ಆನ್ಲೈನ್ ಶಿಕ್ಷಣ: ಮೇಸ್ಟ್ರಿಗೆ ಗೊತ್ತಾಗದಂತೆ ತುಂಟತನ ಮಾಡುವಂತಿಲ್ಲ, ಪಕ್ಕದವನಿಗೆ ಚಿವುಟುವಂತಿಲ್ಲ
ಸಾಮಾನ್ಯವಾಗಿ ಮಾರ್ಚ್ ತಿಂಗಳಿನಲ್ಲಿ ಎಲ್ಲಾ ಮಕ್ಕಳಿಗೂ ಪರೀಕ್ಷೆಗಳು ಶುರುವಾಗುತ್ತವೆ. ಅಂದು ಬೆಳಿಗ್ಗೆ ಪರೀಕ್ಷೆಗೆ ಹೊರಡಲು ಸಿದ್ಧವಾಗಿದ್ದ ನನ್ನ ಮೊಮ್ಮಗುವಿಗೆ 'ಪರೀಕ್ಷೆಗಳು ರದ್ದಾಗಿವೆ. ಮುಂದಿನ ದಿನಾಂಕವನ್ನು ತಿಳಿಸುತ್ತೇವೆ' ಎಂಬ ಸಂದೇಶ ಶಾಲೆಯಿಂದ ಬಂದಾಗ ಎಲ್ಲರಿಗೂ ಗಾಬರಿ ಆಯಿತು. ಕೊರೊನದ ಅಟ್ಟಹಾಸದಿಂದ ಎಲ್ಲವೂ ಆಯೋಮಯವಾಗಿತ್ತು.
Recommended Video
ಓದಿದ್ದೆಲ್ಲ ವೇಸ್ಟು ಅಂತ ಮಗು ಬೇಸರಗೊಂಡಿತ್ತು. ಮುಂದಿನ ದಿನಾಂಕ ಇದುವರೆಗೂ ಬರಲೇ ಇಲ್ಲ.ಶಾಲೆಗಳು ಯಾವಾಗ ತೆರೆಯುತ್ತವೆ, ಏನು ಎಂಬ ಗೊಂದಲ, ಅನಿಶ್ಚಯತೆ ಎಲ್ಲರನ್ನೂ ಕಾಡುತ್ತಿದೆ.
ಪ್ರಾರಂಭದಲ್ಲಿ ರಜೆ ಸಿಕ್ಕಿದಾಗ ಮಕ್ಕಳಿಗೆ ಅತೀವ ಸಂತಸವಾಗಿದ್ದಂತೂ ನಿಜ.ಎಲ್ಲರೂ ಹಿಗ್ಗಿ ಹೀರೇಕಾಯಿ ಆಗಿದ್ದರು.ಆದರೆ ಯಾವಾಗ ನಾಲ್ಕುಗೋಡೆಗಳ ಮಧ್ಯೆಯೇ ಕುಳಿತುಕೊಳ್ಳಬೇಕಾಗಿ ಬಂತೋ ಆಗ ಬೇಸರ ಆವರಿಸತೊಡಗಿತು.

ಗೆಳೆಯರ ಮುಖದರ್ಶನವಿಲ್ಲದೆ ಹೊರಗೆ ಹೋಗಿ ಆಡಲಾಗದೆ ಶಾಲೆ ಇದ್ದಿದ್ದರೆ ಒಳ್ಳೆಯದೆಂದು ಅನಿಸತೊಡಗಿತು.
ದಿನ ಬೆಳಗಾದರೆ ಬೇಗೆದ್ದು ಮಕ್ಕಳನ್ನು, ಪತಿದೇವರನ್ನು ಶಾಲೆಗೆ, ಆಫೀಸಿಗೆ ಕಳುಹಿಸುವ ಧಾವಂತ, ಸಾಯಂಕಾಲ ಮಕ್ಕಳಿಗೆ ಪಾಠ ಹೇಳಿ ಕೊಡುವುದು ಇವುಗಳಿಗೆಲ್ಲ ಸಮಯವೇ ದೊರಕದಿರುತ್ತಿದ್ದ ದಿನಗಳೂ ಇದ್ದವು ಎಂಬುದನ್ನು ಯೋಚಿಸುವುದು ಅಸಾಧ್ಯವಾಗಿದೆ.
