Darshan Thoogudeepa: ಬಯಲಾಯ್ತು ದರ್ಶನ್ ವಿಗ್ ರಹಸ್ಯ! ಜೈಲಿನಲ್ಲಿ ತಲೆ ಬೋಳಿಸಿಕೊಂಡಿರುವ ನಟ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಹೊಸ ಅವತಾರ ಬಯಲಾಗಿದೆ. ಜೈಲಿನಲ್ಲಿ ದರ್ಶನ್ ವಿಗ್ ಸಂಬಾಳಿಸುವುದು ಕಷ್ಟವಾಗಿದ್ದರಿಂದ ಅವರ ತಲೆ ಬೋಳಿಸಲಾಗಿದೆ ಎಂದು ವರದಿಯಾಗಿತ್ತು. ಜೈಲಿನಿಂದಲೇ ದರ್ಶನ್ ಮತ್ತು ಗ್ಯಾಂಗ್ ಆನ್ಲೈನ್ ಮೂಲಕ ವಿಚಾರಣೆಗೆ ಹಾಜರಾಗಿದ್ದರಿಂದ ಅವರು ಹೇಗಿದ್ದಾರೆ ಎನ್ನುವುದು ಹೊರ ಜಗತ್ತಿಗೆ ಗೊತ್ತಿರಲಿಲ್ಲ, ಇದೀಗ ವೈರಲ್ ಆಗಿರುವ ಫೋಟೊ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಎನ್ನುವವನ ಜೊತೆ ನಟ ದರ್ಶನ್ ಜೈಲಿನಲ್ಲೇ ಕಾಫಿ ಕುಡಿಯುತ್ತಾ, ಸಿಗರೇಟ್ ಸೇದುತ್ತಿರುವ ಫೋಟೊ ಇದೀಗ ವೈರಲ್ ಆಗಿದ್ದು, ಭಾರಿ ಸಂಚಲನ ಮೂಡಿಸಿದೆ. ದುಡ್ಡು, ಪ್ರಭಾವ ಇದ್ದವರಿಗೆ ಪರಪ್ಪನ ಅಗ್ರಹಾರದಲ್ಲಿ ಏನು ಬೇಕಾದರೂ ಸಿಗುತ್ತದೆಯಾ ಎನ್ನುವ ಅನುಮಾನ ಶುರುವಾಗಿದೆ.

ನಟ ದರ್ಶನ್ ಪರಪ್ಪನ ಅಗ್ರಹಾರ ಸೇರಿ 2 ತಿಂಗಳಾಗಿದೆ. ಪೊಲೀಸರು ಒಂದು ಕಡೆ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಪ್ರಬಲ ಸಾಕ್ಷಿಗಳನ್ನು ಸಂಗ್ರಹಿಸುತ್ತಾ ಕಠಿಣ ಶಿಕ್ಷೆ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಚಾರ್ಜ್ಶೀಟ್ ಸಲ್ಲಿಕೆ ಮಾಡಿದ ಬಳಿಕ ಜಾಮೀನು ಅರ್ಜಿ ಸಲ್ಲಿಸಲು ದರ್ಶನ್ ಪರ ವಕೀಲರು ಕಾಯುತ್ತಿದ್ದಾರೆ. ಈ ಬೆನ್ನಲ್ಲೇ ದರ್ಶನ್ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರಾ ಎನ್ನುವ ಅನುಮಾನ ಶುರುವಾಗಿದೆ.
ತಲೆ ಬೋಳಿಸಿರುವುದು ನಿಜ!
ದರ್ಶನ್ ವಿಗ್ ಧರಿಸುತ್ತಿದ್ದರು ಎನ್ನುವ ವಿಚಾರ ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ. ಅವರು ಪರಪ್ಪನ ಅಗ್ರಹಾರ ಸೇರಿದ ಬಳಿಕ ಜೈಲು ಅಧಿಕಾರಿಗಳು ವಿಗ್ ಕಿರಿಕಿರಿ ತಪ್ಪಿಸಲು ದರ್ಶನ್ರ ತಲೆ ಬೋಳಿಸಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಅದು ನಿಜವೆಂದು ವೈರಲ್ ಆಗಿರುವ ಫೋಟೊದಿಂದ ಸಾಬೀತಾಗಿದೆ. ನಟ ದರ್ಶನ್ ತಲೆ ಬೋಳಾಗಿರುವುದನ್ನು ಫೋಟೊದಲ್ಲಿ ನೋಡಬಹುದಾಗಿದೆ.
ದಾಳಿ ಮಾಡಿದ್ದ ಸಿಸಿಬಿ ಅಧಿಕಾರಿಗಳು
ಎರಡು ದಿನಗಳ ಹಿಂದಷ್ಟೇ ಸಿಸಿಬಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನ ಮೇಲೆ ರೈಡ್ ಮಾಡಿದ್ದರು. ನಟ ದರ್ಶನ್ ಸೇರಿ ವಿವಿಧ ಖೈದಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದ್ದು, ಅಕ್ರಮಗಳು ನಡೆಯುವ ಅನುಮಾನದ ಮೇಲೆ ದಾಳಿ ಮಾಡಲಾಗಿತ್ತು. ಇದೀಗ ಫೋಟೊ ಸಿಸಿಬಿ ಅಧಿಕಾರಿಗಳ ದಾಳಿಯ ಹಿಂದಿನ ಉದ್ದೇಶ ಸ್ಪಷ್ಟಪಡಿಸಿದೆ.
ದರ್ಶನ್, ವಿಲ್ಸನ್ ಗಾರ್ಡನ್ ನಾಗನ ಜೊತೆ ಬ್ಯಾರಕ್ನಿಂದ ಆಚೆ ಕುಳಿತು ಸಿಗರೇಟ್ ಸೇದುತ್ತಿದ್ದು, ಆತನ ಮ್ಯಾನೇಜರ್ ಜೊತೆ ಕುಳ್ಳ ಸೀನ ಎನ್ನುವ ವ್ಯಕ್ತಿ ಕೂಡ ಜೊತೆಗಿದ್ದಾನೆ. ಸದ್ಯ ಈ ಫೋಟೊ ದರ್ಶನ್ ಜಾಮೀನು ಅರ್ಜಿಗೆ ಭಾರಿ ಹಿನ್ನಡೆಯಾಗುವ ಸಾಧ್ಯತೆ ಕೂಡ ಇದೆ. ದರ್ಶನ್ ಪ್ರಭಾವ ಬಳಸಿ ಸಾಕ್ಷಿಗಳ ನಾಶಕ್ಕೆ ಪ್ರಯತ್ನಿಸುವ ವಾದವನ್ನು ಕೂಡ ಪೊಲೀಸರು ಮಾಡಬಹುದಾಗಿದೆ.












Click it and Unblock the Notifications