ಕೊರೊನಾವೈರಸ್ ವಿರುದ್ಧ ಹೋರಾಡಿ ಗೆದ್ದಿದ್ದು ಹೇಗೆ 'ಧಾರಾವಿ'?

ಮುಂಬೈ, ಜುಲೈ.22: ಕೊರೊನಾವೈರಸ್ ಎಂಬ ಮಹಾಮಾರಿ ಭಾರತದಾದ್ಯಂತ ತಲ್ಲಣ ಸೃಷ್ಟಿಸಿದೆ. ಪ್ರತಿನಿತ್ಯ 40,000ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಮೂರನೇ ಸ್ಥಾನದಲ್ಲಿದೆ.

Recommended Video

      Japan ಇಲ್ಲಿನ ಪ್ರತಿ ಮನೆಗೂ ಮಾಸ್ಕ್ ಜೊತೆ ದುಡ್ಡು ಕೊಟ್ರು | Oneindia Kannada

      ಭಾರತದ ಮಟ್ಟಿಗೆ ಅಂಕಿ-ಅಂಶಗಳನ್ನು ನೋಡಿದಾಗ ಮಹಾರಾಷ್ಟ್ರದಲ್ಲಿ ಮಹಾಮಾರಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಕಳೆದ 24 ಗಂಟೆಗಳಲ್ಲೇ 8369 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,27,031ಕ್ಕೆ ಏರಿಕೆಯಾಗಿದೆ. 1,82,217 ಸೋಂಕಿತರಿಗೆ ನೀಡಿರುವ ಚಿಕಿತ್ಸೆ ಫಲಿಸಿದ್ದು ಗುಣಮುಖರಾದ ಸೋಂಕಿತರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು 1,32,236 ರಷ್ಟು ಸಕ್ರಿಯ ಪ್ರಕರಣಗಳಿದ್ದು, ಮಹಾಮಾರಿಗೆ ಇದುವರೆಗೂ 12,276 ಜನರು ಪ್ರಾಣ ಬಿಟ್ಟಿದ್ದಾರೆ.

      ಮಹಾರಾಷ್ಟ್ರದ ಪಾಲಿಗೆ ಅತಿಹೆಚ್ಚು ಅಪಾಯಕಾರಿ ಪ್ರದೇಶವೆಂದೇ ಗುರುತಿಸಿಕೊಂಡಿದ್ದ ಧಾರಾವಿ ಸ್ಲಂ ಇಂದು ಇಡೀ ದೇಶಕ್ಕೆ ಮಾದರಿ ಎನಿಸಿದೆ. ಏಷ್ಯಾದಲ್ಲೇ ಅತಿದೊಡ್ಡ ಸ್ಲಂ ಆಗಿರುವ ಧಾರಾವಿಯಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆಗೆ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ತೆಗೆದುಕೊಂಡ ಕ್ರಮ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಆರಂಭದಲ್ಲಿ ಸಾವಿರ ಸಾವಿರ ಪ್ರಕರಣಗಳಿಗೆ ಸಾಕ್ಷಿಯಾಗುತ್ತಿದ್ದ ಧಾರಾವಿ ಸ್ಲಂನಲ್ಲಿ ಇದೀಗ ಸಂಪೂರ್ಣ ಚಿತ್ರಣವೇ ಬದಲಾಗಿದೆ.

      ಧಾರಾವಿಯಲ್ಲಿ ಕೊರೊನಾವೈರಸ್ ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳು ಹೇಗಿದ್ದವು. ದೇಶದ ಪಾಲಿಗೆ ಅಪಾಯಕಾರಿ ಎನಿಸಿದ್ದ ಧಾರಾವಿ ಸ್ಲಂ ಮಾದರಿಯಾಗಿ ಹೊರಹೊಮ್ಮಿದ್ದು ಹೇಗೆ. ಕೊವಿಡ್-19 ನಿಯಂತ್ರಿಸಲು ಮುಂಬೈ ಮಹಾನಗರ ಪಾಲಿಕೆಯ ಕಾರ್ಯವೈಖರಿ ಹೇಗಿತ್ತು. ದೇಶದ ಇತರೆ ರಾಜ್ಯಗಳು ಧಾರಾವಿಯನ್ನು ನೋಡಿ ಕಲಿತುಕೊಳ್ಳಬೇಕಾದ ಪ್ರಮುಖ ಅಂಶಗಳು ಯಾವುವು ಎನ್ನುವುದರ ಕುರಿತು ಒಂದು ವಿಸ್ತೃತ ವರದಿ 'ಒನ್ ಇಂಡಿಯಾ' ಓದುಗರಿಗಾಗಿ.

