ಲೋಕಸಭೆಯಲ್ಲಿ ಸುಮಲತಾ ಮೊದಲ ಭಾಷಣ: ಏನೇನು ಹೇಳಿದರು?
Recommended Video
ನವದೆಹಲಿ, ಜುಲೈ 02: ಲೋಕಸಭೆಯಲ್ಲಿ ತಮ್ಮ ಮೊದಲ ಭಾಷಣ ಮಾಡಲು ಮಂಡ್ಯ ಸಂಸದೆ ಸುಮಲತಾ ಅವರಿಗೆ ಇಂದು ಅವಕಾಶ ದೊರೆತಿದೆ. ದೊರೆತ ಅವಕಾಶವನ್ನು ಅವರು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ.
ಈಗಾಗಲೇ ಹೊಸ ಸಂಸದರಾದ ಪ್ರಜ್ವಲ್ ರೇವಣ್ಣ, ತೇಜಸ್ವಿ ಸೂರ್ಯ ಅವರುಗಳು ತಮ್ಮ ಮೊದಲ ಭಾಷಣ ಮಾಡಿ ಸದನದ ಹಾಗೂ ರಾಜ್ಯದ ಗಮನ ಸೆಳೆದಿರುವ ಕಾರಣ, ಸುಮಲತಾ ಅವರ ಮೇಲೆ ನಿರೀಕ್ಷೆ ಹೆಚ್ಚಿತ್ತು, ಆದರೆ ನಿರೀಕ್ಷೆಯನ್ನು ಹುಸಿಗೊಳಿಸದೆ, ತಮ್ಮ ಜಿಲ್ಲೆಯ ಬವಣೆಯನ್ನು ಅವರು ಸದನದ ಮುಂದಿಟ್ಟಿದ್ದಾರೆ.
ಮೊದಲಿಗೆ ಕನ್ನಡದಲ್ಲಿ ಭಾಷಣ ಆರಂಭಿಸಿದ ಸುಮಲತಾ ಅವರು, 'ನನ್ನ ಹೆಮ್ಮೆಯ ಕ್ಷೇತ್ರವಾದ ಮಂಡ್ಯ ಹಾಗೂ ಅಲ್ಲಿನ ಜನರಿಗೆ ನನ್ನ ಧನ್ಯವಾದ ಅರ್ಪಿಸುತ್ತೇನೆ' ಎಂದು ಕನ್ನಡದಲ್ಲಿ ಹೇಳಿದರು. ಆ ನಂತರ ಇಂಗ್ಲಿಷ್ನಲ್ಲಿ ಭಾಷಣ ಆರಂಭಿಸಿದ ಸುಮಲತಾ ಅವರು ನಿರರ್ಗಳವಾಗಿ ಮಂಡ್ಯ ಜನರ ಸಮಸ್ಯೆಗಳನ್ನು ಬಿಚ್ಚಿಟ್ಟರು.

ಮಂಡ್ಯದಲ್ಲಿ ತೀವ್ರ ಬರಗಾಲ: ಸುಮಲತಾ
ಮಂಡ್ಯದಲ್ಲಿ ತೀವ್ರ ಬರಗಾಲ ಉಂಟಾಗಿದೆ, ಮಳೆಯ ಕೊರತೆ ಉಂಟಾಗಿದ್ದು, ಜಿಲ್ಲೆಯ ಅಕ್ಕಿ ಮತ್ತು ಕಬ್ಬು ಬೆಳೆಗಾರರು ತೀವ್ರವಾದ ಸಂಕಷ್ಟದಲ್ಲಿದ್ದಾರೆ, ಬ್ಯಾಂಕ್ ಸಾಲಗಳನ್ನು ಕಟ್ಟದೆ ಪರದಾಡುತ್ತಿದ್ದಾರೆ ಎಂದರು.

'ಜೈಜವಾನ್, ಜೈ ಕಿಸಾನ್, ಜೈ ಕರ್ನಾಟಕ'
ರಾಜ್ಯ ಸರ್ಕಾರದ ಮೇಲೂ ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡುತ್ತದೆ ಎಂದಿದ್ದು, ಆದರೆ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದರು. ಮುಂದುವರೆದು, ಪ್ರಧಾನಿ ಮೋದಿ ಮತ್ತು ಜಲಸಂಪನ್ಮೂಲ ಸಚಿವರ ಬಳಿ ಕೇಳಿಕೊಳ್ಳುತ್ತೇನೆ ನಮ್ಮ ರೈತರನ್ನು ಕಾಪಾಡಿ ಎಂದು ಹೇಳಿ ಜೈ ಜವಾನ್, ಜೈ ಕಿಸಾನ್, ಜೈ ಕರ್ನಾಟಕ ಎಂದು ಭಾಷಣ ಮುಗಿಸಿದರು.

ಕಡಿಮೆ ಅವಧಿಯಲ್ಲಿ ಪರಿಣಾಮಕಾರಿ ಮಾತು
ತಮಗೆ ಸಿಕ್ಕ ಕಡಿಮೆ ಅವಧಿಯಲ್ಲಿಯೇ ಪರಿಣಾಮಕಾರಿಯಾಗಿ, ನಿರರ್ಗಳವಾಗಿ, ಯಾವುದೇ ಹಿಂಜರಿಕೆ, ಅಂಜಿಕೆ ಇಲ್ಲದೆ, ಆತ್ಮವಿಶ್ವಾಸದಿಂದ ಸುಮಲತಾ ಅವರು ತಮ್ಮ ಮೊದಲ ಸಂಸತ್ ಭಾಷಣವನ್ನು ಇಂದು ಮಾಡಿದರು. ಸುಮಲತಾ ಅವರು ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು, ತಮಿಳು ಭಾಷೆಗಳು ನಿರರ್ಗಳವಾಗಿ ಮಾತನಾಡಬಲ್ಲರು, ಸಂಸತ್ನಲ್ಲಿ ಅವರು ಉತ್ತಮ ಭಾಷಣ ಮಾಡಬಲ್ಲರು ಎಂಬುದನ್ನು ಇಂದು ತೋರಿಸಿಕೊಟ್ಟರು.

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು
ಸುಮಲತಾ ಅವರು ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಅವರು ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಪರಾಜಿತಗೊಳಿಸಿ ಸಂಸತ್ಗೆ ಆಯ್ಕೆ ಆಗಿದ್ದಾರೆ. ಸುಮಲತಾ ಅವರಿಗೆ ಚುನಾವಣೆಯಲ್ಲಿ ಬಿಜೆಪಿಯು ಬೆಂಬಲ ಸೂಚಿಸಿತ್ತು.











Click it and Unblock the Notifications