14 ಕೋಟಿ ವೆಚ್ಚದ ಬೀಜಭವನ, ಪುಷ್ಪ ಸ್ಟುಡಿಯೊ ವಿಶೇಷತೆಗಳು
ಬೆಂಗಳೂರು, ಸೆಪ್ಟೆಂಬರ್ 26 : ಬೆಂಗಳೂರಿನ ಹೆಬ್ಬಾಳ ಸಮೀಪ ನಿರ್ಮಿಸಿರುವ ಬೀಜಭವನ ಕಟ್ಟಡ, ಪುಷ್ಪ ಸ್ಟುಡಿಯೊ ಮತ್ತು ಪುಷ್ಪೋದ್ಯಮ ತರಬೇತಿ ಕೇಂದ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. 14ಕೋಟಿ ವೆಚ್ಚದಲ್ಲಿ ಏಳು ಅಂತಸ್ತಿನ ಬೀಜಭವನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.
ಬೀಜಭವನ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, 'ಕಡಿಮೆ ಇಳುವರಿ, ಸೂಕ್ತ ಬೆಂಬಲ ಸಿಗದೆ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಸಕಾಲದಲ್ಲಿ ಮನೆ ಬಾಗಿಲಿಗೆ ಬಿತ್ತನೆ ಬೀಜ ಮತ್ತು ಗೊಬ್ಬರ ಪೂರೈಕೆ ಮಾಡುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ' ಎಂದು ಹೇಳಿದರು.
'ಖಾಸಗಿ ಮಾರಾಟಗಾರರು ಗುಣಮಟ್ಟವಿಲ್ಲದ ಬಿತ್ತನೆ ಬೀಜವನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಹಿಂದೆ ರೈತರೇ ಬಿತ್ತನೆ ಬೀಜ ಸಂಗ್ರಹಣೆ ಮಾಡುತ್ತಿದ್ದರು. ಆ ಪ್ರವೃತ್ತಿಯನ್ನು ರೈತರು ಬೆಳೆಸಿಕೊಳ್ಳಬೇಕು' ಎಂದು ಕರೆ ನೀಡಿದರು.
ಕರ್ನಾಟಕದಲ್ಲಿ 25 ಬೀಜ ಸಂಸ್ಕರಣಾ ಕೇಂದ್ರಗಳು ಮತ್ತು 35 ಬೀಜ ವಿತರಣಾ ಕೇಂದ್ರಗಳಿವೆ. ಈ ಎಲ್ಲಾ ಕೇಂದ್ರಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣವನ್ನು ಬೀಜಭವನ ನೋಡಿಕೊಳ್ಳಲಿದೆ. ಹೆಬ್ಬಾಳ ಫ್ಲೈ ಓವರ್ ಸಮೀಪ ಬೀಜಭವನ ಕಟ್ಟಡ ನಿರ್ಮಾಣ ಮಾಡಲಾಗಿದೆ.

14 ಕೋಟಿ ವೆಚ್ಚದಲ್ಲಿ ನಿರ್ಮಾಣ
ಬೆಂಗಳೂರಿನ ಹೆಬ್ಬಾಳ ಬಳಿ 14 ಕೋಟಿ ವೆಚ್ಚದಲ್ಲಿ ಬೀಜಭವನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಏಳು ಅಂತಸ್ತಿನ ಕಟ್ಟಡವಿದಾಗಿದ್ದು, ರಾಜ್ಯದ 25 ಬೀಜ ಸಂಸ್ಕರಣಾ ಕೇಂದ್ರಗಳು ಮತ್ತು 35 ಬೀಜ ವಿತರಣಾ ಕೇಂದ್ರಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣವನ್ನು ಇಲ್ಲಿ ನೋಡಿಕೊಳ್ಳಲಾಗುತ್ತದೆ.

2.67 ಕೋಟಿ ವೆಚ್ಚದಲ್ಲಿ ಸ್ಪುಡಿಯೊ ನಿರ್ಮಾಣ
ರಾಜ್ಯದಲ್ಲಿ ಬೆಳೆಯುವ ವಿವಿಧ ರೀತಿಯ ಪುಷ್ಪಗಳ ಅಲಂಕರಿಸುವ ಕಲೆಗಳನ್ನು ಪ್ರದರ್ಶನ ಮಾಡಲು ಒಂದು ಅಂತಸ್ತಿನ ಪುಷ್ಪ ಸ್ಟುಡಿಯೋ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಸುಮಾರು 2.67 ಕೋಟಿ ವೆಚ್ಚ ಮಾಡಲಾಗಿದೆ.

ಪುಷ್ಪೋದ್ಯಮ ತರಬೇತಿ ಕೇಂದ್ರ
ಪುಷ್ಪೋದ್ಯಮವನ್ನು ಪ್ರೋತ್ಸಾಹಿಸಲು 2.25 ಕೋಟಿ ವೆಚ್ಚದಲ್ಲಿ ಪುಷ್ಪೋದ್ಯಮ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ಹೂವಿನ ಬೆಳೆಗಾರರು, ಮಾರಾಟಗಾರರು ಮತ್ತು ಸಮಾರಂಭಗಳಲ್ಲಿ ಹೂವಿನ ಅಲಂಕಾರ ಮಾಡುವವರಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ.

ಆನ್ ಲೈನ್ ವ್ಯಾಪಾರ ಪರಿಚಯ
ಸಮಾರಂಭದಲ್ಲಿ ಮಾತನಾಡಿದ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು, 'ಬೆಂಗಳೂರು ನಗರದಲ್ಲಿರುವ ಅಂತರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದಲ್ಲಿ ಜನವರಿಯಿಂದ ಆನ್ ಲೈನ್ ವ್ಯಾಪಾರ ಪರಿಚಯಿಸಲಿದ್ದೇವೆ' ಎಂದರು.












Click it and Unblock the Notifications