ಪ್ಲಾಸ್ಟಿಕ್ ಬಳಕೆ ನಿಷೇಧ, ಮೋದಿ ಕರೆಗೆ ಓಗೊಟ್ಟ ಆಂಧ್ರದ ರೈತರು
ವಿಜಯವಾಡ, ಅಕ್ಟೋಬರ್ 21: ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿರುವ ಮೋದಿ,"ಒಂದು ಬಾರಿ ಬಳಸಿ ಬಿಸಾಡುವಂಥ ಹಾನಿಕಾರಕ ಪ್ಲಾಸ್ಟಿಕ್ ಅನ್ನು ಬಳಸಬೇಡಿ" ಎಂದು ಕರೆ ನೀಡಿದ್ದಾರೆ. ಮೋದಿ ಕರೆಯನ್ನು ಸ್ವೀಕರಿಸಿರುವ ಆಂಧ್ರಪ್ರದೇಶದ ವಿಜಯವಾಡದ ರೈತ ಸಮೂಹ ಹೊಸ ರೀತಿಯಲ್ಲಿ ಪ್ಲಾಸ್ಟಿಕ್ ವಿರೋಧಿ ಅಭಿಯಾನ ನಡೆಸಿದೆ.
Recommended Video
ಗುಂಟೂರು ಜಿಲ್ಲೆಯ ರೈತರು ನಡೆಸುವ 'ರೈತರ ಬಜಾರ್' ನಲ್ಲಿ ಕೊಟ್ಟು-ತಗೋ ವಿನಿಮಯ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಪ್ಲಾಸ್ಟಿಕ್ ಬಾಟಲು, ಬ್ಯಾಗ್ ಗಳನ್ನು ಕೊಟ್ಟು ಉಚಿತವಾಗಿ ತರಕಾರಿ ಕೊಳ್ಳಬಹುದಾಗಿದೆ. ಪ್ಲಾಸ್ಟಿಕ್ ತ್ಯಾಜ್ಯದ ತೂಕಕ್ಕೆ ಸಮನಾದ ತರಕಾರಿಯನ್ನು ಪಡೆಯಬಹುದಾಗಿದೆ. 250 ಗ್ರಾಂ, 500 ಗ್ರಾಂ ತೂಗುವ ಪ್ಲಾಸ್ಟಿಕ್ ತ್ಯಾಜ್ಯ ನೀಡಿ ತರಕಾರಿಯನ್ನು ಪಡೆಯುವವರ ಸಂಖ್ಯೆ ಹೆಚ್ಚಿದೆ.
ಹತ್ತಿ ಹಾಗೂ ಸೆಣಬಿನ ಬ್ಯಾಗನ್ನು ಬಳಸುವಂತೆ ಜಾಗೃತಿ ಮೂಡಿಸಲಾಗುವುದು ಎಂದು ತೆನಾಲಿ ಶಾಸಕ ಅನ್ನಾಬಾತ್ ಹುನಿ ಶಿವಕುಮಾರ್ ಹೇಳಿದ್ದಾರೆ.

ಬರಿ- ಪಾಲೆಂ ರಸ್ತೆಯಲ್ಲಿರುವ ರೈತು ಬಜಾರ್ ಮಳಿಗೆಯಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಇದನ್ನು ಇನ್ನಷ್ಟು ಮಳಿಗೆಗಳಿಗೆ ವಿಸ್ತರಿಸಲಾಗುವುದು ಎಂದು ಶಾಸಕ ಶಿವಕುಮಾರ್ ಹೇಳಿದರು.
ಒಂದು ಬಾರಿ ಬಳಸಿ ಬಿಸಾಡುವಂಥ ಹಾನಿಕಾರಕ ಪ್ಲಾಸ್ಟಿಕ್ ಅನ್ನು ಬಳಸಬೇಡಿ ಎಂದು ಈಗಾಗಲೆ ಜಾಗೃತಿ ಮೂಡಿಸಲಾಗಿದೆ, ಅಂಗಡಿ ಮಾಲೀಕರು ಪ್ಲಾಸ್ಟಿಕ್ ಬ್ಯಾಗ್ ಬಳಕೆಯನ್ನು ಬಹುತೇಕ ನಿಲ್ಲಿಸಿದ್ದಾರೆ ಎಂದು ತೆನಾಲಿ ಮುನ್ಸಿಪಾಲ್ ಆರೋಗ್ಯ ಅಧಿಕಾರಿ ಬಿ.ವಿ ರಮಣ ಹೇಳಿದ್ದಾರೆ.
ಕರ್ನಾಟಕದ ಕೆಲ ಹೋಟೆಲ್ ಗಳಲ್ಲಿ ಕೆಜಿಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ನೀಡಿ, ಉಪಾಹಾರ ಪಡೆಯುವ ವ್ಯವಸ್ಥೆ ಕಂಡು ಬಂದಿದೆ. ದೇಶದ ಕೆಲವೆಡೆ ಇಂಥ ವಿನಿಮಯ ವ್ಯವಸ್ಥೆ ಸದ್ಯ ನಿಧಾನಗತಿಯಿಂದ ಜನಪ್ರಿಯಗೊಳ್ಳುತ್ತಿದೆ.












Click it and Unblock the Notifications