ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಆರ್ಥಿಕ ಸಂಕಷ್ಟ ? ಸಂಬಳ, ಪಿಂಚಣಿ ಸೇರಿ ಹಲವು ಸಮಸ್ಯೆ - ಜಿಬಿಎ ನೌಕರರ ಸಹಕಾರ ಸಂಘ ಆರೋಪ
Greater Bengaluru Authority: ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ರಚನೆಯಾದ ಮೇಲೆ ಹಲವು ಸಮಸ್ಯೆಗಳು ಎದುರಾಗುತ್ತಿವೆ ಎನ್ನುವ ಆರೋಪ ಕೇಳಿ ಬಂದಿದೆ. ಅದರಲ್ಲೂ ಮುಖ್ಯವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆ ವ್ಯಾಪ್ತಿಗಳಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನೌಕರರ ಸಹಕಾರ ಸಂಘದ ಅಧ್ಯಕ್ಷರಾಗಿರುವ ಎ. ಅಮೃತ್ರಾಜ್ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿಯಾದ ನಂತರ ಕೆಲವೊಂದು ನಿರ್ದಿಷ್ಟ ಆಡಳಿತ ಸೌಲಭ್ಯವನ್ನು ಪಡೆಯಲು ಪಾಲಿಕೆಯ ಅಧಿಕಾರಿ ನೌಕರರು ವಿಫಲರಾಗುತ್ತಿದ್ದಾರೆ ಎಂದಿದ್ದಾರೆ.
1) ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಆಕಸ್ಮಿಕವಾಗಿ ಮರಣ ಹೊಂದಿರುವ ಅಧಿಕಾರಿ ನೌಕರರ ಅವಲಂಬಿತರಿಗೆ ಈ ತಹಲ್ ವರೆವಿಗೂ ಅನುಕಂಪದ ಆಧಾರದ ಮೇಲೆ ನೌಕರಿ ಮತ್ತು ನಿವೃತ್ತಿ ವೇತನ ಉಪದಾನ ಮತ್ತು ಇನ್ನಿತರ ಆರ್ಥಿಕ ಸೌಲಭ್ಯವನ್ನು ಪಡೆಯದೆ ವಂಚಿತರಾಗಿ ಸದರಿ ಕುಟುಂಬ ಸದಸ್ಯರು ಸಂಕಷ್ಟದಲ್ಲಿದ್ದಾರೆ.

2) ಪಾಲಿಕೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಅಧಿಕಾರಿ ನೌಕರರಿಗೆ ಸಕಾಲದಲ್ಲಿ ನಿವೃತ್ತಿ ವೇತನ ಉಪದಾನ ಪಡೆಯದೆ ವಂಚಿತರಾಗುತ್ತಿದ್ದಾರೆ.
3) ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿಯಾದ ದಿನಾಂಕದಿಂದ ಪಾಲಿಕೆ ಅಧಿಕಾರಿ ನೌಕರರಿಗೆ ನಿಗದಿತ ದಿನಾಂಕದೊಳಗೆ ಸಂಬಳ ಪಡೆಯದೆ ಮಾನಸಿಕವಾಗಿ ಕುಗ್ಗಿದ್ದಾರೆ.
4) ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿಯಾದ ನಂತರ ಆರ್ಥಿಕ ಸೌಲಭ್ಯವಾದ ಗಳಿಕೆ ರಜೆ, ವಾರ್ಷಿಕ ವೇತನ ಬಡ್ತಿ, ವೇತನ ಶ್ರೇಣಿ (10,15,20) ವರ್ಷ ಟೈಮ್ ಬಾಂಡ್ ಮತ್ತು ಇನ್ನಿತರ ಆರ್ಥಿಕ ಸೌಲಭ್ಯ ಪಡೆಯಲು ವಿಫಲರಾಗುತ್ತಿದ್ದಾರೆ.
5) ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿಯಾದ ನಂತರ ಪಾಲಿಕೆಯ ಅಧಿಕಾರಿ ನೌಕರರು ಮತ್ತು ಅವಲಂಬಿತ ಕುಟುಂಬ ಸದಸ್ಯರು ಆರೋಗ್ಯ ಚಿಕಿತ್ಸೆ ಪಡೆದಿರುವ ಬಿಲ್ಅನ್ನು ಆಸ್ಪತ್ರೆಗಳಿಗೆ ಪಾವತಿಸದೆ ಹಾಗೂ ಆಸ್ಪತ್ರೆಗಳೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳದೆ ಇರುವುದರಿಂದ ಪಾಲಿಕೆ ಅಧಿಕಾರಿ ನೌಕರರು ಮತ್ತು ಅವಲಂಬಿತರು ಚಿಕಿತ್ಸೆ ಪಡೆಯಲು ವಿಫಲರಾಗಿರುತ್ತಾರೆ ಎಂದು ಆರೋಪ ಮಾಡಿದ್ದಾರೆ.
6) ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿಯಾದ ನಂತರ ಅರ್ಹ ಅಧಿಕಾರಿ ನೌಕರರಿಗೆ ವಸತಿಗೃಹ ಹಂಚಿಕೆಯಲ್ಲಿ ವಿಳಂಬವಾಗುತ್ತಿದೆ .
7) ಅಧಿಕಾರಿ ನೌಕರರು ಮುಂಬಡ್ತಿಗಳನ್ನು ಸಕಾಲದಲ್ಲಿ ಪಡೆಯದೆ ವಂಚಿತರಾಗುತ್ತಿದ್ದಾರೆ.
8) ವೃಂದ ಮತ್ತು ನೇಮಕಾತಿ ನಿಯಮಾವಳಿ ಅಡಿಯಲ್ಲಿ ತಿದ್ದುಪಡಿಯಾಗದೆ ಮುಂಬಡ್ತಿ ನೀಡಲು,ಸೇವಾ ಜೇಷ್ಠತಾ ಪಟ್ಟಿ ಅಂತಿಮಗೊಳಿಸದೆ ವಿಳಂಬವಾಗುತ್ತಿದೆ.
9) ಪಾಲಿಕೆಯಲ್ಲಿ ಕಾನೂನುಬಾಹಿರವಾಗಿ ಎರವಲು ಸೇವೆ ಮೇಲೆ ಕಾರ್ಯನಿರ್ಲಿಸುತ್ತಿರುವ ಅಧಿಕಾರಿ ನೌಕರರನ್ನು ಮಾತೃಇಲಾಖೆಗೆ ಹಿಂತಿರುಗಿಸಿರುವುದಿಲ್ಲ ಎನ್ನುವುದು ಸೇರಿದಂತೆ ಹಲವು ಸಮಸ್ಯೆ ಹಾಗೂ ಸವಾಲುಗಳನ್ನು ಗ್ರೇಟರ್ ಬೆಂಗಳೂರು ಹಾಗೂ ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆ ಅಧಿಕಾರಿ ಹಾಗೂ ಸಿಬ್ಬಂದಿ ಎದುರಿಸುತ್ತಿದ್ದಾರೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನೌಕರರ ಸಹಕಾರ ಸಂಘದ ಅಧ್ಯಕ್ಷರಾಗಿರುವ ಎ. ಅಮೃತ್ರಾಜ್ ಅವರು ಆರೋಪಿಸಿದ್ದಾರೆ. ಈ ವಿಚಾರವು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆರ್ಥಿಕತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಸೃಷ್ಟಿ ಮಾಡಿದೆ.












Click it and Unblock the Notifications