'ನಡು ರಸ್ತೆಯಲ್ಲಿ ನಿಲ್ಲಿಸಿ ಜೀವಂತವಾಗಿ ಸುಟ್ಟಾಕಿದರೂ ಕೂಡ ಸಮಾಧಾನ ಆಗಲ್ಲ'- ಧ್ರುವ ಸರ್ಜಾ
ಬೆಂಗಳೂರು, ಆಗಸ್ಟ್ 19: ಕೊಲ್ಕತ್ತಾದ ಆರ್.ಜಿ ಕರ್ ಕಾಲೇಜಿನಲ್ಲಿ ಟ್ರೈನಿ ವೈದ್ಯೆಯ ಕೊಲೆ ಪ್ರಕರಣ ಸಂಪೂರ್ಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ಕರ್ತವ್ಯ ನಿರತ ವೈದ್ಯಯನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಿ ದೇಶದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ. ವೈದ್ಯರು, ವಿದ್ಯಾರ್ಥಿಗಳು, ಸಂಘಟನೆಗಳು ಹಾಗೂ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.
ಇದೀಗ ಕನ್ನಡ ಚಿತ್ರರಂಗ ನಟ ಧ್ರುವ ಸರ್ಜಾ ವೈದ್ಯೆಯ ಪರ ನ್ಯಾಯಕ್ಕಾಗಿ ಧ್ವನಿ ಎತ್ತಿದ್ದು, ಅತ್ಯಚಾರಿಗಳನ್ನು ನಡು ರಸ್ತೆಯಲ್ಲಿ ಸುಟ್ಟು ಹಾಕಿದರು ಕೂಡ ಸಮಾಧಾನ ಆಗುವುದಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಬಗ್ಗೆ ಮಾತನಾಡಿರುವ ಧ್ರುವ ಸರ್ಜಾ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

'ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಧ್ರುವ ಸರ್ಜಾ, ಹೌದು ನಾನು ಮಾರ್ಟಿನ್ ಪ್ರಮೋಷನ್ನಲ್ಲಿ ಇದ್ದೀನಿ. ಮಾರ್ಟಿನ್ ಸಿನಿಮಾವನ್ನು ಒಂದು ನಿಮಿಷ ಪಕ್ಕಕ್ಕೆ ಇಟ್ಟು ಬಿಡೋಣ. ಈ ವಿಡಿಯೋ ಮಾಡುತ್ತಿರುವ ಉದ್ದೇಶ. 2024, ಆಗಸ್ಟ್ 14ನೇ ತಾರೀಕು, ಇಂಡಿಯನ್ ಸ್ಟ್ಯಾಟಿಸ್ಟಿಕ್ ಪ್ರಕಾರ ಪ್ರತಿ 16 ನಿಮಿಷಕ್ಕೊಂದು ಹೆಣ್ಣು ಮಗು ಅತ್ಯಾಚಾರ ಆಗುತ್ತಿದೆ.
ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾಃ ಅಂತಾರೆ. ಎಲ್ಲಿ ಹೆಣ್ಣು ಮಕ್ಕಳಿಗೆ ಮರ್ಯಾದೆ, ಗೌರವ ಇರುವುದಿಲ್ಲವೋ ಅಲ್ಲಿ ಆ ಭಗವಂತನೇ ಇರಲ್ವಂತೆ. ನಮ್ಮದು ರಾಮ ಜನ್ಮಭೂಮಿ ಅಂತ ಕರೆಯುತ್ತೇವೆ. ಕೆಲವು ಬಾಸ್ಟರ್ಡ್ಸ್ ಮಾಡುತ್ತಿರುವ ಕೃತ್ಯದಿಂದ ನಿಜವಾಗಲೂ ನಮ್ಮ ಭಾರತಕ್ಕೆನೇ ಕೆಟ್ಟ ಹೆಸರು'
'ಹೆಣ್ಣು ಮಕ್ಕಳಿಗೆ ಮಾತ್ರ ಹೀಗಿರಿ, ಹಾಗಿರಿ, ಹೀಗೆ ಬಟ್ಟೆ ಹಾಕಿಕೊಳ್ಳಬೇಕು. ಇದನ್ನೇ ಮಾಡಬೇಕು. ಅದನ್ನೇ ಮಾಡಬೇಕು ಅಂತ ಹೇಳುವುದಕ್ಕಿಂತ ಪ್ರತಿಯೊಬ್ಬರ ಮನೆಯಲ್ಲಿಯೂ ಗಂಡು ಮಕ್ಕಳಿಗೆ ಮೂರು ವಿಷಯಗಳನ್ನು ಹೇಳಿಕೊಡಬೇಕು. ಹೇಗೆ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಬೇಕು, ಹೇಗೆ ಬೆಂಬಲ ಮಾಡುವುದು, ಹೇಗೆ ಗೌರವ ನೀಡಬೇಕು ಅಂತ ಪ್ರತಿಯೊಬ್ಬರ ಮನೆಯಲ್ಲಿ ಹೇಳಿಕೊಡಲೇ ಬೇಕು'
'ಇಂತಹ ಅತ್ಯಾಚಾರಿಗಳಿಗೆ ಅವರು ಸಿಕ್ಕಿ ಕಾನೂನು ರೀತಿ ಶಿಕ್ಷೆ ಆಗಲಿ ಅಂತ ಆ ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ. ಅವರಿಗೆ ಯಾವುದೇ ರೀತಿ ಶಿಕ್ಷೆ ಕೊಟ್ಟರೂ ಸಮಾಧಾನ ಅನ್ನೋದು ಆಗುವುದಿಲ್ಲ. ಇಂತಹವರನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಜೀವಂತವಾಗಿ ಸುಟ್ಟಾಕಿದರೂ ಕೂಡ ಸಮಾಧಾನ ಆಗುವುದಿಲ್ಲ. ಇಂತಹ ಅತ್ಯಾಚಾರಿಗಳಿಗೆ ಆ ಭಗವಂತ ಇವರಿಗೆ ಒಳ್ಳೆಯದು ಮಾಡದೇ ಇರಲಿ ಅಂತ ಮನಸಾರೆ ಕೇಳಿಕೊಳ್ಳುತ್ತೇನೆ'
'ಈ ವಿಡಿಯೋ ಮಾಡುತ್ತಿರುವ ಉದ್ದೇಶ ಅಂದರೆ, ನನಗೂ ಒಬ್ಬಳು ಹೆಣ್ಣು ಮಗಳು ಇದ್ದಾಳೆ. ಯಾರದ್ದೋ ಮನೆಗೆ ಅನ್ಯಾಯ ಆಗಿದೆ ಅಂದಾಗ, ನಿಜವಾಗಲೂ ಅವರ ಜೊತೆ ಇರಬೇಕು. ದಯವಿಟ್ಟು ಎಲ್ಲರೂ ಧ್ವನಿ ಎತ್ತಿ. ನ್ಯಾಯವನ್ನು ಕೇಳೋಣ. ನ್ಯಾಯಕ್ಕಾಗಿ ಹೋರಾಡೋಣ, ಇದು ಭಾರತವನ್ನು ಬದಲಾಯಿಸುವ ಸಮಯ' ಎಂದು ಪ್ರಿನ್ಸ್ ಧ್ರುವ ಸರ್ಜಾ ವಿಡಿಯೋ ಮೂಲಕ ಕೇಳಿಕೊಂಡಿದ್ದಾರೆ.












Click it and Unblock the Notifications