ಶಿವರಾಜ್ 'ಸ್ಟಾರ್ಸ್' ಗೆ ಜನಸಾಮಾನ್ಯರ 'ಹಿಡಿಶಾಪ'
ಬೆಂಗಳೂರು, ಜ.27: ಒಂದೆಡೆ ಡಬ್ಬಿಂಗ್ ವಿರೋಧಿಸಿ ಕನ್ನಡ ಚಿತ್ರರಂಗದ ಕಲಾವಿದರು, ಕನ್ನಡ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದೆಡೆ ಕಬ್ಬಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಸೋಮವಾರ ನಗರದ ವಿವಿಧೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ.
ರಾಜ್ಯದ ರೈತರು ಅನಿರ್ಧಿಷ್ಟಕಾಲದ ಮುಷ್ಕರ ನಿಲ್ಲಿಸಿ ಸೋಮವಾರ ಜೈಲು ಭರೋ ಚಳುವಳಿ ಆರಂಭಿಸಿದ್ದಾರೆ. ಬೆಳಗ್ಗೆಯಿಂದ ಸಿನಿಮಾ ಮಂದಿಯಿಂದ ಟ್ರಾಫಿಕ್ ಜಾಮ್ ಸಂಜೆ ಯಾಗುತ್ತಿದ್ದಂತೆ ರೈತಸಂಘದ ಹೋರಾಟದಿಂದ ಟ್ರಾಫಿಕ್ ಜಾಮ್. ಒಟ್ಟಾರೆ ಜನ ಸಾಮಾನ್ಯರ ಪರದಾಟ ಹೇಳ ತೀರದಾಗಿದೆ.
ಡಬ್ಬಿಂಗ್ ವಿರೋಧಿಸಿ ಕಲಾವಿದರ ಸಂಘದ ನೇತೃತ್ವವಹಿಸಿರುವ ನಟ ಶಿವರಾಜ್ ಕುಮಾರ್, ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್, ಕರವೇ ಪ್ರವೀಣ್ ಶೆಟ್ಟಿ ಬಣದವರು ಬೆಳಗ್ಗಿ 11 ರಿಂದಲೇ ಮೈಸೂರು ಬ್ಯಾಂಕಿನಿಂದ ಆರಂಭಗೊಂಡು ಕೆಂಪೇಗೌಡ ರಸ್ತೆಯಲ್ಲಿ ಸಾಗಿ ಸೆಂಟ್ರಲ್ ಕಾಲೇಜಿನ ಕ್ರಿಕೆಟ್ ಮೈದಾನಕ್ಕೆ ತೆರಳಿದರು.
ಡಾ. ರಾಜ್ ಕುಮಾರ್ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದ್ ಅವರು ನೇತೃತ್ವದಲ್ಲಿ ಕನ್ನಡ ಚಿತ್ರರಂಗದ ನಾಯಕ ನಾಯಕಿಯರು, ಸಹ ಕಲಾವಿದರು, ಕಿರುತೆರೆ ಕಲಾವಿದರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು, ಕನ್ನಡ ಪರ ಅಭಿಮಾನಿಗಳು, ಕನ್ನಡ ಪರ ಸಂಘಟನೆಗಳು ಪ್ರತಿಭಟನೆಗೆ ಸಾಥ್ ನೀಡಿದ್ದಾರೆ. ಚಿತ್ರೋದ್ಯಮ ಬಂದ್ ಹಿನ್ನೆಲೆಯಲ್ಲಿ ಗಾಂಧಿ ನಗರದ ಪ್ರಮುಖ ಚಿತ್ರಮಂದಿರಗಳಲ್ಲಿ ಮಾರ್ನಿಂಗ್ ಶೋ, ಮ್ಯಾಟ್ನಿನಿ ಬಂದ್ ಆಗಿದೆ. ಫಸ್ಟ್ ಶೋ ನಡೆಯುವುದು ಅನುಮಾನ ಎನ್ನಲಾಗಿದೆ.

ಬೈಕ್ ಸವಾರರ ತಂಡದ ಮೆರವಣಿಗೆ ಭರಾಟೆ
ರಾಜಾಜಿನಗರದಿಂದ ಬೈಕ್ ಸವಾರರ ತಂಡವೊಂದು ಶಿವರಾಜ್ ಕುಮಾರ್ ಅವರ ನಿಲುವನ್ನು ಬೆಂಬಲಿಸಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು. ಆನಂದ್ ಸರ್ಕಲ್ ಮುಖಾಂತರ ಸೆಂಟ್ರಲ್ ಕಾಲೇಜು ಮೈದಾನವನ್ನು ಪ್ರವೇಶಿಸಿದರು. ಇದರ ಜತೆಗೆ ಕನ್ನಡ ಪರ ಅಭಿಮಾನಿ ಸಂಘಗಳು ನಗರದ ನಾನಾ ಭಾಗಗಳಿಂದ ಆಗಮಿಸುತ್ತಿರುವುದರಿಂದ ಮೆಜೆಸ್ಟಿಕ್, ಶೇಷಾದ್ರಿಪುರಂ, ಮೈಸೂರ್ ಬ್ಯಾಂಕ್, ಕೆ. ಆರ್. ವೃತ್ತಗಳಲ್ಲಿ ಟಾಫ್ರಿಕ್ ಜಾಮ್ ಉಂಟಾಯಿತು. ಚಿತ್ರಕೃಪೆ: ಶಿವುಅಡ್ಡಾ

