ಕಾಂಗ್ರೆಸ್ ನ ಅಪ್ಪುಗೆಯಿಂದ ಜೆಡಿಎಸ್ ಕಳೆದುಕೊಂಡಿದ್ದು ಏನೇನು?
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಬಿದ್ದ ಮೇಲಿಂದ ಹೊಸ ಚರ್ಚೆಯೊಂದು ಶುರುವಾಗಿದೆ. ಈ ಸಲ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಪೆಟ್ಟು ಬಿತ್ತಾ ಅಥವಾ ಕಾಂಗ್ರೆಸ್ ಪಕ್ಷವೇ ಜೆಡಿಎಸ್ ಅನ್ನು ನಿರ್ನಾಮ ಮಾಡಿದಂತೆ ಆಯಿತಾ? ಎಂಬುದು ಚರ್ಚೆ. ಮೇಲ್ನೋಟಕ್ಕೆ ಇದು ಎರಡು ಪಕ್ಷಗಳ ಕಾರ್ಯಕರ್ತರ ಮಟ್ಟದ ಚರ್ಚೆ ಅಂತ ಅನಿಸಿದರೂ ಜೆಡಿಎಸ್ ನ ಈಗಿನ ಸ್ಥಿತಿ ಬಹಳ ಕಷ್ಟ ಇದೆ.
ಏಕೆಂದರೆ, ಎಂಬತ್ತಾರು ವರ್ಷದ ದೇವೇಗೌಡರು ಇನ್ನೊಂದು ಸುತ್ತು ರಾಜ್ಯ ಸುತ್ತಿ ಪಕ್ಷ ಸಂಘಟನೆ ಮಾಡಬಹುದು ಎಂಬ ನಿರೀಕ್ಷೆ ಕಾರ್ಯಕರ್ತರಲ್ಲಿ ಇಲ್ಲ. ಇನ್ನು ಕುಮಾರಸ್ವಾಮಿ ಅವರಿಗೆ ದೇವೇಗೌಡರ ಮಟ್ಟದ ವರ್ಚಸ್ಸಿಲ್ಲ. ಮುಖ್ಯವಾಗಿ "ಸರ್ಕಾರ ಬೀಳುವ ತನಕ ಕುಮಾರಸ್ವಾಮಿ ಕುರ್ಚಿಯಲ್ಲಿ ಅಂಟಿಕೊಂಡು ಕೂತಿದ್ದರು. ರಾಜೀನಾಮೆ ಬಿಸಾಡಿ ಬರಬೇಕಿತ್ತು" ಎಂದು ಭಾವಿಸುವವರೇ ಹೆಚ್ಚಿದ್ದಾರೆ.
ಇನ್ನು ಜೆಡಿಎಸ್ ಗೆ ಗೆಲ್ಲುವ ಕುದುರೆಗಳು ಅಂತ ಏನು ಇದ್ದವೋ ಆ ಪೈಕಿ ಕೆಲವು ಜಾಗ ಖಾಲಿ ಮಾಡಿವೆ. ಮತ್ತೂ ಕೆಲವು ಟೆಂಟ್ ಖಾಲಿ ಮಾಡುವ ಸೂಚನೆ ನೀಡಿವೆ. ಜೆಡಿಎಸ್ ನಿಂದ ಈಗೇನಾದರೂ ಪ್ರಮುಖ ನಾಯಕರನ್ನೆಲ್ಲ ಗುಡ್ಡೆ ಹಾಕಿಕೊಂಡು ಒಂದು ಫೋಟೋ ಸೆಷನ್ ಮಾಡಲು ನಿಂತರೆ ದೇವೇಗೌಡರ ಫ್ಯಾಮಿಲಿ ಫೋಟೋ ಇದ್ದಂತೆ ಇರುತ್ತದೆ.

