ರಣಥಂಬೋರ್ ಕಾಡಿನ ರಾಣಿ 'ಆರೋ ಹೆಡ್'ಳ ರೋಚಕ ಕಥೆ..
ಚಿಕ್ಕವರಿದ್ದಾಗ ಪುಣ್ಯಕೋಟಿಯ ಕಥೆ ಕೇಳಿರಬಹುದು ನೀವು. ಅದರಲ್ಲಿ ಹುಲಿ ಎಂತಹ ಕ್ರೂರ ಪ್ರಾಣಿ, ಅದು ಹಸುಗಳನ್ನ ಹೆದರಿಸುತ್ತಿತ್ತು, ತಿನ್ನುತ್ತಿತ್ತು ಎಂಬೆಲ್ಲಾ ವಿಷಯಗಳನ್ನ ಕೇಳಿ ಹುಲಿಯ ಬಗ್ಗೆ ಒಂದು ವಿಲ್ಲನ್ ಕಲ್ಪನೆ ನಮಗೆ ಬಂದಿರುತ್ತದೆ ಅಲ್ವಾ? ಆದರೆ ಹನ್ನೆರಡು ಘಂಟೆ ಒಂದೇ ಸಮನೆ ಹುಲಿಯ ಕಥೆಗಳನ್ನ ಕೇಳುತ್ತಾ ಹೋದರೆ ಯಾವುದೋ ಜನ್ಮದ ಸಂಬಂಧ ನಮಗೆ ಹುಲಿಯ ಜೊತೆ ಇದೆ ಎಂದು ಅನ್ನಿಸೋದು ಸುಳ್ಳಲ್ಲ.
ರಾಜಸ್ಥಾನದ ರಣಥಂಬೋರಿನ ಕಾಡಿನಲ್ಲಿ ಒಂದು ದಿವಸ ಅಡ್ಡಾಡುವ ಸಂದರ್ಭ ಬಂದಿದ್ದು ಆಕಸ್ಮಿಕವಾಗಿ. ಒಂದು ಕನ್ನಡದ ಹುಡುಗ ಮತ್ತು ಉತ್ತರ ಭಾರತದ ಹುಡುಗಿಯ ಮದುವೆಗೆ ಮೀರತಿಗೆ ಹೋಗಿ ಬರುವ ದಾರಿಯಲ್ಲಿ ಹೋಗಿದ್ದು ಕಾಡಿಗೆ. ಬಿರುಬೇಸಿಗೆಯಲ್ಲಿ ಒಣಗಿರುವ ಕಾಡಿನಲ್ಲೂ ಹುಲಿ ನೋಡುವ ಪ್ರಯತ್ನ ಮಾಡುತ್ತಿದ್ದೆವು.
ನಮ್ಮದು 10 ಜನರ ಗುಂಪು. ಮುಂಚೆ ಹುಡುಗ ಹುಡುಗರು ಮಾತ್ರ ಹೋಗುತ್ತಿದ್ದರು. ಈಗ ಜೊತೆಯಲ್ಲಿ ಹೆಣ್ಣುಮಕ್ಕಳೂ ಸೇರಿದ್ದರಿಂದ ಹುಲಿಯೊಂದೇ ಅಲ್ಲ ಹುಲಿಯ ಕುಟುಂಬವೂ ಕಾಣಿಸುತ್ತದೆ ಎಂದು ನಮ್ಮ ಗೈಡ್ ಪ್ರಮೋದ್ ಹೇಳಿ ತಮಾಷೆ ಮಾಡಿ ನಗುತ್ತಿದ್ದರು.
