ಸೀಮಾಂಧ್ರಕ್ಕೆ ಜಂಟಿ ರಾಜಧಾನಿಯಾಗಿ ಬೆಂಗಳೂರು!
ಅಖಂಡ ಆಂಧ್ರ ಪ್ರದೇಶ ಇಬ್ಬಾಗವಾಗಬಾರದೆನ್ನುವ ಹೋರಾಟಕ್ಕೆ ಬೆಲೆ ಸಿಗಲಿಲ್ಲ. ರಾಜ್ಯ ಎರಡು ಹೋಳಾಗಿ ತೆಲಂಗಾಣ ರಾಜ್ಯದ ಉದಯವಾಗಿದೆ. ಹೈದರಾಬಾದ್ ಮತ್ತು ಸಿಕಂದರಾಬಾದ್ ಎನ್ನುವ ಶ್ರೀಮಂತ ಅವಳಿ ನಗರ ತೆಲಂಗಾಣದ ಪಾಲಾಗಿದೆ.
ಇನ್ನು ಸೀಮಾಂಧ್ರಕ್ಕೆ ರಾಜಧಾನಿಯನ್ನಾಗಿ ಯಾವ ನಗರವನ್ನು ಆಯ್ಕೆ ಮಾಡು ಬೇಕೆನ್ನುವ ಗೊಂದಲದಲ್ಲಿ ಕೇಂದ್ರ ಸಚಿವ ಸಂಪುಟ ತಲೆ ಕೆಡಿಸಿ ಕೊಂಡು ಕೂತಿದೆ. ರೇಸಿನಲ್ಲಿರುವ ವಿಶಾಖಪಟ್ಟಣಂ, ವಿಜಯವಾಡ ಮತ್ತು ಕರ್ನೂಲು ನಗರಗಳ ನಡುವೆ ಒಂದು ನಗರವನ್ನು ಆಯ್ಕೆ ಮಾಡಿಕೊಂಡರೆ ಮತ್ತೆ ವಿವಾದ ಭುಗಿಲೇಳಬಹುದು ಎನ್ನುವ ಭೀತಿಯಲ್ಲಿ ಕೇಂದ್ರ ಸರಕಾರ ಇದೆ ಎನ್ನಲಾಗುತ್ತಿದೆ.
ಹಾಗಾಗಿ, ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಮತ ಬ್ಯಾಂಕಿಗೆ ಯಾವುದೇ ತೊಂದರೆ ಯಾಗದಂತೆ ಜಾಣ ನಡೆ ಇಡಲು ಕೇಂದ್ರ ಸರಕಾರ ಹತ್ತು ಹಲವಾರು ಕಡೆಯಿಂದ ರಾಜಕೀಯ ಪಂಡಿತರ, ವಿಶ್ಲೇಷಕರ, ಕಾನೂನು ಪಂಡಿತರಿಂದ ಅಭಿಪ್ರಾಯ ಪಡೆದು ಕೊಳ್ಳಲು ಆರಂಭಿಸಿದೆ ಎನ್ನುವ ಗುಪ್ತ ಮಾಹಿತಿ ಲಭ್ಯವಾಗಿದೆ. (ಚಹಾ ಅಂಗಡಿ ಮಾಲಿಕರ ಮೇಲೆ ಕೇಂದ್ರ ಬ್ರಹ್ಮಾಸ್ತ್ರ)

ಈಗಾಗಲೇ ಅಖಂಡ ಆಂಧ್ರ ಇಬ್ಬಾಗದ ರಾಜಕೀಯ ನಡೆಯ ಹಿಂದೆ ವ್ಯಾಪಕ ಟೀಕೆ ಎದುರಿಸ ಬೇಕಾಗಿದ್ದರಿಂದ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಪಕ್ಷಕ್ಕಾಗುತ್ತಿರುವ ಹಿನ್ನಡೆಯಿಂದ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆದಷ್ಟು ಜಾಗರೂಕತೆಯಿಂದ ಮುಂದಿನ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದೆ.
ಒಂದು ಮೂಲದ ಪ್ರಕಾರ ಸೀಮಾಂಧ್ರಕ್ಕೆ ಬೆಂಗಳೂರನ್ನು ರಾಜಧಾನಿಯನ್ನಾಗಿ ಮಾಡಿದರೆ ಸೂಕ್ತ ಎನ್ನುವ ಮಾತು ಕೇಳಿ ಬರುತ್ತಿವೆ. ಕರ್ನಾಟಕ ಮತ್ತು ಸೀಮಾಂಧ್ರಕ್ಕೆ ಜಂಟಿಯಾಗಿ ಮುಂದಿನ ಹತ್ತು ವರ್ಷಗಳ ಅವಧಿಗೆ ಸಿಲಿಕಾನ್ ಸಿಟಿ ಬೆಂಗಳೂರನ್ನು ರಾಜಧಾನಿಯನ್ನಾಗಿ ಮಾಡುವುದು ಎಚ್ಚರಿಕೆಯ ನಡೆ ಎನ್ನುವುದು ರಾಜಕೀಯ ಪಂಡಿತರ ಅಂಬೋಣ. (ಕತ್ತಿ ಲಗ್ನಾ ಮಾಡಿದ್ರ... ಮಳಿ ಹೆಂಗ ಬರತದ)
ಮುಂದೆ ಪರಿಸ್ಥಿತಿಯನ್ನಾಧರಿಸಿ ನಿರ್ಧಾರ ತೆಗೆದು ಕೊಳ್ಳುವುದು ಬುದ್ದಿವಂತರ ನಡೆ ಎಂದು ರಾಜಕೀಯ ಪಂಡಿತರು ಕಾಂಗ್ರೆಸ್ ಹೈಕಮಾಂಡಿನ ತಲೆಗೆ ಹುಳ ಬಿಟ್ಟಿದ್ದಾರೆ ಎನ್ನುತ್ತದೆ ಖಚಿತ ಮಾಹಿತಿಗಳು.
