BBK-12: ಬಿಗ್ಬಾಸ್ ಮನೆಯಲ್ಲಿ ಮೊದಲ ವಾರ ಜಂಟಿ ಎಲಿಮಿನೇಷನ್, ಇಬ್ಬರ ಜರ್ನಿ ಎಂಡ್
ಬಿಗ್ಬಾಸ್ ಮನೆಯ ಮೊದಲ ವಾರದ ಎಲಿಮಿನೇಷನ್ ಮುಗಿದಿದೆ. ಪ್ರತಿ ಬಾರಿ ಒಬ್ಬರು ಮಾತ್ರ ಎಲಿಮಿನೇಟ್ ಆಗುತ್ತಿದ್ದರು. ಈ ಬಾರಿ ಒಂಟಿ-ಜಂಟಿ ಆಟ ಇದ್ದಿದ್ದರಿಂದ ಎಲಿಮಿನೇಷನ್ ಕೂಡ ಜಂಟಿಯಾಗಿ ನಡೆದಿದೆ. ಬಿಗ್ಬಾಸ್ ಮನೆಗೆ ಜಂಟಿಯಾಗಿಯೇ ಎಂಟ್ರಿ ಕೊಟ್ಟಿದ್ದ ಆರ್ಜೆ ಅಮಿತ್ ಹಾಗೂ ಬಾಡಿಬಿಲ್ಡರ್ ಕರಿಬಸಪ್ಪ ಮೊದಲ ವಾರದಲ್ಲೇ ತಮ್ಮ ಕಳಪೆ ಪ್ರದರ್ಶನದಿಂದ ಎಲಿಮಿನೇಷನ್ ಆಗಿದ್ದಾರೆ. ಕರಿಬಸಪ್ಪ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಾಗ ಸಿಕ್ಕಾಪಟ್ಟೆ ಜೋಶ್ನಲ್ಲಿದ್ದರು. ಎಲಿಮಿನೇಷನ್ ಅಂದ ಕೂಡಲೇ ತುಸು ಮಂಕಾದರೂ, ಉತ್ಸಾಹದಿಂದ ಹೊರನಡೆದಿದ್ದಾರೆ. ಈ ಸೀಸನ್ನ ಮೊದಲ ವಾರ ಅಮಿತ್-ಕರಿಬಸಪ್ಪ ಬಿಗ್ಬಾಸ್ ಜರ್ನಿ ಮುಗಿಸಿದ್ದಾರೆ.
ಸೂಪರ್ ಸಂಡೇ ವಿತ್ ಬಾದ್ಶಾ ಸುದೀಪ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಬಿಗ್ಬಾಸ್ ಸ್ಪರ್ಧಿಗಳನ್ನು ಎಂದಿನಂತೆ ವಿಚಾರಿಸಿಕೊಂಡರು. ಈ ವಾರದ ಕಳಪೆ ಆಟ ಆಡಿದವರ ಪೈಕಿ ಆರ್ಜೆ ಅಮಿತ್ ಹಾಗೂ ಕರಿಬಸಪ್ಪ ಅವರನ್ನು ಎಲಿಮಿನೇಟ್ ಮಾಡಲಾಗಿದೆ. ಪ್ರೇಕ್ಷಕರಿಂದಲೂ ನಿರೀಕ್ಷಿತ ಬೆಂಬಲ ಸಿಗದ ಕಾರಣ ಜಂಟಿಯಾಗಿಯೇ ಮನೆಯಿಂದ ಹೊರಬಂದಿದ್ದಾರೆ.

ಬಾಡಿ ಬಿಲ್ಡಿಂಗ್ನಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವ ಕರಿಬಸಪ್ಪ ಅವರು ಮೊದಲ ದಿನವೇ ಬಿಗ್ಬಾಸ್ ಮನೆಗೆ ಅಬ್ಬರದಿಂದ ಕಾಲಿಟ್ಟಿದ್ದರು. ದಾವಣಗೆರೆಯ ಹುಲಿ ಬಂತು ಎಂದು ಡೈಲಾಗ್ ಕೂಡ ಹೊಡೆದಿದ್ರು. ಬಿಗ್ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಡೈಲಾಗ್ ಹೊಡೆದರೂ, ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ವಿಫಲರಾಗಿದ್ದಾರೆ. ಜಂಟಿಗಳಾದ ಕಾರಣ ಇಲ್ಲಿ ಯಾರೇ ಒಬ್ಬರು ಕಳಪೆ ಪ್ರದರ್ಶನ ತೋರಿದರೂ ಎಲಿಮಿನೇಷನ್ ಇಬ್ಬರಿಗೂ ಅನ್ವಯವಾಗುತ್ತದೆ. ಅದರಂತೆ ಅಮಿತ್-ಕರಿಬಸಪ್ಪ ಜಂಟಿ ಎಲಿಮಿನೇಟ್ ಆಗಿದ್ದಾರೆ.