ಹೋದ ವರ್ಷ ಕಬಿನಿಗೆ ಹೋಗಿ ಒಂದು ಹುಲಿಯನ್ನ 20 ನಿಮಿಷ ನೋಡಿ ಬಂದಿದ್ದ ನನಗೆ, ಅಕ್ಷರನಿಗೆ ಇನ್ನಷ್ಟು ಹುಲಿ ನೋಡುವ ಬಯಕೆ. ಶಾಮ್ 4 ಬಾರಿ ರಣಥಂಬೋರನ್ನೇ ನೋಡಿ ಬಂದಿದ್ದ, ಹರ್ಷನಿಗೆ 2ನೇ ಬಾರಿ ಪಯಣ. ಅನಿರುದ್ಧನಿಗೆ ಸಾರಿ ಸಾರಿ ಸಫಾರಿ ಮಾಡಿದರೂ ಹುಲಿಯ ಹಸಿವು. ಇನ್ನು ಮತ್ತೊಂದು ಜೀಪಿನಲ್ಲಿ ಇದ್ದ ಜರ್ಮನಿಯ ಅನಿಲ, ಶೃತಿ, ಅನಿರುದ್ಧನಿಗೆ ಹುಲಿ ನೋಡುವ ಪುಳಕ. ಪೃಥ್ವಿ ದಂಪತಿಗಳಿಗೆ ಹೊಸ ಹೊಸ ಚಿತ್ರಗಳನ್ನ ತೆಗೆಯುವ ಆಸೆ.

ರಣಸ್ಥಂಭ ಜೈನರ ಪುಣ್ಯಭೂಮಿ
ನಾವೆಲ್ಲ ಬೆಳಗ್ಗೆ ರಣಥಂಬೋರಿನ ಕಾಡಿಗೆ ಹೊರಟೆವು. ರಣಥಂಬೋರಿನ ಮೊದಲ ಹೆಸರು ರಣಸ್ಥಂಭ. ಜೈನರ ಪುಣ್ಯಭೂಮಿಯಾಗಿತ್ತು. ಪೃಥ್ವಿರಾಜ ಎಂಬ ರಾಜ 10ನೇ ಶತಮಾನದಲ್ಲಿ ಕಟ್ಟಿದ ಕೋಟೆಯ ಒಳಗಿರುವ ಕಾಡು. ಕಾಡಿಗಾಗಿ ಕೋಟೆಯೋ ಅಥವಾ ಕೋಟೆಯ ನಡುವೆ ಕಾಡೋ ಗೊತ್ತಿಲ್ಲ. ಆ ಪಾಳುಬಿದ್ದ ಕೋಟೆಯಲ್ಲಿ ಗಣೇಶ ನಿಂತಿದ್ದಾನೆ. ಸಫಾರಿ ಶುರುವಾದ 20 ನಿಮಿಷದಲ್ಲಿ ಮಣ್ಣಿನ ಮೇಲೆ ಹುಲಿಯ ಪಾದದ ಗುರುತನ್ನ ಹಿಡುಕಿಕೊಂಡು ಒಂದು ಸಣ್ಣ ಕೊಳದ ಹತ್ತಿರ ಹೋದೆವು. ಅಲ್ಲಿ ಎರಡು ಪುಟಾಣಿ ಹುಲಿಮರಿಗಳು ಆಟಾಡಿಕೊಂಡು ಇದ್ದವು. ಒಂದು 25 ಕ್ಯಾಮೆರಾಗಳು ಚಕಚಕನೆ ಸದ್ದು ಮಾಡುತ್ತಿದ್ದವು.

