ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ತಂತ್ರವೇನಿರಬಹುದು?
Recommended Video

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರಮೋದಿಯನ್ನು ಸೋಲಿಸಲೇಬೇಕೆಂಬ ಹಠಕ್ಕೆ ಪ್ರತಿಪಕ್ಷಗಳು ಬಿದ್ದಿವೆಯಾದರೂ ನಾಯಕರಲ್ಲಿನ ಭಿನ್ನಾಭಿಪ್ರಾಯಗಳು ಮತ್ತು ಪ್ರಧಾನಿ ಕುರ್ಚಿಯತ್ತ ಹೆಚ್ಚಿದ ಆಕಾಂಕ್ಷೆಗಳು ಬಹುಶಃ ಒಗ್ಗಟ್ಟಾಗಿ ಮುನ್ನೆಡೆಯಲು ಅಡ್ಡಗಾಲಾಗಿ ಮಹಾಘಟಬಂಧನ್ ನಿರೀಕ್ಷಿತ ಮಟ್ಟದಲ್ಲಿ ಮುನ್ನಡೆಯುವುದು ಕಷ್ಟಸಾಧ್ಯವಾಗಿದೆ.
ಈ ನಡುವೆ ಕಾಂಗ್ರೆಸ್ ಕೂಡ ಇತರೆ ಎಲ್ಲ ಪಕ್ಷಗಳನ್ನು ತನ್ನೊಂದಿಗೆ ಕರೆದುಕೊಂಡು ಪ್ರಧಾನಿ ನರೇಂದ್ರಮೋದಿ ಅವರಿಗೆ ಶಾಕ್ ಕೊಡಲು ಯತ್ನ ನಡೆಸಲಾಗುತ್ತಿದೆಯಾದರೂ ಅದು ಯಶಸ್ವಿಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಒಂದು ವೇಳೆ ಕಾಂಗ್ರೆಸ್ ತಂತ್ರ ಫಲಿಸಬೇಕಾದರೆ ಅದು ಕರ್ನಾಟಕದಿಂದಲೇ ಆರಂಭವಾಗಬೇಕು.
ಇಲ್ಲಿ ಮೈತ್ರಿ ಸರ್ಕಾರವಿರುವುದರಿಂದ ಇಲ್ಲಿಯೇ ಕಾಂಗ್ರೆಸ್ಗೆ ನಿರೀಕ್ಷಿತ ಸಹಕಾರ ಸಿಗದೆ ಹೋದರೆ ಬೇರೆಡೆ ಸಿಗುವುದು ಸಂಶಯವೇ.. ಹಾಗೆ ನೋಡಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಜಾರಿಗೆ ಬರುತ್ತಿದ್ದಂತೆಯೇ ಇಡೀ ದೇಶದಲ್ಲಿ ಹೊಸದೊಂದು ಸಂಚಲನ ಶುರುವಾಗಿತ್ತು.
ಬಿಜೆಪಿ ವಿರುದ್ಧ ಎಲ್ಲ ಪ್ರಾದೇಶಿಕ ಪಕ್ಷಗಳು ಒಂದಾಗಿ ಕಾಂಗ್ರೆಸ್ಗೆ ಸಾಥ್ ನೀಡಿ ಮಹಾಘಟಬಂಧನ್ ಮೂಲಕ ದೇಶದಲ್ಲಿ ಹೊಸ ರಾಜಕೀಯ ಶಖೆ ಆರಂಭವಾಗುತ್ತದೆಯೇನೋ ಎಂಬಂತೆ ಬಿಂಬಿತವಾಗಿತ್ತು. ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪ್ರಮಾಣವಚನ ಸ್ವೀಕಾರ ಸಮಾರಂಭದ ವೇದಿಕೆಯಲ್ಲಿ ಎಲ್ಲ ಪಕ್ಷದ ಧುರೀಣರು ಕಾಣಿಸಿಕೊಂಡಿದ್ದು ಮಾತ್ರವಲ್ಲದೆ ಎಲ್ಲ ನಾಯಕರು ಕೈಎತ್ತಿ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ಸಾರಿದ್ದರು.
ಈ ಮೂಲಕ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್ಡಿಎ ಸರ್ಕಾರಕ್ಕೆ ಬಿಗ್ ಶಾಕ್ ನೀಡಿದ್ದರು. ಆದರೆ ನಂತರದ ದಿನಗಳಲ್ಲಿ ಆ ಒಗ್ಗಟ್ಟು ಕಾಣಲೇ ಇಲ್ಲ. ಮುಂದೆ ಓದಿ...

