'ಕ್ರಾಸ್ ಬಾರ್ಡರ್ ಹವಾಲ': ಆಪ್ತರಿಗೇ ಅಚ್ಚರಿ ತಂದ ಡಿಕೆಶಿ ಬಂಧನಕ್ಕೆ ಬಿಜೆಪಿ ನೀಡಿದ ಟ್ವಿಸ್ಟ್ ಇದು!
ಕರ್ನಾಟಕ ಕಾಂಗ್ರೆಸ್ನ ಪ್ರಭಾವಿ ನಾಯಕ, ಪಕ್ಷದ ಪಾಲಿಗೆ 'ಟ್ರಬಲ್ ಶೂಟರ್' ಎನ್ನಿಸಿಕೊಂಡಿದ್ದ ಡಿ. ಕೆ. ಶಿವಕುಮಾರ್ ಬಂಧನ ಖುದ್ದು ಅವರ ಆಪ್ತರಿಗೆ ಅಚ್ಚರಿ ತಂದಿದೆ.
ಕಳೆದ ನಾಲ್ಕು ದಿನಗಳಿಂದ ದಿಲ್ಲಿಯ ಲೋಕನಾಯಕ ಭವನದಲ್ಲಿರುವ ಇ. ಡಿ. ಕಚೇರಿಯಲ್ಲಿ ನಡೆಯುತ್ತಿದ್ದ ವಿಚಾರಣೆ ಬಂಧನದಲ್ಲಿ ಅಂತ್ಯವಾಗುತ್ತದೆ ಎಂಬ ಚಿಕ್ಕದೊಂದು ಸುಳಿವೂ ಕನಕಪುರದ ಡಿ. ಕೆ. ಆಪ್ತರಿಗೆ ಇರಲಿಲ್ಲ. ಮಂಗಳವಾರ ರಾತ್ರಿ ಡಿ. ಕೆ. ಶಿವಕುಮಾರ್ ಬಂಧನ ಸುದ್ದಿ ಹೊರಬೀಳುತ್ತಿದ್ದಂತೆ ಮುಂದಿನ ನಡೆಗಳೇನಿರಬೇಕು ಎಂಬ ಬಗೆಗೆ ಅವರಿನ್ನೂ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ.
'ಒನ್ ಇಂಡಿಯಾ ಕನ್ನಡ' ಜತೆ ಮಾತನಾಡಿದ ಡಿ. ಕೆ. ಆಪ್ತ ವಲಯದಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರೊಬ್ಬರು, "ವಿಚಾರಣೆ ಆರಂಭವಾದ ನಂತರ ದಿನಾ ಬೆಳಗ್ಗೆ ಡಿ. ಕೆ. ಸರ್ ಜತೆಯಲ್ಲಿ ಮಾತನಾಡುತ್ತಿದ್ದೆವು. ಎಂಎಲ್ ಸಿ ಎಂ. ಸಿ. ಲಿಂಗಪ್ಪ ಮಂಗಳವಾರ ಬೆಳಗ್ಗೆಯಷ್ಟೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. 'ನನಗೇನೂ ಸಮಸ್ಯೆಯಾಗಲ್ಲ, ಇ. ಡಿ. ಅಧಿಕಾರಿಗಳು ಕೇಳಿದ ಎಲ್ಲದಕ್ಕೂ ಉತ್ತರ ಕೊಟ್ಟಿದ್ದೀನಿ. ಸದ್ಯದಲ್ಲೇ ಅರಾಮಾಗಿ ಬರ್ತೀನಿ, ನೀವ್ಯಾರೂ ದಿಲ್ಲಿಗೆ ಬರಲು ಹೋಗಬೇಡಿ' ಎಂದು ತಿಳಿಸಿದ್ದರು,'' ಎಂದು ಮಾಹಿತಿ ನೀಡಿದರು.
