ದೆಹಲಿ ವಿಧಾನಸಭೆ ಚುನಾವಣೆ ಸೋಲು- ನರೇಂದ್ರ ಮೋದಿ ಜಾತಕ ವಿಶ್ಲೇಷಣೆ
ದೆಹಲಿ ವಿಧಾನಸಭೆಯ ಸೋಲಿನಿಂದಾಗಿ ಬಿಜೆಪಿ ಹಾಗೂ ನರೇಂದ್ರ ಮೋದಿ ಸೋಲಿನ ಆರಂಭ ಎಂಬ ವಿಶ್ಲೇಷಣೆ ಮಾಡಲಾಗುತ್ತಿದೆ. ಇದು ರಾಜಕೀಯ ವಿಶ್ಲೇಷಕರ ಮಾತಾಯಿತು, ಜ್ಯೋತಿಷಿಗಳು ಏನು ಅಭಿಪ್ರಾಯ ಪಡುತ್ತಾರೆ ಎಂಬ ಕುತೂಹಲದಿಂದ ಒನ್ ಇಂಡಿಯಾ ಕನ್ನಡದಿಂದ ಖ್ಯಾತ ಜ್ಯೋತಿಷಿಗಳಾದ ಕಬ್ಯಾಡಿ ಜಯರಾಮಾಚಾರ್ಯ ಅವರನ್ನು ಮಾತನಾಡಿಸಲಾಯಿತು.
ದೆಹಲಿ ಸೋಲಿಗೆ ಅವರು ಪ್ರತಿಕ್ರಿಯಿಸಿದ್ದು ಹೀಗೆ: ಈ ಸೋಲಿಗೆ ಸಂಪೂರ್ಣವಾಗಿ ದೆಹಲಿಯ ಬಿಜೆಪಿ ಘಟಕವೇ ಹೊಣೆ ಹೊರತು ಪ್ರಧಾನಿ ನರೇಂದ್ರ ಮೋದಿಯಲ್ಲ. ಇಲ್ಲಿ ಪ್ರಾದೇಶಿಕ ವಿಷಯಗಳು ಮತ್ತು ಪ್ರಾದೇಶಿಕ ನಾಯಕತ್ವದ ಪ್ರಭಾವ ಆಗಿದೆ ವಿನಾ ಬೇರೇನೂ ಅಲ್ಲ. ಈ ದೇಶದ ಪ್ರಧಾನಿ ಹುದ್ದೆಯಿಂದ ನರೇಂದ್ರ ಮೋದಿ ಅವರು ತಾವಾಗಿಯೇ ಇಳಿಯಬೇಕು ವಿನಾ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ದೆಹಲಿ ಸೋಲು ನರೇಂದ್ರ ಮೋದಿ ಅವರ ಪಾಲಿಗೆ ಒಂದು ಹಿನ್ನಡೆ ಹೌದು. ಅವರ ವಿರೋಧಿಗಳು ಒಗ್ಗೂಡಲು ನೆರವಾಗಿದೆ. ಒಂದು ವೇಳೆ ದೆಹಲಿಯಲ್ಲಿ ಗೆದ್ದಿದ್ದರೆ ರಾಜ್ಯಸಭೆಯಲ್ಲಿ ಹೆಚ್ಚಿನ ಸ್ಥಾನ ಬರುತ್ತಿತ್ತು. ಪ್ರಮುಖ ಕಾನೂನುಗಳನ್ನು ಜಾರಿಗೆ ತರಲು ಸಂಖ್ಯಾಬಲ ಬಂದಿರುತ್ತಿತ್ತು. ಅಷ್ಟರ ಮಟ್ಟಿಗೆ ಇದು ಸಣ್ಣ ಹಿನ್ನಡೆಯೇ ವಿನಾ ಬಿಜೆಪಿ ಹಾಗೂ ಮೋದಿ ಚರಿಷ್ಮಾ ಮುಗಿದಿದೆ ಅಂದುಕೊಳ್ಳುವವರ ಬಗ್ಗೆ ಅನುಕಂಪ ಮೂಡುತ್ತದೆ ಎಂದರು.

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದಾಗಲೂ ಇದೇ ರೀತಿಯಲ್ಲಿ, ಅಷ್ಟೇ ಬಿಜೆಪಿ ಮುಗಿದೇ ಹೋಯಿತು, ಮೋದಿ ಚರಿಷ್ಮಾ ಇಲ್ಲ ಅಂತಲೇ ಹೇಳಲಾಯಿತು. ಆದರೆ ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಅದ್ಭುತ ಗೆಲುವು ಸಾಧಿಸಲಿಲ್ಲವೆ, ಲೋಕಸಭೆ ಚುನಾವಣೆಯಲ್ಲಿ ಮೋದಿ ಎದುರಿಗೆ ಗೆಲುವು ಅಸಾಧ್ಯ ಎಂದು ಹೇಳಿದರು.
ಈಗ ಮೋದಿ ವಿರೋಧಿಗಳು ಒಟ್ಟಾಗುತ್ತಿದ್ದಾರೆ. ಅದರ ಜತೆಗೆ ಬಿಜೆಪಿ ಹಾಗೂ ಮೋದಿ ಪರವಾಗಿ ಹಿಂದೂಗಳು ಒಗ್ಗೂಡುತ್ತಾರೆ. ಮೋದಿ- ಅಮಿತ್ ಶಾ ಜೋಡಿಗೆ ಈಗಿನದು ಖಂಡಿತಾ ಸೋಲಲ್ಲ. ಪಶ್ಚಿಮ ಬಂಗಾಲದ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಹಾಗೂ ಬಿಜೆಪಿ ಸಮಬಲಕ್ಕೆ ಬರುತ್ತದೆ. ಉತ್ತರಪ್ರದೇಶದಲ್ಲಿ ಮುಂದೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡುತ್ತದೆ. ಬಿಹಾರದಲ್ಲಿ ಜೆಡಿಯು- ಬಿಜೆಪಿ ಮಿತ್ರ ಪಕ್ಷಗಳು ಆರಾಮವಾದ ಜಯ ಪಡೆಯುತ್ತವೆ ಎಂದರು.
ದೇಶದಲ್ಲಿನ ಆರ್ಥಿಕ ಹಿಂಜರಿತ 2022ರ ಏಪ್ರಿಲ್ ತನಕ ಹೀಗೆಯೇ ಮುಂದುವರಿಯುತ್ತದೆ. ಆ ನಂತರ ಎಲ್ಲವೂ ಸರಿಯಾಗುತ್ತದೆ. ಮತ್ತೊಮ್ಮೆ ಹೇಳುತ್ತಿದ್ದೇನೆ: ನರೇಂದ್ರ ಮೋದಿ ಪ್ರಧಾನಿ ಹುದ್ದೆಯಿಂದ ತಾವಾಗಿಯೇ ಕೆಳಗೆ ಇಳಿಯಬೇಕೆಂದು ಬಯಸುವ ತನಕ ಅವರನ್ನು ಸೋಲಿಸಲು ಯಾರಿಂದಲೂ ಆಗಲ್ಲ ಎಂದು ಹೇಳಿದರು ಜಯರಾಮಾಚಾರ್ಯ.












Click it and Unblock the Notifications