ಜೆಡಿಎಸ್ ನೊಳಗೇ ಬೆಂಕಿ ಹೊತ್ತಿಸಿಕೊಂಡರು ಕುಮಾರಸ್ವಾಮಿ
ಕುಮಾರಸ್ವಾಮಿ ಅವರಿಗೆ ತಮ್ಮ ಸ್ಥಾನ ಉಳಿಯಲ್ಲ ಎಂದು ಗೊತ್ತಿತ್ತು. ಆದರೆ ಕಾಂಗ್ರೆಸ್ ನಿಂದ ಒತ್ತಡ ಹಾಕಿ, ರಾಜೀನಾಮೆ ನೀಡಲು ಬಿಡಲಿಲ್ಲ. ಇನ್ನು ರೈತರ ಸಾಲ ಮನ್ನಾ ಯೋಜನೆ ಶ್ರೇಯ ಕುಮಾರಸ್ವಾಮಿ ಅವರಿಗೆ ದಕ್ಕಲೇ ಇಲ್ಲ. ಅಸಲಿಗೆ ಅದರಿಂದ ಹೋದಲ್ಲಿ- ಬಂದಲ್ಲಿ ನಾನಾ ಪ್ರಶ್ನೆ ಎದುರಿಸಬೇಕಾಯಿತು. ಇನ್ನು ಕಾಂಗ್ರೆಸ್ ಶಾಸಕರನ್ನು ಓಲೈಸಿಕೊಳ್ಳುವ ಯತ್ನದಲ್ಲಿ ಜೆಡಿಎಸ್ ನೊಳಗೇ ಬೆಂಕಿ ಹೊತ್ತಿಸಿಕೊಂಡರು ಕುಮಾರಸ್ವಾಮಿ. ಚಾಮುಂಡಿ ಕ್ಷೇತ್ರದ ಜಿ. ಟಿ. ದೇವೇಗೌಡ, ಗುಬ್ಬಿಯ ಎಸ್. ಆರ್. ಶ್ರೀನಿವಾಸ್ ಶಾಸಕರ ಪಟ್ಟಿಯಿಂದ ಹೊಸದಾಗಿ ಅಸಮಾಧಾನಿತರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಪಕ್ಷ ತೊರೆದಿಲ್ಲ ಎಂಬುದು ಬಿಟ್ಟರೆ, ಇವರು ಯಾವತ್ತಿದ್ದರೂ ಹೊರಗೆ ಹೋಗುವವರೇ ಎಂಬುದು ಬಹಿರಂಗ ರಹಸ್ಯ.

ಮುಖ್ಯಮಂತ್ರಿಯಾಗಿ ಇದ್ದುಕೊಂಡು ಏನೂ ಉಪಯೋಗ ಆಗಲಿಲ್ಲ
ಮಾಜಿ ಸಂಸದ- ಜೆಡಿಎಸ್ ಮುಖಂಡ ಶಿವರಾಮೇಗೌಡರ ಹೇಳಿಕೆ ಮತ್ತೂ ಮಜವಾಗಿದೆ. ಕುಮಾರಸ್ವಾಮಿ ಧರ್ಮರಾಯನಂಥವರು. ಅವರ ಮೈ ಚಿನ್ನದಂಥದ್ದು. ಆದರೆ ಕಿವಿ ಮಾತ್ರ ಹಿತ್ತಾಳೆ ಎಂದಿದ್ದಾರೆ. ಕುಮಾರಸ್ವಾಮಿ ಮೊದಲನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ ಏನೆಲ್ಲ ಗಳಿಸಿದ್ದರಲ್ಲಾ ಅವೆಲ್ಲವನ್ನೂ ಎರಡನೇ ಬಾರಿಗೆ ಒಟ್ಟೊಟ್ಟಿಗೆ ಕಳೆದುಕೊಂಡಿದ್ದಾರೆ. ಇನ್ನು ಲೋಕಸಭೆ ಚುನಾವಣೆ ವೇಳೆ ತುಮಕೂರಿನಲ್ಲಿ ದೇವೇಗೌಡರು ಸೋತಿದ್ದು, ಮಂಡ್ಯದಲ್ಲಿ ನಿಖಿಲ್ ಸೋತಿದ್ದು ಕೂಡ ಕಾಂಗ್ರೆಸ್ ಕಡೆಯಿಂದಲೇ ಕುಮಾರಸ್ವಾಮಿಗೆ ಬಿದ್ದ ಪೆಟ್ಟು. ಹಾಗಂತ ಇದಕ್ಕಿಂತ ದೊಡ್ಡ ಸಂಖ್ಯೆಯಲ್ಲಿ ಜೆಡಿಎಸ್ ಗೆದ್ದು ಬಿಡುತ್ತಿತ್ತು ಎಂದಲ್ಲ. ಆದರೆ ದೇವೇಗೌಡರು, ನಿಖಿಲ್ ಸೋಲಿನಿಂದಾಗಿ ಮುಖ್ಯಮಂತ್ರಿಯಾಗಿ ಇದ್ದುಕೊಂಡು ಏನೂ ಉಪಯೋಗ ಆಗಲಿಲ್ಲ ಎಂಬ ಸಂದೇಶ ಹೋಯಿತು.