Recommended Video

ದಿಲ್ಲಿಗೆ ಬುಲಾವ್:
ಡಿ. ಕೆ. ಶಿವಕುಮಾರ್ ಬಂಧನಕ್ಕೂ ಮೊದಲೇ ಎಐಸಿಸಿ ಹಿರಿಯ ನಾಯಕ ಗುಲಾಂ ನಬಿ ಅಜಾದ್ ನೇತೃತ್ವದಲ್ಲಿ ಸಮಾಲೋಚನಾ ಸಭೆಯೊಂದು ದಿಲ್ಲಿಯಲ್ಲಿ ನಡೆದಿತ್ತು ಎಂಬ ಮಾಹಿತಿಯನ್ನು ಪಕ್ಷದ ಮೂಲಗಳು ನೀಡುತ್ತವೆ. ಡಿ. ಕೆ. ಶಿವಕುಮಾರ್ ಇ. ಡಿ. ವಿಚಾರಣೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ನ ಕೆಲವು ಎಂಎಲ್ ಎ ಹಾಗೂ ನಾಯಕರನ್ನು ಅಜಾದ್ ದಿಲ್ಲಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದರು.
"ಎಐಸಿಸಿಗೆ ಡಿ. ಕೆ. ಶಿವಕುಮಾರ್ ಬಂಧನದ ಸುಳುಹು ಸಿಕ್ಕಿತ್ತು. ಈ ಕಾರಣಕ್ಕಾಗಿ ರಾಜ್ಯದ ಕಾಂಗ್ರೆಸ್ ನಾಯಕರನ್ನು ದಿಲ್ಲಿಗೆ ಕರೆಸಿಕೊಂಡು ಆಜಾದ್ ಮಾತುಕತೆ ನಡೆಸಿದ್ದರು. ಮುಂದಿನ ನಡೆಗಳ ಕುರಿತು ಅವರ ತೀರ್ಮಾನ ಏನು ಎಂಬ ಮಾಹಿತಿ ಇನ್ನೂ ನಮಗೆ ಲಭ್ಯವಾಗಿಲ್ಲ,'' ಎಂದು ಕೆಪಿಸಿಸಿ ನಾಯಕರೊಬ್ಬರು ತಿಳಿಸಿದರು.
ಗಡಿಯಾಚೆಗಿನ ಹವಾಲಾ ಹಣ:
ಡಿ. ಕೆ. ಶಿವಕುಮಾರ್ ಬಂಧನ ಬೆನ್ನಲ್ಲೇ ರಾಷ್ಟ್ರೀಯ ವಾಹಿನಿಗಳಿಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, 'ಗಡಿಯಾಚೆಗಿನ ಹವಾಲಾ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ ಬಂಧನವಾಗಿದೆ' ಎಂದಿದ್ದಾರೆ. ಈ ಮೂಲಕ ದಿಲ್ಲಿಯ ಡಿ. ಕೆ. ಶಿವಕುಮಾರ್ ಮನೆಯಲ್ಲಿ ಸಿಕ್ಕ ಸುಮಾರು 8 ಕೋಟಿ ರೂಪಾಯಿ ನಗದು ಗಡಿಯಾಚೆಗಿನ ಹವಾಲಾ ಸಂಪರ್ಕಗಳಿಂದ ಬಂದ ಹಣ ಎಂಬ ಗಂಭೀರ ಆರೋಪವೊಂದನ್ನು ಹೊರಿಸುವ ಮುನ್ಸೂಚನೆ ನೀಡಿದ್ದಾರೆ.
ಪಿ. ಚಿದಂಬರಂ ಬಂಧನದ ಬೆನ್ನಲ್ಲೇ ನಡೆದಿರುವ ಡಿ. ಕೆ. ಶಿವಕುಮಾರ್ ಬಂಧನ ಸಹಜವಾಗಿಯೇ ಈಗ ದಿಲ್ಲಿಯಲ್ಲಿ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆ ಸಿದ್ಧಪಡಿಸಿದೆ. ಕಾಂಗ್ರೆಸ್ ನಾಯಕರು 'ಇದೊಂದು ರಾಜಕೀಯ ಹಗೆತನ'ದ ನಡೆ, 'ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ' ಎಂದು ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಹವಾಲಾ ದಂಧೆಯ ಆರೋಪ ಹೊರಿಸುವ ಸನ್ನಾಹದಲ್ಲಿದೆ. ಒಟ್ಟಾರೆ ಕರ್ನಾಟಕ ರಾಜಕಾರಣ ಮತ್ತೊಮ್ಮೆ ರಾಷ್ಟ್ರ ರಾಜಕಾರಣದ ಕೇಂದ್ರಕ್ಕೆ ಬಂದು ನಿಂತಿದೆ.












Click it and Unblock the Notifications