ಬೆಂಕಿ ಆಕಸ್ಮಿಕಕ್ಕೆ ಕಬ್ಬಿನ ಬೆಳೆ ಸರ್ವನಾಶ, ರೈತ ಕಂಗಾಲು
ಚಾಮರಾಜನಗರ, ಮಾರ್ಚ್ 24 : ಚಾಮರಾಜನಗರ ಜಿಲ್ಲೆಯಾದ್ಯಂತ ಬಿಸಿಲಿಗೆ ಅರಣ್ಯ ಸೇರಿದಂತೆ ಕೃಷಿ ಭೂಮಿಯೂ ಒಣಗಿ ನಿಂತಿದ್ದು, ಒಂದು ಚಿಕ್ಕ ಕಿಡಿ ಬಿದ್ದರೂ ಬೆಂಕಿ ಹೊತ್ತಿ ಉರಿಯುವ ಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಅರಣ್ಯಗಳು ಅಲ್ಲಲ್ಲಿ ಕಾಡ್ಗಿಚ್ಚಿಗೆ ಸಿಲುಕಿ ನಾಶವಾಗಿವೆ. ಅಲ್ಲಲ್ಲಿ ಬೆಂಕಿ ಹೊತ್ತಿ ಉರಿಯುವ ಸುದ್ದಿಗಳು ಕೇಳಿ ಬರುತ್ತಿವೆ. ಈ ನಡುವೆ ಕಬ್ಬು ಬೆಳೆದ ಬೆಳೆಗಾರ ಎಷ್ಟು ಜಾಗ್ರತೆಯಿಂದ ಇದ್ದರೂ ಒಂದಲ್ಲ ಒಂದು ಕಾರಣಕ್ಕೆ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಬೆಳೆನಾಶವಾಗುತ್ತಿರುವುದು ಸಾಮಾನ್ಯವಾಗಿದೆ.
ಇದೀಗ ಆಕಸ್ಮಿಕವಾಗಿ ಬೆಂಕಿ ಬಿದ್ದು ಕಟಾವಿಗೆ ಬಂದಿದ್ದ ಸುಮಾರು 1 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ನಾಶವಾಗಿರುವ ಘಟನೆ ಯಳಂದೂರು ತಾಲೂಕಿನ ವೈ.ಕೆ.ಮೋಳೆ ಗ್ರಾಮದಲ್ಲಿ ಸಂಭವಿಸಿದೆ.

ವೈ.ಕೆ.ಮೋಳೆ ಗ್ರಾಮದ ವೆಂಕಟೇಶ್ ಎಂಬುವರು ಸುಮಾರು 1 ಎಕರೆ ಜಮೀನಿನಲ್ಲಿ ಸಾಲ ಮಾಡಿ ಕಬ್ಬು ಬೆಳೆದಿದ್ದರು. ಕಬ್ಬು ಹುಲುಸಾಗಿ ಬೆಳೆದು ಕಟಾವಿಗೂ ಬಂದಿತ್ತು. ಈ ನಡುವೆ ಬಿಸಿಲಿಗೆ ಕಬ್ಬಿನಸೋಗೆ ಒಣಗಿದ್ದವು. ಅದೇನಾಯಿತೋ ಆಕಸ್ಮಿಕವಾಗಿ ಕಬ್ಬಿಗೆ ಬೆಂಕಿ ಬಿದ್ದಿದೆ.
ಈ ಸಂದರ್ಭ ಯಾರು ಇಲ್ಲದ ಕಾರಣ ಕಬ್ಬಿನ ಬೆಳೆ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಕಬ್ಬನ್ನು ಕಳೆದುಕೊಂಡಿರುವ ರೈತ ವೆಂಕಟೇಶ್ಗೆ ದಿಕ್ಕೇ ತೋಚದಂತಾಗಿದೆ. ಸಂಬಂಧಪಟ್ಟವರು ಸೂಕ್ತ ಪರಿಹಾರ ನೀಡಿದರೆ ಬಡಪಾಯಿ ರೈತ ಸುಧಾರಿಸಿಕೊಳ್ಳಬಹುದೇನೋ?












Click it and Unblock the Notifications