ಹಿಂಗಾರು ಹಂಗಾಮು; ಕೃಷಿ ಚಟುವಟಿಕೆ ಸಿದ್ಧತೆಗೆ ಡಿಸಿ ಸೂಚನೆ
ಕೊಪ್ಪಳ, ಸೆಪ್ಟೆಂಬರ್ 24; ಈ ಬಾರಿ ಮುಂಗಾರು ಮಳೆ ಕೈ ಕೊಟ್ಟಿದೆ. ಜೂನ್ನಿಂದ ಸೆಪ್ಟೆಂಬರ್ ಅಂತ್ಯದ ತನಕ ಸುರಿಯಬೇಕಿದ್ದ ಮಳೆಯ ಕೊರತೆ ಕಾರಣ ಕರ್ನಾಟಕದಲ್ಲಿ ಬರಗಾಲದ ಛಾಯೆ ಆವರಿಸಿದೆ. ಹಿಂಗಾರು ಮಳೆಯಾದರೂ ಸರಿಯಾಗಿ ಸುರಿಯಲಿಯಲಿದೆಯೇ? ಎಂದು ರೈತರು ಕಾಯುತ್ತಿದ್ದಾರೆ.
ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಿಂಗಾರು ಹಂಗಾಮು ಪೂರ್ವ ಸಿದ್ಧತೆ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಹಲವಾರು ಸೂಚನೆಗಳನ್ನು ಅವರಿಗೆ ನೀಡಿದರು.

"ಪ್ರಸಕ್ತ ಹಿಂಗಾರು ಹಂಗಾಮಿಗೆ ರೈತರಿಗೆ ಅವಶ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕವಾಗಿ ಪೂರೈಸಲು ಅಗತ್ಯ ಕ್ರಮ ವಹಿಸುವಂತೆ" ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸಗೊಬ್ಬರ ಸಂಗ್ರಹವಿರಲಿ; ಜಿಲ್ಲಾಧಿಕಾರಿಗಳು ಮಾತನಾಡಿ, "ಹಿಂಗಾರು ಹಂಗಾಮಿಗೆ ಬೇಕಾಗುವ ಬಿತ್ತನೆ ಬೀಜಗಳು ಕೊರತೆಯಾಗದಂತೆ 20 ರೈತ ಸಂಪರ್ಕ ಕೇಂದ್ರಗಳು ಮತ್ತು ಹೆಚ್ಚುವರಿ 7 ಕೇಂದ್ರಗಳ ಮೂಲಕ ಬೀಜ ವಿತರಣೆಗೆ ಕ್ರಮ ಕೈಗೊಳ್ಳಬೇಕು" ಎಂದರು.
"ಬಿತ್ತನೆ ಬೀಜ ವಿತರಣೆ ಪೂರ್ವದಲ್ಲಿ ಬೀಜದ ಗುಣಮಟ್ಟವನ್ನು ಕಡ್ಡಾಯವಾಗಿ
ಪರೀಕ್ಷಿಸಬೇಕು. ಜಿಲ್ಲೆಯಲ್ಲಿ ಯಾವುದೇ ರೀತಿಯ ರಸಗೊಬ್ಬರ ಕೊರತೆಯಾಗದಂತೆ ಕ್ರಮವಹಿಸುವಂತೆ" ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಗೆ ಜಂಟಿ ಕೃಷಿ ನಿರ್ದೇಶಕ ಟಿ. ಎಸ್. ರುದ್ರೇಶಪ್ಪ ಮಾಹಿತಿ ನೀಡಿ, "2023-24 ನೇ ಸಾಲಿನ ಹಿಂಗಾರಿಗೆ ಒಟ್ಟು 32,000 ಕ್ವಿಂಟಾಲ್ ಬಿತ್ತನೆ ಬೀಜ ಅವಶ್ಯಕತೆ ಇದ್ದು, ಕಡಲೆ 21,000 ಕ್ವಿಂಟಲ್., ಶೇಂಗಾ 10,000 ಕ್ವಿಂಟಲ್, ಜೋಳ 255 ಕ್ವಿಂಟಲ್, ಗೋಧಿ 10 ಕ್ವಿಂಟಲ್. ಕುಸುಬೆ 15 ಕ್ವಿಂಟಲ್., ಸೂರ್ಯಕಾಂತಿ 1200 ಕ್ವಿಂಟಲ್ ಹೀಗೆ ಒಟ್ಟು 32,480 ಕ್ವಿಂಟಲ್ ಬಿತ್ತನೆ ಬೀಜಗಳ ಅವಶ್ಯಕತೆ ಇದೆ" ಎಂದರು.
"ಹಿಂಗಾರು ಹಂಗಾಮಿಗೆ ಒಟ್ಟು 75,500 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ಅವಶ್ಯಕತೆ ಇದ್ದು, 52,600 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ. ವಿವಿಧ ರಸಗೊಬ್ಬರಗಳಾದ 8600 ಟನ್ ಡಿ.ಎ.ಪಿ, 26,000 ಟನ್ ಕಾಂಪ್ಲೆಕ್ಸ್, 16,200 ಟನ್ ಯೂರಿಯಾ, 1250 ಟನ್ ಎಂ.ಓ.ಪಿ., 463 ಟನ್ ಎಸ್.ಎಸ್.ಪಿ ಲಭ್ಯವಿದ್ದು, ಯಾವುದೇ ರಸಗೊಬ್ಬರ ಕೊರತೆಯಿಲ್ಲ" ಎಂದು ತಿಳಿಸಿದರು.
ಮಳೆ ಕೊರತೆಯ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಈಗಾಗಲೇ ರಾಜ್ಯದ 161 ತಾಲೂಕುಗಳನ್ನು ತೀವ್ರ ಬರಪೀಡಿತ ಮತ್ತು 34 ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ತಕ್ಷಣದಿಂದಲೇ ಘೋಷಣೆ ಮಾಡಿದೆ. ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿ, ಕೊಪ್ಪಳ, ಕುಷ್ಠಗಿ, ಯಲಬುರ್ಗ, ಕಾರಟಗಿ, ಕುಕನೂರು, ಕನಕಗಿರಿ ತಾಲೂಕುಗಳು ಈ ಪಟ್ಟಿಯಲ್ಲಿ ಸೇರಿವೆ.
ಕೊಪ್ಪಳ ಜಿಲ್ಲೆಯಲ್ಲಿ ಈ ವರ್ಷ ವಾಡಿಕೆ ಮಳೆ 358 ಮಿ. ಮೀ. ಇದ್ದು ವಾಸ್ತವವಾಗಿ 291 ಮೀ. ಮೀ. ಮಳೆಯಾಗಿದೆ. ಶೇ.19ರಷ್ಟು ಮಳೆ ಕಡಿಮೆ ಆಗಿದೆ. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಗುರಿ 3.08 ಲಕ್ಷ ಹೆಕ್ಟರ್ ಪೈಕಿ 2.93 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.












Click it and Unblock the Notifications