Fact Check: ದೇವಸ್ಥಾನದ ಮುಂದೆ ಸುಧಾಮೂರ್ತಿ ತರಕಾರಿ ಮಾರಿದ್ದು ನಿಜವೇ?
ಬೆಂಗಳೂರು, ಸೆಪ್ಟೆಂಬರ್ 16: ಇನ್ಫೋಸಿಸ್ ಪ್ರತಿಷ್ಠಾನದ ಸಂಸ್ಥಾಪಕಿ ಸುಧಾಮೂರ್ತಿ ಅವರು ತರಕಾರಿ ಅಂಗಡಿಯಲ್ಲಿ ಕುಳಿತಿರುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ಫೋಸಿಸ್ನಂತಹ ದೊಡ್ಡ ಸಂಸ್ಥೆಯನ್ನು ಹುಟ್ಟುಹಾಕಿದವರಲ್ಲಿ ಒಬ್ಬರಾಗಿದ್ದರೂ, ಕೊಂಚವೂ ದೊಡ್ಡಸ್ಥಿಕೆ ಮತ್ತು ಅಹಂಕಾರಗಳಿಲ್ಲದೆ ಸುಧಾಮೂರ್ತಿ ಅವರು ತರಕಾರಿಗಳ ವ್ಯಾಪಾರ ಮಾಡುತ್ತಿದ್ದಾರೆ. ಅಹಂ ಭಾವವನ್ನು ತೊಡೆದುಹಾಕಲು ಪ್ರತಿ ವರ್ಷ ಒಂದು ದಿನ ದೇವಸ್ಥಾನದ ಮುಂಭಾಗದಲ್ಲಿ ಅವರು ತರಕಾರಿಗಳನ್ನು ಮಾರುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಬರೆದಿದ್ದಾರೆ.
'ನಿಮಗೆ ಗೊತ್ತೇ? 2,500 ಕೋಟಿ ರೂ ಆಸ್ತಿ ಮೌಲ್ಯ ಹೊಂದಿರುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ, ತಮ್ಮಲ್ಲಿ ಯಾವುದೇ ರೀತಿಯ ಅಹಂಕಾರವಿದ್ದರೂ ಅದು ತೊಲಗುವಂತೆ ಪ್ರತಿ ವರ್ಷ ಒಂದು ದಿನ ವೆಂಕಟೇಶ್ವರ ದೇವಸ್ಥಾನದ ಮುಂದೆ ಕುಳಿತು ತರಕಾರಿಗಳನ್ನು ಮಾರುತ್ತಾರೆ' ಎಂದು ವೈರಲ್ ಆಗಿರುವ ಹಲವು ಪೋಸ್ಟ್ಗಳಲ್ಲಿ ಬರೆಯಲಾಗಿದೆ.
ಇದು ತರಕಾರಿಗಳ ನಡುವೆ ಕುಳಿತ ಸುಧಾಮೂರ್ತಿ ಅವರ ಫೋಟೊ ಎನ್ನುವುದು ನಿಜ. ಆದರೆ ಈ ಫೋಟೊದೊಂದಿಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು. ಅವರು ತರಕಾರಿ ರಾಶಿಯ ಮಧ್ಯೆ ಕುಳಿತಿರುವುದು ಅವುಗಳನ್ನು ಮಾರಾಟ ಮಾಡುವುದಕ್ಕೆ ಅಲ್ಲ. ಮುಂದೆ ಓದಿ.

'ಭಕ್ತೆಯಾಗಿ ಕೆಲಸ ಮಾಡುತ್ತಿದ್ದೆ'
ತಾವು ದೇವಸ್ಥಾನದ ಎದುರು ತರಕಾರಿ ಮಾರಾಟ ಮಾಡುವ ಮೂಲಕ ಮಾದರಿಯಾಗಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ಸಂಗತಿ ಬಗ್ಗೆ ಖುದ್ದು ಸುಧಾಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ. ಒಬ್ಬ ಭಕ್ತೆಯಾಗಿ ನಾನು ಅಲ್ಲಿ ಕುಳಿತಿದ್ದೆ ಎಂದು ಅವರು ತಿಳಿಸಿದ್ದಾರೆ.