ಮಕ್ಕಳನ್ನು ಮುದ್ದು ಮಾಡುವ ಪರಿ
ಆಗ ಒಂದೇ ನಿಮಿಷದಲ್ಲಿ ಬಂದಳು ನೋಡಿ 'ಆರೋ ಹೆಡ್' ಎಂಬ ಹೆಣ್ಣುಹುಲಿ. ಅವಳ ಹಣೆಯ ಮೇಲೆ ಬಾಣದ ಗುರುತಿದೆ. ಅದಕ್ಕೆ ಅವಳನ್ನ 'ಆರೋ ಹೆಡ್' ಎಂದೇ ಕರೆಯೋದು. "ನಿಮ್ಮ ಕೆಲಸ ನೀವು ಮಾಡ್ಕೊಳ್ಳಿ ಹೋಗ್ರೋ" ಎಂಬ ಭಾವ ಮೂಡಿಸಿ ತನ್ನ ಮಕ್ಕಳಿಗೆ ಹಾಲನ್ನು ಕುಡಿಸಲು ಶುರುಮಾಡಿದಳು. ಎರಡು ಮರಿಗಳನ್ನು ಆಟ ಆಡಿಸಿ, ಮುದ್ದು ಮಾಡಿ ಅದಕ್ಕೆ ನಮ್ಮ ಅಮ್ಮನ ಹಾಗೆ ಎಲ್ಲಾ ಆರೈಕೆ ಮಾಡುತ್ತಿದ್ದಳು. ತನ್ನ ಲಕ್ಷ್ಮಣ ರೇಖೆಯನ್ನ ದಾಟುತ್ತಿದ್ದರೆ ಎಳೆದುಕೊಂಡು ಬರುತ್ತಿದ್ದಳು. ಎಲ್ಲಾ ಜೀವಿಗಳಲ್ಲಿಯೂ ಅಮ್ಮ ಒಂದೇ ಥರಹ ಎಂದು ನನಗೆ ನಗು ಬಂತು. ಕರಡಿ ಸೇರಿದಂತೆ ಎಲ್ಲ ಪ್ರಾಣಿಗಳು ಇದೇ ರೀತಿ ವರ್ತಿಸುತ್ತವೆ ಎಂದು ಹೇಳಿದರು ಪ್ರಮೋದ್.

ಹುಲಿ ತನ್ನ ಸಾಮ್ರಾಜ್ಯ ಕಟ್ಟುವ ಕಥೆ
ಪ್ರಮೋದ್ ಹುಲಿಗಳ ಬಗ್ಗೆ ಹೇಳುತ್ತಾ ಹೋದರು. ಗಂಡು ಮತ್ತು ಹೆಣ್ಣು ಹುಲಿಗಳು ಮುಂದಿನ ಪೀಳಿಗೆಗೋಸ್ಕರ ಸೇರಿದ ನಂತರ ಗಂಡು ಹುಲಿ ತನ್ನ ಪಾಡಿಗೆ ತಾನು ತನ್ನ ಸಾಮ್ರಾಜ್ಯವನ್ನ ಕಟ್ಟುವುದಕ್ಕೆ ಹೋಗುತ್ತದೆ. ಹೆಣ್ಣು ಹುಲಿ ತನ್ನ ಗಡಿಯಲ್ಲಿ ಮಗುವನ್ನು ಹೆತ್ತು, ಆ ಮರಿಗಳಿಗೆ 3 ತಿಂಗಳವರೆಗೆ ಹಾಲು ಕುಡಿಸಿ ನಂತರ ಅದಕ್ಕೆ ಬೇಟೆಯಾಡುವ ತರಬೇತಿ ಕೊಡುತ್ತದೆ. ಸ್ವಲ್ಪ 3, 4 ವರ್ಷ ಆದ ನಂತರ ತನ್ನ ಜಾಗದಿಂದ ಗಡಿಪಾರು ಮಾಡುತ್ತದೆ. ಆ ಮರಿಗಳು ತಮ್ಮ ಬೇಟೆಯನ್ನು ತಾವೇ ಆಡಬೇಕು, ಮತ್ತೆ ಸಾಮ್ರಾಜ್ಯ ಕಟ್ಟಿಕೊಳ್ಳಬೇಕು.

