ಇನ್ನೆರಡು ವರ್ಷಗಳಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಪ್ರಧಾನಿ ಮೋದಿ ಗುರಿ; ಹೇಗೆ?
ಬೆಂಗಳೂರು, ಆ. 25: ಕೃಷಿಕ ಭಾರತದ ಬೆನ್ನಲೆಬು ಅಂತಾರೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ಕೃಷಿಕನ ಬೆನ್ನು ನೇರವಾಗಿ ನಿಲ್ಲಲಿಕ್ಕೆ ಆಗದಂತಹ ಸ್ಥಿತಿಯಿದೆ. ನಮ್ಮ ದೇಶದಲ್ಲಿ ಕೃಷಿ ಕ್ಷೇತ್ರವನ್ನು ನೋಡುವ ದೃಷ್ಟಿಯೇ ವಿಚಿತ್ರವಾಗಿದೆ.
ಉಳಿದೆಲ್ಲ ಕ್ಷೇತ್ರಗಳಲ್ಲಿ ಉತ್ಪಾದಕರು ತಮ್ಮ ಉತ್ಪನ್ನಕ್ಕೆ ಬೆಲೆ ನಿಗದಿ ಮಾಡುತ್ತಾರೆ. ಆದರೆ ಕೃಷಿಕರ ಉತ್ಪನ್ನಗಳಿಗೆ ಅವುಗಳನ್ನು ಕೊಂಡುಕೊಳ್ಳುವ ಗ್ರಾಹಕರು (ವ್ಯಾಪಾರಸ್ಥರು, ಸರ್ಕಾರ) ಬೆಲೆ ನಿಗದಿ ಮಾಡುತ್ತಾರೆ. ಇದು ವಿಚಿತ್ರವಾದರೂ ಸತ್ಯ ಇದು ಕೃಷಿ ಕ್ಷೇತ್ರದ ಬಡತನಕ್ಕೆ ಮೂಲ ಕಾರಣ. ಇಂತಹ ಪರಿಸ್ಥಿತಿಯನ್ನು ಕೇಂದ್ರದ ಉನ್ನತಾಧಿಕಾರದ ಸಮಿತಿ ಹೇಗೆ ಪರಿಹರಿಸುತ್ತದೆ ಎಂಬುದು ರೈತರಲ್ಲಿಯೂ ಕುತೂಹಲ ಮೂಡಿಸಿದೆ.
ಹೀಗಾಗಿ ಕೃಷಿ ಎಂದರೆ ಯಾವಾಗಲೂ ನಷ್ಠದ ಕ್ಷೇತ್ರವಾಗಿದೆ. ಅದಕ್ಕೆ ತಕ್ಕಂತೆ ಆಗಾಗ ರೈತರು ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಳ್ಳುವುದು ಅವ್ಯಾಹತವಾಗಿದೆ. ಈ ಸಂದರ್ಭದಲ್ಲಿ ಕೃಷಿಯನ್ನು ಲಾಭದಾಯಕ ಕ್ಷೇತ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.

ಲಾಭದಾಯಕ ಕೃಷಿಗೆ ಉನ್ನತಾಧಿಕಾರದ ಸಮಿತಿ!
ಭಾರತದ ಪ್ರಮುಖ ಆದಾಯ ಕೃಷಿಯಿಂದಲೇ ಬರುತ್ತದೆ. ಆದರೂ ಕೃಷಿ, ಕೃಷಿಕರು ಎಂದರೆ ಅದೇನೊ ಅಸಡ್ಡೆ. ಹೀಗಾಗಿ ಕೃಷಿಯನ್ನು ಲಾಭದಾಯಕ ಮಾಡಲು ಪ್ರಧಾನಿ ನರೇಂದ್ರ ಮೋದಿ ಉನ್ನತಾಧಿಕಾರದ ಸಮಿತಿಯೊಂದನ್ನು ರಚನೆ ಮಾಡಿದ್ದಾರೆ. ಆ ಸಮಿತಿಯ ಮಹತ್ವದ ಸಭೆ ಬೆಂಗಳೂರಿನಲ್ಲಿ ನಡೆದಿದೆ.
2023ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಕುರಿತು ಕೇಂದ್ರ ಸರ್ಕಾರ ರಚನೆ ಮಾಡಿರುವ ಉನ್ನತಾಧಿಕಾರ ಸಮಿತಿ ಪ್ರಾತ್ಯಕ್ಷಿಕೆ ನೀಡಿದೆ. ಸಮಿತಿ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಅಶೋಕ್ ದಳವಾಯಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರು ರೈತರ ಆದಾಯ ದ್ವಿಗುಣದ ಕಾರ್ಯತಂತ್ರದ ಕುರಿತು ವಿವರಿಸಿದ್ದಾರೆ. ಕೃಷಿ ಸಚಿವ ಬಿ.ಸಿ. ಪಾಟೀಲ್, ತೋಟಗಾರಿಕೆ ಸಚಿವ ಮುನಿರತ್ನ , ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ ಸೇರಿದಂತೆ ಕೃಷಿ ಇಲಾಖೆಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ನಾವೂ ಉತ್ಸುಕರಾಗಿದ್ದೇವೆ ಎಂದ ಸಿಎಂ ಬೊಮ್ಮಾಯಿ
"ಕರ್ನಾಟಕ ರಾಜ್ಯವು ರೈತರ ಆದಾಯ ದ್ವಿಗುಣಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಉತ್ಸುಕವಾಗಿದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯದಲ್ಲಿ ನಿರ್ದಿಷ್ಟವಾಗಿ ಹಮ್ಮಿಕೊಳ್ಳಬಹುದಾದ ಕಾರ್ಯತಂತ್ರಗಳ ಕುರಿತು ವರದಿ ಸಲ್ಲಿಸಲು ರೈತರನ್ನೊಳಗೊಂಡ ಸಮಿತಿಯನ್ನು ರಚಿಸುತ್ತೇವೆ" ಎಂದು ಕೇಂದ್ರದ ಸಮಿತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ಕೊಟ್ಟಿದ್ದಾರೆ.

