Kiccha Sudeep: ಛತ್ರಿ ಕೆಲಸ ಮಾಡಿದ್ರಾ ಬಿಗ್ ಬಾಸ್ ತಂಡ?: ಸುದೀಪ್ ಹೇಳಿದ್ದೇನು?
ಬಿಗ್ ಬಾಸ್ ಕನ್ನಡ 11 ಅಂತಿಮ ವಾರಗಳತ್ತ ಸಾಗುತ್ತಿದ್ದು, ಶೋ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಈ ಸೀಜನ್ನ ವಿಜೇತ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ತ್ರಿವಿಕ್ರಮ್ ಈ ವಾರ ಎಲಿಮಿನೇಟ್ ಆಗಿದ್ದಾರೆ ಎಂದು ಕಳೆದ ಸಂಚಿಕೆಯಲ್ಲಿ ತೋರಿಸಲಾಗಿದೆ. ಆದರೆ ಇದೊಂದು ಪ್ರಾಂಕ್ ಎನ್ನುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದ್ದು, ಈ ಬಗ್ಗೆ ಈವರೆಗೂ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.
ಈ ನಡುವೆ ಕಳೆದ ವಾರ ವೈಯಕ್ತಿಕ ಅನಿವಾರ್ಯ ಕಾರಣದಿಂದ ಮನೆಯಿಂದ ಹೊರ ಹೋಗಿದ್ದ ಗೋಲ್ಡ್ ಸುರೇಶ್ ಮತ್ತೆ ಬಿಗ್ ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡರು. ಈ ವೇಳೆ ಕಳೆದ ಒಂದು ವಾರದಿಂದ ಗೊಂದಲ ಸೃಷ್ಟಿಸಿದ್ದ ಗೋಲ್ಡ್ ಸುರೇಶ್ ಹೊರ ಬಂದಿದ್ಯಾಕೆ? ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿದೆ.

ಗೋಲ್ಡ್ ಸುರೇಶ್ ಏಕಾಏಕಿ ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಅನೇಕ ಗೊಂದಲಗಳು ಸೃಷ್ಟಿಯಾದವು. ಮೊದಲು ಸುರೇಶ್ ತಂದೆಗೆ ಹುಷಾರಿಲ್ಲ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಬಳಿಕ ಅವರ ತಂದೆಯೇ ಈ ಗಾಳಿ ಸುದ್ದಿಗೆ ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟರು. ಬಳಿಕ ಮಗಳಿಗೆ ಹುಷಾರಿಲ್ಲ, ಪತ್ನಿಗೆ ಹುಷಾರಿಲ್ಲ ಹೀಗೆ ಅನೇಕ ಸುದ್ದಿಗಳು ಮೊದಲು ಕೇಳಿಬಂದವು.
ಕೊನೆಗೆ ಅದ್ಯಾವುದೂ ಅಲ್ಲ ಎಂದು ತಿಳಿದು ಬಂದ ಮೇಲೆ. ಬಿಗ್ ಬಾಸ್ ತಂಡವೇ ಎಲಿಮಿನೇಷನ್ ಬದಲಿಗೆ ನೇರವಾಗಿ ಕಳುಹಿಸಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಅಂತಿಮ ದಿನಗಳು ಬರುತ್ತಿದ್ದಂತೆ ಎಲಿಮಿನೇಷನ್ ಮಾಡಲಾಗದೇ ಬಿಗ್ ಬಾಸ್ ತಂಡವೇ ಈ ರೀತಿ ಕಾರಣಗಳನ್ನು ಸೃಷ್ಟಿಸಿ ಕಳುಹಿಸಿದೆ ಎನ್ನುವ ಆರೋಪಗಳು ಕೂಡ ಜೋರಾಗಿತ್ತು. ಈ ಎಲ್ಲಾ ಆರೋಪ ಹಾಗೂ ಪ್ರಶ್ನೆಗಳಿಗೆ ನಿನ್ನೆಯ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಬಹಳ ಸ್ಪಷ್ಟವಾಗಿ ಉತ್ತರ ಕೊಟ್ಟಿದ್ದಾರೆ.

'ಸೂಪರ್ ಸಂಡೇ ವಿಥ್ ಬಾದ್ಶಾ ಸುದೀಪ್' ಸಂಚಿಕೆಯಲ್ಲಿ ಮಾತನಾಡಿದ ಸುದೀಪ್, ' ಹೋದ ವಾರ ಗೋಲ್ಡ್ ಸುರೇಶ್ ಅವರು ಕಾರಣಾಂತರಗಳಿಂದ ಮನೆಗೆ ಹೋದರು. ಅದಾದ ಮೇಲೆ ಅನೇಕ ಅಂತೆ-ಕಂತೆಗಳು ಶುರುವಾಯ್ತು. ತಂದೆ ಅವರಿಗೆ ಏನಾದರೂ ಆಯ್ತಾ?, ಇನ್ನೊಬ್ಬರಿಗೆ ಏನಾದರೂ ಆಯ್ತಾ?, ಹೋ ಯಾರಿಗೆ ಏನೂ ಆಗಿಲ್ಲ. ಹಾಗಿದ್ದ್ ಮೇಲೆ ಸುರೇಶ್ ಅವರನ್ನು ಬಿಗ್ ಬಾಸ್ ಮನೆಯಿಂದ ಯಾಕೆ ಕರೆಸಿದರು. ಸುರೇಶ್ ಅವರನ್ನು ಕಳುಹಿಸಬಾರದಿತ್ತು. ನಾವೇನೋ ಛತ್ರಿ ಕೆಲಸ ಮಾಡಿದೆವು, ಆ ರೀತಿ ಏನು ಇಲ್ಲ'.
'ಆ ಸಮಯದಲ್ಲಿ ಸುರೇಶ್ ಅವರನ್ನು ಕಳುಹಿಸಿಕೊಟ್ಟಿರಲಿಲ್ಲ ಅಂದರೆ ಅವರ ವ್ಯವಹಾರ ಸಂಪೂರ್ಣವಾಗಿ ನೆಲಸಮವಾಗುತ್ತಿತ್ತು. ಹೀಗಾಗಿ ಶೋಗಿಂತ ಅದು ಬಹಳ ಮುಖ್ಯವಾಯ್ತು. ಯಾಕೆಂದರೆ ಅವರು ಯಾರನ್ನು ನಂಬಿಕೊಂಡು ವ್ಯವಹಾರ ಬಿಟ್ಟುಬಂದಿದ್ದರೋ, ಅವರೆಲ್ಲರೂ ಮೋಸ ಮಾಡಿ, ಎಲ್ಲಾ ವ್ಯವಹಾರವನ್ನು ಹಾಳು ಮಾಡಿದ್ದರು. ಆ ಸರಿಯಾದ ಸಮಯಕ್ಕೆ ಅವರು ಹೋಗಿರಲಿಲ್ಲ ಅಂದರೆ ಬಹುಶಃ ಅವರ ಮೈ ಮೇಲಿದ್ದ ಒಡವೆಗಳನ್ನು ಸಹ ಮಾರಿಕೊಳ್ಳಬೇಕಾದ ಪರಿಸ್ಥಿತಿ ಬಂದಿರುವುದೇನೋ. ಆ ಕಾರಣಕ್ಕೆ ಕಳುಹಿಸಿಕೊಟ್ಟಿರುವುದು ಬಿಟ್ಟರೆ ಬೇರೆ ಏನು ಇಲ್ಲ' ಎಂದು ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications