ಹತ್ತಿಬೆಳೆಗೆ ಕೆಂಪು ರೋಗ; ರಾಯಚೂರು ಕೃಷಿ ವಿವಿ ತಜ್ಞರ ಪರಿಶೀಲನೆ
ಕೊಪ್ಪಳ, ಜೂನ್ 21; ಒಂದು ಕಡೆ ನೈಋತ್ಯ ಮುಂಗಾರು ಮಳೆ ಸರಿಯಾಗಿ ಸುರಿಯುತ್ತಿಲ್ಲ. ಮಳೆ ಆಧರಿಸಿ ಬೇಸಾಯ ಮಾಡುವ ರೈತರು ಆತಂಕಗೊಂಡಿದ್ದಾರೆ. ಮತ್ತೊಂದು ಕಡೆ ವಿವಿಧ ಬೆಳೆ ಬೆಳೆದಿರುವ ರೈತರು ಬೆಳಗಳನ್ನು ಕಾಡುತ್ತಿರುವ ರೋಗಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕು ವ್ಯಾಪ್ತಿಯ ಚಿಕ್ಕಖೇಡ, ಹಿರೇಖೇಡ, ಗುಡುದೂರು ಗ್ರಾಮಗಳಲ್ಲಿ ಬಿತ್ತನೆಯಾದ ಹತ್ತಿ ಬೆಳೆಯಲ್ಲಿ ಕೆಂಪು ರೋಗ ಹಾಗೂ ಬೆಳೆ ಕುಂಠಿತವಾದ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.

ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಮತ್ತು ಗಂಗಾವತಿ ಸಹಾಯಕ ಕೃಷಿ ನಿರ್ದೇಶ ಸಂತೋಷ್ ಪಟ್ಟದಕಲ್ ಅವರು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಂಶೋಧಕರ ತಂಡದದೊಂದಿಗೆ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆಗಳನ್ನು ವೀಕ್ಷಣೆ ಮಾಡಿದರು. ರೈತರಿಂದ ಅಗತ್ಯ ಮಾಹಿತಿಯನ್ನು ಸಹ ಪಡೆದುಕೊಂಡರು.
ಕಂಪನಿಯಿಂದಲೂ ಮಾಹಿತಿ ಸಂಗ್ರಹ; ಅಧಿಕಾರಿಗಳ ತಂಡ ಹತ್ತಿ ಬೀಜದ ತಳಿ, ಬಿತ್ತನೆ ಬೀಜ, ರಸಗೊಬ್ಬರದ ಬಳಕೆ, ನೀರಿನ ವ್ಯವಸ್ಥೆ, ವಿದ್ಯುತ್ ಲಭ್ಯತೆ ಕುರಿತು ಮಾಹಿತಿ ಪಡೆಯಿತು. ಸಂಬಂಧಿಸಿದ ಹೋಬಳಿ ಅಧಿಕಾರಿಗಳಿಗೆ ಹತ್ತಿ ಬೆಳೆಯ ಬಿತ್ತನೆ ಕ್ಷೇತ್ರ ಹಾಗೂ ಬಿತ್ತನೆಗೆ ಉಪಯೋಗಿಸಿದ ತಳಿ ಮತ್ತು ಉತ್ಪಾದನೆ ಮಾಡಿದ ಕಂಪನಿಯ ಮಾಹಿತಿ ಪಡೆಯಲು ಸೂಚನೆ ಕೊಟ್ಟರು.
ವಿವಿಧ ಬೀಜ ಹಾಗೂ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಸಹ ಕೃಷಿ ವಿವಿಯ ತಂಡದೊಂದಿಗೆ ಭೇಟಿ ನೀಡಿ ಹತ್ತಿ ಬೆಳೆಯ ಬಿತ್ತನೆ ಬೀಜದ ಕುರಿತು ಪರಿಶೀಲಿಸಿ ವಿವಿಧ ಕಂಪನಿಗಳ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲಿಸಿದರು.
