಸರಕಾರ ರಚನೆ ಮಾಡುವ ವಿಚಾರವಾಗಿ ಬಿಜೆಪಿಯ ರಾಜ್ಯ ನಾಯಕರು ಹಾಗೂ ಕೇಂದ್ರ ನಾಯಕರ ಮಧ್ಯೆ ಏಕಾಭಿಪ್ರಾಯ ಇಲ್ಲ. ಮುಂಬರುವ ಲೋಕಸಭಾ ಚುನಾವಣೆಗೆ ನಾಯಕತ್ವ ವಹಿಸಿಕೊಳ್ಳಲು ರಾಜ್ಯದಲ್ಲಿ ತಯಾರಿ ಮಾಡಬೇಕು ಎಂಬ ಉಮೇದು ಕೇಂದ್ರ ನಾಯಕರದು.
ಕಾಂಗ್ರೆಸ್ ನ ನಾಲ್ವರು ಶಾಸಕರು ರಾಜೀನಾಮೆ ನೀಡಬಹುದು
ರಾಜ್ಯ ಮಟ್ಟದಲ್ಲಿ ಯಡಿಯೂರಪ್ಪನವರಿಗೆ ಲೋಕಸಭೆ ಚುನಾವಣೆಗೆ ಮುಂಚೆಯೇ ಕರ್ನಾಟಕದಲ್ಲಿ ಬಿಜೆಪಿ ಸರಕಾರ ರಚಿಸಬೇಕು ಎಂಬ ಆಸೆ ಇದೆ. ಆದರೆ ಸಂಖ್ಯಾಬಲವನ್ನು ನೋಡುವುದಾದರೆ, ಈಗಿನ ಸರಕಾರವನ್ನು ಕೆಡವಿ, ಮತ್ತೆ ಅಧಿಕಾರ ಹಿಡಿಯುವುದು ಬಿಜೆಪಿಗೆ ಬಹಳ ಕಷ್ಟದ ಕೆಲಸ. ಮೂಲಗಳಿಂದ ಒನ್ ಇಂಡಿಯಾಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಬುಧವಾರದಂದು ಕಾಂಗ್ರೆಸ್ ನ ನಾಲ್ವರು ಶಾಸಕರು ರಾಜೀನಾಮೆ ಸಲ್ಲಿಸಬಹುದು. ಈ ಮಧ್ಯೆ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಸೋಮವಾರ ಹಿಂಪಡೆದ ಶಾಸಕರೊಬ್ಬರು ಮತ್ತೆ ಕಾಂಗ್ರೆಸ್-ಜೆಡಿಎಸ್ ಗೆ ಬೆಂಬಲ ಸೂಚಿಸಬಹುದು ಎಂಬ ಮಾತಿದೆ. ಅದರರ್ಥ ಬಿಜೆಪಿ ಸರಕಾರ ರಚಿಸಬೇಕು ಅಂದರೆ ಕನಿಷ್ಠ ಹನ್ನೊಂದಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡುವಂತೆ ಮಾಡಬೇಕು.