      ಧಾರಾವಿಯಲ್ಲಿ ಮೊದಲ ಸೋಂಕಿತ ಪ್ರಕರಣ ಯಾವಾಗ?

      ಧಾರಾವಿಯಲ್ಲಿ ಮೊದಲ ಸೋಂಕಿತ ಪ್ರಕರಣ ಯಾವಾಗ?

      ಮಹಾರಾಷ್ಟ್ರ ರಾಜಧಾನಿ ಮುಂಬೈನ ಧಾರಾವಿ ಕೊಳಗೇರಿ ಪ್ರದೇಶದಲ್ಲಿ ಮೊದಲ ಕೊರೊನಾವೈರಸ್ ಸೋಂಕಿತ ಪ್ರಕರಣ ಪತ್ತೆಯಾಯಿತು. ಏಪ್ರಿಲ್.03ರಂದು 35 ವರ್ಷದ ವೈದ್ಯರೊಬ್ಬರಿಗೆ ಕೊವಿಡ್-19 ಸೋಂಕು ಪತ್ತೆಯಾಗಿದ್ದು, ಸಾಕಷ್ಟು ಆತಂಕವನ್ನು ಹುಟ್ಟುಹಾಕಿತ್ತು. ಏಕೆಂದರೆ ಒಂದು ಚದರ ಕಿಲೋ ಮೀಟರ್ ಸುತ್ತಳತೆ ಪ್ರದೇಶದಲ್ಲಿ 2,27,136ಕ್ಕೂ ಹೆಚ್ಚು ಜನರು ವಾಸಿಸುತ್ತಾರೆ. 613 ಹೆಕ್ಟರ್ ಪ್ರದೇಶದ ಧಾರಾವಿ ಸ್ಲಂನಲ್ಲಿ ಅಂದಾಜು 15 ಲಕ್ಷಕ್ಕಿಂತ ಹೆಚ್ಚು ಜನ ವಾಸವಾಗಿದ್ದು, ಇಂಥ ಪ್ರದೇಶದಲ್ಲಿ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವುದು ಸವಾಲಿನ ಕೆಲಸವಾಗಿತ್ತು.

      ಪ್ರಾಥಮಿಕ ಸಂಪರ್ಕಿತರ ಪತ್ತೆ, ಅಂತರ ಕಾಪಾಡುವುದೇ ಸವಾಲು

      ಪ್ರಾಥಮಿಕ ಸಂಪರ್ಕಿತರ ಪತ್ತೆ, ಅಂತರ ಕಾಪಾಡುವುದೇ ಸವಾಲು

      ಧಾರಾವಿ ಕೊಳಗೇರಿಯು ಅತ್ಯಂತ ಇಕ್ಕಟ್ಟಿನ ಪ್ರದೇಶವಾಗಿದ್ದು ಒಂದಕ್ಕೊಂದು ಮನೆಗಳು ಅಂಟಿಕೊಂಡಂತಿವೆ. ಒಂದು ಮನೆಯಲ್ಲಿ ಕನಿಷ್ಠ 8 ರಿಂದ 10 ಮಂದಿ ವಾಸವಿರುತ್ತಾರೆ. 10/10 ವಿಸ್ತೀರ್ಣದಲ್ಲಿ ಮೂರು ಮತ್ತು ನಾಲ್ಕು ಅಂತಸ್ತಿನ ಮನೆಗಳು ಕಾಣಸಿಗುತ್ತವೆ. ಇಂಥ ಪರಿಸರದಲ್ಲಿ ಕೊರೊನಾವೈರಸ್ ಸೋಂಕು ಯಾವಾಗ, ಯಾರಿಂದ ಯಾರಿಗೆ ಯಾವ ರೂಪದಲ್ಲಿ ಹರಡುತ್ತದೆ ಎನ್ನುವುದನ್ನು ಪತ್ತೆ ಮಾಡುವುದೇ ಸವಾಲಾಗಿತ್ತು. ಅದರಲ್ಲೂ ಜನರ ನಡುವೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವುದಂತೂ ಅಸಾದ್ಯದ ಮಾತಾಗಿತ್ತು. ಆದರೆ ಮೂರು ತಿಂಗಳಿನಲ್ಲಿ ಈ ಎಲ್ಲ ಸವಾಲುಗಳನ್ನು ಎದುರಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕೊವಿಡ್-19