ಆದಾಯ ಕೇಂದ್ರಿತ ಕೃಷಿ ಬೇಕಿದೆ!
"ಇಂದು ಕೃಷಿ ಉತ್ಪಾದನೆ ಕೇಂದ್ರಿತವಾಗಿದ್ದು, ಆದಾಯ ಕೇಂದ್ರಿತವಾಗಬೇಕಿದೆ. ರೈತರ ಮನಸ್ಥಿತಿಯಲ್ಲಿ ಬದಲಾವಣೆಯಾಗಬೇಕಿದೆ. ಈ ನಿಟ್ಟಿನಲ್ಲಿ ಸಮಿತಿಯು ಕೇಂದ್ರ ಸರ್ಕಾರದ ಸಮಿತಿಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಬೇಕು. ಕರ್ನಾಟಕವು ರಾಜ್ಯದ ಕೃಷಿ ಚಟುವಟಿಕೆ, ಹವಾಮಾನ, ಭೂ ಮಾಲೀಕತ್ವ ಮೊದಲಾದ ವಿಷಯಗಳಲ್ಲಿ ಅತ್ಯುತ್ತಮ ದತ್ತಾಂಶವನ್ನು ಹೊಂದಿದೆ. ಅದರ ಆಧಾರದಲ್ಲಿ ವರದಿ ನೀಡಬೇಕು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವರಿಸಿದ್ದಾರೆ.

ಕೃಷಿ ಉಪ ಉತ್ಪನ್ನಗಳ ಕಡೆಗೆ ಗಮನ!
ಕೃಷಿ, ತೋಟಗಾರಿಕೆ, ಡೈರಿ, ಪ್ರಾಣಿಜನ್ಯ ಉತ್ಪನ್ನಗಳ ಸಂಸ್ಕರಣೆ ಹಾಗೂ ಗ್ರಾಮೀಣ ಮತ್ತು ಗುಡಿ ಕೈಗಾರಿಕೆಯ ಮೂಲಕ ರೈತರಿಗೆ ಹೆಚ್ಚಿನ ಆದಾಯ ತರಲು ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಉದ್ಯೋಗ ಸೃಜನೆಗೆ ಪೂರಕವಾಗಿ ಸೆಕೆಂಡರಿ ಅಗ್ರಿಕಲ್ಚರ್ (ಡೈರೆಕ್ಟೊರೇಟ್) ನಿರ್ದೇಶನಾಲಯವನ್ನು ಸ್ಥಾಪಿಸಲಾಗುವುದು. ಇದರಿಂದ ಕೃಷಿ ಉತ್ಪನ್ನಗಳಿಂದ ಉಪ ಕೃಷಿ ಉತ್ಪನ್ನ ತಯಾರಿಸಲಾಗುವುದು. ಇದರಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ ಆಗುತ್ತದೆ. ಒಟ್ಟಾರೆ ರೈತರ ಆದಾಯ ಹೆಚ್ವುತ್ತದೆ ಎಂದು ಮುಖ್ಯಮಂತ್ರಿ ಬೊಮ್ಮಾತಿ ತಿಳಿಸಿದ್ದಾರೆ.

ರೈತರ ಬೇಡಿಕೆ ಬಗ್ಗೆ ಯಾವುದೇ ಮಾತಿಲ್ಲ!
ಕೇಂದ್ರ ಸರ್ಕಾರ ಇನ್ನೆರಡು ವರ್ಷಗಳಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಕಾರ್ಯಯೋಜನೆ ರೂಪಿಸುತ್ತಿರುವುದು ಶ್ಲಾಘನೀಯ. ಆದರೆ ದಶಕಗಳಿಂದ ರೈತರ ಪ್ರಮುಖ ಬೇಡಿಕೆಯ ಬಗ್ಗೆ ಯಾವುದೇ ಚರ್ಚೆ ಅಥವಾ ಸಲಹೆಗಳು ಈ ಉನ್ನತಾಧಿಕಾರದ ಸಭೆಯಲ್ಲಿ ಬಂದಿಲ್ಲ. ರೈತರು ಪ್ರಮುಖವಾಗಿ ತಾವು ಬೆಳೆಯುವ ಬೆಳಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲು ಆಗ್ರಹಿಸುತ್ತಿದ್ದಾರೆ.
ರೈತರ ಉತ್ಪನ್ನಕ್ಕೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು, ಜೊತೆಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆಯನ್ನು ಆಗಾಗ ಸರ್ಕಾರಗಳ ಎದುರು ಕೃಷಿ ತಜ್ಞರು ಇಡುತ್ತಲೇ ಬಂದಿದ್ದಾರೆ. ಆದರೆ ಸರ್ಕಾರಗಳು ಮಾತ್ರ, ರೈತರ ಈ ಬೇಡಿಕೆ ಈಡೇರಿಸುತ್ತಿಲ್ಲ. ಅದರ ಬದಲಿಗೆ ಹೊಸ ಹೊಸ ಯೋಜನೆಗಳನ್ನು ರೂಪಿಸುವುದು ಯಾಕೆ? ಎಂಬ ಮೂಲಭೂತ ಪ್ರಶ್ನೆಯನ್ನು ರೈತ ಹೋರಾಟಗಾರರು ಕೇಳುತ್ತಿದ್ದಾರೆ. ಸರ್ಕಾರ ಉತ್ತರಿಸಬೇಕಿದೆ. ಆದರೆ?












Click it and Unblock the Notifications