ಲೋಕಸಭೆ ಚುನಾವಣೆಯ ಮಾತುಕತೆಗೆ ಕರೆಸಿಕೊಂಡಿದ್ದಾರೆ
ಪಕ್ಷೇತರರು ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದರೂ, ನಾನು ಆರಾಮವಾಗಿಯೇ ಇದ್ದಾನೆ. ಯಾವುದೇ ಆತಂಕ ಇಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಈಗಾಗಲೇ ಕಾಂಗ್ರೆಸ್-ಜೆಡಿಎಸ್ ಹೇಳಿಯಾಗಿದೆ: ಒಂದು ವೇಳೆ ನಮ್ಮ ಗರಿ ಕೀಳುತ್ತೇವೆ ಅಂತ ಬಂದರೆ, ಬಿಜೆಪಿಯಿಂದಲೇ ಐವರು ಶಾಸಕರನ್ನು ನಮ್ಮ ಕಡೆ ಸೆಳೆಯಬೇಕಾಗುತ್ತದೆ ಎಂದಿದ್ದಾರೆ. ಆ ಕಾರಣಕ್ಕೆ ಗುರುಗ್ರಾಮದ ರೆಸಾರ್ಟ್ ಗಳಲ್ಲಿ ತನ್ನ ಶಾಸಕರನ್ನು ಜತೆಗೆ ಇರಿಸಿಕೊಂಡು ಬಿಜೆಪಿ ನಾಯಕರು ಕಾವಲು ಕಾಯುತ್ತಿದ್ದಾರೆ. ಯಡಿಯೂರಪ್ಪನವರು ಮಾತನಾಡಿ, ನಮ್ಮ ಶಾಸಕರನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ರಕ್ಷಿಸಿಕೊಳ್ಳಲು ಹೀಗೆ ಮಾಡಿದ್ದೇವೆ ಎಂದಿದ್ದಾರೆ. ಆದರೆ ಲೋಕಸಭೆ ಚುನಾವಣೆ ತಯಾರಿಗಾಗಿ ಈ ಶಾಸಕರ ಜತೆಗೆ ಕೇಂದ್ರದ ನಾಯಕರು ಮಾತುಕತೆ ನಡೆಸುವ ಕಾರಣಕ್ಕೆ ಕರೆಸಿಕೊಂಡಿದ್ದಾರೆ ಎಂದು ಮತ್ತೊಂದು ಮಾತಿದೆ.
ಅಮಿತ್ ಶಾ ಭೇಟಿ ನಂತರ ಶಾಸಕರು ವಾಪಸ್
ಕರ್ನಾಟಕದಿಂದ ತೆರಳಿರುವ ಶಾಸಕರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಆಗಲಿದ್ದಾರೆ. ಆದರೆ ಸದ್ಯಕ್ಕೆ ಇನ್ನೂ ಭೇಟಿ ಆಗಿಲ್ಲ. ಒಂದು ವೇಳೆ ಬುಧವಾರದಂದು ಭೇಟಿ ಸಾಧ್ಯವಾದರೆ, ಮೂಲಗಳ ಪ್ರಕಾರ ಅದು ಅಸಾಧ್ಯ. ಶಾಸಕರೆಲ್ಲ ಗುರುವಾರದಂದು ರಾಜ್ಯಕ್ಕೆ ಹಿಂತಿರುಗಲಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್ ನ ಡಿ.ಕೆ.ಶಿವಕುಮಾರ್ ಅವರು ಮುನಿಸಿಕೊಂಡಿರುವ ಐವರು ಶಾಸಕರನ್ನು ಮನವೊಲಿಸುವ ಕೆಲಸ ಅಂತಿಮವಾಗಿ ಮಾಡಲಿದ್ದಾರೆ. ಆ ಐವರು ಸದ್ಯಕ್ಕೆ ಮುಂಬೈನಲ್ಲಿದ್ದಾರೆ ಎನ್ನಲಾಗಿದೆ. ಶಿವಕುಮಾರ್ ಅವರು ಅಧಿಕೃತ ಕೆಲಸದ ಮೇಲೆ ಅಲ್ಲಿಗೆ ತೆರಳಿದ್ದಾರೆ. ಔರಂಗಾಬಾದ್ ನಲ್ಲಿ ಅಧಿಕೃತ ಕಾರ್ಯಕ್ರಮ ಇದೆ. ಅಲ್ಲಿಗೆ ತೆರಳುವ ಮುನ್ನ ಶಾಸಕರನ್ನು ಭೇಟಿ ಆಗಿ, ಮಾತುಕತೆ ನಡೆಸಲಿದ್ದಾರೆ.
