ಯಾರಿಗೂ ಬೇಡವಾದ ಅತಂತ್ರ ರಾಜಕಾರಿಣಿಗಳು
ಬೆಂಗಳೂರು, ಏ 1 : ಬಂಡಾಯದ ಭೀತಿ ಎಲ್ಲಾ ಪಕ್ಷಗಳಿಗೂ ಆವರಿಸುತ್ತಿದೆ, ಯಾವ ಪಕ್ಷಗಳೂ ಇದಕ್ಕೆ ಹೊರತಾಗಿಲ್ಲ. ಈ ವಿಷಯದಲ್ಲಿ ಸ್ವಲ್ಪ ಮಟ್ಟಿನ ನಿರಾಳತೆಯೆಂದರೆ ಶ್ರೀರಾಮುಲು ಮತ್ತು ಯಡಿಯೂರಪ್ಪನವರ ಪಕ್ಷಕ್ಕೆ.
ಇದೇ ದಿನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಘಂಟಾಘೋಷವಾಗಿ ಘೋಷಿಸುವ ಪರಿಸ್ಥಿತಿಯಲ್ಲಿ ಯಾವ ಪಕ್ಷಗಳೂ ಇಲ್ಲ. ಇರೋ ಪಕ್ಷ ಬಿಟ್ಟು ಇನ್ನೊಂದು ಪಕ್ಷಕ್ಕೆ ನಿಯತ್ತು ತೋರಿ ಕೊನೆಗೆ ಅಲ್ಲೂ ಇಲ್ಲದೆ, ಇಲ್ಲೂ ಇಲ್ಲದೆ ಅತಂತ್ರ ರಾಜಕಾರಿಣಿಗಳು ಸದ್ಯ ಯಾವ ಪಕ್ಷಕ್ಕೂ ಬೇಕಾಗಿಲ್ಲ.
ತಾನಿರುವ ಪಕ್ಷಕ್ಕೆ ಅಖಂಡ ನಿಯತ್ತು ತೋರುವ ರಾಜಕಾರಿಣಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆ. ಮಂತ್ರಿಗಿರಿ ಸಿಗದಿದ್ದರೆ ಅಥವಾ ಚುನಾವಣಾ ಸಮಯದಲ್ಲಿ ಟಿಕೆಟ್ ಸಿಗದಿದ್ದರೆ ತಾನಿರುವ ಪಕ್ಷ ರಾಜಕಾರಿಣಿಗಳಿಗೆ ಬೇಡವಾಗುತ್ತಿದೆ.
ಪಕ್ಷದಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತಿದೆ, ಪಕ್ಷದಲ್ಲಿ ಉಸಿರು ಕಟ್ಟಿಸುವ ವಾತಾವರಣವಿದೆ ಎಂದು standard ಸಬೂಬು ನೀಡಿ ಮಾಧ್ಯಮದವರ ಮುಂದೆ ಹಾಜರಾಗಾತ್ತಿರುವ ಇವರ ನಡತೆ ಗಾಂಭಿರ್ಯತೆಯನ್ನು ಕಳೆದುಕೊಳ್ಳುತ್ತಿದೆ. ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಸೋಮಣ್ಣ, ಬಸವರಾಜ ಬೊಮ್ಮಾಯಿ ಮುಂತಾದವರು ಬಿಜೆಪಿಯಲ್ಲಿರ ಬೇಕೋ ಅಥವಾ ಕೆಜೆಪಿಗೆ ಸೇರಬೇಕೋ ಎನ್ನುವ ಗೊಂದಲದಲ್ಲಿದ್ದರೂ ಅವರಿಗೆ ಬಿಜೆಪಿ ಟಿಕೆಟ್ ಅಂತೂ ಖಾತ್ರಿ.
ಟಿಕೆಟ್ ಸಿಗದೆ ತ್ರಿಶಂಕು ಸ್ಥಿತಿಯಲ್ಲಿರುವ ಕೆಲವು ಪ್ರಮುಖ ರಾಜಕಾರಿಣಿಗಳು ಪಟ್ಟಿ

