ಉಡುಪಿ ಮಲ್ಲಿಗೆಗೆ ಕುದುರಿದ ಬೇಡಿಕೆ: ಕೃಷಿಕರ ಮೊಗದಲ್ಲಿ ಮಂದಹಾಸ
ಉಡುಪಿ, ಸೆಪ್ಟೆಂಬರ್ 1: ಉಡುಪಿ ಜಿಲ್ಲೆಯಲ್ಲಿ ಬೆಳೆಯುವ ಮಲ್ಲಿಗೆ ಹೂವಿಗೆ ವಿಶೇಷ ಬೇಡಿಕೆ ಇದ್ದು, ಅದರಲ್ಲೂ ಶಂಕರಪುರ ಮಲ್ಲಿಗೆ ದೇಶ-ವಿದೇಶದಲ್ಲೂ ಫೇಮಸ್ ಆಗಿದೆ. ಆದರೆ ಲಾಕ್ ಡೌನ್ ನಲ್ಲಿ ಮಲ್ಲಿಗೆಯನ್ನು ಹೆಚ್ಚಾಗಿ ಬೆಳೆದರೂ ಅದನ್ನು ಕೇಳುವವರೇ ಇರಲಿಲ್ಲ.
ಮಲ್ಲಿಗೆ ಹೂವಿನ ಬೆಳೆಯನ್ನು ನಂಬಿಕೊಂಡು ಜೀವನ ನಡೆಸುವ ಅವೆಷ್ಟೋ ಕುಟುಂಬಗಳಿವೆ. ಆದರೆ ಕಳೆದ ಕೆಲವು ತಿಂಗಳಿನಿಂದ ಜಗತ್ತನ್ನೇ ಕಾಡುತ್ತಿರುವ ಕೊರೊನಾ ವೈರಸ್ ಮಹಾಮಾರಿ ಎಲ್ಲಾ ಕ್ಷೇತ್ರಗಳಿಗೂ ಪರೋಕ್ಷವಾಗಿ ನೀಡುತ್ತಿರುವ ಸಮಸ್ಯೆಯಿಂದ ಮಲ್ಲಿಗೆ ಕೃಷಿಯೂ ಹೊರತಾಗಿರಲಿಲ್ಲ.

ಮಲ್ಲಿಗೆ ಹೂವು ಎನ್ನುವುದು ಸಭೆ-ಸಮಾರಂಭ ಮತ್ತು ದೇವಸ್ಥಾನಗಳ ನಿತ್ಯ ಪೂಜೆಯ ಆಧಾರದ ಮೇಲೆ ನಿಂತಿರುವ ಹಿನ್ನೆಲೆಯಲ್ಲಿ ಸಾಲ-ಸೋಲ ಮಾಡಿ ಮಲ್ಲಿಗೆ ಕೃಷಿ ಮಾಡಿದವರು ಹೊಟ್ಟೆ ಮೇಲೆ ತಣ್ಣಿರುವ ಬಟ್ಟೆ ಹಾಕಿಕೊಳ್ಳುವಂತೆ ಮಾಡಿತ್ತು.

ಸದ್ಯ ಮಲ್ಲಿಗೆ ಬೇಡಿಕೆಯಲ್ಲಿ ಚೇತರಿಕೆ ಕಂಡುಬಂದಿದ್ದು, ಕಳೆದ ಕೆಲವು ದಿನಗಳಿಂದ ದಾಖಲೆಯ ಮೊತ್ತಕ್ಕೆ ಮಲ್ಲಿಗೆ ಹೂವು ಮಾರಾಟವಾಗುತ್ತಿರುವುದು ಮಲ್ಲಿಗೆ ಬೆಳೆಗಾರರಿಗೆ ಸಂತಸ ನೀಡಿದೆ.

ಲಾಕ್ ಡೌನ್ ಸಂದರ್ಭದಲ್ಲಿ ಮಲ್ಲಿಗೆ ಅಟ್ಟೆಗೆ ಕೇವಲ ಐವತ್ತು ರೂಪಾಯಿಗೆ ಕುಸಿದಿತ್ತು. ಬಳಿಕ ಮೆಲ್ಲನೆ ಚೇತರಿಕೆ ಕಂಡುಕೊಳ್ಳುತ್ತಾ ಇದೀಗ ಮಲ್ಲಿಗೆ ಹೂವಿನ ಅಟ್ಟೆಯೊಂದಕ್ಕೆ 1500 ರೂ.ಗೆ ತಲುಪಿದ್ದು, ಕೃಷಿಕರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಮಲ್ಲಿಗೆ ಗರಿಷ್ಟ ದರ ಕಾಯ್ದುಕೊಂಡು ಬೆಳೆಗಾರರ ಹಿತ ಕಾಯಲಿ ಎಂದು ಎಲ್ಲರ ಹಾರೈಕೆಯಾಗಿದೆ.












Click it and Unblock the Notifications