ಪ್ರಕೃತಿಯೂ ಪ್ರಾಣಿಗಳಿಗೆ ಏನೂ ಬಿಟ್ಟಿ ಕೊಡಲ್ಲ
ಅಮ್ಮ ಮಗನಿಗೂ, ಅಪ್ಪ ಮಗಳಿಗೂ ಜಗಳ ಆಗಿಯೇ ಒಂದಷ್ಟು ಜಾಗವನ್ನ ತಮಗೆ ಮಾಡಿಕೊಳ್ಳೋದು. ಪ್ರಕೃತಿಯಲ್ಲಿ ಯಾವುದೂ ಬಿಟ್ಟಿಯಾಗಿ ಕೊಡೋಲ್ಲ, ಪ್ರಾಣಿಗಳು ಕಷ್ಟ ಪಟ್ಟು ತಮ್ಮ ಸಾಮರ್ಥ್ಯದಿಂದಲೇ ನೀರು, ಬೇಟೆ, ಜಾಗವನ್ನ ಪಡೆದುಕೊಳ್ಳಬೇಕು. ಇದು ಪ್ರಕೃತಿ ನಿಯಮ, ಕಾಡಿನ ಯಾವ ಜೀವಿಯೂ ಇದನ್ನು ಮೀರುವಂತಿಲ್ಲ. ಮನಷ್ಯ ಮಾತ್ರ ತದ್ವಿರುದ್ಧವಾಗಿ ಎಲ್ಲವನ್ನು ಉಲ್ಟಾ ಮಾಡುತ್ತಿದ್ದಾನೆ. ಆರೋ ಹೆಡ್ ಮತ್ತು ಚಿರಿಕೋ ಮಕ್ಕಳನ್ನ ನೋಡಿ ನಮಗೆ ದೊಡ್ಡ ಜ್ಞಾನೋದಯವಾಯಿತು.

ತನ್ನ ಸಾಮ್ರಾಜ್ಯ ಕಟ್ಟಿಕೊಂಡ ಚತುರೆ
ಹುಲಿಗಳಿಗೆ ಅದರದೇ ಆದ ಸಂಖ್ಯೆಗಳಿರತ್ತೆ. ಹೆಣ್ಣು ಆರೋ ಹೆಡ್ ಗೆ ಟಿ - 84 ಮತ್ತು ಗಂಡು ಚಿರಿಕೋಗೆ ಟಿ - 86. ಚಿರಿಕೋ, ಲಾಡ್ಲಿ ಎಂಬ ಮುದ್ದು ಹೆಣ್ಣು ಹುಲಿಯ ಮಗ. ಇಡೀ ಕಾಡನ್ನ ಝೋನ್ಗಳಾಗಿ ವಿಂಗಡಿಸಿದಾಗ ಮೂರನೇ ಝೋನ್ ನ 18 ತಿಂಗಳಿಗೆ ತನ್ನದು ಮಾಡಿಕೊಂಡ ಚತುರೆ ಆರೋ ಹೆಡ್. ಇವಳು ಮಚಲಿ ಎಂಬ ಮತ್ತೊಂದು ಧೀರೆಯ ಮೊಮ್ಮಗಳು. ಯಾವುದೇ ಭಯವಿಲ್ಲದೇ ತನ್ನ ಇಡೀ ಸಾಮ್ರಾಜ್ಯವನ್ನ ಕಾಪಾಡಿಕೊಂಡು ಬರುತ್ತಿರುವ ಮಹಾರಾಣಿ.

ಮುಂದಿನ ವಾರ 100ನೇ ಲೇಖನದ ವಿಶೇಷ
ಹುಲಿಗಳ ದೃಷ್ಟಿ ಬಲು ಚುರುಕು, ಆದರೆ ಜಿಂಕೆಗಳಿಗೆ ಅದು ಬಹಳ ಕಡಿಮೆ. ಮುಂದೆಯೇ ಹುಲಿ ಅಲ್ಲಾಡದೇ ಕೂತಿದ್ದರೂ ಜಿಂಕೆಗೆ ಮರದ ಮೇಲೆ ಕೂತ ಕೋತಿಯ ಸದ್ದು ಕೇಳಿದ ಮೇಲೆ ಓಡೋದು. ಇಂತಹ ರೋಚಕ ವಿಷಯಗಳನ್ನ ಕಾಡಿನಲ್ಲಿ 12 ಘಂಟೆ ನೋಡಿದೆವು. ಮುಂದಿನ ವಾರ ಕಣ್ಣಾರೆ ಕಂಡ ಹುಲಿಯ ಟೆರಿಟೋರಿಯಲ್ ಜಗಳ, ಹುಲಿಯ ಬೇಟೆಯ ಬಗ್ಗೆ ಬರೆಯುತ್ತೇನೆ. ಜಯನಗರದಹುಡುಗಿಯ 100ನೇ ವಾರದ ವಿಶೇಷ..
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications