'ರೈತರೇನು ಮಹಾ' ಎನ್ನುವವರ ನಡುವೆಯೂ ಯಶಸ್ವಿಯಾದ ಭಾರತ್ ಬಂದ್
ಕೇಂದ್ರ ಸರ್ಕಾರ ತಂದಿರುವ ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಕಳೆದ ಎರಡು ವಾರಗಳಿಂದ ಪ್ರತಿಭಟನಾ ನಿರತ ರೈತರು ಮಂಗಳವಾರ ಡಿ.8, 2020 ರಂದು ಭಾರತ್ ಬಂದ್ಗೆ ಕರೆ ನೀಡಿದ್ದರು. ದೇಶದ ಎಲ್ಲಾ ಭಾಗಗಳಲ್ಲಿ ಬಂದ್ಗೆ ಸಾಂಕೇತಿಕವಾಗಿ ಬೆಂಬಲ ವ್ಯಕ್ತವಾಯಿತು.
ಇಡೀ ದೇಶಾದ್ಯಂತ ಎಪಿಎಂಸಿಗಳು ಬಂದ್ ಮಾಡಿವೆ. (6,946 ಮಂಡಿಗಳು) ದೇಶಾದ್ಯಂತ ಬಂದ್ ಶಾಂತ ರೀತಿಯಲ್ಲಿ ನಡೆದಿದ್ದು, ಸುಮಾರು 20,000 ಸ್ಥಳಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಜನ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಕರೆ ನೀಡಿದ್ದ 500 ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟ "ಸಂಯುಕ್ತ ಕಿಸಾನ್ ಮೋರ್ಚಾ" ಹೇಳಿದೆ.
ಸಾಂಕೇತಿಕವಾಗಿ ಮಾಡಿರುವ ಈ ಬಂದ್ ನಿಂದ ಇತರೆ ಎಲ್ಲಾ ಆರ್ಥಿಕ ಚಟುವಟಿಕೆಗಳು ಎಂದಿನಂತೆ ಕಾರ್ಯನಿರ್ವಹಿಸಿದವಾದರೂ, ಸ್ವಯಂ ಪ್ರೇರಿತವಾಗಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿದವರ ಸಂಖ್ಯೆಯೇನೂ ಕಡಿಮೆ ಇರಲಿಲ್ಲ.

ಅದೇ ರೀತಿ ಭಾರತ್ ಬಂದ್ ಸಂದರ್ಭದಲ್ಲಿ ರೈತರನ್ನು ನಕ್ಸಲರು, ರೈತರೇನ್ ಮಹಾ ಮಾಡಿರೋದು, ಎಲ್ಲರೂ ಕೆಲಸ ಮಾಡಿದಂತೆ ಅವರೂ ಮಾಡುತ್ತಾರೆ. ನಮ್ಮ ಟ್ಯಾಕ್ಸ್ ಹಣದಲ್ಲಿ ಅವರಿಗೇಕೆ ಸಬ್ಸಿಡಿ, ನಮಗೆ ರೈತರೇ ಬೇಕಿಲ್ಲ ಎಂಬ ಹೇಳಿಕೆಗಳನ್ನು ನೀಡಿರುವ ಸಾಂದರ್ಭಿಕ ಮಹಾನುಭಾವರಿಗೇನೂ ಕಡಿಮೆ ಇರಲಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಅವರ ಆಮಶಂಕೆಯಂಥಃ ಮಾತುಗಳು ಕಾಣಿಸಿಕೊಂಡವು. ಹಾಗೆ ಮಾತನಾಡುವವರ ತಿಳುವಳಿಕೆ ಮಟ್ಟದ ಬಗ್ಗೆ ಅನುಕಂಪ ಸೂಚಿಸಬಹುದೇ ಹೊರತು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ.

ಒಂದು ಬೆಳೆ ಬೆಳೆಯಲು ಬೇಕಾದ ಸಮಯ, ಬೀಜ, ಗೊಬ್ಬರ, ಔಷಧಿ ನಿರ್ವಹಣೆ, ನೀರು, ಕೂಲಿ, ನೆಲದ ಕಂದಾಯ ಇತ್ಯಾದಿಗಳನ್ನು ಲೆಕ್ಕ ಹಾಕಿ ಅದನ್ನು ರೈತ ಎಷ್ಟು ಬೆಲೆಗೆ ಅನಿವಾರ್ಯವಾಗಿ ಮಾರಬೇಕಾದ ಪರಿಸ್ಥಿತಿ ಇದೆ ಎಂದು ತಿಳಿದಿರುವ ಯಾರೂ ರೈತರ ಬಗ್ಗೆ ಹಗುರವಾಗಿ ಮಾತನಾಡಲಾಗುವುದಿಲ್ಲ. ಇನ್ನೂ ಮೀರಿ ಸರ್ಕಾರವೇ ನಿಗದಿ ಮಾಡಿದ ಕನಿಷ್ಟ ಬೆಂಬಲ ಬೆಲೆಯೂ ರೈತರ ಬೆಳೆಗಳಿಗೆ (23 ಬೆಳೆಗಳು) ಸಿಗುತ್ತಿಲ್ಲ ಎಂಬ ವಿಷಯ ಅವರಿಗೆ ತಿಳಿದಿದೆಯೇ ?

ಇಷ್ಟೆಲ್ಲದರ ನಡುವೆ ಈಗಿನ ಹೋರಾಟಕ್ಕೆ ಪ್ರತಿಕ್ರಿಯೆಯಾಗಿ ಸರ್ಕಾರ ಈಗ ಮಾಡಿರುವ ಮೂರೂ ಹೊಸ ಕಾನೂನುಗಳನ್ನು ಹಿಂಪಡೆಯದೆ ಬೇರೆ ದಾರಿಯಿಲ್ಲ. ಜನಪರ ಆರ್ಥಿಕ ತಜ್ಞರ ಸಲಹೆ ಸೂಚನೆಗಳಂತೆ ಕಾಯಿದೆಗಳಲ್ಲಿ ಸುಧಾರಣೆಯ ಮಾರ್ಗ ಹುಡುಕಿದರೂ ಆದೀತು. ಅಂಥದೊಂದು ಕಾಳಜಿ ಸರ್ಕಾರ ತೋರಲೇಬೇಕಿದೆ.












Click it and Unblock the Notifications