ನಿರಾಶಾ ಭಾರತೀಯ ಉದ್ಯಮಿಯಿಂದ ಪ್ರಧಾನಿ ಮೋದಿಗೆ ಬಂತು ಬಹಿರಂಗ ಪತ್ರ.!
ಕೋವಿಡ್-19 ವಿರುದ್ಧ ಹೋರಾಡಲು ಭಾರತೀಯರಿಗೆ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ಅನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಬರೋಬ್ಬರಿ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜಿನ ವಿವರಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡುತ್ತಾ ಬಂದಿದ್ದಾರೆ.
ಆರ್ಥಿಕ ಪ್ಯಾಕೇಜ್ ನ 2 ಕಂತಿನ ವಿವರಗಳನ್ನು ಕೇಳಿದ್ಮೇಲೆ, ಹೆಸರು ಉಲ್ಲೇಖಿಸದ ನಿರಾಶೆಗೊಂಡ ಭಾರತೀಯ ಉದ್ಯಮಿಯೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ಒಂದು ಬಹಿರಂಗ ಪತ್ರ ಬರೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಆ ಪತ್ರದಲ್ಲಿ ಏನಿದೆ.? ನೀವೇ ಓದಿರಿ...
ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ,
ಈ ಪತ್ರವನ್ನು ನಾನು ತೀವ್ರ ನಿರಾಶೆ ಹಾಗೂ ತೀವ್ರ ದುಃಖದಿಂದ ಬರೆಯುತ್ತಿದ್ದೇನೆ. ಭಾರತೀಯ ಅರ್ಥ ವ್ಯವಸ್ಥೆ ಮತ್ತು ಭಾರತೀಯರನ್ನು ತಮಾಷೆ ಮಾಡುವ ರೀತಿಯಲ್ಲಿ ನೀವು ನಿಮ್ಮ ಆರ್ಥಿಕ ನಿರ್ವಹಣೆ ಪ್ಯಾಕೇಜ್ ಗಳನ್ನು ಘೋಷಣೆ ಮಾಡಿದ್ದೀರಾ. ಇದು ನಿಜಕ್ಕೂ ನಮಗೆ ನಿರಾಶೆಯ ಜೊತೆಗೆ ಕೋಪವನ್ನು ಉಂಟು ಮಾಡಿದೆ. ಇದಕ್ಕೆ ಈ ಕೆಳಗಿನ ಐದು ಕಾರಣಗಳನ್ನು ನೀಡುತ್ತಿದ್ದೇನೆ:

ತೆರಿಗೆ ಮರುಪಾವತಿ 'ಉತ್ತೇಜನ' ಹೇಗೆ?
ತೆರಿಗೆ ಮರುಪಾವತಿ 'ಉತ್ತೇಜನ' ಹೇಗೆ ಆಗುತ್ತದೆ.? ಸರ್ಕಾರ ಪಾವತಿ ಮಾಡಿಲ್ಲದ ತೆರಿಗೆಹಣವನ್ನು ಈಗ ಜನರಿಗೆ ಮರುಪಾವತಿ ಮಾಡುತ್ತಿದೆ. ಆದರೆ, ಜನರಿಗೆ ಪಾವತಿ ಮಾಡಬೇಕಿದ್ದ ತೆರಿಗೆ ಹಣವನ್ನು ಈ ಮೊದಲೇ ಏಕೆ ಮರುಪಾವತಿ ಮಾಡಲಿಲ್ಲ? ಮತ್ತು ಒಂದು ವರ್ಷ ಕಾಯಿಸಿದ್ದು ಏಕೆ? ಹಾಗೇ, 5 ಲಕ್ಷಕ್ಕಿಂತ ಹೆಚ್ಚಿನ ತೆರಿಗೆ ಹಣ ಮರುಪಾವತಿ ಮಾಡಲಾಗುವುದೇ? ಎಂಬ ಪ್ರಶ್ನೆಗಳಿಗೆ ಹಣಕಾಸು ಸಚಿವಾಲಯ ಉತ್ತರಿಸಬೇಕು.

ಸಾಲವು ಆದಾಯವೇ.?
ಸಾಲವು 'ಪ್ರಚೋದಕ ಪ್ಯಾಕೇಜ್' ಹೇಗೆ? ಸಾಲವನ್ನು 'ಆದಾಯ' ಎಂದು ನಾವು ಪರಿಗಣಿಸಬಹುದೇ.? ಎಂ.ಎಸ್.ಎಂ.ಇ ಗಳು ಸಂಕಷ್ಟಕ್ಕೆ ಸಿಲುಕಿದಾಗ ಬೇರೆ ಆಯ್ಕೆ ಇಲ್ಲದೆ ಬ್ಯಾಂಕ್ ಗಳು ಹೆಚ್ಚುವರಿ ಸಾಲ ನೀಡುತ್ತದೆ. ಇದು ಸಾಮಾನ್ಯ ಬ್ಯಾಂಕಿಂಗ್ ಅಭ್ಯಾಸ ಅಲ್ಲವೇ.?