      ಧಾರಾವಿಯಲ್ಲಿ ಕೊವಿಡ್-19 ಕಡಿವಾಣಕ್ಕೆ 4-T ಅಸ್ತ್ರ

      ಧಾರಾವಿಯಲ್ಲಿ ಕೊವಿಡ್-19 ಕಡಿವಾಣಕ್ಕೆ 4-T ಅಸ್ತ್ರ

      ಕೊರೊನಾವೈರಸ್ ವಿರುದ್ಧ ಆಕ್ರಮಣಕಾರಿ ಕ್ರಮಗಳನ್ನು ತೆಗೆದುಕೊಂಡಿದ್ದರಿಂದ ಮಹಾಮಾರಿಗೆ ಕಡಿವಾಣ ಹಾಕುವುದಕ್ಕೆ ಸಾಧ್ಯವಾಯಿತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ವಿಪತ್ತು ಎದುರಾಗುವ ಮೊದಲೇ ಕೊವಿಡ್-19 ವೈರಸ್ ಬೆನ್ನಟ್ಟಿ ಕೊಂದದ್ದು ಇಂದಿನ ಯಶಸ್ಸಿಗೆ ಕಾರಣವಾಗಿದೆ. ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು 4-T ಅಸ್ತ್ರವನ್ನು ಪ್ರಯೋಗಿಸಿದ್ದರು. 4-T ಅರ್ಥವೇ ಟ್ರೇಸಿಂಗ್, ಟ್ರ್ಯಾಕಿಂಗ್, ಟೆಸ್ಟಿಂಗ್ ಮತ್ತು ಟ್ರೀಟಿಂಗ್ ಆಗಿದೆ. ಅಂದರೆ ಕೊರೊನಾವೈರಸ್ ಸೋಂಕಿತರನ್ನು ಗುರುತಿಸುವುದು, ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರನ್ನು ಗುರುತಿಸುವುದು, ಶಂಕಿತರನ್ನು ತಪಾಸಣೆಗೊಪಡಿಸುವುದು ಹಾಗೂ ಸೋಂಕಿತರಿಗೆ ಚಿಕಿತ್ಸೆಯನ್ನು ಒದಗಿಸುವುದು ಆಗಿದೆ.

      ಮುಂಬೈ ಧಾರಾವಿಯಲ್ಲಿ ಶೇ.80ರಷ್ಟು ಜನರಿಗೆ ಸಮುದಾಯ ಶೌಚಾಲಯ

      ಮುಂಬೈ ಧಾರಾವಿಯಲ್ಲಿ ಶೇ.80ರಷ್ಟು ಜನರಿಗೆ ಸಮುದಾಯ ಶೌಚಾಲಯ

      ಕೊರೊನಾವೈರಸ್ ಸೋಂಕು ಹರಡುವಿಕೆ ನಿಟ್ಟಿನಲ್ಲಿ ಮತ್ತಷ್ಟು ಆತಂಕವನ್ನು ಹುಟ್ಟಿಸಿದ್ದೇ ಇದೊಂದು ಅಂಶ. ಧಾರಾವಿಯಲ್ಲಿ ಶೇ.80ರಷ್ಟು ಜನರು 450 ಸಮುದಾಯ ಶೌಚಾಲಯಗಳನ್ನೇ ಬಳಸುತ್ತಿದ್ದಾರೆ. ಇದರಿಂದ ಸೋಂಕು ಹರಡುವ ಅಪಾಯ ಹೆಚ್ಚಾಗಿತ್ತು. ಆದರೆ, ಖಾಸಗಿ ವೈದ್ಯರನ್ನು ಬಳಸಿಕೊಂಡು ನಡೆಸಿದ ಪ್ರೊಆಕ್ಟಿವ್ ಸ್ಕ್ರೀನಿಂಗ್ ಹಾಗೂ ಸ್ಥಳೀಯರು ನೀಡಿದ ಸಹಕಾರದಿಂದ ಕೊರೊನಾವೈರಸ್ ಸೋಂಕು ಸಮುದಾಯದಲ್ಲಿ ಹರಡುವ ಮುನ್ನವೇ ಕಡಿವಾಣ ಹಾಕುವುದಕ್ಕೆ ಸಾಧ್ಯವಾಯಿತು ಎನ್ನುತ್ತಾರೆ ಹಿರಿಯ ಅಧಿಕಾರಿಗಳು.

