Maha Kumbh Mela 2025: ಮಹಾಕುಂಭ ಮೇಳಕ್ಕೆ ಸದ್ದಿಲ್ಲದೆ ಏರಿತು ವಿಮಾನ ಟಿಕೆಟ್ ದರ, ಎಲ್ಲೆಲ್ಲಿಂದ ಎಷ್ಟಿದೆ?
ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳಲು ದೇಶ ವಿದೇಶಗಳಿಂದ ಜನರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಪ್ರಯಾಗ್ರಾಜ್ಗೆ ಸಂಪರ್ಕ ಕಲ್ಪಿಸುವ ವಿಮಾನಯಾನ ದರಗಳು ಕೂಡ ಗಗನಕ್ಕೇರಿವೆ ಎಂದು ಹೇಳಲಾಗುತ್ತಿದೆ. ವರದಿಯ ಪ್ರಕಾರ ಸಾಮಾನ್ಯ ದರಕ್ಕಿಂತ ಮಹಾಕುಂಭ ಮೇಳದ ಸಮಯದಲ್ಲಿ ಸರಿ ಸುಮಾರು ಶೇ 600ರಷ್ಟು ದರ ಏರಿವೆ ಎಂದು ಹೇಳಲಾಗಿದೆ.
ಜನವರಿ 29ರಂದು ಮೌನಿ ಅಮವಾಸ್ಯೆ ಪ್ರಯುಕ್ತ ಪ್ರಮುಖ ಸ್ನಾನದ ದಿನಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಪ್ರಯಾಗ್ರಾಜ್ನತ್ತ ಪ್ರಯಾಣ ಬೆಳೆಸಲಿದ್ದು, ಈ ಹಿನ್ನೆಲೆ ವಿಮಾನಯಾನ ಸಂಸ್ಥೆಗಳು ಲಾಭ ಮಾಡಿಕೊಳ್ಳಲು ಹೊರಟಿವೆ. ಇದನ್ನು ಪ್ರಯಾಣಿಕರು ಕೂಡ ಖಂಡಿಸಿದ್ದಾರೆ.

