ರೈತರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವ ವರುಣ ದೇವ

ಮೈಸೂರು, ಜುಲೈ 5: ಕಳೆದ ವರ್ಷ ಈ ಹೊತ್ತಿಗೆ ಮುಂಗಾರು ಹೆಚ್ಚು ಪ್ರಮಾಣದಲ್ಲಿ ಬಂದು ಬೆಳೆ ನಾಶವಾಗಿತ್ತು. ಆದರೆ ಈ ಬಾರಿ ಮಳೆಯೇ ಇಲ್ಲದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ ರೈತರು. ಹೌದು, ಮುಂಗಾರು ಮಳೆಯ ಕಣ್ಣಾಮುಚ್ಚಾಲೆ ಆಟ ಜಿಲ್ಲೆಯ ರೈತರನ್ನು ಕಂಗೆಡಿಸಿದೆ. ದಿನನಿತ್ಯ ಮಳೆಗಾಗಿ ಪರಿತಪಿಸುವಂತಾಗಿದೆ.

ಜೂನ್ ಮೊದಲ ವಾರ ಬಂತೆಂದರೆ ಸಾಕು ಮಳೆಯಾಗುತ್ತಿತ್ತು. ಈ ಬಾರಿ ಮಳೆ ಮುನಿಸಿಕೊಂಡಂತೆ ಕಾಣುತ್ತಿದೆ. ಜೂನ್ ಕಳೆದು ಜುಲೈ ಕಾಲಿಟ್ಟರೂ ಅಬ್ಬರದ ಮಳೆಯಿರಲಿ, ಸಣ್ಣ ಮಳೆಯ ಮುನ್ಸೂಚನೆ ಸಿಗುತ್ತಿಲ್ಲ. ಇತ್ತ ಮಳೆ ಅಭಾವ ಉಂಟಾಗಿ ಬಿತ್ತನೆ ಕಾರ್ಯಕ್ಕೂ ಹಿನ್ನಡೆಯಾಗಿದೆ. ಇದು ರೈತರನ್ನು ಆತಂಕಕ್ಕೆ ದೂಡಿದೆ.

 ಸೊಪ್ಪು, ತರಕಾರಿ ಬೆಲೆ ಏರಿಕೆ

ಸೊಪ್ಪು, ತರಕಾರಿ ಬೆಲೆ ಏರಿಕೆ

ಹೀಗೇ ಮುಂದುವರೆದರೆ ಈ ಬಾರಿಯೂ ಬರ ಆವರಿಸಿಕೊಳ್ಳಲಿದೆ ಎಂಬ ಭೀತಿ ಎದುರಾಗಿದೆ. ಮುಂಗಾರು ಋತುವಿಗಿಂತ ಮುಂಚೆಯೇ ಆಗೊಮ್ಮೆ ಈಗೊಮ್ಮೆ ಅಬ್ಬರದ ಮಳೆಯಾಗಿದೆ. ಆದರೆ, ಕೃಷಿಗೆ ಪೂರಕವಾಗಿ ಆಗಿಲ್ಲ. ಜೋರು ಮಳೆ, ಹೊಲದ ಆಳಕ್ಕಿಳಿಯದೆ ಹರಿದು ಹೋಗಿದೆ.

ಮಳೆ ಬೀಳದ ಕಾರಣ ತರಕಾರಿ, ಹಣ್ಣುಹಂಪಲು, ಸೊಪ್ಪುಗಳ ಬೆಲೆ ಗಗನಕ್ಕೇರಿದೆ. ಈ ಹಿಂದೆ 5-6 ರೂ.ಗೆ ಸಿಗುತ್ತಿದ್ದ ಕೊತ್ತಂಬರಿ ಸೊಪ್ಪಿನ ಒಂದು ಕಟ್ಟಿಗೆ ಈಗ 20 ರೂಪಾಯಿ ಕೊಡಬೇಕಾಗಿದೆ. ಇನ್ನುಳಿದ ತರಕಾರಿಗಳ ಬೆಲೆಯದ್ದೂ ಇದೇ ಪರಿಸ್ಥಿತಿ. ಇದರಿಂದ ತತ್ತರಿಸಿ ಹೋಗಿರುವ ಬಡವರು, ಮಧ್ಯವರ್ಗದವರು, ಸಮೃದ್ಧವಾಗಿ ಮಳೆಯಾಗಿ, ಉತ್ತಮ ಫಸಲು ಬಂದು, ಅಗತ್ಯವಸ್ತುಗಳ ಬೆಲೆ ಕಡಿಮೆಯಾಗಲಿ ಎಂಬ ನಿರೀಕ್ಷೆಯೊಂದಿಗೆ ಮಳೆರಾಯನನ್ನು ಎದುರು ನೋಡುತ್ತಿದ್ದಾರೆ.