      ಹೊಸ ವಿಧಾನದಲ್ಲಿ ಕೊರೊನಾವೈರಸ್ ಸೋಂಕಿತರ ಪತ್ತೆ

      ಹೊಸ ವಿಧಾನದಲ್ಲಿ ಕೊರೊನಾವೈರಸ್ ಸೋಂಕಿತರ ಪತ್ತೆ

      ಕೊರೊನಾವೈರಸ್ ಸೋಂಕಿತರನ್ನು ಪತ್ತೆ ಮಾಡುವುದಕ್ಕೆ ಹೊಸ ವಿಧಾನವನ್ನು ಬಳಸಿಕೊಳ್ಳಲಾಯಿತು. ಕೊವಿಡ್-19 ಸೋಂಕಿತರನ್ನು ಪತ್ತೆ ಮಾಡುವ ಮೊದಲೇ ಪ್ರದೇಶದಲ್ಲಿ ಪ್ರಾಥಮಿಕ ಸಂಪರ್ಕವನ್ನು ಹೊಂದಿರುವ ಜನರನ್ನು ಸಂಪರ್ಕಿಸಿ ಸ್ಕ್ರೀನಿಂಗ್ ನಡೆಸಲಾಯಿತು. ಅಗತ್ಯವಿದ್ದಲ್ಲಿ ಐಸೋಲೇಷನ್ ನಲ್ಲಿ ಇರಿಸಲಾಗಿದ್ದು, ಶಂಕಿತರನ್ನು ಹೋಮ್ ಕ್ವಾರೆಂಟೈನ್ ಮಾಡಲಾಗಿತ್ತು. ಸರಿಯಾದ ಸಮಯದಲ್ಲಿ ಸೋಂಕಿತರ ಪತ್ತೆ ಮತ್ತು ಚಿಕಿತ್ಸೆ ನೀಡಿದ್ದು, ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುವುದಕ್ಕೆ ಕಾರಣವಾಯಿತು. ಇದರಿಂದ ಕೊರೊನಾವೈರಸ್ ಸೋಂಕು ಹರಡುವಿಕೆಗೆೆ ಕಡಿವಾಣ ಹಾಕುವುದಕ್ಕೆ ಸಾಧ್ಯವಾಯಿತು ಎಂದು ಮುಂಬೈ ಮಹಾನಗರ ಪಾಲಿಕೆಯ ಜಿ-ಉತ್ತರ ವಾರ್ಡ್ ನ ಸಹಾಯಕ ಆಯುಕ್ತರಾದ ಕಿರಣ್ ದಿಗಾವಕರ್ ತಿಳಿಸಿದ್ದಾರೆ.

      ಧಾರಾವಿಯಲ್ಲಿ 7 ಲಕ್ಷ ಮಂದಿಗೆ ಸ್ಕ್ರೀನಿಂಗ್

      ಧಾರಾವಿಯಲ್ಲಿ 7 ಲಕ್ಷ ಮಂದಿಗೆ ಸ್ಕ್ರೀನಿಂಗ್

      ಮುಂಬೈನ ಧಾರಾವಿ ಕೊಳಗೇರಿ ಪ್ರದೇಶದಲ್ಲಿ ಇದುವರೆಗಿನ ಅಂಕಿ-ಅಂಶಗಳ ಪ್ರಕಾರ ಒಟ್ಟು ಆರರಿಂದ ಏಳು ಲಕ್ಷ ಜನರನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗಿದೆ. ಈ ಪೈಕಿ 14000 ಕೊರೊನಾವೈರಸ್ ಸೋಂಕು ತಪಾಸಣೆಗೆ ಒಳಪಡಿಸಲಾಗಿದ್ದು, 13000 ಶಂಕಿತರನ್ನು ಕ್ವಾರೆಂಟೈನ್ ನಲ್ಲಿ ಇರಿಸಲಾಗಿದೆ.

