'ಸುದೀಪ್ ಸರ್ ಪಟ್ಟ ಕಷ್ಟ ಪ್ರಪಂಚಕ್ಕೆ ಗೊತ್ತಾಗಿ ಹೋಗಿತ್ತು'
ಬೆಂಗಳೂರು, ಮಾರ್ಚ್ 14: ನಟಿ ರನ್ಯಾ ರಾವ್ ಅಕ್ರಮ ಚಿನ್ನ ಸಾಗಾಟ ಪ್ರಕರಣದ ತನಿಖೆ ಚುರುಕುಗೊಂಡಿದ್ದ ಬೆನ್ನಲ್ಲೇ ಸಿಐಡಿ ತನಿಖೆಗೆ ವಹಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಕೇವಲ ಎರಡೇ ದಿನದಲ್ಲಿ ವಾಪಸ್ ಪಡೆದುಕೊಂಡಿದೆ. ಇದರಿಂದ ಪ್ರಕರಣದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಾಗಿದ್ದು, ಪ್ರಭಾವಿ ವ್ಯಕ್ತಿಗಳೇ ಈ ಪ್ರಕರಣದ ಹಿಂದೆ ಇರಬಹುದು ಎನ್ನುವ ಅನುಮಾನ ದಟ್ಟವಾಗುತ್ತಿದೆ.
ಸದ್ಯ ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಜೈಲು ಸೇರಿರುವ ರನ್ಯಾ ರಾವ್ ಕನ್ನಡ ಚಿತ್ರರಂಗದ ಜನಪ್ರಿಯ ನಟಿ. ನಟ ಕಿಚ್ಚ ಸುದೀಪ್ ನಟಿಸಿ ನಿರ್ದೇಶಿಸಿದ್ದ ಮಾಣಿಕ್ಯ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರನ್ಯಾ ರಾವ್, ಬಳಿಕ ಗೋಲ್ಡ್ನ್ ಸ್ಟಾರ್ ಗಣೇಶ್ ಅಭಿನಯದ ಪಟಾಕಿ ಸಿನಿಮಾದಲ್ಲಿಯೂ ನಾಯಕಿಯಾಗಿ ಕಾಣಿಸಿಕೊಂಡರು. ನಂತರ ತೆರೆಮರೆಗೆ ಸರಿದಿದ್ದ ರನ್ಯಾ ರಾವ್ ಮತ್ತೆ ಸುದ್ದಿಯಾಗಿದ್ದೇ ಈ ಅಕ್ರಮ ಚಿನ್ನ ಸಾಗಾಟ ಪ್ರಕರಣದಿಂದ.

ರನ್ಯಾ ರಾವ್ ಅವರನ್ನು ನಟ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ರನ್ಯಾ ರಾವ್ ಮಾಣಿಕ್ಯ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡರು. ಆದರೆ ಈ ನಟಿಯನ್ನು ಸಿನಿಮಾಗೆ ತೆಗೆದುಕೊಂಡ ಬಳಿಕ ಕಿಚ್ಚ ಸುದೀಪ್ ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದಾರಂತೆ. ಈ ಬಗ್ಗೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ರವಿ ಶ್ರೀವತ್ಸ ಮಾತನಾಡಿದ್ದಾರೆ.