ಈಗ ಈ ಎಲ್ಲಾ ಆತಂಕಗಳು ಮಾಯವಾಗಿ ಹೊಸ ಸಮಸ್ಯೆಯೊಂದು ಎದುರಾಗಿದೆ.ರಾತ್ರಿಯವರೆಗೂ ಮಕ್ಕಳ ಬಾಯಿಂದ "ಅಮ್ಮಾ ಬೋರು .ಈ ಕೊರೊನಾ ಯಾವಾಗ ಮುಗಿಯುತ್ತದೆ.ನಾವು ಹೊರಗಡೆ ಹೋಗಿ ಆಟ ಆಡುವುದು ಯಾವಾಗ? ಹೋಟೆಲಿಗೆ, ಪಾರ್ಕಿಗೆ ಹೋಗದೆ ಎಷ್ಟು ದಿನಗಳಾದವು "ಇವರುಗಳ ಪ್ರಶ್ನೆಗಳಿಗೆ ಹೆತ್ತವರಿಂದ ಉತ್ತರ ಸಿಗದಾಗಿದೆ.
ಕಣ್ಣಿಗೆ ಕಾಣದ ವೈರಾಣುವೊಂದು ಇಷ್ಟೆಲ್ಲಾ ಅವಾಂತರ ಸೃಷ್ಟಿಸಿ ಬಿಟ್ಟಿದೆ ಎಂದು ಅವರಿಗೆ ಅರ್ಥ ವಾಗುವಂತೆ ಹೇಳುವುದಾದರೂ ಹೇಗೆ?

ಮಕ್ಕಳಂತೂ ಈಗ ಇಡೀ ದಿನ ಟಿವಿ, ಮೊಬೈಲ್ ಗಳಲ್ಲಿಯೇ ಮುಳುಗಿ ಹೋಗುತ್ತಿದ್ದಾರೆ. ಬೇಡ ಎಂದರೆ ಅವರು ಹೊತ್ತು ಕಳೆಯುವುದುದಾದರು ಹೇಗೆ? ಬಗೆ ಬಗೆಯ ತಿಂಡಿಗಳನ್ನು ಮಾಡಿಕೊಡು ಎಂದು ಅಮ್ಮಂದಿರನ್ನು ಸತಾಯಿಸುತ್ತಿದ್ದಾರೆ.
ಹೊರಗಡೆ ತಿನ್ನುವ ತಿಂಡಿಗಳಿಗೆ ಬ್ರೇಕ್ ಬಿದ್ದಿದೆ.ಅವರನ್ನು ಸುಧಾರಿಸುವಲ್ಲಿ ತಾಯಂದಿರು ಸುಸ್ತಾಗಿರುವುದಂತು ಸತ್ಯ.
ಇಷ್ಟು ಸಾಲದೆಂಬಂತೆ ಆನ್ಲೈನ್ ಎಂಬ ಗುಮ್ಮ ಕಾಣಿಸಿಕೊಂಡಿದೆ. ಆನ್ ಲೈನ್ ನಲ್ಲಿ ಶಿಕ್ಷಣ ಕೊಡಲು ಸರ್ಕಾರ ಆಲೋಚಿಸುತ್ತಿದೆ. ಒಂದು ರೀತಿಯಲ್ಲಿ ನೋಡಿದರೆ ಈ ನಿರ್ಧಾರ ಸರಿಯಾಗಿಯೇ ಇದೆ. ಮಕ್ಕಳನ್ನು ಸ್ವಲ್ಪ ಹೊತ್ತಾದರೂ ಪಾಠ ಪ್ರವಚನಗಳಲ್ಲಿ ತೊಡಗಿಸುವುದು ಒಳ್ಳೆಯದು.
ಅವರಷ್ಟಕ್ಕೆ ಬಿಟ್ಟು ಬಿಟ್ಟರೆ ಕಡಿವಾಣವಿಲ್ಲದ ಕುದುರೆಯಂತೆ ಆಗಿಬಿಡುತ್ತದೆ ಅವರ ಬದುಕು. ಮತ್ತೆ ಅವರನ್ನು ಸರಿದಾರಿಗೆ ತರುವುದು ಬಹಳ ಕಷ್ಟದ ಕೆಲಸ.ಈಗಾಗಲೇ ಮಕ್ಕಳಿಗೆ ಪಾಠ ಪ್ರವಚನಗಳ ಮೇಲಿನ ಹಿಡಿತ ತಪ್ಪಿ ಹೋಗಿರಬಹುದು. ಕೆಲವರು ಹೇಳುವ ಹಾಗೆ ಒಂದು ವರ್ಷ ಶಾಲೆಯನ್ನೂ ಮುಚ್ಚಿಬಿಟ್ಟರೆ ಅದು ಮಕ್ಕಳ ಭವಿಷ್ಯಕ್ಕೆ ಮಾರಕವಾಗಬಹುದು.