      ಧಾರಾವಿ ಸ್ಲಂನ 50000 ಜನರಲ್ಲಿ ತೀವ್ರ ಜ್ವರ

      ಧಾರಾವಿ ಸ್ಲಂನ 50000 ಜನರಲ್ಲಿ ತೀವ್ರ ಜ್ವರ

      ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೇ ಸರಿಸುಮಾರು 50000 ಜನರಲ್ಲಿ ತೀವ್ರ ಜ್ವರ ಕಾಣಿಸಿಕೊಂಡಿತು. ಈ ತಕ್ಷಣಕ್ಕೆ ಎಚ್ಚೆತ್ತುಕೊಂಡ ಅಧಿಕಾರಿಗಳು "ಮಿಷನ್ ಧಾರಾವಿ" ಶುರು ಮಾಡಿದರು. ಸ್ಲಂನ ವಿವಿಧ ಪ್ರದೇಶಗಳಲ್ಲಿ ಫೀವರ್ ಕ್ಯಾಂಪ್ ಗಳನ್ನು ಹಾಕಲಾಯಿತು. ಜ್ವರ ಲಕ್ಷಣಗಳು ಕಾಣಿಸಿಕೊಂಡ ಎಲ್ಲರನ್ನು ಕೊರೊನಾವೈರಸ್ ಸೋಂಕು ಪರೀಕ್ಷೆಗೆ ಒಳಪಡಿಸಲಾಯಿತು. ಖಾಸಗಿ ಆಸ್ಪತ್ರೆ ವೈದ್ಯರು, ಸರ್ಕಾರಿ ವೈದ್ಯರು ಕೂಡಾ ಈ ಟೆಸ್ಟಿಂಗ್ ಪ್ರಕ್ರಿಯೆಗೆ ಕೈ ಜೋಡಿಸಿದ್ದರು. ಧಾರಾವಿ ಪ್ರದೇಶದ 47,500 ಮನೆಗಳಲ್ಲಿನ ಜನರನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗಿತ್ತು. ಸುಮಾರು 14970 ಜನರನ್ನು ಮೊಬೈಲ್ ವ್ಯಾನ್ ಗಳಲ್ಲಿ ತಪಾಸಣೆಗೆ ಒಳಪಡಿಸಲಾಗಿತ್ತು. ಈ ಪೈಕಿ 8246 ಹಿರಿಯ ವಯಸ್ಸಿನವರನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗಿತ್ತು.

      ಕೊವಿಡ್ ವಿರುದ್ಧ ಹೋರಾಟಕ್ಕೆ ಖಾಸಗಿ ಸಹಕಾರ

      ಕೊವಿಡ್ ವಿರುದ್ಧ ಹೋರಾಟಕ್ಕೆ ಖಾಸಗಿ ಸಹಕಾರ

      ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ ಖಾಸಗಿ ವೈದ್ಯರು ನೀಡಿರುವ ಸಹಾಕಾರವು ಸಹ ಬಹುಮುಖ್ಯವಾಗಿತ್ತು. ಕನಿಷ್ಠ 24 ಖಾಸಗಿ ಆಸ್ಪತ್ರೆಗಳ ವೈದ್ಯರು ಡೇಂಜರ್ ಝೋನ್ ಗಳಲ್ಲಿಯೂ ಸ್ಕ್ರೀನಿಂಗ್ ನಡೆಸುವುದಕ್ಕೆ ಸ್ವಯಂಪ್ರೇರಿತರಾಗಿ ಮುಂದೆ ಬಂದರು. ಅಂಥ ಖಾಸಗಿ ವೈದ್ಯರಿಗೆ ಪಾಲಿಕೆ ವತಿಯಿಂದ ಪಿಪಿಇ ಕಿಟ್, ಮಾಸ್ಕ್, ಥರ್ಮಲ್ ಸ್ಕ್ರೀನಿಂಗ್ ಅಗತ್ಯ ವಸ್ತುಗಳನ್ನು ಪೂರೈಸಿದ್ದು, ಮನೆ ಮನೆಗೆ ತೆರಳಿ ಸ್ಕ್ರೀನಿಂಗ್ ನಡೆಸಿ, ಸೋಂಕಿತರನ್ನು ಗುರುತಿಸಲಾಯಿತು. ಶಾಲೆ, ಮದುವೆ ಭವನ, ಕ್ರೀಡಾ ಸಭಾಂಗಣಗಳನ್ನು ಕ್ವಾರೆಂಟೈನ್ ಕೇಂದ್ರಗಳನ್ನಾಗಿ ಬಳಸಿಕೊಳ್ಳಲಾಯಿತು.

