Priyanka Chopra: 6 ಸಿನಿಮಾ ಫ್ಲಾಪ್ ಆಯ್ತು, ಅವಕಾಶಕ್ಕಾಗಿ ಓಕೆ ಎನ್ನುತ್ತಿದ್ದೆ: ಪ್ರಿಯಾಂಕಾ ಚೋಪ್ರಾ
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ನಲ್ಲೂ ಸೌಂಡ್ ಮಾಡುತ್ತಿದ್ದಾರೆ. ಈಗ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಪ್ರಿಯಾಂಕಾ ಕೂಡ ಒಬ್ಬರಾಗಿದ್ದು, ರಾಜಮೌಳಿ ನಿರ್ದೇಶನದ ವಾರಣಾಸಿ ಸಿನಿಮಾ ಮೂಲಕ ಭಾರತ ಸಿನಿಮಾರಂಗಕ್ಕೆ ಮರಳಿದ್ದಾರೆ. ಆದರೆ ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಏನೆಲ್ಲ ಸವಾಲುಗಳನ್ನು ಎದುರಿಸಿದ್ದರು ಎಂಬುದನ್ನು ಪ್ರಿಯಾಂಕಾ ಇತ್ತೀಚೆಗೆ ಹೇಳಿಕೊಂಡಿದ್ದಾರೆ. ನನ್ನ ಸಿನಿಮಾಗಳು ನಿರಂತರವಾಗಿ ಸೋಲು ಕಂಡವು, ಅವಕಾಶಗಳು ಕೈತಪ್ಪುವ ಭಯದಿಂದ ಅದಕ್ಕೆಲ್ಲ ಓಕೆ ಎನ್ನುತ್ತಿದ್ದೆ ಎಂದು ಪ್ರಿಯಾಂಕಾ ಆ ದಿನಗಳನ್ನು ನೆನೆದಿದ್ದಾರೆ.
ಇತ್ತೀಚೆಗೆ ಅಬುಧಾಬಿಯಲ್ಲಿ ನಡೆದ ಬ್ರಿಡ್ಜ್ ಸಮಿಟ್ನಲ್ಲಿ ಪ್ರಿಯಾಂಕಾ ಚೋಪ್ರಾ ತಮ್ಮ ಸಿನಿ ಜರ್ನಿಯನ್ನು ಮೆಲುಕು ಹಾಕಿದ್ದಾರೆ. ಚಿತ್ರರಂಗದಲ್ಲಿ ತನ್ನ ಆರಂಭಿಕ ಹೋರಾಟಗಳನ್ನು ನೆನೆದಿರುವ ಅವರು, 'ನಾನು ನಟಿಸಿದ ಆರು ಸಿನಿಮಾಗಳು ಸತತವಾಗಿ ಸೋಲು ಕಂಡವು. ಬಳಿಕ ನನಗೆ ಸಿನಿಮಾ ಅವಕಾಶಗಳು ಸಿಗಲಿಲ್ಲ. ಅಲ್ಲದೆ ನನ್ನಿಂದ ಅವಕಾಶಗಳನ್ನು ಕೂಡ ಕಸಿದುಕೊಳ್ಳಲಾಯಿತು. ಆ ಸಮಯದಲ್ಲಿ ನನಗೆ ಬೇಡ, ಆಗಲ್ಲ ಎಂದು ಹೇಳುವ ಧೈರ್ಯಯೂ ಇರಲಿಲ್ಲ' ಎಂದಿದ್ದಾರೆ.

'ನನ್ನ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ನನ್ನ ಸಿನಿಮಾಗಳು ಚೆನ್ನಾಗಿ ಪ್ರದರ್ಶನ ನೀಡದಿದ್ದಾಗ, ನನಗೆ ಬದುಕುಳಿಯುವುದೇ ಸವಾಲಾಗಿತ್ತು. ಆಗ ನನಗೆ ಅವಕಾಶಗಳನ್ನು ನೀಡುವ ಬದಲು ಅವುಗಳನ್ನು ತಮ್ಮಿಂದ ಕಸಿದುಕೊಳ್ಳಲಾಯಿತು. ನಾನು ಆಗ ಸಿನಿಮಾಗಳನ್ನು ಮಾಡಲೇಬೇಕಿತ್ತು. ಒಂದೇ ವರ್ಷ ನನ್ನ ಆರು ಸಿನಿಮಾಗಳು ಸತತವಾಗಿ ಫ್ಲಾಪ್ ಆದವು. ಆಗ ಸಿನಿಮಾ ಚೆನ್ನಾಗಿ ಬರುವುದಿಲ್ಲ ಅಂತ ನಾವು ಪ್ರಿಯಾಂಕಾಗೆ ಅವಕಾಶ ಕೊಡಬಾರದು ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದರು. ಹಾಗಾಗಿ ನಾನು ಸಿನಿಮಾ ಸೋಲುವ ಭಯದಿಂದಾಗಿ ನನಗೆ ಅನುಕೂಲಕರವಾಗಿರುವುದನ್ನು ಬಿಟ್ಟು ಹೊಸದನ್ನೇ ಪ್ರಯತ್ನಿಸಬೇಕಾಯಿತು, ನನಗೆ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕಿತ್ತು' ಎಂದಿದ್ದಾರೆ.
