ರೈತರ ಜತೆಗಿನ ಸಭೆಗೂ ಮುನ್ನ ಗೋಯಲ್, ತೋಮರ್ ಜತೆ ಅಮಿತ್ ಶಾ ಚರ್ಚೆ
ನವದೆಹಲಿ, ಡಿಸೆಂಬರ್ 29: ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಬುಧವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಇದಕ್ಕೂ ಮುನ್ನ ಸರ್ಕಾರಕ್ಕೆ ಪತ್ರ ಬರೆದಿರುವ ರೈತ ಒಕ್ಕೂಟಗಳು, ಮೂರು ಕಾಯ್ದೆಗಳನ್ನು ರದ್ದುಗೊಳಿಸುವುದು ಮತ್ತು ಕನಿಷ್ಠ ಬೆಂಬಲ ಬೆಲೆಯ ಕಾನೂನಾತ್ಮಕ ಖಾತರಿಯನ್ನು ನೀಡುವ ಬಗ್ಗೆ ಮಾತ್ರವೇ ಚರ್ಚೆ ನಡೆಯಲಿದೆ ಎಂದು ಸಂದೇಶ ರವಾನಿಸಿವೆ.
ಬುಧವಾರದಂದು ಆರನೇ ಸುತ್ತಿನ ಮಾತುಕತೆ ನಡೆಸುವಂತೆ ಸರ್ಕಾರವು ರೈತರಿಗೆ ಆಹ್ವಾನ ನೀಡಿದೆ. 40 ರೈತ ಸಂಘಟನೆಗಳ ಪ್ರತಿನಿಧಿಯಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ಮಂಗಳವಾರ ಬರೆದ ಪತ್ರದಲ್ಲಿ, ತನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದು, ಚರ್ಚೆಯು ಮೂರು ಕಾಯ್ದೆಗಳನ್ನು ವಾಪಸ್ ಪಡೆಯುವುದು ಹಾಗೂ ಎಂಎಸ್ಪಿಯ ಕಾನೂನುಬದ್ಧ ಖಚಿತತೆಯ ಕುರಿತು ಮಾತ್ರವೇ ಕೇಂದ್ರೀಕರಿಸಲಿದೆ ಎಂದಿದೆ.
ಕೃಷಿ ಕಾಯ್ದೆ ವಿರೋಧಿಸಿ ಪಾಟ್ನಾದಲ್ಲಿ ಸಾವಿರಾರು ಜನರಿಂದ ಪ್ರತಿಭಟನೆ; ಲಾಠಿ ಚಾರ್ಜ್
ಈ ನಡುವೆ ಬುಧವಾರದ ಚರ್ಚೆಗೂ ಮುನ್ನ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಪಿಯೂಷ್ ಗೋಯಲ್ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಮಂಗಳವಾರ ಸಂಜೆ ಭೇಟಿ ಮಾಡಿ ಸುಮಾರು ಎರಡು ಗಂಟೆ ಮಾತುಕತೆ ನಡೆಸಿದ್ದಾರೆ.
ಬುಧವಾರ ನಡೆಯಲಿರುವ ಚರ್ಚೆಯಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ವಾಣಿಜ್ಯ ಮತ್ತು ಕೈಗಾರಿಕೆ ರಾಜ್ಯ ಖಾತೆ ಸಚಿವ ಸೋಮ್ ಪ್ರಕಾಶ್ ಅವರು ಕೇಂದ್ರ ಸರ್ಕಾರದ ಪ್ರತಿನಿಧಿಗಳಾಗಿರಲಿದ್ದಾರೆ.
ಪ್ರತಿಭಟನೆ: 1,500ಕ್ಕೂ ಅಧಿಕ ಮೊಬೈಲ್ ಟವರ್ಗಳಿಗೆ ಹಾನಿ ಮಾಡಿದ ರೈತರು
ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಸುತ್ತಮುತ್ತಿನ ಪ್ರದೇಶಗಳಲ್ಲಿನ ವಾಯು ಗುಣಮಟ್ಟ ನಿರ್ವಹಣೆ ಸುಗ್ರೀವಾಜ್ಞೆ ಆಯೋಗ 2020ರಲ್ಲಿ ದಂಡದ ನಿಯಮಗಳಿಂದ ರೈತರನ್ನು ಹೊರತಾಗಿಸುವಂತೆ ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸುವಂತೆಯೂ ಕಿಸಾನ್ ಮೋರ್ಚಾ ಆಗ್ರಹಿಸಿದೆ. ಈ ಪತ್ರದ ಮೂಲಕ ಕೇಂದ್ರ ಸರ್ಕಾರದ ಆಹ್ವಾನವನ್ನು ಅದು ಸ್ವೀಕರಿಸಿದೆ.