ಜನವರಿ 13ರಿಂದ ಪ್ರಾರಂಭವಾದ ಮಹಾಕುಂಭ ಮೇಳಕ್ಕೆ ಸುಮಾರು 12 ಕೋಟಿಗೂ ಹೆಚ್ಚು ಜನರು ಭೇಟಿ ನೀಡಿದ್ದಾರೆ. ಪ್ರತಿ ಇದು 144 ವರ್ಷಗಳಿಗೊಮ್ಮೆ ನಡೆಯುತ್ತಿರುವ ವಿಶೇಷ ಮಹಾಕುಂಭ ಮೇಳ ಆಗಿರುವುದರಿಂದ ಜನ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಇಲ್ಲಿನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಫೆಬ್ರವರಿ 26ರಂದು ಮಹಾಕುಂಭ ಮೇಳ ಸಂಪನ್ನಗೊಳ್ಳಲಿದೆ. ಈ ಹಿನ್ನೆಲೆ ಸರಿಸುಮಾರು ಒಂದು ತಿಂಗಳ ಕಾಲ ಇಲ್ಲಿಗೆ ವಿಮಾನಗಳ ಮೂಲಕವೂ ಲಕ್ಷಾಂತರ ಮಂದಿ ಪ್ರಯಾಣ ಬೆಳೆಸುತ್ತಿದ್ದು, ವಿಮಾನ ದರಗಳು ಗಗನಕ್ಕೇರಿವೆ. ಮೌನಿ ಅಮಾವಾಸ್ಯೆಯಂದು ಪವಿತ್ರ ಸ್ನಾನ ಮಾಡಲು ಜನ ಹೆಚ್ಚಾಗಿ ಬರಲಿದ್ದು, ಈಗಾಗಲೇ ದರಗಳು ಜೇಬು ಸುಡುತ್ತಿವೆ.
ಟ್ರಾವೆಲ್ ಪೋರ್ಟಲ್ ಸ್ಕೈಸ್ಕ್ಯಾನರ್ ಪ್ರಕಾರ, ದೆಹಲಿ-ಪ್ರಯಾಗ್ರಾಜ್ ವಿಮಾನಗಳ ಏರ್ ಟಿಕೆಟ್ ದರಗಳು ಭಾರಿ ಏರಿಕೆ ಕಂಡಿವೆ. ಪ್ರಯಾಗ್ರಾಜ್ಗೆ ವಿಮಾನ ಟಿಕೆಟ್ ದರವು 21,000 ರೂಪಾಯಿಗಿಂತ ಹೆಚ್ಚಿದೆ. ಮುಂಬೈಯಿಂದ ಪ್ರಯಾಗ್ರಾಜ್ ಟಿಕೆಟ್ಗಳ ಬೆಲೆ 22,000 ರೂಪಾಯಿಯಿಂದ 60,000 ರೂಪಾಯಿವರೆಗೆ ಇದೆ. ಇನ್ನು ಬೆಂಗಳೂರಿನಿಂದ 26,000 ರೂಪಾಯಿಯಿಂದ 48,000 ರೂಪಾಯಿ ಇದೆ ಎಂದು ವರದಿಯಾಗಿದೆ. ಸಾಮಾನ್ಯ ದಿನಗಳಲ್ಲಿ ಈ ಪ್ರದೇಶಗಳಿಂದ ವಿಮಾನ ಪ್ರಯಾಣ ದರವು 5,000 ರೂಪಾಯಿ ಆಸುಪಾಸಿನಲ್ಲೇ ಇರುತ್ತಿತ್ತು. ಈಗ ದಿಢೀರ್ ದರ ಏರಿಕೆಯಾಗಿದೆ.
ಈ ಹಿನ್ನೆಲೆ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ವಿಮಾನಯಾನ ಸಂಸ್ಥೆಗಳಿಗೆ ದರ ನಿಯಂತ್ರಣ ಮಾಡುವಂತೆ ಸೂಚಿಸಿದೆ. ಮಹಾಕುಂಭ ಮೇಳ ನಡೆಯುವವರೆಗೂ ದರಗಳನ್ನು ನಿಯಂತ್ರಣದಲ್ಲಿಡುವಂತೆ ಹೇಳಿದೆ. ಈ ಹಿಂದೆ ಡಿಜಿಸಿಎ ಜನವರಿಯಲ್ಲಿ 81 ಹೆಚ್ಚುವರಿ ವಿಮಾನಗಳಿಗೆ ಅನುಮತಿ ನೀಡಿತ್ತು. ಅಲ್ಲದೆ ಮಹಾಕುಂಭದ ಬೇಡಿಕೆಯನ್ನು ಪೂರೈಸಲು ಪ್ರಯಾಗ್ರಾಜ್ಗೆ ದೇಶದಾದ್ಯಂತ 132 ವಿಮಾನ ಸಂಪರ್ಕವನ್ನು ಹೆಚ್ಚಿಸಲಾಗಿದೆ.

ಮಹಾಕುಂಭದ ಸಮಯದಲ್ಲಿ ಪ್ರಯಾಗ್ರಾಜ್ಗೆ ವಿಮಾನ ದರಗಳು ತೀವ್ರವಾಗಿ ಏರಿಕೆಯಾದ ಹಿನ್ನೆಲೆ ಕೇಂದ್ರ ವಿಮಾನಯಾನ ಕಾರ್ಯದರ್ಶಿ ವುಮ್ಲುನ್ಮಾಂಗ್ ವುಲ್ನಮ್ ಅವರು ವಿಮಾನಯಾನ ಸಂಸ್ಥೆಗಳೊಂದಿಗೆ ತುರ್ತು ಸಭೆಗೆ ಕರೆದಿದ್ದಾರೆ. ಜನವರಿ 29ರ ಮೌನಿ ಅಮವಾಸ್ಯೆಯ ವಿಶೇಷ ಪವಿತ್ರ ಸ್ನಾನದ ದಿನಕ್ಕಿಂತ ಮುಂಚಿತವಾಗಿಯೇ ಪ್ರಯಾಗರಾಜ್ಗೆ ವಿಮಾನ ದರಗಳು ಗಗನಕ್ಕೇರಿವೆ ಹೇಳಲಾಗುತ್ತಿದೆ. ಡಿಜಿಸಿಎ ಸೂಚನೆ ಮೇರೆಗೆ ವಿಮಾನಯಾನ ಸಂಸ್ಥೆಗಳು ವಿಮಾನ ಪ್ರಯಾಣ ದರಗಳನ್ನು ಕಡಿಮೆ ಮಾಡುತ್ತದೆಯೇ ಎನ್ನುವ ನಿರೀಕ್ಷೆಯಲ್ಲಿದ್ದಾರೆ.












Click it and Unblock the Notifications