ರಾಯರ ಸಮಾರಾಧನೆ
'ಈ ಸಂಪ್ರದಾಯ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಜಯನಗರದ 5ನೇ ಬ್ಲಾಕ್ನ ನನ್ನ ಮನೆ ಸಮೀಪದ ರಾಘವೇಂದ್ರ ಮಠದಲ್ಲಿ ನಡೆಯುವ ಮೂರು ದಿನಗಳ ವಾರ್ಷಿಕ ರಾಘವೇಂದ್ರ ರಾಯರ ಸಮಾರಾಧನೆ ಆಚರಣೆಗೆ ಊಟ ತಯಾರಿಸಲು ಒಳ್ಳೆಯ ತರಕಾರಿಗಳನ್ನು ಆಯ್ದುಕೊಳ್ಳುವ ಸಲುವಾಗಿ ನಾನು ತರಕಾರಿ ರಾಶಿ ಮಧ್ಯೆ ಕುಳಿತಿದ್ದೆ' ಎಂದು ಅವರು ಐಎಎನ್ಎಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ದೇವರಿಗೆ ಸಲ್ಲಿಸುವ ಸೇವೆ
ಇದು ದೇವರ ಸೇವೆ, ಪ್ರಚಾರವಲ್ಲ ಎಂದು ಅವರು ಹೇಳಿದ್ದಾರೆ. 'ಈ ಕೆಲಸ ನನಗೆ ಬಹಳ ತೃಪ್ತಿ ನೀಡುತ್ತದೆ. ಹೀಗಾಗಿ ನಾನೇ ಖುದ್ದಾಗಿ ತರಕಾರಿಗಳನ್ನು ಆಯ್ದುಕೊಳ್ಳುತ್ತೇನೆ. ವೈಯಕ್ತಿಕ ಮಟ್ಟದಲ್ಲಿ ಇದು ನನ್ನ ಹೃದಯಕ್ಕೆ ಹತ್ತಿರವಾದ ಕಾರ್ಯ. ದೇವರಿಗೆ ಸೇವೆ ಸಲ್ಲಿಸಿದ ನಿಜವಾದ ಭಾವ ನನಗಾಗುತ್ತದೆ. ದೇವರ ಮುಂದೆ ಪ್ರತಿಯೊಬ್ಬರೂ ಸಮಾನರು. ಆತನ ಮುಂದೆ ನೀವು ಮಂಡಿಯೂರುತ್ತೀರಿ. ನಾನು ಅಲ್ಲಿ ಸೇವೆ ಮಾಡುವಾಗ ನನಗೂ ಇದೇ ಭಾವ ಮೂಡುತ್ತದೆ. ಹೀಗಾಗಿಯೇ ನಾನು ಅಲ್ಲಿ ಯಾರಿಗೂ ನನ್ನ ಫೋಟೊ ತೆಗೆಯುವುದನ್ನು ಉತ್ತೇಜಿಸುವುದಿಲ್ಲ ಮತ್ತು ಮಾತನಾಡುವುದೂ ಇಲ್ಲ. ಅಲ್ಲಿ ನನ್ನ ಕೆಲಸಗಳಲ್ಲಿಯೇ ಮಗ್ನಳಾಗಿರುತ್ತೇನೆ' ಎಂದು ಹೇಳಿದ್ದಾರೆ.

ಅಜ್ಜಿಯಿಂದ ಬಂದ ಬಳುವಳಿ
'ನನ್ನ ಅಜ್ಜಿ ಈ ರೀತಿ ಸೇವೆ ಮಾಡುತ್ತಿದ್ದರು. ನಾನು ಆಕೆಯ ಜತೆಗೆ ಬರುತ್ತಿದ್ದೆ. ಹೀಗೆಯೇ ಈ ಸಂಪ್ರದಾಯದಲ್ಲಿ ಭಾಗಿಯಾದೆ. ಇದನ್ನು ಈ ದಿನದವರೆಗೂ ಕಟ್ಟುನಿಟ್ಟಾಗಿ ಪಾಲಿಸಿದ್ದೇನೆ. ನಾನು ಅಲ್ಲಿ ತರಕಾರಿಗಳನ್ನು ಮಾರಾಟ ಮಾಡಲು ಕುಳಿತಿರಲಿಲ್ಲ. ಅಂತಹ ಕಥೆಗಳನ್ನು ಕೇಳಿದಾಗ ನೋವಾಗುತ್ತದೆ. ನಾನು ಭಕ್ತೆಯಾಗಿ ಕುಳಿತಿದ್ದೆನೇ ಹೊರತು ವ್ಯಾಪಾರಿಯಾಗಿ ಅಲ್ಲ' ಎಂದಿದ್ದಾರೆ.

ಅಡುಗೆ ಮಾಡಲು ಸಹಾಯ
'ಬೆಳಿಗ್ಗೆ 6.30ಕ್ಕೆ ಅಲ್ಲಿಗೆ ಹೋಗಿ 10 ಗಂಟೆಯವರೆಗೂ ಇರುತ್ತೇನೆ. ಕಚೇರಿ ಕೆಲಸ ಮುಗಿಸಿ ಸಂಜೆ ಮತ್ತೆ 5.30ಕ್ಕೆ ಮಠಕ್ಕೆ ಹೋಗಿ ರಾತ್ರಿ 10.30ರ ಸುಮಾರಿಗೆ ಮನೆಗೆ ಮರಳುತ್ತೇನೆ. ರಾಯರ ಆರಾಧನೆ ಸಂದರ್ಭದಲ್ಲಿ ಮಠದಲ್ಲಿ ಅಡುಗೆ ಮಾಡಲು ಸಹಾಯ ಮಾಡುತ್ತೇನೆ' ಎಂದು ತಿಳಿಸಿದ್ದಾರೆ.

Fact Check
ಕ್ಲೇಮು
ವರ್ಷದಲ್ಲಿ ಒಂದು ದಿನ ಸುಧಾ ಮೂರ್ತಿ ತಮ್ಮ ಅಹಂ ಕಳೆಯಲು ತರಕಾರಿ ಮಾರಾಟ ಮಾಡುತ್ತಾರೆ.
ಪರಿಸಮಾಪ್ತಿ
ಸುಧಾಮೂರ್ತಿ ಅವರ ವೈರಲ್ ಚಿತ್ರ, ಅವರು ತರಕಾರಿಗಳನ್ನು ಆಯ್ದುಕೊಳ್ಳಲು ಕುಳಿತಿರುವುದು, ಮಾರಾಟ ಮಾಡುತ್ತಿರುವುದಲ್ಲ.












Click it and Unblock the Notifications