Bigg Boss Kannada: ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ , ಮಂಜಣ್ಣ ದಿಢೀರ್ ಬಂಧನ
ಬಿಗ್ ಬಾಸ್ ಕನ್ನಡ ಸೀಜನ್ 11 ಎಂಟು ವಾರಗಳನ್ನು ಪೂರೈಸಿ ಒಂಬತ್ತನೇ ವಾರಕ್ಕೆ ಕಾಲಿಟ್ಟಿದೆ. ಸ್ಪರ್ಧೆ ಈಗೀಗ ರೋಚಕ ಹಂತಕ್ಕೆ ತಲುಪುತ್ತಿದ್ದು, ಸ್ಪರ್ಧಿಗಳ ನಡುವಿನ ಪೈಪೋಟಿಯೂ ಜೋರಾಗಿದೆ. ಈ ವಾರ ಬಿಗ್ ಬಾಸ್ ಮನೆ ಬಿಗ್ ಬಾಸ್ ಸಾಮ್ರಾಜ್ಯವಾಗಿದೆ. ಹೀಗಾಗಿ ಮನೆಯ ಕ್ಯಾಪ್ಟನ್ ಮಂಜು ಬಿಗ್ ಬಾಸ್ ಸಾಮ್ರಾಜ್ಯದ ಮಹಾರಾಜ ಎಂದು ಬಿಗ್ ಬಾಸ್ ಘೋಷಿಸಿದ್ದಾರೆ.
ಮೊದಲ ಎರಡು ದಿನ ಕ್ಯಾಪ್ಟನ್ ಮಂಜು ಬಿಗ್ ಬಾಸ್ ಸಾಮ್ರಾಜ್ಯದ ಸರ್ವಾಧಿಕಾರಿಯಾಗಿದ್ದು, ಇತರ ಸ್ಪರ್ಧಿಗಳಿಗೆ ಮನಬದಂತೆ ಆದೇಶ ನೀಡುತ್ತಾ, ತಮ್ಮ ಉಗ್ರ ಅವಾತಾರ ತೋರಿಸುತ್ತಿದ್ದರು. ಆದರೆ ಈ ಆಟದಲ್ಲಿ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್ ಮೋಕ್ಷಿತಾ ಅವರನ್ನು ಬಿಗ್ ಬಾಸ್ ಸಾಮ್ರಾಜ್ಯದ ಯುವರಾಣಿಯನ್ನಾಗಿ ಮಾಡಿದರು. ಪ್ರಜೆಗಳನ್ನು ಸಹ ವಿಂಗಡಿಸಲಾಗಿದ್ದು, ಈ ಮೂಲಕ ಎರಡು ಟೀಂ ಮಾಡಿ ಬಿಗ್ ಬಾಸ್ ಟಾಸ್ಕ್ಗಳನ್ನು ನೀಡಲು ಶುರು ಮಾಡಿದ್ದಾರೆ.