ವೈ ಸಂಪಂಗಿ
ಲೋಕಾಯುಕ್ತ ಪೋಲಿಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡು ಜೈಲು ಸೇರಿದ್ದ ಕೆಜಿಎಫ್ ಶಾಸಕ. ಬಿಜೆಪಿ ಇವರಿಗೆ ಟಿಕೆಟ್ ನೀಡಲು ಸುತರಾಂ ನಿರಾಕರಿಸಿದೆ. ಜೆಡಿಎಸ್ ಟಿಕೆಟ್ ನೀಡುವ ಸಾಧ್ಯತೆಯಿದ್ದರೂ ಅದಕ್ಕೆ ಸ್ಥಳೀಯ ಮುಖಂಡರ ತೀವ್ರ ವಿರೋಧವಿದೆ, ಕೆಜೆಪಿ ಇವರಿಗೆ ಟಿಕೆಟ್ ನೀಡಿದರೂ ನೀಡಬಹುದು.

ಬೇಳೂರು ಗೋಪಾಲಕೃಷ್ಣ
ಭಿನ್ನಮತೀಯ ಚಟುವಟಿಕೆಗಳಲ್ಲಿ, ಇನ್ನೊಬ್ಬರ ಮೇಲೆ ಟೀಕಾಪ್ರಹಾರ ಮಾಡುವುದರಲ್ಲಿ ವರ್ಣರಂಜಿತ ರಾಜಕಾರಿಣಿಯಾಗಿರುವ ಸಾಗರ ಶಾಸಕ ಬೇಳೂರು, ಕೈ ಪಕ್ಷದ ಟಿಕೆಟಿಗೆ ದೆಹಲಿಗೆ ವಿಮಾನಯೇರಿದ್ದೇ ಬಂತು. ಬಿಜೆಪಿಯಲ್ಲೂ ಇಲ್ಲ, ಕಾಂಗ್ರೆಸ್ಸಿನಲ್ಲೂ ಇಲ್ಲದೇ ಅತಂತ್ರರಾಗಿರುವ ಬೇಳೂರು ಈಗ ಜೆಡಿಎಸ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ.

ರಾಜೂ ಗೌಡ
ಸುರಪುರ ಕ್ಷೇತ್ರದ ಶಾಸಕ ನರಸಿಂಹ ನಾಯಕ್ ಆಲಿಯಾಸ್ ರಾಜು ಗೌಡ. ಬಿಜೆಪಿಯ ಹೊರಗೆ ಕಾಲಿಟ್ಟಿರುವ ಇವರು, ಕಾಂಗ್ರೆಸ್ ಪಕ್ಷದ ಟಿಕೆಟಿಗಾಗಿ ಇವರು ನಡೆಸುತ್ತಿರುವ ಪ್ರಯತ್ನ ಸದ್ಯದ ಮಟ್ಟಿಗೆ ಫಲ ನೀಡುತ್ತಿಲ್ಲ, ಯಡಿಯೂರಪ್ಪನವರೇ ಗತಿ ಎನ್ನಬಹುದು.

ಕಲ್ಪನಾ ಸಿದ್ದರಾಜು
ಪತಿಯ ನಿಧನದ ನಂತರ ನಡೆದ ಮದ್ದೂರು ಉಪ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ಜೆಡಿಎಸ್ ಪಕ್ಷದ ಕಲ್ಪನಾ ಸಿದ್ದರಾಜು ಪಕ್ಷದ ಮೇಲೆ ಮುನಿಸಿಕೊಂಡಿದ್ದಾರೆ. ಕಾರಣ, ಈ ಬಾರಿಯ ಚುನಾವಣೆಯಲ್ಲಿ ದೇವೇಗೌಡ ಕುಟುಂಬದ ನೆಂಟಸ್ಥರೊಬ್ಬರಿಗೆ (ಡಿ ಸಿ ತಮ್ಮಣ್ಣ) ಟಿಕೆಟ್ ನೀಡಲು ನಿರ್ಧರಿಸಿದ್ದು. ಸದ್ಯ ಕಲ್ಪನಾ ಜೆಡಿಎಸ್ಸಿಗೆ ಸಡ್ಡು ಹೊಡೆದು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ. ಸೌಹಾರ್ದಯುತ ಮಾತುಕತೆ ಕೂಡಾ ಎಸ್ ಎಂ ಕೃಷ್ಣ ಅವರೊಂದಿಗೆ ನಡೆದಿದೆ. ಕಾಂಗ್ರೆಸ್ ಸಂಭವನೀಯ ಪಟ್ಟಿಯಲ್ಲಿ ಕಲ್ಪನಾ ಸಿದ್ದರಾಜು ಹೆಸರಿದೆ. ಆದರೂ ಬಿ ಫಾರಂ ಬರುವವರೆಗೆ ಯಾವುದೂ ನಿಶ್ಚಯವಿಲ್ಲ.