 ಕುಡಿಯುವ ನೀರಿಗೂ ತೊಂದರೆ

ಕುಡಿಯುವ ನೀರಿಗೂ ತೊಂದರೆ

ಜಿಲ್ಲೆಯ ನೀರಿನ ಮೂಲವಾದ ಕೆಆರ್ ‌ಎಸ್, ಕಬಿನಿ ಜಲಾಶಯದಲ್ಲೂ ನೀರಿನ ಮಟ್ಟ ಪಾತಾಳಕ್ಕೆ ಸೇರಿದೆ. ಕಳೆದ ವರ್ಷ ಇಷ್ಟೊತ್ತಿಗೆ ಅರ್ಧದಷ್ಟು ನೀರು ತುಂಬಿದ್ದು, ಈ ಬಾರಿ ನೀರಿಲ್ಲದೆ ಬಣಗುಡುತ್ತಿವೆ. ಮಳೆಯ ಜೂಟಾಟ ಹೀಗೇ ಮುಂದುವರಿದರೆ ಡ್ಯಾಂಗಳು ಭರ್ತಿಯಾಗುವುದು ಕಷ್ಟಕರ. ಇದು ಕೃಷಿಗಷ್ಟೇ ಅಲ್ಲ, ಕುಡಿಯುವ ನೀರಿಗೂ ತೊಂದರೆ ತರುವ ಸಾಧ್ಯತೆ ಇದೆ.

 ಎಲ್ಲೆಲ್ಲೂ ಮಳೆ ಕೊರತೆ, ನೀರಿನ ಅಭಾವ

ಎಲ್ಲೆಲ್ಲೂ ಮಳೆ ಕೊರತೆ, ನೀರಿನ ಅಭಾವ

ಜಿಲ್ಲೆಯಲ್ಲಿ ವಾಡಿಕೆಯಂತೆ ಜೂ.19ರವರೆಗೆ 261 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 234 ಮಿ.ಮೀ ಮಳೆ ಸುರಿದಿದೆ. ಕಳೆದ ವರ್ಷ ಈ ಹೊತ್ತಿಗೆ 433 ಮಿ.ಮೀ ಮಳೆಯಾಗಿತ್ತು. ವಾರ್ಷಿಕ 815 ಮಿ.ಮೀ ವಾಡಿಕೆ ಮಳೆಯ ಪೈಕಿ ಇನ್ನೂ 300 ಮಿ.ಮೀ. ಗಡಿಯನ್ನೂ ದಾಟಿಲ್ಲ. ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಕೊರತೆ ಎದುರಿಸುತ್ತಿರುವ ತಿ.ನರಸೀಪುರ ತಾಲೂಕಿನಲ್ಲಿ ಶೇ.30 ಮಿ.ಮೀ. ಮಳೆ ಕೊರತೆ ಆಗಿದೆ. ನಂತರದ ಸ್ಥಾನದಲ್ಲಿರುವ ಕೆ.ಆರ್.ನಗರ, ನಂಜನಗೂಡು ತಾಲ್ಲೂಕಿನಲ್ಲಿ ತಲಾ ಶೇ.18, ಮೈಸೂರು ತಾಲ್ಲೂಕಿನಲ್ಲಿ ಶೇ.15ರಷ್ಟು ಮಳೆ ಕೊರತೆಯಾಗಿದೆ. ಹೇರಳ ಅರಣ್ಯ ಸಂಪತ್ತು ಹೊಂದಿರುವ ಎಚ್.ಡಿ.ಕೋಟೆ ತಾಲ್ಲೂಕಿನಲ್ಲೂ ಶೇ.11ರಷ್ಟು ಮಳೆ ಅಭಾವ ಸೃಷ್ಟಿಯಾಗಿದೆ.

 ಶೇ 50ರಷ್ಟೂ ಬಿತ್ತನೆ ಕಾರ್ಯವಾಗಿಲ್ಲ

ಶೇ 50ರಷ್ಟೂ ಬಿತ್ತನೆ ಕಾರ್ಯವಾಗಿಲ್ಲ

ಮಳೆ ಅಭಾವದಿಂದ ಈವರೆಗೆ ಜಿಲ್ಲೆಯಲ್ಲಿ ಶೇ.50ರಷ್ಟೂ ಬಿತ್ತನೆಯಾಗಿಲ್ಲ. ಜಿಲ್ಲೆಯ ಕೃಷಿ ಮಳೆಯಾಶ್ರಿತವಾಗಿದೆ. ಕೃಷಿ ಇಲಾಖೆಯು ಮುಂಗಾರು ಹಂಗಾಮಿಗೆ ಅಗತ್ಯವಿರುವಷ್ಟು ದಾಸ್ತಾನು ಮಾಡಿ ಇಟ್ಟುಕೊಂಡಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕೇಳುವವರಿಲ್ಲದಂತಾಗಿದೆ. ವಾಯುಭಾರ ಕುಸಿತ, ಮೋಡಗಳು ಚದುರಿ ಹೋಗಿರುವ ಕಾರಣಕ್ಕೆ ಮುಂಗಾರು ಮಳೆ ಕೊರತೆಯಾಗಿದೆ. ಜತೆಗೆ, ಕೊಡಗು, ಕೇರಳದ ವಯನಾಡು ಪ್ರದೇಶದಲ್ಲೂ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಮಳೆ ನಿರೀಕ್ಷೆ ಇದೆ ಎನ್ನುತ್ತಿದ್ದಾರೆ ಕೃಷಿ ಅಧಿಕಾರಿಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+