ಕಾಲೇಜು ಮೈದಾನದಲ್ಲಿ ತುಂಬಿದ ಜನಸಾಗರ
ಸಿನಿ ಕಲಾವಿದರು ನಗರದ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಗೆ ಸಾಥ್ ನೀಡಲು ಕನ್ನಡ ಪರ ಅಭಿಮಾನಿ ಸಂಘಗಳು ನಗರದ ನಾನಾ ಭಾಗಗಳಿಂದ ಆಗಮಿಸಿದ್ದರು. ಕರವೇ, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭಿಮಾನಿಗಳು ಸೇರಿದಂತೆ ಅನೇಕ ಅಭಿಮಾನಿಗಳ ಸಂಘದ ಸದಸ್ಯರು ಪ್ರತಿಭಟನೆಗೆ ಇಳಿದಿದ್ದರು. ಹೀಗಾಗಿ ಮೆಜೆಸ್ಟಿಕ್, ಶೇಷಾದ್ರಿಪುರಂ ಮೈಸೂರ್ ಬ್ಯಾಂಕ್, ಕೆ. ಆರ್. ವೃತ್ತಗಳಲ್ಲಿ ಟಾಫ್ರಿಕ್ ಜಾಮ್ ಉಂಟಾಯಿತು.

ಸಿನಿಮಾ ಮಂದಿ ನಂತರ ರೈತರ ಚಳವಳಿ
ರೈತರಿಗೆ ನೀಡಿದ್ದ ಭರವಸೆಯನ್ನು ಪೂರೈಸುವಲ್ಲಿ ವಿಫಲವಾದ ರಾಜ್ಯ ಸರ್ಕಾರದ ವಿರುದ್ಧ ಫ್ರೀಡಂ ಪಾರ್ಕಿನಲ್ಲಿ ನಡೆಸುತ್ತಿದ್ದ ಅನಿರ್ಧಿಷ್ಟಕಾಲದ ಮುಷ್ಕರ ನಿಲ್ಲಿಸಿ ಇಂದು ಸಂಜೆ 5 ಗಂಟೆಗೆ ಜೈಲ್ ಭರೋ ಚಳುವಳಿ ನಡೆಸಲು ನಿರ್ಧರಿಸಿದ್ದು,ಜೈಲು ಭರೋ ಚಳವಳಿ ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ಸಂಘದ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ರೈತ ಸಂಘ ಮುಖಂಡರು ತೀರ್ಮಾನ ಕೈಗೊಂಡಿದ್ದಾರೆ.

ಟ್ರಾಫಿಕ್ ಜಾಮ್ ನಿಯಂತ್ರಿಸಲು ಹರಸಾಹಸ
ಒಟ್ಟಾರೆ, ಗಾಂಧಿನಗರ, ಸುಭಾಷ್ ನಗರ, ಮೆಜೆಸ್ಟಿಕ್, ಕೆ.ಆರ್ ವೃತ್ತ, ಕಾರ್ಪೋರೇಷನ್, ಶೇಷಾದ್ರಿಪುರ, ಮಲ್ಲೇಶ್ವರ ಸೇರಿದಂತೆ ಹಲವು ಭಾಗದಲ್ಲಿ ಗಂಟೆಗಟ್ಟಲ್ಲೇ ಟ್ರಾಫಿಕ್ ನಲ್ಲಿ ನಿಂತ ಜನರು ಸ್ಟಾರ್ ಗಳ ಹೋರ್ಡಿಂಗ್ ನೋಡಿ ಗೊಣಗಾಡಿಕೊಂಡು ಹಿಡಿಶಾಪ ಹಾಕಿದರು. ರೈತರ ಚಳವಳಿ ತಡವಾಗಿದ್ದರಿಂದ ಶಾಪದಿಂದ ಬಚಾವಾದರು. ನಗರ ಟ್ರಾಫಿಕ್ ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ಸಾಧ್ಯವಾಗದೆ ಹೆಣಗಾಡಿದರು.












Click it and Unblock the Notifications