ಎಂ ನಾರಾಯಣ ಸ್ವಾಮಿ
ಬಂಗಾರಪೇಟೆ ಕ್ಷೇತ್ರದಿಂದ 2008ರಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಗೆದ್ದು, ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಸರ್ವಶ್ವ ಅರ್ಪಿಸಿದ್ದ ನಾರಾಯಣ ಸ್ವಾಮಿಗೆ ಈಗ ಎರಡೂ ಪಕ್ಷಗಳಿಂದ ಟಿಕೆಟ್ ಸಿಗುವುದು ಕಷ್ಟ. ಬಿಜೆಪಿ ಇವರಿಗೆ ಕೊನೇ ಕ್ಷಣದಲ್ಲಿ ಟಿಕೆಟ್ ನೀಡಿದರೂ ನೀಡಬಹುದು.

ಶಿವರಾಜ್ ತಂಗಡಗಿ
ಕನಕಗಿರಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ 2008ರಲ್ಲಿ ಜಯಿಸಿದ್ದ ಶಿವರಾಜ್ ಆಪರೇಷನ್ ಕಮಲದ ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಕಾಂಗ್ರೆಸ್ ಟಿಕೆಟಿಗೆ ಹೋರಾಟ ನಡೆಸುತ್ತಿರುವ ಇವರಿಗೆ ಹೈಕಮಾಂಡ್ ಕೈ ಕೊಡುವ ಸಾಧ್ಯತೆ ಹೆಚ್ಚು.

ಡಿ ಸುಧಾಕರ್
ಹಿರಿಯೂರು ಕ್ಷೇತ್ರದಿಂದ ಪಕ್ಷೇತರರಾಗಿ 2008ರಲ್ಲಿ ಗೆದ್ದಿದ್ದ ಸುಧಾಕರ್ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಬೆಂಬಲ ಸೂಚಿಸಿದ ಮತ್ತೊಬ್ಬ ಶಾಸಕ. ಇವರೂ ಕಾಂಗ್ರೆಸ್ ಟಿಕೆಟಿನ ಆಕಾಂಕ್ಷಿ. ಏನಾಗುತ್ತೋ ಸೋನಿಯಾ ಗಾಂಧಿಯೇ ಬಲ್ಲ. ಇವರಿಗೆ ಟಿಕೆಟ್ ನೀಡಲು ಭಾರೀ ವಿರೋಧವಿದೆ.

ಗೂಳಿಹಟ್ಟಿ ಶೇಖರ್
ಹೊಸದುರ್ಗ ಕ್ಷೇತ್ರದ ಪಕ್ಷೇತರ ಶಾಸಕ. ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಸೇರಿ ಕ್ರೀಡಾ ಸಚಿವರಾಗಿ,ಡಿಬಾರ್ ಆಗಿ, ಅಸೆಂಬ್ಲಿಯಲ್ಲೇ ಅಂಗಿ ಹರಿದು ಕೊಂಡು ರಾಷ್ಟ್ರವ್ಯಾಪಿ ಜನಪ್ರಿಯತೆ ಪಡೆದ ಗೂಳಿಹಟ್ಟಿ ಅವರು ಕಾಂಗ್ರೆಸ್ ಟಿಕೆಟಿನ ಆಕಾಂಕ್ಷಿ. ತಾಜಾ ವರದಿಗಳ ಪ್ರಕಾರ ಇವರು ಪಕ್ಷೇತರರಗಿಯೇ ಸ್ಪರ್ಧಿಸಲು ಸಿದ್ದತೆ ನಡೆಸುತ್ತಿದ್ದಾರೆ.












Click it and Unblock the Notifications