ಶಿವಕುಮಾರ್ ಸಂಧಾನ ವಿಫಲವಾದರೆ ನಾಲ್ವರ ರಾಜೀನಾಮೆ
ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ ಎಂದು ಶಾಸಕರು ಸಿಟ್ಟಾಗಿದ್ದಾರೆ. ಶಿವಕುಮಾರ್ ಅವರನ್ನು ಸಮಾಧಾನ ಪಡಿಸಲು ಯತ್ನಿಸುತ್ತಾರೆ ಎಂದು ಮೂಲಗಳು ತಿಳಿಸುತ್ತವೆ. ಒಂದು ವೇಳೆ ಸಂಧಾನ ವಿಫಲವಾದರೆ ಕೆಲವು ತಂತ್ರಗಳನ್ನು ಜತೆಗಿಟ್ಟುಕೊಂಡಿದ್ದಾರೆ. ಐವರು ಶಾಸಕರು ಸಂಧಾನಕ್ಕೆ ಬಗ್ಗದಿದ್ದಲ್ಲಿ ಈಗ ನಾಲ್ವರು ಕಾಂಗ್ರೆಸ್ ಸಚಿವರಿಂದ ರಾಜೀನಾಮೆ ಕೊಡಿಸಲಾಗುತ್ತದೆ. ಆ ಸ್ಥಾನವನ್ನು ಕೊಡಿಸುವ ಮಾತು ನೀಡಲಾಗುತ್ತದೆ ಎನ್ನುತ್ತವೆ ಮೂಲಗಳು. ಆದರೆ ಈ ಐವರು ಶಾಸಕರೂ ಸಂಧಾನಕ್ಕೆ ಒಪ್ಪುತ್ತಾರಾ ಎಂಬ ಖಾತ್ರಿ ಇಲ್ಲ. ಆದರೆ ಡಿ.ಕೆ. ಶಿವಕುಮಾರ್ ಸಂಧಾನ ವಿಫಲವಾದರೆ ನಾಲ್ವರು ಶಾಸಕರು ಕಾಂಗ್ರೆಸ್ ನಲ್ಲಿ ಉಳಿಯುವ ಸಾಧ್ಯತೆಗಳಿಲ್ಲ.
ಲೋಕಸಭೆ ಚುನಾವಣೆ ಮುಗಿಯುವ ತನಕ ವಿಧಾನಸಭೆ ಅಮಾನತಿನಲ್ಲಿ
ಕಾಂಗ್ರೆಸ್ ನ ನಾಲ್ವರು ಶಾಸಕರು ರಾಜೀನಾಮೆ ನೀಡಿದರೂ ಬಿಜೆಪಿಗೆ ದಾರಿ ಏನೂ ಸರಳವಾಗಿಲ್ಲ. ಸಂಖ್ಯಾಬಲ ಅವರ ಪರವಾಗಿಲ್ಲ. ಆದರೆ ಇನ್ನು ಮುಂದಿನ ದಿನಗಳಲ್ಲಿ ಕಾಂಗ್ರೆಸ್ -ಜೆಡಿಎಸ್ ನ ಇನ್ನಷ್ಟು ಶಾಸಕರಿಂದ ರಾಜೀನಾಮೆ ಕೊಡಿಸಲು ಬಿಜೆಪಿ ಪ್ರಯತ್ನಿಸುತ್ತದೆ. ಇದರಿಂದ ಸರಕಾರ ಅಲುಗಾಡಲು ಆರಂಭವಾಗುತ್ತದೆ. ಮತ್ತು ಅಂಥ ಸಂದರ್ಭದಲ್ಲಿ ಮುಂದಿನ ಲೋಕಸಭಾ ಚುನಾವಣೆ ಮುಗಿಯುವ ತನಕ ಸರಕಾರವನ್ನು ಅಮಾನತಿನಲ್ಲಿಡುವಂತೆ ಶಿಫಾರಸು ಮಾಡುವ ಸಾಧ್ಯತೆ ಇದೆ.