Bigg Boss: ಬಿಗ್ ಬಾಸ್ ಮನೆಯಿಂದ ಹೊರಬಂದು ಕೋರ್ಟ್ ಮೆಟ್ಟಿಲೇರಿದ ಚೈತ್ರಾ ಕುಂದಾಪುರ!
ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ದಿಢೀರ್ ಎಂದು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಹೌದು, ಚೈತ್ರಾ ಕುಂದಾಪುರ ಕಾರ್ಯಕ್ರಮದ ಅರ್ಧದಲ್ಲೇ ಬಿಗ್ ಬಾಸ್ ಮನೆಯಿಂದ ಹೊರಬಂದು ಕೋರ್ಟ್ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಉದ್ಯಮಿಯೊಬ್ಬರಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂಪಾಯಿ ಪಡೆದು ವಂಚಿಸಿರುವ ಆರೋಪ ಅವರ ಮೇಲಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಇದೇ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಹಲವು ದಿನ ಜೈಲುವಾಸ ಅನುಭವಿಸಿದ್ದರು. ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು. ಇತ್ತೀಚೆಗೆ ಆರಂಭವಾಗಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಚೈತ್ರಾ ಕುಂದಾಪುರ ಕಾಣಿಸಿಕೊಂಡಿದ್ದರು. ಈವರೆಗೂ ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಶೈಲಿಯಲ್ಲಿ ಆಡುತ್ತಾ ಕಾರ್ಯಕ್ರಮದಲ್ಲಿ ಉಳಿದುಕೊಂಡಿದ್ದಾರೆ.

ಕುಂದಾಪುರದ ಉದ್ಯಮಿ ಗೋವಿಂದಬಾಬು ಪೂಜಾರಿ ಎನ್ನುವವರಿಗೆ ಚೈತ್ರಾ ಮತ್ತು ಗ್ಯಾಂಗ್ ವಂಚನೆ ಮಾಡಿರುವ ಆರೋಪವಿದೆ. ಈ ಪ್ರಕರಣದಲ್ಲಿ ಚೈತ್ರಾ ಕುಂದಾಪುರ, ಶ್ರೀಕಾಂತ್ ಸೇರಿದಂತೆ ಮೂವರು ಆರೋಪಿಗಳು ಇಂದು (ಮಂಗಳವಾರ) ಕೋರ್ಟ್ಗೆ ಹಾಜರಾಗಿದ್ದಾರೆ.
ವಾಪಸ್ ಬಿಗ್ ಬಾಸ್ ಮನೆಗೆ
ಕೋರ್ಟ್ ವಿಚಾರಣೆಗೆ ಹಾಜರಾದ ಚೈತ್ರಾ ಅಲ್ಲಿಂದ ಮತ್ತೆ ನೇರವಾಗಿ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ. ಜನವರಿ 13ರಂದು ಮತ್ತೆ ವಿಚಾರಣೆ ನಡೆಯಲಿದ್ದು ಅಲ್ಲಿಯವರೆಗೂ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿ ಇರಬಹುದು. ಮತ್ತೆ ಅಲ್ಲಿಂದಲೇ ಕೋರ್ಟ್ಗೆ ಬಂದು ವಿಚಾರಣೆಗೆ ಹಾಜರಾಗಬಹುದು. ಒಂದು ವೇಳೆ ಜನವರಿ 13ಕ್ಕೆ ಮುನ್ನವೇ ಬಿಗ್ ಬಾಸ್ ಮನೆಯಿಂದ ಹೊರಬಿದ್ದರೆ ವಿಚಾರಣೆಗೆ ಹಾಜರಾಗುವುದು ಸುಲಭವಾಗಲಿದೆ. ಸದ್ಯ ಬಿಗ್ ಬಾಸ್ನಲ್ಲಿ ಚೈತ್ರಾ ಉತ್ತಮವಾಗಿ ಆಡುತ್ತಿದ್ದು ಇನ್ನಷ್ಟು ದಿನ ಮನೆಯಲ್ಲಿ ಉಳಿಯುವ ಸಾಧ್ಯತೆ ಹೆಚ್ಚಾಗಿದೆ.
ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ನಲ್ಲಿ ವಂಚನೆ ಪ್ರಕರಣದ ವಿಚಾರಣೆ ನಡೆಯಿತು. ನ್ಯಾಯಾಧೀಶರ ಮುಂದೆ ಹಾಜರಾದ ಚೈತ್ರಾ ಕುಂದಾಪುರ ವಾರೆಂಟ್ ರೀ ಕಾಲ್ ಮಾಡಿಸಿಕೊಂಡರು. ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ 64 ದಿನಗಳನ್ನು ಕಳೆದಿರುವ ಅವರು ಇನ್ನೆಷ್ಟು ದಿನ ಮನೆಯಲ್ಲಿ ಉಳಿದುಕೊಳ್ಳುತ್ತಾರೆ ಎನ್ನುವುದನ್ನು ನೋಡಬೇಕಿದೆ. ಫೈನಲ್ವರೆಗೂ ಬರಬೇಕೆಂದರೆ ಕನಿಷ್ಠ 100 ದಿನಗಳವರೆಗೂ ಉಳಿದುಕೊಳ್ಳಬೇಕಾಗುತ್ತದೆ.
ಬಿಗ್ ಬಾಸ್ ಮನೆಯಿಂದ ಅವರನ್ನು ಭದ್ರತೆಯಲ್ಲಿ ಕೋರ್ಟ್ಗೆ ಕರೆತರಲಾಯಿತು. ಯಾರೊಂದಿಗೂ ಮಾತನಾಡಲು ಅವರಿಗೆ ಅವಕಾಶ ನೀಡಲಿಲ್ಲ, ವಿಚಾರಣೆ ಮುಗಿಯುತ್ತಿದ್ದಂತೆ ಮತ್ತೆ ಅವರನ್ನು ಬಿಗ್ ಬಾಸ್ ಮನೆಗೆ ವಾಪಸ್ ಕರೆದೊಯ್ಯಲಾಗಿದೆ.












Click it and Unblock the Notifications