ಬರ ಘೋಷಣೆಯ ಸಚಿವ ಸಂತೋಷ್ ಲಾಡ್ ಹೇಳಿದ್ದಿಷ್ಟು
ಧಾರವಾಡ, ಜುಲೈ, 15: ಧಾರವಾಡ ಜಿಲ್ಲೆಯಲ್ಲಿ ಶೇಕಡಾ 55ರಷ್ಟು ಮಳೆಯ ಕೊರತೆಯಾಗಿದೆ. ಕಳೆದ ವಾರ ಮಳೆಯಾಗಬೇಕಿತ್ತು, ಆದರೆ, ಆಗಿಲ್ಲ. ಹೀಗಾಗಿ ನಮ್ಮ ಸರ್ಕಾರ ಬರ ಘೋಷಣೆ ಮಾಡುತ್ತದೆ ಎಂಬ ನಿರೀಕ್ಷೆಯಲ್ಲಿ ನಾವೂ ಇದ್ದೇವೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಮಳೆಯ ಕೊರತೆಯಾಗಿದೆ. ರಾಜ್ಯದಲ್ಲಿ ಬರಗಾಲ ಘೋಷಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಇದನ್ನು ಸರ್ಕಾರ ತೀರ್ಮಾನ ಮಾಡುತ್ತದೆ. ಸರ್ವೆ ವರದಿ, ಮಳೆಯ ಅಂಕಿ ಅಂಶ ನೋಡಿ ತೀರ್ಮಾನ ಮಾಡಲಾಗುತ್ತದೆ. ಈಗಾಗಲೇ ಸರ್ಕಾರ ಸಂಬಂಧಿಸಿದ ಸಚಿವರಿಂದ ಎಲ್ಲ ಮಾಹಿತಿ ಪಡೆದುಕೊಂಡಿದೆ. ಸಂಬಂಧಿಸಿದ ಇಲಾಖೆಯ ಸಚಿವರೇ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ವರ್ಗಾವಣೆ ದಂಧೆ ಕುರಿತು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಲಾಡ್, ಅವರು ಏನು ಹೇಳಿದ್ದಾರೆ ಅದರ ಬಗ್ಗೆ ಮಾಹಿತಿ ಇಲ್ಲ. ಹೊಸ ಸರ್ಕಾರಗಳು ಬಂದಾಗ ವರ್ಗಾವಣೆಗಳು ಸಹಜ. ಆದರೆ, ಕುಮಾರಸ್ವಾಮಿ ಅವರು ಯಾವ ಆಧಾರದ ಮೇಲೆ ಈ ಆರೋಪ ಮಾಡಿದ್ದಾರೋ ಗೊತ್ತಿಲ್ಲ ಎಂದರು.
ಮಹದಾಯಿ ವಿಳಂಬಕ್ಕೆ ಪ್ರಲ್ಹಾದ್ ಜೋಶಿಯವರೇ ಕಾರಣ
ಇನ್ನು ಮಹದಾಯಿ ಹೋರಾಟ ಏಳು ವರ್ಷ ಪೂರೈಸಿ ಎಂಟು ವರ್ಷಕ್ಕೆ ಕಾಲಿಟ್ಟಿದೆ. ಆದರೂ ಕೂಡ ಮಹದಾಯಿ ಕನಸು ಕನಸಾಗಿಯೇ ಉಳಿದಿದೆ. ಈ ವಿಳಂಬಕ್ಕೆ ಕೇಂದ್ರ ಸಚಿವ ಪ್ರಲ್ಹಾಸ್ ಜೋಶಿಯವರೇ ಕಾರಣ ಎಂದು ಮಹದಾಯಿ ಹೋರಾಟಗಾರ ವೀರೇಶ್ ಸೊರಬದಮಠ ಹುಬ್ಬಳ್ಳಿಯಲ್ಲಿ ಆರೋಪ ಮಾಡಿದರು.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರತಿಯೊಂದು ಸರ್ಕಾರವೂ ಕೂಡ ಹಾರಿಕೆಯ ಉತ್ತರವನ್ನು ನೀಡುವ ಮೂಲಕ ತಮ್ಮ ರಾಜಕೀಯ ಬೆಳೆಯನ್ನು ಬೇಯಿಸಿಕೊಳ್ಳುವ ಕೆಲಸವನ್ನು ಮಾಡುತ್ತಿವೆ. ಈ ಭಾಗದ ಬಹು ನಿರೀಕ್ಷಿತ ಯೋಜನೆ ಕಳಸಾ ಬಂಡೂರಿ, ಮಹದಾಯಿ ಯೋಜನೆ ವಿಳಂಬವಾಗಲು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರೇ ನೇರವಾದ ಹೊಣೆಗಾರರಾಗಿದ್ದಾರೆ ಎಂದರು.
ಇನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಾಕಷ್ಟು ಭರವಸೆ ಕೊಟ್ಟಿದ್ದರು. ಆದರೆ ಯಾವುದೇ ರೀತಿಯಲ್ಲಿ ಭರವಸೆ ಈಡೇರಿಸದೇ ನೆಪ ಮಾತ್ರಕ್ಕೆ ಮಹದಾಯಿ ಬಗ್ಗೆ ಚಿಂತನೆ ನಡೆಸಿ ಕೈತೊಳೆದುಕೊಂಡಿರುವುದು ವಿಪರ್ಯಾಸಕರ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.












Click it and Unblock the Notifications