ಟಿವಿ 9 ಕನ್ನಡಕ್ಕೆ ನೀಡಿದ ಹೇಳಿಯಲ್ಲಿ 'ರನ್ಯಾ ರಾವ್ ಜೊತೆ ಸಿನಿಮಾ ಮಾಡುವುದು ಕಷ್ಟ ಅಂತಾ ಮೊದಲೇ ಹೇಳಿದ್ದೆ. ಅವರು ಕೂಡ ನಟಿಯ ಬಳಿ ಮಾತನಾಡುವುದಾಗಿ ಹೇಳಿದ್ದರು. ನನ್ನ ಬಳಿ ಅವರು ರನ್ಯಾ ಎಂದೇ ಪರಿಚಯ ಮಾಡಿಕೊಂಡಿದ್ದರು. ಅವರ ಹಿಂದಿನ ಹೆಸರು ನನಗೆ ಗೊತ್ತಿಲ್ಲ. ಇದೊಂತರಾ ರಮ್ಯಾ ಎನ್ನುವ ತರ ಇದೆ ಅಂತಾ ಅಂದುಕೊಂಡೆ. ಒಂದೊಳ್ಳೆ ಆಕರ್ಷಕ ಹೆಸರು ಬೇಕಲ್ಲ' ಎಂದು ರವಿ ಶ್ರೀವತ್ಸ ನಟಿ ರನ್ಯಾ ರಾವ್ ಪರಿಚಯದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಎರಡು ಸಿನಿಮಾಗಳ ಬಳಿಕ ರನ್ಯಾ ರಾವ್ ಮತ್ತೆ ಯಾಕೆ ಕನ್ನಡ ಸಿನಿಮಾಗಳನ್ನು ಮಾಡಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, 'ಆಕೆಯ ಆಯ್ಕೆ ಏನಿತ್ತು ಎನ್ನುವುದು ಯಾರಿಗೂ ಗೊತ್ತಿಲ್ಲ. ಕೆಲವೊಬ್ಬರಿಗೆ ಸಿನಿಮಾ ಎನ್ನುವುದು ಹವ್ಯಾಸದಂತೆ ಇರುತ್ತದೆ. ಬಂದು ಒಂದೆರಡು ಸಿನಿಮಾಗಳನ್ನು ಮಾಡಿ ಹೋಗುತ್ತಾರೆ. ನಮ್ಮಲ್ಲಿ ಅವಕಾಶ ಸಿಗುತ್ತದೆ ಅಷ್ಟೇ. ತುಂಬಾ ಹೇಳಿಕೊಟ್ಟು ಮುದ್ದು ಮಾಡಿ ಇಟ್ಟುಕೊಳ್ಳಲು ನಾವು ಇಷ್ಟಪಡುವುದಿಲ್ಲ. ಯಾಕೆಂದರೆ ತುಂಬಾ ಜನ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆ ನಿಟ್ಟಿನಲ್ಲಿ ಸುದೀಪ್ ಸರ್ ಪಟ್ಟ ಪಾಡು ಪ್ರಪಂಚಕ್ಕೆ ಗೊತ್ತಾಗಿ ಹೋಗಿತ್ತು. ನಾಲ್ಕೈದು ಸಾರಿ ತಿದ್ದುವುದು, ಹಾಗೇ ಬರಬೇಕು, ಹೀಗೇ ಬರಬೇಕು ಎನ್ನುವ ತಾಳ್ಮೆ ಎಲ್ಲರಿಗೂ ಇರುವುದಿಲ್ಲ' ಎಂದರು
ಇನ್ನು 'ಈಗಿನ ದಿನಗಳಲ್ಲಿ ಸಿನಿಮಾ ಮಾಡುವ ಶೈಲಿ ತುಂಬಾ ಬದಲಾಗಿ ಹೋಗಿದೆ. ಮಾಣಿಕ್ಯದಂತಹ ದೊಡ್ಡ ಸಿನಿಮಾಗಳು ನೂರಕ್ಕೂ ಹೆಚ್ಚು ದಿನ ಶೂಟಿಂಗ್ ನಡೆಯುತ್ತದೆ. ಅಲ್ಲಿ ಹೇಳಿಕೊಡಬಹುದು. ಆದರೆ ಬೇಗ ಶೂಟಿಂಗ್ ಮಾಡುವ ಸಿನಿಮಾಗಳಲ್ಲಿ ಇಂತಹ ಹೆಣ್ಣು ಮಗಳನ್ನು ಇಟ್ಟುಕೊಂಡು ಪಾಡುಪಡುವುದು ತುಂಬಾ ಕಷ್ಟ' ಎಂದು ರವಿ ಶ್ರೀವತ್ಸ ಹೇಳಿದರು.












Click it and Unblock the Notifications