ವಿಪರೀತ ಎನ್ನುವಷ್ಟು ಪವರ್ ಸೆಂಟರ್
ಹಾಗಂತ ಕಾಂಗ್ರೆಸ್ ಗೆ ಏನೂ ನಷ್ಟ ಆಗಲಿಲ್ಲವಾ? ಆಗಿದೆ. ಆದರೆ ಆ ನಷ್ಟವನ್ನು ಸರಿದೂಗಿಸಿಕೊಂಡು, ಮುಂದೆ ಹೋಗುವುದು ಕಷ್ಟ ಅಲ್ಲ. ಕಾಂಗ್ರೆಸ್ ನಲ್ಲಿ ವಿಪರೀತ ಎನ್ನುವಷ್ಟು ಪವರ್ ಸೆಂಟರ್. ಒಬ್ಬರು ಮತ್ತೊಬ್ಬರ ತಲೆ ಮೇಲೆ ಕಾಲಿಡಲು ಹವಣಿಸುವುದು ಹೆಚ್ಚು. ಜೆಡಿಎಸ್ ಜತೆಗಿನ 'ಪ್ರೇಮ ಪ್ರಕರಣ'ಗಳು ಒಂದಿಷ್ಟು ಇವೆ. ಅವುಗಳನ್ನು ಸರಿ ಮಾಡಿಕೊಂಡರೆ ಒಂದಿಷ್ಟು ಆಶಾವಾದ ಇದೆ. ಆದರೆ ಜೆಡಿಎಸ್ ನ ಕಥೆ ಏನು? ಅದು ಹೇಗೆ ಸುಧಾರಿಸಿಕೊಳ್ಳುತ್ತದೆ? ಈ ಪ್ರಶ್ನೆಗಳನ್ನು ಕೇಳಿಕೊಂಡರೆ ತಕ್ಷಣಕ್ಕೆ ಯಾವುದೇ ಉತ್ತರ ದೊರೆಯುವಂತೆ ಕಾಣುವುದಿಲ್ಲ.

ಕಾಂಗ್ರೆಸ್ ಮೇಲೆ ಪ್ರೀತಿ- ಸಿದ್ದರಾಮಯ್ಯ ಮೇಲೆ ಸಿಟ್ಟು
ಆದರೆ, ಕರ್ನಾಟಕಕ್ಕೆ ಪ್ರಾದೇಶಿಕ ಪಕ್ಷವೊಂದರ ಅಗತ್ಯ ಇದ್ದೇ ಇದೆ. ಯಾವಾಗೆಲ್ಲ ಜೆಡಿಎಸ್ ಕಡೆಗೆ ಅಂಥ ನಿರೀಕ್ಷೆ ಇಟ್ಟುಕೊಳ್ಳಲಾಗುತ್ತದೋ ಆಗೆಲ್ಲ ಪಕ್ಷವು ನಿತ್ರಾಣ ಆಗಿದೆ, ನೆಲ ಕಚ್ಚಿದೆ, ಭ್ರಮ ನಿರಸನ ಮಾಡಿದೆ. ರಾಷ್ಟ್ರೀಯ ಪಕ್ಷಗಳೆಂಬ ಆಲದ ಮರದ ನೆರಳಿನಲ್ಲಿ ಪ್ರಾದೇಶಿಕ ಪಕ್ಷಗಳು ಬೆಳವಣಿಗೆ ಕಾಣುವುದು ಕಷ್ಟ. ಇಂಥ ಸಂಗತಿಗಳು ದೇವೇಗೌಡರಂಥ ಪಳಗಿದ ರಾಜಕಾರಣಿಗಳಿಗೆ ಗೊತ್ತಿಲ್ಲದ್ದೇನಲ್ಲ. ಆದರೂ ಅವರಿಗೆ ಕಾಂಗ್ರೆಸ್ ಮೇಲೆ ಪ್ರೀತಿ- ಸಿದ್ದರಾಮಯ್ಯ ಅವರ ಮೇಲೆ ಸಿಟ್ಟು, ಅಪನಂಬಿಕೆ. ಇನ್ನಾದರೂ ಜೆಡಿಎಸ್ ನ ನಂಬಿಕೆ ಇರಿಸಿಕೊಳ್ಳಬಹುದಾದ ಪಕ್ಷವಾಗಿ ಬೆಳೆಸಲಿ, ಮೂವತ್ತರಿಂದ- ನಲವತ್ತು ಸ್ಥಾನ ಗೆದ್ದರೆ ಸಾಕು ಎಂಬ ತಂತ್ರದಿಂದ ಹೊರಬರಲಿ ಎಂಬುದು ವರ್ತಮಾನದ ನಿರೀಕ್ಷೆ.












Click it and Unblock the Notifications