ಮುಂಗಾರು ಹಂಗಾಮಿನಲ್ಲಿ ಮಿಶ್ರ ಬೇಸಾಯ; ರೈತರಿಗೆ ಸಲಹೆಗಳು
ಬೆಂಗಳೂರು, ಜೂನ್ 24 : ಮುಂಗಾರು ಹಂಗಾಮು ಆರಂಭವಾಗಿದ್ದು ಕೃಷಿ ಚಟುವಟಿಕೆಯಲ್ಲಿ ರೈತರು ತೊಡಗಿದ್ದಾರೆ. ಕೃಷಿ ಇಲಾಖೆಯು ಮಿಶ್ರ ಬೇಸಾಯದ ಕುರಿತು ಹಲವು ಸಲಹೆಗಳನ್ನು ರೈತರಿಗೆ ನೀಡಿದೆ. ಇದನ್ನು ಅನುಸರಿಸಿ ರೈತರು ಹೆಚ್ಚಿನ ಲಾಭ ಪಡೆಯಬಹುದು.
Recommended Video
ಮಿಶ್ರ ಬೇಸಾಯ ಅಥವ ಮಿಶ್ರ ಬೆಳೆ ಪದ್ಧತಿಯಲ್ಲಿ ಏಕಕಾಲದಲ್ಲಿ ಒಂದೇ ಜಾಗದಲ್ಲಿ ಎರಡು ಅಥವಾ ಹೆಚ್ಚಿನ ಬೆಳೆಗಳನ್ನು ಒಟ್ಟಿಗೆ ಬೆಳೆಯಬಹುದಾಗಿದೆ. ಭೂಮಿಯ ಗುಣಧರ್ಮ, ಮಳೆ ಬೀಳುವ ಪ್ರಮಾಣ, ಅವಧಿ ಮತ್ತು ಮಣ್ಣಿನ ತೇವಾಂಶದ ಕ್ಷೀಣತೆಯ ಅವಧಿಗೆ ಅನುಗುಣವಾಗಿ ಬೆಳೆಗಳನ್ನು ರೈತರು ಆಯ್ಕೆ ಮಾಡಿಕೊಳ್ಳಬೇಕು.
ನಿಶ್ಚಿತ ಬೆಳೆ ಪದ್ಧತಿಗಳನ್ನು ಅನುಸರಿಸದೆ, ಹವಾಮಾನಕ್ಕೆ ತಕ್ಕಂತೆ ಬೆಳೆ ತಳಿಗಳನ್ನು ಬದಲಿಸುವುದು ಅವಶ್ಯಕ. ಒಂದೇ ಬೆಳೆಗಿಂತ ಮಿಶ್ರ ಬೆಳೆ ಬೆಳೆಯುವುದು ಉಪಯುಕ್ತ. ಏಕೆಂದರೆ ಒಂದೇ ಬೆಳೆ ಬೆಳೆಯುವುದರಿಂದ ಆಗುವ ಸಂಪೂರ್ಣ ಹಾನಿಯನ್ನು ಮಿಶ್ರ ಬೆಳೆ ಕಡಿಮೆ ಮಾಡುತ್ತದೆ. ರೈತರಿಗೂ ನಷ್ಟ ಉಂಟಾಗುವುದು ತಪ್ಪಲಿದೆ.

ಮಿಶ್ರ ಬೆಳೆಯಿಂದ ಕೃಷಿ ವೆಚ್ಚ ಕಡಿಮೆ ಮಾಡಬಹುದು. ಮಣ್ಣು ಮತ್ತು ನೀರನ್ನು ಸಮರ್ಪಕ ಹಾಗೂ ಸಮಗ್ರವಾಗಿ ಬಳಸಬಹುದು. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಉತ್ಪಾದಕತೆಯನ್ನು ಪಡೆಯಬಹುದು. ಏಕ ಬೆಳೆ ಪದ್ಧತಿಗೆ ಹೋಲಿಸಿದರೆ ಶೇ. 25 ರಷ್ಟು ಇಳುವರಿ ಮಿಶ್ರ ಬೆಳೆ ಪದ್ಧತಿಯಲ್ಲಿ ಹೆಚ್ಚಿರುತ್ತದೆ.
ಮಿಶ್ರ ಬೇಸಾಯ ಪದ್ಧತಿಯಿಂದಾಗಿ ಗೊಬ್ಬರದ ಬಳಕೆ ಕಡಿಮೆಯಾಗುತ್ತದೆ. ಅದೇ ಪ್ರಮಾಣದ ಶ್ರಮ ಮತ್ತು ಕೆಲಸದಿಂದ ಹೆಚ್ಚಿನ ಆದಾಯ ಗಳಿಸಬಹುದು. ಕೀಟ ಮತ್ತು ರೋಗ ಬಾಧೆಯು ಕಡಿಮೆ. ಮಿಶ್ರ ಬೆಳೆ ಪದ್ಧತಿಯು ಬೆಳೆ ವೈಫಲ್ಯದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ತೊಗರಿಯೊಂದಿಗೆ 1:2 ಅನುಪಾತದಲ್ಲಿ ನವಣೆ, ಸಜ್ಜೆ, ಉದ್ದು, ಹೆಸರು, ಜೋಳ, ಎಳ್ಳುಗಳನ್ನು ಮಿಶ್ರ ಬೆಳೆಯಾಗಿ ಬೆಳೆಯಬಹುದಾಗಿದೆ. ಮೆಕ್ಕೆಜೋಳದೊಂದಿಗೆ 4:2 ಅನುಪಾತದಲ್ಲಿ ತೊಗರಿಯನ್ನು ಬೆಳೆಯಬಹುದು.












Click it and Unblock the Notifications