      ಕಂಟೇನ್ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಿನ ಕ್ರಮ

      ಕಂಟೇನ್ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಿನ ಕ್ರಮ

      ಧಾರಾವಿಯಲ್ಲಿ ಗುರುತಿಸಲ್ಪಟ್ಟ ಕಂಟೇನ್ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಲಾಯಿತು. ಸರಿಸಮಾರು 1,25,000 ಜನರ ಮನೆ ಮನೆಗೆ ಅಗತ್ಯ ಸರಕುಗಳನ್ನು ಪೂರೈಕೆ ಮಾಡಲಾಗುತ್ತಿತ್ತು. ಇದರಿಂದ ಜನರು ಅಗತ್ಯ ವಸ್ತುಗಳ ಖರೀದಿಸಲು ಹೊರಗೆ ಬರುವ ಅವಕಾಶ ಇರಲಿಲ್ಲ. ಇನ್ನು, ಜನರ ಚಲನವಲನ ಗಮನಿಸುವುದಕ್ಕೆ ಡ್ರೋನ್ ಕ್ಯಾಮರಾಗಳನ್ನು ಬಳಕೆ ಮಾಡಿಕೊಳ್ಳಲಾಯಿತು. ಲಾಕ್ ಡೌನ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು. ಗಂಭೀರ ಸಮಸ್ಯೆ ಎದುರಿಸುತ್ತಿರುವ ಸೋಂಕಿತರನ್ನು ಮಾತ್ರ ಬೇರೆ ಪ್ರದೇಶಗಳಲ್ಲಿರುವ ಆಸ್ಪತ್ರೆಗಳಿಗೆ ರವಾನೆ ಮಾಡಲಾಗುತ್ತಿತ್ತು. ಇಲ್ಲದಿದ್ದಲ್ಲಿ ಎಲ್ಲ ಕೊರೊನಾವೈರಸ್ ಸೋಂಕಿತರಿಗೆ ಧಾರಾವಿಯಲ್ಲೇ ಚಿಕಿತ್ಸೆ ನೀಡುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

      ಕೊವಿಡ್-19 ಸೋಂಕಿತರ ಸಂಖ್ಯೆ ಏರಿಕೆಗೆ ಕಡಿವಾಣ

      ಕೊವಿಡ್-19 ಸೋಂಕಿತರ ಸಂಖ್ಯೆ ಏರಿಕೆಗೆ ಕಡಿವಾಣ

      ಧಾರಾವಿ ಪ್ರದೇಶದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆಯು ಇಮ್ಮಡಿಯಾಗುವುದಕ್ಕೆ ಆರಂಭದಲ್ಲಿ 18 ದಿನಗಳು ಸಾಕಿತ್ತು. ಎಂದರೆ 100 ಸೋಂಕಿತರ ಸಂಖ್ಯೆಯು 18 ದಿನಗಳಲ್ಲೇ 200ಕ್ಕೆ ಏರಿಕೆಯಾಗುತ್ತಿತ್ತು. ಈ ಡಬಲಿಂಗ್ ಪ್ರಮಾಣವನ್ನು ಮೇ ತಿಂಗಳ ವೇಳೆಗೆ 43 ದಿನಗಳಿಗೆ ತಗ್ಗಿಸಲಾಗಿಯಿತು. ಜೂನ್ ನಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಇಮ್ಮಡಿಯಾಗುವುದಕ್ಕೆ 108 ದಿನ ಆಗುತ್ತದೆ. ಇದರಿಂದ ಧಾರಾವಿಯಲ್ಲಿ ಸೋಂಕಿತ ಪ್ರಕರಣ ಮತ್ತು ಹರಡುವಿಕೆ ಪ್ರಮಾಣವು ಎಷ್ಟರ ಮಟ್ಟಿಗೆ ತಗ್ಗಿದೆ ಎನ್ನುವುದು ಸಾಬೀತಾಗುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+