ಮಹಾಘಟಬಂಧನ್ ಗೆ ಒಲವು ತೋರಿಸಿಲ್ಲ
ಕಾಂಗ್ರೆಸ್ ಮುಂದಿನ ಪ್ರಧಾನಿ ಅಭ್ಯರ್ಥಿಯನ್ನಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಘೋಷಣೆ ಮಾಡಿದ್ದು ಇದು ಇತರೆ ಪಕ್ಷಗಳ ನಾಯಕರಿಗೆ ಇರಿಸು ಮುರಿಸಿಗೆ ಕಾರಣವಾಗಿದೆ. ಏಕೆಂದರೆ ಪ್ರಾದೇಶಿಕ ಪಕ್ಷಗಳ ನಾಯಕರು ಸೇರಿದಂತೆ ಹಲವರಿಗೆ ತಾನೇ ಪ್ರಧಾನಿಯಾಗಬೇಕೆಂಬ ಅಭಿಲಾಷೆಯಿದೆ. ಹೀಗಾಗಿ ನಾವೇನಾದರೂ ನೇರವಾಗಿ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡರೆ ತಮ್ಮ ಅಸ್ತಿತ್ವ ಅಲ್ಲಿ ಕಾಣಿಸುವುದಿಲ್ಲ. ಜತೆಗೆ ಸರ್ಕಾರದಲ್ಲಿ ತಮ್ಮ ಹಿಡಿತ ಅಷ್ಟಾಗಿ ಇರುವುದಿಲ್ಲ. ಹೀಗಾಗಿ ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಬಳಿಕ ಮೈತ್ರಿಗೆ ಒಪ್ಪಿಗೆ ನೀಡಿದರೆ ತಮ್ಮತನ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ಲೆಕ್ಕಚಾರ ಕೆಲವು ಹಿರಿಯ ನಾಯಕರದ್ದಾಗಿದೆ. ಹೀಗಾಗಿ ಬಹಳಷ್ಟು ನಾಯಕರು ಮಹಾಘಟಬಂಧನ್ ಗೆ ಒಲವು ತೋರಿಸಿದಂತೆ ಕಂಡು ಬರುತ್ತಿಲ್ಲ.