ಈ ವಾರದ ಮುಂದಿನ ಭಾಗವಾಗಿ ರಾಜ ಮನೆತನದ ಅಣ್ಣ-ತಂಗಿಯಾಗಿರುವ ಮಹಾರಾಜ ಮಂಜು ಹಾಗೂ ಯುವರಾಣಿ ಮೋಕ್ಷಿತಾ ಅವರನ್ನು ಹಗ್ಗದಿಂದ ಕಟ್ಟಿಹಾಕಿ ಬಂಧಿಸಿ ಹಾಕಲಾಗಿದೆ. ತಮ್ಮ ಮಹಾರಾಜ ಹಾಗೂ ಯುವರಾಣಿಯನ್ನು ಬಂಧನದಿಂದ ಮುಕ್ತಿಗೊಳಿಸುವುದು ಯುವರಾಣಿ ಮೋಕ್ಷಿತಾ ಹಾಗೂ ಮಹಾರಾಜ ಮಂಜು ಬೆಂಬಲಿತ ಪ್ರಜೆಗಳ ಜವಾಬ್ದಾರಿಯಾಗಿದೆ. ಹೀಗಾಗಿ ಅವರನ್ನು ಬಿಡಿಸಿಕೊಂಡು ಬರಲು ಅಲ್ಲಿನ ಪ್ರಜೆಗಳಿಗೆ ಬಿಗ್ ಬಾಸ್ ಟಾಸ್ಕ್ ಕೂಡ ನೀಡಿದ್ದಾರೆ.
ಪ್ರಜೆಗಳು ಕೊಟ್ಟಿರುವ ನಕ್ಷೆಯ ತುಂಡುಗಳನ್ನು ಜೋಡಿಸಿ ಬೀಗದ ಕೈಗೊಂಚಲನ್ನು ತೆಗೆದುಕೊಂಡು ಬಂದು ಅವರನ್ನು ಬಂಧನದಿಂದ ಮುಕ್ತಗೊಳಿಸಬೇಕು ಎಂದು ಬಿಗ್ ಬಾಸ್ ತಿಳಿಸಿದ್ದಾರೆ. ಹೀಗಾಗಿ ಮಹಾರಾಜ ಮಂಜು ಹಾಗೂ ಯುವರಾಣಿ ಮೋಕ್ಷಿತಾ ಅವರನ್ನು ಬಂಧನದಿಂದ ಬಿಡಿಸಲು ಪ್ರಜೆಗಳು ಜಿದ್ದಿಗೆ ಬಿದ್ದು ಟಾಸ್ಕ್ ಆಡುತ್ತಿದ್ದಾರೆ.
ಈ ವೇಳೆ ಮಹಾರಾಜ ಮಂಜು ತಂಡಕ್ಕೆ ಚೈತ್ರಾ ಕುಂದಾಪುರ ಉಸ್ತುವಾರಿಯಾಗಿದ್ದು, ಟಾಸ್ಕ್ ಆಡುವಾಗ ಆದ ಫೌಲ್ಗಳನ್ನು ಹೇಳಿದ್ದಾರೆ. ಇದರಿಂದ ತ್ರಿವಿಕ್ರಮ್ ಕೋಪಗೊಂಡಿದ್ದು, ಚೈತ್ರಾ ಕುಂದಾಪುರ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಈ ಜಗಳ ಜೋರಾಗಿದ್ದು, ಇಬ್ಬರ ಜಗಳದಿಂದ ತೊಂದರೆಯಾಗಿ ಟಾಸ್ಕ್ ಆಡುತ್ತಿದ್ದ ಭವ್ಯ ಗೌಡ ಸಿಟ್ಟಿಗೆದ್ದು ಟೇಬಲ್ಗೆ ಕೈ ಬಡಿದು ಬಳೆಗಳನ್ನು ಒಡೆದು ಆಕ್ರೋಶ ಹೊರ ಹಾಕಿದ್ದಾರೆ.

ಸದ್ಯ ಬಿಡುಗಡೆ ಮಾಡಲಾದ ಪ್ರೋಮೋದಲ್ಲಿ ಇಷ್ಟು ವಿಚಾರಗಳನ್ನು ತೋರಿಸಲಾಗಿದ್ದು, ಇಂದಿನ ಸಂಚಿಕೆ ಹೇಗಿರಲಿದೆ..? ಪ್ರಜೆಗಳು ಮಹಾರಾಜ ಮಂಜು ಹಾಗೂ ಯುವರಾಣಿ ಮೋಕ್ಷಿತಾ ಅವರನ್ನು ಹೇಗೆ ಬಿಡಿಸಿಕೊಂಡು ಬರುತ್ತಾರೆ ಎನ್ನುವುದು ಕುತೂಹಲ ಹೆಚ್ಚಿಸಿದೆ. ಈ ಪ್ರಶ್ನೆಗೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.












Click it and Unblock the Notifications