ಈ ಸೀಸನ್ನ ಕೊನೆಯ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ರೇಡಿಯೋ ಜಾಕಿ ಅಮಿತ್, ಬಿಗ್ಬಾಸ್ ಅನ್ನು ಕ್ರಿಂಜ್ ಶೋ ಅಂತ ಹೇಳಿದ್ದರು. ಕ್ರಿಂಜ್ ಅಂದ್ರೆ ಸ್ವಲ್ಪ ಲೋ ಐಕ್ಯೂ ಇರುವ ಶೋ ಅಂದಿದ್ದ ಅಮಿತ್ ಅವರೇ ಬಿಗ್ಬಾಸ್ಗೆ ಬಂದಿದ್ದಾರೆ ಎಂದು ಸುದೀಪ್ ಕೌಂಟರ್ ಕೊಟ್ಟಿದ್ದರು. ಕ್ರಿಂಜ್ ಶೋ ನಂಬರ್ ಒನ್ ಶೋ ಆಗಿ 12ನೇ ಸೀಸನ್ಗೆ ಕಾಲಿಟ್ಟಿದೆ. ನಿಮ್ಮಂತಹ ಒಳ್ಳೆ ಐಕ್ಯೂ ಇರೋರು ಬಂದಿದ್ದರಿಂದ ನಮ್ಮಂತವರು ಕಲಿತು ಮುಂದೆ ಹೋಗುತ್ತಿದ್ದೇವೆ ಎಂದು ಕಿಚ್ಚ ಟಾಂಗ್ ಕೊಟ್ಟಿದ್ದರು. ಅಂತೂ ಮೊದಲನೇ ವಾರಕ್ಕೆ ಅಮಿತ್ ಬಿಗ್ಬಾಸ್ ಮನೆಯಿಂದ ಹೊರಬಂದಿದ್ದಾರೆ.
ಬಾಡಿ ಬಿಲ್ಡಿಂಗ್ನಲ್ಲಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಕರಿಬಸಪ್ಪ, ಕನ್ನಡ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಫುಲ್ ಆಕ್ಟೀವ್ ಆಗಿದ್ದ ಅವರು ಮೋಟಿವೇಷನ್ ಮಾತುಗಳನ್ನಾಡುತ್ತಾ ವೈರಲ್ ಆಗಿದ್ದರು. ಬಿಗ್ಬಾಸ್ ಮನೆಯಲ್ಲೂ ಅವಕಾಶ ಸಿಕ್ಕಾಗ ಮೋಟಿವೇಷನ್ ನೀಡುತ್ತಿದ್ದರು. ಆದರೆ ಇದು ಕರಿಬಸಪ್ಪ ಅವರಿಗೆ ವರ್ಕೌಟ್ ಆಗಲಿಲ್ಲ.
ಬೇರೆ ಸ್ಪರ್ಧಿಗಳಿಗೆ ಹೋಲಿಸಿದರೆ ಕರಿಬಸಪ್ಪ-ಅಮಿತ್ ಕಳಪೆ ಪ್ರದರ್ಶನ, ಮನೆಯಲ್ಲಿ ಸೈಲೆಂಟ್ ಆಗಿದ್ದಿದ್ದು ಮುಳುವಾಗಿದೆ. ಮೊದಲ ದಿನವೇ ಎಲಿಮಿನೇಟ್ ಆಗಿದ್ದ ರಕ್ಷಿತಾ ಶೆಟ್ಟಿ ಮತ್ತೆ ಬಿಗ್ಬಾಸ್ ಮನೆಗೆ ವಾಪಸ್ ಆಗಿದ್ದಾರೆ. ಆದರೆ ರಕ್ಷಿತಾ ರೀತಿ ಕರಿಬಸಪ್ಪ ಹಾಗೂ ಅಮಿತ್ ಮತ್ತೆ ವಾಪಸ್ ಬರಲ್ಲ ಎಂದು ಸುದೀಪ್ ನೇರವಾಗಿ ಹೇಳಿದ್ದಾರೆ.












Click it and Unblock the Notifications