ರೈತರ ನೊಗಕ್ಕೆ ಹೆಗಲು ಕೊಟ್ಟ ಎಸ್ಪಿ ರವಿ ಡಿ ಚನ್ನಣ್ಣನವರ್
ಮೈಸೂರು, ಜೂನ್ 14 : ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರು ರೈತರ ಕಷ್ಟ ಸುಖದ ನೊಗಕ್ಕೆ ಹೆಗಲು ಕೊಡಲು ಸಮಾವೇಶಗೊಂಡು ಸಮಸ್ಯೆ ಆಲಿಸಿದ ವಿಶೇಷ ಸಭೆ ನಡೆಯಿತು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಸ್ಪಿ ರವಿ ಡಿ.ಚನ್ನಣ್ಣನವರ್ ಅವರು ರೈತ ಸಂಘಟನೆಗಳ ಅಧ್ಯಕ್ಷರು ಹಾಗೂ ಮುಖಂಡರೊಂದಿಗೆ ಸಂವಾದ ನಡೆಸಿದರು.

ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕು ಹಾಗೂ ಹೋಬಳಿ ಮಟ್ಟದ ನೂರಾರು ಮಂದಿ ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಮೀಟರ್ ಬಡ್ಡಿ ದಂಧೆ, ರೈತರ ಆತ್ಮಹತ್ಯೆ, ಸಾಲಬಾಧೆ, ಬೆಳೆ ಹಾನಿ, ಕಳಪೆ ಬಿತ್ತನೆ ಬೀಜ, ರಸಗೊಬ್ಬರ ಸಮಸ್ಯೆ, ಪೋಡಿ, ಜಮೀನು ದುರಸ್ತಿ, ಆರ್ಟಿಸಿಯಲ್ಲಿ ಸಮಸ್ಯೆ, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ, ಕೈಸೇರದಿರುವ ಸರ್ಕಾರದ ಅನುದಾನ, ದಲ್ಲಾಳಿಗಳ ಹಾವಳಿ, ಬ್ಯಾಂಕ್ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡಿ ಬೆದರಿಕೆ ಹಾಕುತ್ತಿರುವುದು ಮುಂತಾದವುಗಳ ಬಗ್ಗೆ ರೈತರು ತಮ್ಮ ಸಮಸ್ಯೆಯನ್ನು ತೋಡಿಕೊಂಡರು.

ರೈತ ಮುಖಂಡ ಬನ್ನೂರು ನಾರಾಯಣ ಮಾತನಾಡಿ, ಆ.15ರೊಳಗೆ ಭತ್ತದ ನಾಟಿ ಮಾಡಿದರೆ ಉತ್ತಮ ಫಸಲು ನಿರೀಕ್ಷಿಸಬಹುದು. ಆದರೆ ನೀರಾವರಿ ಇಲಾಖೆಯ ಅಧಿಕಾರಿಗಳು ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ನೀರು ಬಿಡುತ್ತಾರೆ. ಇದರಿಂದ 20 ಕ್ವಿಂಟಾಲ್ ನಷ್ಟ ಆಗುತ್ತಿದೆ ಎಂದು ದೂರಿದರು. ನಂಜನಗೂಡು ತಾಲ್ಲೂಕಿನ ಸಿಂಧುವಳ್ಳಿ ಬಸವಣ್ಣ ಅವರು, ಸರ್ಕಾರದ ಅನುದಾನಗಳು ರಾಜಕಾರಣಿಗಳ ಶಿಫಾರಸು ಇಲ್ಲದೆ ರೈತರ ಕೈ ಸೇರುತ್ತಿಲ್ಲ. ಸಾಮರ್ಥ್ಯ ಇದ್ದವರು ಶಿಫಾರಸು ಮಾಡಿಸುತ್ತಾರೆ. ಬಡ ರೈತರಿಗೆ ಶಿಫಾರಸು ಮಾಡಲು ಅನೇಕರಿಗೆ ಇಷ್ಟ ಇರುವುದಿಲ್ಲ. ಅನುದಾನಗಳು ಅರ್ಹತೆ ಇದ್ದವರಿಗೆ ತಪ್ಪದೇ ಸಿಗುವಂತೆ ಕ್ರಮಜರುಗಿಸಿ ಎಂದರು.
ಹಂಪಾಪುರದ ಕೆಂಡಗಣ್ಣ ಸ್ವಾಮಿ ಮಾತನಾಡಿ, ರೈತರ ಬೆಳೆಯನ್ನು ಎಪಿಎಂಸಿಗೆ ತಂದು ಮಾರಾಟ ಮಾಡಲು ಮಳಿಗೆ ಕಾಯ್ದಿರಿಸಿ, ಬೆಳೆಗೆ ಸೂಕ್ತ ಬೆಂಬಲ ಬೆಲೆ ನಿಗದಿಮಾಡಿ ಎಂದು ಒತ್ತಾಯಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಠಧಿಕಾರಿ ರವಿ ಡಿ.ಚನ್ನಣ್ಣನವರ್ ಮಾತನಾಡಿ, ಪೊಲೀಸ್ ಹಾಗೂ ರೈತರು ಮುಖಾಮುಖಿಯಾಗಿ ನೋಡುವುದು ರೈತರ ಪತಿಭಟನೆ, ರಸ್ತೆ ತಡೆ, ಆತ್ಮಹತ್ಯೆ, ಗಲಭೆಗಳಲ್ಲಿ ಮಾತ್ರ. ಸಂಘರ್ಷದ ಸಮಯದಲ್ಲಿ ಭೇಟಿಯಾಗುವುದಕ್ಕಿಂತ ಪರಸ್ಪರ ಸಂದಿಸಿ ಕಷ್ಟ ಸುಖಗಳನ್ನು ಹಂಚಿಕೊಳ್ಳುವ ಉದ್ದೇಶದಿಂದ ಈ ಸಭೆ ಏರ್ಪಡಿಸಲಾಗಿದೆ ಎಂದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಅಂಕಣಕಾರ ಚಿನ್ನಸ್ವಾಮಿ ವಡ್ಡಗೆರೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಆಧಿಕಾರಿ ಕಲಾ ಕೃಷ್ಣಸ್ವಾಮಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.












Click it and Unblock the Notifications