ಆನ್ ಲೈನ್ ಶಿಕ್ಷಣ ವ್ಯವಸ್ಥೆಯಿಂದಲೂ ಅನೇಕ ಸಮಸ್ಯೆಗಳು ಉಂಟಾಗುತ್ತಿವೆ.
ಮಕ್ಕಳು ಮನೆಯಿಂದಲೇ ಪಾಠ ಕೇಳಬೇಕಾಗುತ್ತದೆ. ಮಕ್ಕಳಿಗೆ 'ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೇ ಮೊದಲ ಗುರು' ಎಂದು ಹೇಳುತ್ತಾರೆ. ಆದರೆ ಮನೆಯಲ್ಲಿ ತಾಯಿ ಹೇಳಿಕೊಡುವ ಪಾಠಕ್ಕೂ, ಶಾಲೆಯಲ್ಲಿ ಶಿಕ್ಷಕರು ಹೇಳಿಕೊಡುವ ಪಾಠಕ್ಕೂ ವ್ಯತ್ಯಾಸವಿದೆ.ಅಮ್ಮ ಮಗುವಿಗೆ ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ತಿಳಿವಳಿಕೆ ನೀಡುತ್ತಾಳೆ. ಶಿಕ್ಷಕರು ಅವರ ಮುಂದಿನ ಜೀವನದ ,ಭವಿಷ್ಯದ ಬಗ್ಗೆ,ಅರಿವು ಮೂಡಿಸುತ್ತಾ ಮಕ್ಕಳ ಜ್ಞಾನಾರ್ಜನೆಯನ್ನೂ ಹೆಚ್ಚಿಸುತ್ತಾರೆ.
ಇವೆರಡೂ ಮಕ್ಕಳ ಮಾನಸಿಕ ಬೆಳವಣಿಗೆಗೆ ಪೂರಕವಾಗಿರುತ್ತದೆ.ತಾಯಿಯಿಂದ ಕಲಿತ ಸಂಸ್ಕಾರದಿಂದಲೇ ಒಂದು ಮಗುವು ಯೋಗ್ಯ ಪ್ರಜೆಯಾಗಲು ಸಾಧ್ಯ. ಶಿಕ್ಷಣದ ವಿಷಯಕ್ಕೆ ಬಂದಾಗ ಆನ್ ಲೈನ್ ಶಿಕ್ಷಣ ಮಕ್ಕಳಿಗೆ ಸ್ವಲ್ಪ ಕಿರಿಕಿರಿಯನ್ನು ಉಂಟುಮಾಡಬಹುದು. ಅಕ್ಕ ಪಕ್ಕದಲ್ಲಿ ಗೆಳೆಯರಿಲ್ಲ. ಮಾಸ್ತರರಿಗೆ ಗೊತ್ತಾಗದ ಹಾಗೆ ತುಂಟತನ ಮಾಡುವಂತಿಲ್ಲ. ಪಕ್ಕದವನಿಗೆ ಚಿವುಟುವಂತಿಲ್ಲ.

ಮನೆಯಲ್ಲಿ ಒಬ್ಬರೇ ಕುಳಿತು ಪಾಠ ಕೇಳುವಾಗ ಏಕಾಗ್ರತೆ ಬರುವುದು ಕಷ್ಟ. ಮನಸ್ಸನ್ನು ಕೇಂದ್ರೀಕರಿಸುವುದು ಅಸಾಧ್ಯ. ಇದು ದೊಡ್ಡ ಮಕ್ಕಳ ವಿಷಯವಾದರೆ ಇನ್ನು ಪುಟ್ಟ ಮಕ್ಕಳಿಗಂತೂ ಇದೊಂದು ಗುಮ್ಮನೆ ಆಗಿದೆ. ಶಾಲೆ ಇರುವಾಗ ಮಕ್ಕಳನ್ನು ಅರ್ಧ ಗಂಟೆ ಒಂದೇಕಡೆ ಕುಳ್ಳಿರಿಸಿ ಹೋಂ ವರ್ಕ್ ಮಾಡಿಸುವುದು ಎಷ್ಟು ಕಷ್ಟ ಎಂದು ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಹಾಗಿರುವಾಗ ಈಗ ಮಕ್ಕಳನ್ನು ಲ್ಯಾಪ್ ಟಾಪ್ ಎದುರು ಕುಳ್ಳಿರಿಸುವುದು ಬಹಳ ಕಷ್ಟಕರ.