ದೇಶದ ಗಮನ ಸೆಳೆಯುತ್ತಿದ್ದಾರೆ
ಹಾಗೆ ನೋಡಿದರೆ ಎಲ್ಲ ಪಕ್ಷಗಳ ಮುಖ್ಯಸ್ಥರನ್ನು ಮುಖ್ಯಮಂತ್ರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕರೆಯಿಸಿ ಪ್ರಧಾನಿ ಮೋದಿಗೆ ಶಾಕ್ ನೀಡುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇ ಮಾಜಿ ಪ್ರಧಾನಿ ದೇವೆಗೌಡರು. ಅವರ ಆಲೋಚನೆಯ ಫಲ ಇದಾಗಿತ್ತು. ಆದರೆ ನಂತರದ ಕೆಲವು ತಿಂಗಳ ಬದಲಾವಣೆಯನ್ನು ಗಮನಿಸಿದರೆ ಪಂಚರಾಜ್ಯ ಚುನಾವಣೆ ಫಲಿತಾಂಶ ಬಂದ ಬಳಿಕ ಕಾಂಗ್ರೆಸ್ ಚೇತರಿಸಿದ್ದು ಕಂಡು ಬಂದ ಬೆನ್ನಲ್ಲೇ ಕಾಂಗ್ರೆಸ್ ನಾಯಕರಿಗೆ ಅತ್ಯುತ್ಸಾಹ ಬಂದಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಮೇಲುಗೈ ಸಾಧಿಸುತ್ತೇವೆ ಎಂಬ ವಿಶ್ವಾಸವೂ ಬಂದಿದೆ. ಹಾಗಾಗಿ ಇತರೆ ಪಕ್ಷಗಳತ್ತ ಮೊದಲಿನ ಅನಿವಾರ್ಯತೆ ಇಲ್ಲದಾಗಿದೆ. ಜತೆಗೆ ಒಂದಲ್ಲ ಒಂದು ವಿಚಾರವನ್ನು ಮುಂದಿಟ್ಟುಕೊಂಡು ರಾಹುಲ್ಗಾಂಧಿ ಅವರು ಸದಾ ಸುದ್ದಿಯಲ್ಲಿರುವ ಮೂಲಕ ದೇಶದ ಗಮನಸೆಳೆಯುತ್ತಿದ್ದಾರೆ. ಇದು ಪ್ರಧಾನಿ ಆಕಾಂಕ್ಷಿಗಳಾಗಿರುವ ಹಿರಿಯ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಹಠಕ್ಕೆ ಬಿದ್ದಿದ್ದಾರೆ ದೇವೇಗೌಡರು
ಈ ನಡುವೆ ದೇಶದ ರಾಜಕೀಯವನ್ನು ಅವಲೋಕನ ಮಾಡುತ್ತಿರುವ ಜೆಡಿಎಸ್ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಜತೆಗೆ ದೇಶದ ರಾಜಕೀಯದಲ್ಲಿ ತಮ್ಮ ಅನಿವಾರ್ಯತೆಯನ್ನು ಸೃಷ್ಠಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋದರೆ ತಮ್ಮನ್ನು ಮೂಲೆಗುಂಪು ಮಾಡುತ್ತಾರೆ ಎಂಬುದು ಅವರಿಗೂ ಗೊತ್ತಾಗಿದೆ. ಕಳೆದೊಂದು ತಿಂಗಳ ಹಿಂದೆ ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಇತರೆ ಪ್ರತಿಪಕ್ಷಗಳ ಮುಖಂಡರು ಸೇರಿದ್ದ ಸಭೆಯಲ್ಲಿ ದೇವೇಗೌಡರನ್ನು ಯಾವ ರೀತಿ ನಡೆಸಿಕೊಂಡರು ಎಂಬುದು ದೇಶವೇ ನೋಡಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ದೇವೇಗೌಡರು ಹೊಸದೊಂದು ತಂತ್ರವನ್ನು ಮಾಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ 12 ಸ್ಥಾನ ನೀಡಲೇ ಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಒಂದು ವೇಳೆ ಇದಕ್ಕೆ ಕಾಂಗ್ರೆಸ್ ನಾಯಕರು ಒಪ್ಪದಿದ್ದರೆ ಪ್ರತ್ಯೇಕವಾಗಿ ಚುನಾವಣೆಗೆ ಹೋಗಲು ತಯಾರಿ ನಡೆಸಿದ್ದಾರೆ. ಒಂದು ವೇಳೆ ಪ್ರತ್ಯೇಕವಾಗಿ ಚುನಾವಣೆಗೆ ಹೋದರೆ ಅದು ಮೈತ್ರಿ ಸರ್ಕಾರದ ಮೇಲೆ ಭಾರೀ ಪರಿಣಾಮ ಬೀರಲಿದೆ. ಹೀಗಾಗಿ ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.

ಭಾರೀ ಮಹತ್ವ ಪಡೆದಿದೆ
ಸದ್ಯಕ್ಕೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಚುನಾವಣಾ ಕಾರ್ಯತಂತ್ರ ಮತ್ತು ಸಿದ್ಧತೆಗಳು ಏನು ಎಂಬುದು ಇಂದು ಗೊತ್ತಾಗಲಿದೆ. ಕಾರಣ ಇವತ್ತು ದೇವೇಗೌಡರು ಪಕ್ಷದ ನಾಯಕರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಆ ಸಭೆಯಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ. ಈ ಸಭೆಯಲ್ಲಿನ ತೀರ್ಮಾನದ ಮೇಲೆ ಮುಂದಿನ ಲೋಕಸಭೆ ಚುನಾವಣೆಯ ರೂಪುರೇಷೆಗಳು ಆರಂಭವಾಗಲಿದ್ದು, ದೇವೇಗೌಡರ ತೀರ್ಮಾನ ಕಾಂಗ್ರೆಸ್ಗೆ ಒಳಿತಾಗುತ್ತಾ ಬಿಜೆಪಿಗೆ ಶಾಕ್ ನೀಡುತ್ತೋ ಅಥವಾ ಮೈತ್ರಿ ಸರ್ಕಾರಕ್ಕೆ ಮುಳ್ಳಾಗುತ್ತೋ ಎಲ್ಲವೂ ಕುತೂಹಲಕಾರಿಯಾಗಿದೆ. ದೇವೇಗೌಡರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದು, ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ಗೆ ಹಲವು ಷರತ್ತುಗಳನ್ನಿಡುವ ಸಾಧ್ಯತೆಯಿದೆ. ಒಟ್ಟಾರೆ ದೇವೇಗೌಡರು ನಡೆಸಲಿರುವ ಸಭೆ ಭಾರೀ ಮಹತ್ವವನ್ನು ಪಡೆದಿರುವುದಂತು ನಿಜ.












Click it and Unblock the Notifications