ಬೆಂಗಳೂರನ್ನು ಜಂಟಿಯಾಗಿ ರಾಜಧಾನಿಯನ್ನಾಗಿ ಮಾಡಲು ರಾಜಕೀಯ ಪಂಡಿತರು ಕೊಡುತ್ತಿರುವ ಸ್ಪಷ್ಟನೆ ಇಂತಿದೆ:
> ಬೆಂಗಳೂರಿನಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗಿರುವುದರಿಂದ ಜಂಟಿ ರಾಜಧಾನಿಯನ್ನಾಗಿ ಮಾಡಿದರೆ ಪ್ರತಿಭಟನೆಯ ಕಾವು ಅಷ್ಟಾಗಿ ಇರದು.
> ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯಲ್ಲಿ ತೆಲುಗು ಭಾಷಿಗರು ಹೆಚ್ಚು ಕಮ್ಮಿ ಬಹುಸಂಖ್ಯಾತರಾಗಿರುವುದರಿಂದ ಸೀಮಾಂಧ್ರ ಭಾಗದ ಜನತೆ ಕೇಂದ್ರದ ನಿರ್ಧಾರ ಸೂಕ್ತ ಎನ್ನಬಹುದು.
> ಕನ್ನಡಿಗರು ಸಹೃದಯಿಗಳು ಮತ್ತು ವಿಶಾಲ ಮನೋಭಾವದವರಾಗಿರುವುರಿಂದ ಅವರ ಮನವೊಲಿಕೆ ಸುಲಭ.
> ಬೆಂಗಳೂರಿನಲ್ಲಿರುವ ಹೆಚ್ಚಿನ ಆಸ್ತಿಪಾಸ್ತಿಗಳ ಒಡೆತನ ತೆಲುಗು ಭಾಷಿಗರದ್ದಾಗಿರುವುದರಿಂದ ಇದರ ಲಾಭ ಪಡೆದು ಕೊಳ್ಳುವುದು.
> ಕರ್ನಾಟಕ ರಾಜ್ಯ ಸರಕಾರದ ಮತ್ತು ಬಿಬಿಎಂಪಿಯ ಹೆಚ್ಚಿನ ಗುತ್ತಿಗೆ ಕೆಲಸಗಳು ತೆಲುಗು ಭಾಷಿಗರ ಪಾಲಾಗುತ್ತಿರುವುದರಿಂದ ಜಂಟಿ ರಾಜಧಾನಿಯಾದರೆ ಕನ್ನಡಿಗರಿಂದ ಹೆಚ್ಚಿನ ವಿರೋಧ ಅಥವಾ ಒತ್ತಡ ವ್ಯಕ್ತವಾಗದು.
> ತೆಲುಗು ಚಿತ್ರಗಳು ಬೆಂಗಳೂರಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುವುದರಿಂದ ಈ ಮೂಲಕ ಸೀಮಾಂಧ್ರ ಭಾಗದ ಜನರನ್ನು ಒಪ್ಪಿಸಬಹುದು / ಆಕರ್ಷಿಸಬಹುದು.
> ಹತ್ತು ವರ್ಷಗಳ ಕಾಲ ಬೆಂಗಳೂರನ್ನು ಜಂಟಿ ರಾಜಧಾನಿಯನ್ನಾಗಿ ಮಾಡಿ, ಕನ್ನಡಿಗರಿಂದ ಹೆಚ್ಚಿನ ಪ್ರತಿಭಟನೆ ವ್ಯಕ್ತವಾಗದೇ ಇದ್ದ ಪಕ್ಷದಲ್ಲಿ ಸೀಮಾಂಧ್ರಕ್ಕೆ ಬೆಂಗಳೂರನ್ನು ರಾಜಧಾನಿಯನ್ನಾಗಿ ಮಾಡುವುದು.
> ಕರ್ನಾಟಕಕ್ಕೆ ಮೈಸೂರು, ಹುಬ್ಬಳ್ಳಿ ಅಥವಾ ದಾವಣಗೆರೆಯನ್ನು ರಾಜಧಾನಿಯನ್ನಾಗಿ ಮಾಡುವುದು ಸೂಕ್ತ ಎನ್ನುವ ಸಲಹೆಯನ್ನು ರಾಜಕೀಯ ಪಂಡಿತರು ನೀಡಿದ್ದಾರೆ ಎನ್ನಲಾಗುತ್ತಿದೆ.
(ಡೋಟ್ ಮಿಸ್ಟೇಕ್, ಇದೊಂದು ವಿಡಂಬನಾತ್ಮಕ ಲೇಖನ)












Click it and Unblock the Notifications