ಪರಿಕರ ಮಾರಾಟಗಾರರು ಕಡ್ಡಾಯ ದರಪಟ್ಟಿ ಪ್ರದರ್ಶಿಸಬೇಕು. ರೈತರು ಖರೀದಿಸುವ ಪರಿಕರಿಗಳಿಗೆ ತಪ್ಪದೇ ರಸೀದಿ ನೀಡಲು ಹಾಗು ರಸಗೊಬ್ಬರಗಳನ್ನು ಪಿ. ಒ. ಎಸ್ ಮುಖಾಂತರ ಮಾರಾಟ ಮಾಡಲು ಮತ್ತು ಯಾವದೇ ಬಿತ್ತನೆ ಬೀಜ ಖರೀದಿಸಲು ಬರುವ ರೈತರಿಗೆ ಕೃಷಿ ವಿವಿಯಿಂದ ಶಿಫಾರಸ್ಸು ಮಾಡಲಾದ ಬೇಸಾಯ ಕ್ರಮಗಳ ಮಾಹಿತಿ ನೀಡಲು ತಿಳಿಸಿದರು.
ಕೃಷಿ ವಿವಿಯ ಸಂಶೋಧನ ತಂಡದ ಮುಖ್ಯಸ್ಥ ಎಂ. ಜೆ. ನಿಡಗುಂದಿ, ಬೇಸಾಯ ಶಾಸ್ತ್ರ ಪ್ರಾಧ್ಯಾಪಕ ಎಂ. ವೈ. ಅಜಯ್ಕುಮಾರ, ಸಸ್ಯರೋಗ ಪ್ರಾಧ್ಯಾಪಕ ಎಸ್. ಬಿ. ಗೌಡರ, ಕೀಟಶಾಸ್ತ್ರ ಪ್ರಾಧ್ಯಾಪಕ ಎಸ್. ಜಿ. ಹಂಚಿನಾಳ ಅವರು ನಾನಾ ಕೇತ್ರಗಳಿಗೆ ಭೇಟಿ ನೀಡಿ ಬೆಳೆಯ ಕುರಿತು ಮೂರರಿಂದ ನಾಲ್ಕು ದಿನಗಳೊಳಗೆ ವಿಸ್ತ್ರತ ವರದಿಯನ್ನು ಸಂಶೋಧನಾ ನಿರ್ದೇಶಕರಿಗೆ ನೀಡಲಾಗುವುದು ಎಂದರು.
ಕೆಂಪು ರೋಗಕ್ಕೆ ತುತ್ತಾದ ಹತ್ತಿ ಗಿಡದ ಎಲೆಗಳು ಸಂಪೂರ್ಣವಾಗಿ ಕೆಂಪು ಬಣ್ಣಕ್ಕೆ ತಿರುವುದಲ್ಲದೇ ಉದುರಿ ಹೋಗುತ್ತದೆ. ಇದರಿಂದಾಗಿ ಗಿಡ ಸೊರಗಲು ಆರಂಭವಾಗುತ್ತದೆ. ಒಂದು ವೇಳೆ ಇಳುವರಿ ಬಾರದಿದ್ದರೆ ಖರ್ಚು ಮಾಡಿ ಮಾಡಿದ ಬೇಸಾಯ ಫಲ ಇಲ್ಲದಂತೆ ಆಗುತ್ತದೆ ಎಂಬುದು ರೈತರ ಆತಂಕವಾಗಿದೆ.
ಕೃಷಿ ಇಲಾಖೆ ಅಧಿಕಾರಿಗಳ ಭೇಟಿಯ ಸಂದರ್ಭದಲ್ಲಿ ಕನಕಗಿರಿ ತಾಲೂಕಿನ ಹೋಬಳಿಗಳ ಕೃಷಿ ಅಧಿಕಾರಿಗಳು, ರೈತ ಸಂಘದ ಪದಾಧಿಕಾರಿಗಳು ಮತ್ತು ರೈತರು ಉಪಸ್ಥಿತರಿದ್ದರು. ಅಧಿಕಾರಿಗಳಿಗೆ ಬೆಳಗಳ ಕುರಿತು ಮಾಹಿತಿ ನೀಡಿದರು.












Click it and Unblock the Notifications