'ಆ ಭಯಕ್ಕೆ ಓಕೆ ಎನ್ನುತ್ತಿದ್ದೆ'
'ಆಗ ನನ್ನ ಸಿನಿಮಾಗಳು ಎಂದಿಗೂ ಆಯ್ಕೆಯ ಮೇಲೆ ನಡೆಯುತ್ತಿರಲಿಲ್ಲ. ಅವು ಹೆಚ್ಚಾಗಿ ನಾನು ಬದುಕುಳಿಯುವುದನ್ನೇ ಅವಲಂಬಿಸಿತ್ತು. ನಾನು ಮೊದಲು ಕೆಲಸ ಶುರು ಮಾಡಿದಾಗ ಪ್ರತಿಯೊಂದು ಅವಕಾಶ ಸಿಕ್ಕಾಗಲೂ ಓಕೆ ಎನ್ನುತ್ತಿದ್ದೆ. ಅವಕಾಶ ಕೈತಪ್ಪುವ ಭಯದಲ್ಲಿರುತ್ತಿದ್ದೆ. ಆಗ ಕೆಲಸ ಸಿಗುವುದೇ ಕಷ್ಟವಾಗಿತ್ತು. ಹೀಗಾಗಿ ನಾನು ಸಿಕ್ಕ ಪ್ರತಿಯೊಂದು ಅವಕಾಶವನ್ನು ಒಪ್ಪಿಕೊಂಡೆ. ಅದಕ್ಕಾಗಿ ನಿರಂತರವಾಗಿ ಪ್ರಯಾಣಿಸುತ್ತಿದ್ದೆ. ಆಗ ನಾನು ಅವಕಾಶ ನಿರಾಕರಿಸುವುದು ಒಂದು ಆಯ್ಕೆ ಅನಿಸಲಿಲ್ಲ' ಎಂದು ಪ್ರಿಯಾಂಕಾ ಹೇಳಿದ್ದಾರೆ.
'ಹಾಲಿವುಡ್ನಲ್ಲಿ ಭಾರತೀಯ ಮಹಿಳೆಯರ ಸ್ಟೀರಿಯೊಟೈಪ್ ರೋಲ್ಗಳನ್ನು ತಿರಸ್ಕರಿಸಿ, ತಮ್ಮ ವೃತ್ತಿಜೀವನ ರೂಪಿಸಿಕೊಂಡೆ. ನಾನು ಅಮೆರಿಕದಲ್ಲಿ ಕೆಲಸ ಹುಡುಕಲು ಪ್ರಾರಂಭಿಸಿದಾಗ ಸವಾಲುಗಳನ್ನು ಎದುರಿಸಿದೆ. ಈಗ ನಾನು ನನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈಗ ನನಗೆ ಯಾವುದು ಸರಿ ಅನಿಸುತ್ತದೆಯೋ ಅದನ್ನು ನಾನು ನಿರ್ಧರಿಸಬಹುದು. ನಾನು ಮೊದಲು ಕೆಲಸ ಮಾಡಲು ಪ್ರಾರಂಭಿಸಿದಾಗ, ನಾನು ಎಲ್ಲದಕ್ಕೂ ಹೌದು ಎನ್ನಬೇಕಿತ್ತು. ಏಕೆಂದರೆ ಪ್ರತಿಯೊಂದು ಅವಕಾಶವೂ ಒಂದು ಸವಲತ್ತು ಆಗಿತ್ತು. ಆದರೆ ಈಗ, ನಾನು ಉದ್ದೇಶದಿಂದ ಹೌದು ಎನ್ನುತ್ತೇನೆ. ನನ್ನ ಕುಟುಂಬದ ಮೇಲೆ, ನನ್ನ ವಿವೇಕದ ಮೇಲೆ ಮತ್ತು ನನ್ನ ದೀರ್ಘಕಾಲೀನ ಗುರಿಗಳ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆಯೂ ಯೋಚಿಸುತ್ತೇನೆ' ಎಂದಿದ್ದಾರೆ.












Click it and Unblock the Notifications