ಹೀರೋ ಆಗಲು ಬಂದು ಹಿರೋಯಿನ್ ಆದ ಕನ್ನಡದ ಖ್ಯಾತ ನಟ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯ ಜಾಹ್ನವಿ ಪತಿ ಜಯಂತ್ ಅಲ್ಲಲ್ಲ ಸೈಕೋ ಜಯಂತ್ ಪಾತ್ರದಲ್ಲಿ ನಟಿಸುತ್ತಿರುವ ನಟ ದೀಪಕ್ ಸುಬ್ರಹ್ಮಣ್ಯ ಅಭಿನಯದ ಮಿಸ್ಟರ್ ರಾಣಿ ಸಿನಿಮಾ ಬಿಡುಗಡೆಯಾಗಿದೆ. ಸೈಕೋ ಜಯಂತ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ದೀಪಕ್ ಸುಬ್ರಹ್ಮಣ್ಯ ಈ ಚಿತ್ರದಲ್ಲಿ ಸ್ತ್ರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದೀಪಕ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಸಾಮಾನ್ಯವಾಗಿ ಧಾರಾವಾಹಿ ನಟರಿಗೆ ಸಿನಿಮಾಗಳಲ್ಲಿ ನಾಯಕ ನಟನಾಗಿ ಮಿಂಚಬೇಕು ಎನ್ನುವ ಆಸೆ ಇರುತ್ತದೆ. ಆದರೆ ದೀಪಕ್ ಸುಬ್ರಹ್ಮಣ್ಯ ನಾಯಕಿಯಾಗಿ ಸಿನಿಮಾದಲ್ಲಿ ಮಿಂಚಿದ್ದಾರೆ. ಹೀರೋ ಆಗಲು ಬಂದು ಹಿರೋಯಿನ್ ಆಗಿದ್ಯಾಕೆ ಎನ್ನುವ ಪ್ರಶ್ನೆಗೆ ಇದೀಗ ಸ್ವತಃ ದೀಪಕ್ ಸುಬ್ರಹ್ಮಣ್ಯ ಉತ್ತರಿಸಿದ್ದಾರೆ.

ರೆಡಿಯೋ ಸಿಟಿ ಕನ್ನಡ ಸಂದರ್ಶನದಲ್ಲಿ ಮಾತನಾಡಿದ ಅವರು, 'ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಜನ ಈ ರೀತಿಯ ಪಾತ್ರ ಮಾಡಿದ್ದಾರೆ. ಶಿವಣ್ಣನಿಂದ ಹಿಡಿದು ಶರಣ್ ಅವರ ವರೆಗೂ ಮಾಡಿದ್ದಾರೆ. ಆದರೆ ಅವರಿಗೆ ಒಂದೇ ಪಾತ್ರ ಇರುತ್ತಿತ್ತು. ಅಥವಾ ಒಂದೇ ವಯೋಮಾನದ ಪಾತ್ರ ಇರುತ್ತಿತ್ತು. ಆದರೆ ಇಲ್ಲಿ ಹೊಸ ಸವಾಲು ಇತ್ತು. ರಾಣಿ ಎನ್ನುವವಳು ಕರ್ನಾಟಕದ ಸೂಪರ್ ಸ್ಟಾರ್ ಆಗುತ್ತಾಳೆ. ಈ ಚಿತ್ರಕ್ಕಾಗಿ ಒಂದು ತಿಂಗಳಲ್ಲಿ ಹನ್ನೊಂದು ಕೆಜಿ ಇಳಿಸಿದ್ದೇನೆ. ಮೊದಲು ಮೂವತ್ತು ದಿನದಲ್ಲಿ ಸಿನಿಮಾ ಮುಗಿಸೋಣ ಅಂದುಕೊಂಡಿದ್ದೇವು. ಆದರೆ ಅದು ಒಂದೂವರೆ ವರ್ಷ ತೆಗೆದುಕೊಂಡಿತು. ನಾನು ಒಂದೂವರೆ ವರ್ಷ ಪ್ರತಿ ದಿನ ಒಂದೇ ಊಟ ಮಾಡುತ್ತಿದೆ' ಎಂದರು.
'ಈ ರೀತಿಯ ಪ್ರಯೋಗ ಮಾಡಬೇಕು ಎನ್ನುವುದು ಎಲ್ಲಾ ನಟರ ಕನಸು. ಈ ರೀತಿಯ ಪಾತ್ರ ಸಿಗುವುದು ತುಂಬಾ ಕಷ್ಟ. ಸಿಕ್ಕಾಗ ಎಲ್ಲವನ್ನೂ ಮಾಡಿಬಿಡಬೇಕು ಎನ್ನುವುದು ನನ್ನ ಬಯಕೆ. ದಿನಕ್ಕೆ ನಾಲ್ಕು ಗಂಟೆಗಳ ಕಾಲ ಮೇಕಪ್ ಮಾಡಿಕೊಳ್ಳುತ್ತಿದೆ. ತಲೆಯಿಂದ ಕಾಲಿನ ತನಕ ಎಲ್ಲವನ್ನೂ ಬದಲಿಸಬೇಕಿತ್ತು. ಶೂಟಿಂಗ್ ಮುಗಿಸಿ ಎರಡು ಗಂಟೆಯಲ್ಲಿ ಮತ್ತೆ ನನಗೆ ಗಡ್ಡ ಬರುತ್ತಿತ್ತು. ಈ ಸಿನಿಮಾದಲ್ಲಿ ಎಲ್ಲರೂ ತುಂಬಾ ಕಷ್ಟಪಟ್ಟಿದ್ದಾರೆ' ಎಂದು ಹೇಳಿದರು.

'ರಂಗಭೂಮಿಯಲ್ಲಿ ತುಂಬಾ ವರ್ಷ ಕೆಲಸ ಮಾಡಿದ್ದೇನೆ. ಅಲ್ಲಿ ಕಲಿತಿರುವುದು ಇಲ್ಲಿ ಉಪಯೋಗಕ್ಕೆ ಬಂತು. ಹೆಣ್ಣು ಮಗು ಪಾತ್ರ ಮಾಡಿರುವುದು ಸ್ಕ್ರೀನ್ ಮೇಲೆ ಮೊದಲ ಸಾರಿ. ಆದರೆ ಊರಿನಲ್ಲಿ ಹೇಗೆ ಆಗುತ್ತಿತ್ತು ಅಂದರೆ ಹೆಣ್ಣಿನ ಪಾತ್ರಕ್ಕೆ ಯಾರು ಇರಲಿಲ್ಲ ಅಂದರೆ ದೀಪಕ್ ಮಾಡುತ್ತಾರೆ ಎನ್ನುವ ರೀತಿ ಇತ್ತು. ಅವಾಗ ಬರೀ ಹೆಣ್ಣು ಮಕ್ಕಳ ಪಾತ್ರನೇ ಕೊಡುತ್ತಾರೆ ಅನಿಸೋದು ಆದರೆ ಈಗ ಎಲ್ಲಾ ಪಾತ್ರಗಳು ಮುಖ್ಯ ಎನ್ನುವುದು ಗೊತ್ತಾಗಿದೆ' ಎಂದು ದೀಪಕ್ ಸುಬ್ರಹ್ಮಣ್ಯ ಹೇಳಿದ್ದಾರೆ.












Click it and Unblock the Notifications