ಸ್ವಾವಲಂಬಿ ಜೀವನಕ್ಕೆ ಆಧಾರವಾದ ಅಣಬೆ ಬೇಸಾಯ
ಕೋಲಾರ, ಜನವರಿ 21 : ಕೋಲಾರ ಬರಪೀಡಿತ ಜಿಲ್ಲೆಯಾಗಿದ್ದು ನೀರಿನ ಸಮಸ್ಯೆ ಇದೆ. ರೈತರು ಇರುವ ನೀರನ್ನು ಸಮರ್ಪವಾಗಿ ಬಳಸಿಕೊಂಡು ಕೃಷಿ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡುತ್ತಿದ್ದಾರೆ. ಅಣಬೆ ಬೇಸಾಯದ ಮೂಲಕ ಆದಾಯಗಳಿಸುತ್ತಿದ್ದಾರೆ.
ಇದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಚಾಮರೆಡ್ಡಿಹಳ್ಳಿ ಗ್ರಾಮದ ರೈತರಾದ ಸೀತಮ್ಮ ಅವರ ಸಾಧನೆಯ ಕಥೆ. ಅಣಬೆ ಬೇಸಾಯದ ಮೂಲಕ ಆದಾಯ ಮೂಲವನ್ನು ಕಂಡು ಕೊಂಡಿದ್ದಾರೆ. ಇತರ ಕೃಷಿಕರಿಗೆ ಮಾದರಿಯಾಗಿದ್ದಾರೆ.
ಸ್ತ್ರೀ ಶಕ್ತಿ ಸಂಘದ ಸಹಯೋಗದೊಂದಿಗೆ 'ಸಮೃದ್ಧಿ' ಎಂಬ ಹೆಸರಿನ ಅಣಬೆ ಬೇಸಾಯ ಘಟಕವನ್ನು ನಿರ್ಮಿಸಿಕೊಂಡಿದ್ದಾರೆ. ಹುಳಿಮಾವು ಕ್ಷೇತ್ರದಿಂದ ಅಣಬೆ ಬೇಸಾಯದ ಬಗ್ಗೆ ತರಬೇತಿಯನ್ನು ಪಡೆದುಕೊಂಡು, ತೋಟಗಾರಿಕೆ ಇಲಾಖೆಯಿಂದ ತಾಂತ್ರಿಕ ಮಾಹಿತಿ, ಸಲಹೆಗಳು ಮತ್ತು ಆರ್ಥಿಕ ನೆರವು ಪಡೆದು ಅಣಬೆ ಬೇಸಾಯದಲ್ಲಿ ಯಶಸ್ಸು ಕಂಡಿದ್ದಾರೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಘಟಕಕ್ಕೆ ಕೊಯ್ಲೋತ್ತರ ತಾಂತ್ರಿಕತೆ ಅಭಿವೃದ್ಧಿ ಕಾರ್ಯಕ್ರಮದಡಿ ಸಹಾಯ ಪಡೆದಿದ್ದಾರೆ. ತೋಟಗಾರಿಕಾ ಇಲಾಖೆ ವತಿಯಿಂದ 2017-18ನೇ ಸಾಲಿನಲ್ಲಿ ಶೇ. 40ರಷ್ಟು ಸಹಾಯಧನವನ್ನು ಪಡೆದುಕೊಂಡು. ಆಯಿಸ್ಡರ್ ಮತ್ತು ಮಿಲ್ಕಿ ಅಣಬೆಯನ್ನು ಬೆಳೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಆಯಿಸ್ಡರ್ ಅಣಬೆಗೆ ಹೆಚ್ಚಿನ ಬೇಡಿಕೆ ಇದೆ. ವಾರದಲ್ಲಿ 3 ದಿನಕ್ಕೆ 30 ರಿಂದ 40 ಕೆ.ಜಿ ಯಂತೆ ಅಣಬೆ ಉತ್ಪಾದನೆ ಮಾಡುತ್ತಾರೆ. ಈ ಅಣಬೆಗಳನ್ನು ಪ್ರತಿ ಕೆ. ಜಿ. ಗೆ 200 ರೂ. ನಂತೆ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ.
ಅದೇ ರೀತಿಯಲ್ಲಿ ಮಿಲ್ಕಿ ಅಣಬೆಯು ದಿನಕ್ಕೆ 20 ರಿಂದ 25 ಕೆ. ಜಿ. ಉತ್ಪಾದನೆಯಾಗುತ್ತಿದೆ. ಇದಕ್ಕೆ ಸ್ಥಳೀಯವಾಗಿ ಉತ್ತಮ ಮಾರುಕಟ್ಟೆ ಸಿಗುತ್ತಿದ್ದು ಪ್ರತಿ ಕೆ.ಜಿ. ಗೆ 200 ರೂ. ನಂತೆ ಮಾರಾಟ ಮಾಡಿ ಉತ್ತಮ ಲಾಭ ಪಡೆಯುತ್ತಿದ್ದಾರೆ.
ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅಂತೆಯೇ ಕೃಷಿ ಕ್ಷೇತ್ರದಲ್ಲಿಯೂ ಸಹ ತನ್ನದೇ ಸಾಧನೆಯನ್ನು ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗುತ್ತಿದ್ದಾರೆ.
ಅಣಬೆ ಬೇಸಾಯದ ಮೂಲಕ ಆರ್ಥಿಕ ಸ್ವಾವಲಂಬಿಯಾಗಿ ಸುತ್ತಮುತ್ತಲಿನ ಗ್ರಾಮದ ರೈತರಿಗೆ ಮಾದರಿಯಾಗಿರುವ ಸೀತಮ್ಮ ಇತರರೂ ಅಣಬೆ ಬೇಸಾಯವನ್ನು ಮಾಡಿ ಸ್ವಯಂ-ಉದ್ಯೋಗಿಗಳಾಗಿ ಆರ್ಥಿಕ ಸ್ವಾವಲಂಬಿಗಳಾಗಲು ಪ್ರೇರಣೆಯಾಗಿದ್ದಾರೆ.
ಬರಹ
ಸುಪ್ರಿಯ.ಕೆ - ಅಪ್ರೆಂಟಿಸ್
ವಾರ್ತಾ ಮತ್ತು ಸಂಪರ್ಕ ಇಲಾಖೆ, ಕೋಲಾರ












Click it and Unblock the Notifications