ಕ್ರಾಂತಿಕಾರಿ ಕ್ರಮವೇ.?
ಎಸ್.ಎಸ್.ಐಗಳು, ಮೈಕ್ರೋ ಎಂಟರ್ ಪ್ರೈಸಸ್ ಮತ್ತು ಎಂ.ಎಸ್.ಎಂ.ಇಗಳನ್ನು ಮರು ವರ್ಗೀಕರಿಸುವುದು ಅಂತಹ 'ಕ್ರಾಂತಿಕಾರಿ' ಕ್ರಮವಾಗಿದ್ದರೆ, ಅದನ್ನು ನಿರ್ಧರಿಸಲು ಕೋವಿಡ್-19 ಪ್ಯಾಂಡೆಮಿಕ್ ಪರಿಸ್ಥಿತಿ ಏಕೆ ಬೇಕು? ಎಂ.ಎಸ್.ಎಂ.ಇಗಳ ಸುಧಾರಣೆಗೆ ಸಾಂಕ್ರಾಮಿಕ ಪಿಡುಗಿನ ಸನ್ನಿವೇಶದ ಅಗತ್ಯವಿಲ್ಲ!

ಲಾಭ ಇದೆಯೇ.?
25% ಟಿಡಿಎಸ್ ಕಡಿತದ 'ಲಾಭ' ಏನು.? ಅದರಿಂದ ತೆರಿಗೆ ಹೊಣೆಗಾರಿಕೆ ಕಡಿಮೆಯಾಗುವುದಿಲ್ಲ. ತೆರಿಗೆ ದರಗಳು ಒಂದೇ ಆಗಿರುತ್ತವೆ. ವಾಸ್ತವವಾಗಿ, ಲಾಭದ ಮೇಲೆ ಇದು ಪರಿಣಾಮ ಬೀರುತ್ತದೆ. ಟಿಡಿಎಸ್ ಹೇಗಿದ್ದರೂ ಮರುಪಾವತಿ ಮಾಡಲೇಬೇಕು ಅಲ್ಲವೇ?

ನಮ್ಮ ಖರ್ಚು, ನಮ್ಮಿಷ್ಟ
ಕಡಿಮೆ ಉಳಿತಾಯದಿಂದ ಆರ್ಥಿಕ ಉತ್ತೇಜನ ಹೇಗೆ? ಅದು ನಮ್ಮ ಆದಾಯ. ಉಳಿತಾಯ ಮತ್ತು ಖರ್ಚು ನಮ್ಮ ಇಷ್ಟ. ಇಂತಹ ಸಂದರ್ಭದಲ್ಲಿ, ಇಪಿಎಫ್ ಖಾತೆಗಳಿಂದ ಸುಮಾರು 60,000 ಕೋಟಿಗಳನ್ನು ಹಿಂಪಡೆಯುವುದು ಸಹ ನಮ್ಮ ಉಳಿತಾಯವನ್ನು ಖರ್ಚು ಮಾಡಲು ಪ್ರೇರೇಪಿಸುವಂತಿದೆ.

ದೇವರಿಗೆ ಉತ್ತರಿಸಬೇಕಾದೀತು.!
ಸರ್, ಈ ಅವಮಾನ ಸಾಕು. ಸಾಲಗಳನ್ನು ತೆಗೆದುಕೊಳ್ಳುವುದು, ಸಾಲದ ಹೊರೆ ಹೆಚ್ಚಿಸುವುದು, ಕಡಿಮೆ ಉಳಿತಾಯ ಮಾಡುವುದು ಮತ್ತು ನಮ್ಮ ಸುರಕ್ಷತೆಗೆ ಭಂಗ ತರುವುದನ್ನು ನೀವು ಬಯಸುತ್ತಿದ್ದೀರಿ.
ನಮ್ಮ ನೋವಿಗೆ ಸ್ಪಂದಿಸಿ. ನಮ್ಮ ಕಣ್ಣೀರನ್ನು ಒರೆಸಿ. ಅದು ನಿಮಗೆ ಸಾಧ್ಯವಾಗದಿದ್ದರೆ, ಕನಿಷ್ಠ ನಮ್ಮನ್ನು ನೋಡಿ ನಗಬೇಡಿ. ರಾಜಕೀಯ ರಂಗಭೂಮಿಗಳಲ್ಲಿ ಧರ್ಮವನ್ನು ಬಳಸುವುದನ್ನು ಮೀರಿ ನೀವು ದೇವರನ್ನು ನಿಜವಾಗಿಯೂ ನಂಬಿದರೆ, ಒಂದಲ್ಲಾ ಒಂದು ದಿನ ನೀವು ಅವನಿಗೆ ಉತ್ತರಿಸಬೇಕಾದೀತು. ನೆನಪಿಡಿ!
ಇಂತಿ,
ನಿರಾಶೆಗೊಂಡ ಭಾರತೀಯ ಉದ್ಯಮಿ












Click it and Unblock the Notifications