ಇತ್ತೀಚೆಗೆ ಸಾಧಾರಣವಾಗಿ ಎಲ್ಲಾ ಮಹಿಳೆಯರೂ ಉದ್ಯೋಗಸ್ಥರು. ಅವರೆಲ್ಲರೂ ಈಗ ಮಹಾಮಾರಿಯ ಕಾರಣದಿಂದಾಗಿ ಮನೆಯಿಂದಲೆ ಕೆಲಸ ಮಾಡಬೇಕಾಗಿದೆ. ಮಕ್ಕಳ ಪಾಠವನ್ನು ಅವರು ಕೇಳಿಸಿಕೊಂಡು ಮಕ್ಕಳಿಗೆ ಹೇಳಿಕೊಡಬೇಕಾಗಿದೆ. ಮನೆ ಕೆಲಸದ ನಡುವೆ ಇದು ಅವರಿಗೆ ನುಂಗಲಾರದ ತುತ್ತಾಗಿದೆ. ಇದರಿಂದ ಅವರ ಆಫೀಸಿನ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ. ಅದೂ ಅಲ್ಲದೆ ಇಷ್ಟು ತಿಂಗಳ ಕಾಲ ಇಷ್ಟ ಬಂದ ಹಾಗೆ ಇದ್ದ ಮಕ್ಕಳಿಗೆ ಪಾಠ ಹೇಳಿಕೊಡುವುದು ಕಷ್ಟವೇ ಸರಿ.
ಹಳ್ಳಿಗಳಲ್ಲಿ ಆನ್ ಲೈನ್ ಶಿಕ್ಷಣಕ್ಕೆ ಯಾವ ಪ್ರೋತ್ಸಾಹವೂ ದೊರೆಯುತ್ತಿಲ್ಲ.ಕಾರಣ ಅಲ್ಲಿ ವಿದ್ಯುತ್, ಅಂತರ್ಜಾಲದ ಸಮಸ್ಯೆ.ಇವುಗಳು ಯಾವಾಗಲೂ ಕೈ ಕೊಡುತ್ತಿದ್ದರೆ ಅದನ್ನು ಅನುಸರಿಸುವುದಾದರೂ ಹೇಗೆ? ಎಲ್ಲರ ಬಳಿ ಸ್ಮಾರ್ಟ್ ಫೋನ್ ತೆಗೆದುಕೊಳ್ಳುವಷ್ಟೂ ಸಾಮರ್ಥ್ಯ ಎಲ್ಲಿರುತ್ತದೆ. ಇದ್ದರೂ ಅದನ್ನು ಬಳಸುವ ರೀತಿ ಗೊತ್ತಿರುವುದಿಲ್ಲ. ಈ ಎಲ್ಲಾ ದೃಷ್ಟಿಯಿಂದ ನೋಡುವುದಾದರೆ ಈ ಶಿಕ್ಷಣವು ಅವರ ಪಾಲಿಗೆ ಗುಮ್ಮನೇ ಹೌದು.
ಒಂದನೇ ತರಗತಿಯ ನನ್ನ ದೊಡ್ಡ ಮೊಮ್ಮಗ ಹೇಳುತ್ತಿದ್ದ." ಅಮ್ಮಾ, ಸ್ಕೂಲು ಶುರುವಾಗಲಿಲ್ಲ ಅಂತ ಏಕಮ್ಮಾ ತಲೆ ಕೆಡಿಸಿಕೊಳ್ಳುತ್ತಿದ್ದಿ.ನನಗೆ ಇದೇ ಅಡ್ಜಸ್ಟ್ ಆಗಿದೆ ಬಿಡು".
ಹೀಗೆ ಎಲ್ಲಾ ಮಕ್ಕಳೂ ಶಾಲೆ,ಪರೀಕ್ಷೆಗಳಿಲ್ಲದ ಒಂದು ಸ್ವಚ್ಚಂದ ವಾತಾವರಣಕ್ಕೆ ಹೊಂದಿಕೊಂಡು ಬಿಟ್ಟಿದ್ದಾರೆ. ಅವರನ್ನು ಈ ವ್ಯೂಹದಿಂದ ಮತ್ತೆ ಮೊದಲಿನ ಜೀವನಕ್ಕೆ ಕರೆತರುವುದು ಬಹಳ ಮುಖ್ಯವಾಗಿದೆ. ಆನ್ ಲೈನ್ ಶಿಕ್ಷಣಕ್ಕೆ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. ಆಗ ಬೇಸರ ಕಡಿತಗೊಳಿಸಿಯಾದರೂ ಈ ಬಾರಿ ಅವರ ಮುನ್ನಡೆಸುವ ಜವಾಬ್ದಾರಿ ಸರ್ಕಾರದ ಮೇಲಿದೆ.












Click it and Unblock the Notifications